Advertisement

Ganesh chaturthi 2023:ಮನೋಲ್ಲಾಸಗೊಳಿಸುವ ವಿಘ್ನ ವಿನಾಯಕನ ಆಗಮನ-ಪ್ರಥಮ ವಂದಿತನ ಹಬ್ಬ

01:43 PM Sep 16, 2023 | Team Udayavani |

ಶ್ರಾವಣ ಮಾಸ ಬಂತೆಂದರೆ ಉತ್ಸಾಹ ಚಿಗುರೊಡೆಯುತ್ತದೆ. ಮಳೆಯ ಸಿಂಚನದ ಖುಷಿ ಧರೆಗೆ ತಂಪೆರೆದಂತೆ ಮನಸ್ಸು ತನ್ನದೇ ಭಾವನಾಲೋಕಕ್ಕೆ ಹೊಕ್ಕು ಬಿಡುತ್ತದೆ. ಜತೆಗೆ ಶ್ರಾವಣ ಸಾಲುಸಾಲಾಗಿ ಹೊತ್ತು ತರುