Advertisement

Ganesh Chaturthi 2023; ಗೌರಿ ಮತ್ತು ಗಣೇಶ ಚತುರ್ಥಿ ಹಬ್ಬದ ಮಹತ್ವ

10:52 AM Sep 18, 2023 | Team Udayavani |

ನಮಸ್ತಸ್ತೈ ಗಣೇಶಾಯ ಬ್ರಹ್ಮವಿದ್ಯಾಪ್ರದಾಯಿನೇ||

Advertisement

ಯಸ್ಯಾಗಸ್ತ್ಯಾಯತೇ ನಾಮ ವಿಘ್ನಸಾಗರ ಶೋಷಣೆ |

ಬ್ರಹ್ಮವಿದ್ಯೆಯನ್ನು ಜಿಜ್ಞಾಸು ಭಕ್ತರಿಗೆ ಪ್ರಧಾನ ಮಾಡುವ ಗಣಪತಿಗೆ ನಮಸ್ಕಾರ. ಶ್ರೀ ಗಣೇಶನ ನಾಮವು ವಿಘ್ನಗಳ ಸಮುದ್ರವನ್ನೇ ಅಗಸ್ತ್ಯ ಮುನಿಯು ಸಮುದ್ರಪಾನ ಮಾಡಿದಂತೆ ಕುಡಿದು ಒಣಗಿಸಿ ಬಿಡುತ್ತದೆ. ಇಂಥ ಗಣಪತಿಗೆ ವಂದನೆ.

ಶಿವ ಪುರಾಣದ ಪ್ರಕಾರ

ಶ್ವೇತ ಕಲ್ಪದಲ್ಲಿ ಶಂಕರನು ತಾನಾಗಿಯೇ ಗಣೇಶನ ಮಸ್ತಕವನ್ನು ಕಡಿದು ಹಾಕಿದನು. ಆ ಕಥೆಯು ಶಿವಪುರಾಣದಲ್ಲಿ ಹೀಗೆ ಉಲ್ಲೇಖಿತವಾಗಿದೆ. ಪಾರ್ವತಿ ದೇವಿಯು ಜಯಾ ಮತ್ತು ವಿಜಯಾ ಎಂಬ ಹೆಸರಿನ ತನ್ನ ಗೆಳತಿಯರ ಸೂಚನೆಯಂತೆ ತನ್ನ ಮೈಮೇಲಿನ ಮಣ್ಣಿನಿಂದ ಒಂದು ಮೂರ್ತಿಯನ್ನು ತಯಾರಿಸಿದಳು. ಅದರಲ್ಲಿ ಜೀವಕಳೆಯನ್ನು ತುಂಬಿ ‘ಪುತ್ರ’ ಎಂದು ಅವನನ್ನು ಕರೆದು ತನ್ನ ಸ್ನಾನಮಂದಿರದ ಬಾಗಿಲಲ್ಲಿ ಕೂರಿಸಿದಳು. ‘ನೀನು ನನ್ನ ದ್ವಾರಪಾಲಕನಾಗಿದ್ದು ‘ಯಾರನ್ನೂ ಒಳಗೆ ಬಿಡಬೇಡ’ ಎಂದು ಕಟ್ಟಪ್ಪಣೆ ಮಾಡಿದಳು. ಆಗ ಮಹಾದೇವನೇ ಸ್ವತಃ ಪಾವರ್ತಿಯನ್ನು ಕಾಣಲು ಬಂದನು. ಆದರೆ ಆ ಬಾಲಕ, ಶಿವನನ್ನು ಒಳಗೆ ಬಿಡದೇ ಬಾಗಿಲಲ್ಲಿಯೇ ತಡೆದು ನಿಲ್ಲಿಸಿದನು. ಆಗ ಶಂಕರನು ಆ ಬಾಲಕನ ಜೊತೆಗೆ ಯುದ್ಧ ಮಾಡಿ ಅವನನ್ನು ಅಲ್ಲಿಂದ ಓಡಿಸಲು ತನ್ನ ಶಿವಗಣಕ್ಕೆ ಆಜ್ಞೆಯಿಟ್ಟನು. ಆ ಯುದ್ಧದಲ್ಲಿ ಗಣೇಶನು ತನ್ನ ಶೌರ್ಯದಿಂದ ಎಲ್ಲರನ್ನು ಹೊಡೆದು ಓಡಿಸಿದನು. ಆದರಿಂದ ಕುಪಿತನಾದ ಗೌರಿ ಪತಿಯು ಗಣೇಶನ ತಲೆಯನ್ನು ಕಡಿದು ಹಾಕಿದನು. ಪುತ್ರನ ಶಿರಚ್ಛೇದನದಿಂದ ಕ್ರುದ್ಧಳಾದ ಪಾವರ್ತಿಯು ಸಾವಿರಾರು ಶಕ್ತಿ ದೇವತೆಯನ್ನು ಉತ್ಪಾದನೆ ಮಾಡಿ ಅವರಿಗೆ ವಿಶ್ವಸಂಹಾರ ಮಾಡಲು ಆಜ್ಞೆಯನ್ನು ನೀಡಿದಳು. ಅದರಂತೆ ಎಲ್ಲಾ ಕಡೆಗೆ ಹಿಂಸಾತಾಂಡವ ನಡೆಯಲು ಋಷಿಗಳು ಭಕ್ತಿಯಿಂದ ವಿಶ್ವದ ರಕ್ಷಣೆಗಾಗಿ ಪ್ರಾರ್ಥಿಸಿದರು. ಆಗ ಅವಳು “ಶಿವನು ತಲೆ ಕಡಿದು ಹಾಕಿದ ನನ್ನ ಮಗನು ಬದುಕಿ ಬಂದರೆ ಮತ್ತು ಅವನನ್ನು ಸರ್ವಾಧ್ಯಕ್ಷ ಸ್ಥಾನದಲ್ಲಿ ಪಟ್ಟಾಭಿಷೇಕ ಮಾಡಿದರೆ ಮಾತ್ರ ಈ ಸಂಹಾರ ಕಾರ್ಯವನ್ನು ನಿಲ್ಲಿಸಲು ಹೇಳುತ್ತೇನೆ” ಎಂದಳು.

Advertisement

ಆಗ ದೇವತೆಗಳು ಹಾಗೇ ಆಗಲಿ ಎಂದು ಹೋಗಿ ದಾರಿಯಲ್ಲಿ ಒಂದೇ ಕೋರೆ ದಾಡೆಯುಳ್ಳ, ಮಲಗಿದ ಆನೆಯ ಮಸ್ತಕವನ್ನು ಕತ್ತರಿಸಿ ತಂದರು. ಅಭಮಂತ್ರಿಕ ನೀರಿನಿಂದ ಆ ಆನೆಯ ಮಸ್ತಕವನ್ನು ಸಿಂಚನ ಮಾಡಿ ಆ ಮಗುವಿನ ತಲೆಯ ಸ್ಥಾನದಲ್ಲಿ ಕೂಡಿಸಿದರು. ಶಂಕರನ ದಯೆಯಿಂದ ಆ ಹುಡುಗನು ಪುನಃ ಉಜ್ಜೀವಿತವಾಗಿ ಚೈತನ್ಯ ಶಕ್ತಿಯಿಂದ ಪೂರ್ಣನಾಗಿ ಅತ್ಯಂತ ಸುಂದರನಾಗಿ ಶೋಭಿಸಿದನು. ಆಗ ಎಲ್ಲಾ ದೇವತೆಗಳು, ಬ್ರಹ್ಮದೇವರು  ಕೂಡಿ ಆ ಗಜಮುಖನನ್ನು ಗಣಾಧ್ಯಕ್ಷ ಸ್ಥಾನದಲ್ಲಿ ಅಭಿಷೇಕ ಮಾಡಿದರು.” ಪಾವರ್ತಿಯು ಆನಂದದಿಂದ ಅವನ ತಲೆಯ ಮೇಲೆ ಕೈಯಿಟ್ಟು “ಪುತ್ರೋಯಮಿಯೇ ಪರಃ” ಇವನು ಸ್ಕಂದನ ನಂತರ ನನ್ನ ಎರಡನೇಯ ಪುತ್ರನು ಎಂದು ಪ್ರೀತಿಯಿಂದ ನುಡಿದಳು.

ದೇವತೆಗಳೆಲ್ಲರೂ ಅವನಿಗೆ ಅಗ್ರಪೂಜೆಯ ಸ್ಥಾನವನ್ನು ನೀಡಿದರು. ಶಂಕರನು ಅವನಿಗೆ ವಿಘ್ನನಾಶಕನಾಗು ಎಂದು ವರವನ್ನು ಕೊಟ್ಟನು. ಶಿವ-ಪಾರ್ವತಿಗೆ ಪ್ರೀತಿಯ ಪುತ್ರನಾದನು. ಭಕ್ತಾಧಿಗಳಿಗೆ ಇಷ್ಟದೈವವಾದನು. ಬ್ರಹ್ಮಚಾರಿಯಾಗಿಯೇ ಉಳಿದ ಗಣೇಶನಿಗೆ ತಾಯಿ ಎಂದರೆ ಬಹು ಪ್ರೀತಿ. ಈ ಹಿನ್ನೆಲೆಯಲ್ಲಿಯೇ ಗಣೇಶ ಚತುರ್ಥಿಯ ಮುನ್ನಾದಿನ ಗೌರಿ ಹಬ್ಬವೆಂದು ಆಚರಿಸಲಾಗುತ್ತದೆ.

ಗೌರಿ ಅಂದರೆ ಪಾರ್ವತಿ. ಮುತ್ತೈದೆಯಾದ ಗೌರಿ ಪೂಜೆಯನ್ನು ಅತ್ಯಂತ ಮಂಗಳ ಸ್ವರೂಪ ಎಂದು ಪರಿಗಣಿಸಲಾಗುವುದು. ಅಂದು ಗೌರಿ ಮೂರ್ತಿಯನ್ನು ಮನೆಗೆ ತಂದು ಹಬ್ಬದ ಆರಂಭವನ್ನು ಮಾಡುತ್ತಾರೆ. ಹೆಂಗಳೆಯರು ಸೌಮಂಗಲ ಸ್ವರೂಪ ವಸ್ತುಗಳಿಂದ ದೇವಿಯನ್ನು ಅಲಂಕರಿಸಿ ಪೂಜೆ ಮಾಡುವರು. ಇದಕ್ಕೆ ಪೌರಾಣಿಕ ಹಿನ್ನೆಲೆಯೆಂದರೆ, ಗಣೇಶನನ್ನು ಮನೆಗೆ ತಂದು ಪೂಜೆ ಮಾಡಿದಾಗ ಸಕಾರಾತ್ಮಕ ಶಕ್ತಿ ಹೆಚ್ಚುವುದು. ಅವುಗಳಿಂದ ಉಂಟಾಗುವ ಆವರ್ತಗಳನ್ನು ತಾಯಿ ಗೌರಿ ಮಾತ್ರ ನಿಯಂತ್ರಿಸಲು ಸಾಧ್ಯ. ಹಾಗಾಗಿ ಗಣೇಶ ಚತುರ್ಥಿಯ ಮುನ್ನಾ ದಿನವೇ ಗೌರಿ ದೇವಿಯನ್ನು ತಂದು ಗೌರಿ ಪೂಜೆ ಮಾಡಲಾಗುವುದು.

ಶಿವ ಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸಿ ದಳದಲ್ಲಿ ಪೂಜಿಸಬಾರದು. ಏಕೆಂದರೆ, ಲಾವಣ್ಯವತಿಯೂ, ತರುಣಿಯೂ ಆದ ತುಳಸಿ ದೇವಿಯು ಗಣಪತಿಯ ಸೌಂದರ‍್ಯವನ್ನು ಕಂಡು ಆಕರ್ಷಿತಳಾದಳು. ಅವನಲ್ಲಿ ಪ್ರಣಯಭಿಕ್ಷೆಯನ್ನು ಬೇಡಿದಳು. ಆದರೆ ಬಾಲ ಬ್ರಹ್ಮಚಾರಿಯಾದ ಗಣಪತಿಯು “ವಿವಾಹವು ಜ್ಞಾನ ಸಾಧನೆಗೆ ಪ್ರತಿಬಂಧಕ ಮತ್ತು ನಾನು ಎಂದೂ ವಿವಾಹವನ್ನೇ ಮಾಡಿಕೊಳ್ಳುವುದಿಲ್ಲ” ಎಂದು ಹೇಳಿದನು. ಪ್ರಣಯಭಂಗದಿಂದ ಅವಮಾನಿತಳಾದ ತುಳಸಿಯು ಗಣಪತಿಗೆ “ನಿನ್ನ ಮದುವೆಯು ತಪ್ಪದೇ ಆಗಲಿ” ಎಂದು ಶಾಪಕೊಟ್ಟಳು. ಆಗ ಗಜಾನನನು ಅವಳಿಗೆ “ನೀನು ರಾಕ್ಷಸನ ಪತ್ನಿಯಾಗುವೆ ಮತ್ತು ಒಂದು ಗಿಡವಾಗಿ ಬೆಳೆಯುವೆ” ಎಂದು ಮರುಶಾಪವನ್ನು ಕೊಟ್ಟನು. ಅದರಿಂದ ಭೀತಳಾದ ತುಳಸಿಯು ಗಣೇಶನ ಸ್ತುತಿಯನ್ನು ಮಾಡಿದಳು. ಆದರಿಂದ ಪ್ರಸನ್ನನಾದ ಗಣಾಧೀಶನು ಅವಳಿಗೆ “ನೀನು ಶ್ರೀ ಹರಿಗೆ ಅತ್ಯಂತ ಪ್ರೀತ್ಯಾಸ್ಪದಳಾಗು. ನಿನ್ನ ದ್ವಾರಾ ಭಕ್ತರೆಲ್ಲರೂ ಮಹಾವಿಷ್ಟುವನ್ನು ಪೂಜಿಸಿ ಮೋಕ್ಷವನ್ನು ಪಡೆಯುವರು. ಆದರೆ ನನಗೆ ಮಾತ್ರ ನೀನು ತ್ಯಾಜಳೇ ಆಗಿ ಉಳಿಯುವೆ” ಎಂದು ಹೇಳಿದನು. ಆದುದರಿಂದ ಗಣಪತಿಗೆ ತುಳಸಿಯಿಂದ ಪೂಜಿಸುವುದಿಲ್ಲ.

ಹಾಗೆಯೇ, ಚೌತಿಯ ದಿನ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಭಾದ್ರಪದ ಶುಕ್ಲದ ಚೌತಿಯಂದು ಚಂದಿರನ ನೋಡಿದರೆ ಅಪವಾದ ತಪ್ಪದು” ಎನ್ನುವ ಸಾಲುಗಳನ್ನು ಹಾಡಿನಲ್ಲೂ ಕೇಳಿರುತ್ತೇವೆ. ಯಾಕೆ ಹೀಗೆ ಹೇಳುತ್ತಾರೆ ಎನ್ನುವುದಕ್ಕೆ ಪುರಾಣಗಳಲ್ಲಿ ಪ್ರಸಿದ್ಧ ಕತೆಯೂ ಇದೆ.

ಗಣೇಶ ಎಲ್ಲರ ಮನೆಯ ಕಡುಬು, ಮೋದಕ, ಲಾಡು, ಚಕ್ಕುಲಿ ಹೀಗೆ ಭಕ್ಷ್ಯಗಳನ್ನು ತಿಂದು ರಾತ್ರಿ ತನ್ನ ಮನೆಗೆ ವಾಹನವಾದ ಇಲಿಯ ಮೇಲೆ ಕುಳಿತು ಹೋಗುತ್ತಿದ್ದನಂತೆ. ದಾರಿಯಲ್ಲಿ ಹಾವು ಕಂಡು ಇಲಿಯು ಹೆದರಿ ಗಣೇಶನನ್ನು ಕೆಳಗೆ ಹಾಕಿ ಓಡಿ ಹೋಯಿತು. ದುಡುಂ ಎಂದು ಕೆಳಗೆ ಬಿದ್ದ ಗಣಪತಿ ಹೊಟ್ಟೆ ಒಡೆಯಿತು. ಕೋಪಗೊಂಡ ಗಣಪ ಹಾವನ್ನು ಎಳೆದು ಹೊಟ್ಟೆಗೆ ಸುತ್ತಿಕೊಂಡನು. ಇದನ್ನೆಲ್ಲಾ ನೋಡಿ ಚಂದ್ರ ನಕ್ಕನಂತೆ. ಗಣೇಶ ಕೋಪಗೊಂಡು ಚಂದ್ರನಿಗೆ ಶಾಪವಿತ್ತನು. ನೀನು ಅತ್ಯಂತ ಸುಂದರನೆನ್ನುವ ಗರ್ವವೇ ನಿನಗೆ? ನನ್ನನ್ನು ನೋಡಿ ಹಾಸ್ಯ ಮಾಡುವಿಯಲ್ಲವೇ? ಇನ್ನು ಮುಂದೆ ನೀನು ಆದೃಶ್ಯನಾಗು. ಮೂರು ಲೋಕದಲ್ಲಿ ಯಾರೂ ನಿನ್ನನ್ನು ನೋಡದಿರಲಿ”ಎಂದು ಶಾಪವಿತ್ತನು. ಆ ಶಾಪದಿಂದ ಚಂದ್ರನು ಚಿಂತಾಕ್ರಾಂತನಾಗಿ ದುಃಖದಿಂದ ಚಿಂತೆಯ ಮಡುವಿನಲ್ಲಿ ಮುಳುಗಿದನು. ಇದರಿಂದ ಚಿಂತಾಕ್ರಾಂತರಾದ ದೇವತೆಗಳು ಚಂದ್ರನ ಈ ಶಾಪವನ್ನು ವಾಪಾಸು ತೆಗೆದು ಅವನನ್ನು ಅನುಗ್ರಹಿಸು ಎಂದು ಕೇಳಿಕೊಳ್ಳುತ್ತಾರೆ. ದೇವತೆಗಳ ಈ ವರ ಪ್ರಾರ್ಥನೆಗೆ ಪ್ರಸನ್ನರಾದ ವಿನಾಯಕನು “ದೇವತೆಗಳೇ, ನೀವು ಬಹುವಿಧವಾಗಿ ಪ್ರಾರ್ಥನೆ ಮಾಡಿದುದ್ದರಿಂದ ನಾನು ಚಂದ್ರನಿಗಿತ್ತ ಶಾಪವನ್ನು ವಿಮೋಚನೆ ಮಾಡುತ್ತೇನೆ. ಅವನು ಒಂದು ದಿನ ಭಾದ್ರಪದ ಶುಕ್ಲ ಚತುರ್ಥಿಯ ತಿಥಿಯಂದು ಅದೃಶ್ಯವಾಗಲು ಅಂದು ಅವನನ್ನು ಯಾರೂ ನೋಡಬಾರದು. ಹಾಗೆ ಯಾರಾದರೂ ಚತುರ್ಥಿ ದಿನದಂದು ಚಂದ್ರನನ್ನು ನೋಡಿದರೆ ಅವರಿಗೆ ವೃಥಾ ಅಪವಾದವು ಬರುವುದು” ಎಂದನು. ಆದುದರಿಂದ ಅಂದಿನಿಂದ ಚೌತಿಯ ಚಂದ್ರನ ದರ್ಶನ ನಿಷಿದ್ಧ ಎನ್ನಲಾಗಿದೆ.

ಹೀಗೆ ಶಿವ-ಪಾರ್ವತಿಯ ಪ್ರಿಯ ಪುತ್ರ ಹಾಗೂ ಜನರ ಕಷ್ಟಗಳ ನಿವಾರಣೆಗೆ ನಿಲ್ಲುವ ಸಂಕಷ್ಟಹರ ಗಣೇಶ. ಇವನ ಹುಟ್ಟಿದ ಹಬ್ಬದ ಸಂಭ್ರಮದ ಆಚರಣೆಯೇ ಗಣೇಶ ಚತುರ್ಥಿ. ಈ ಹಬ್ಬವು ತಾಯಿ ಮತ್ತು ಮಗನ ನಡುವಿನ ಬಾಂಧವ್ಯವನ್ನು ಜಗತ್ತಿಗೆ ಸಾರುವ ಹಬ್ಬವಾಗಿದೆ. ಹೀಗೆ ಪ್ರಥಮ ಪೂಜಾ ಅಧಿಪತಿ, ಸಂಕಷ್ಟಹರ ಗಣಪತಿ ಎಲ್ಲರನ್ನೂ ಹರಸಲಿ. ಗಣೇಶ ನಮ್ಮ ಮೇಲೆ ಪ್ರೀತಿ ಮತ್ತು ಶಾಂತಿಯನ್ನು ಸುರಿಸಲಿ.

*ರಂಜನಾ ಭಟ್ ನೆಲ್ಲಿತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next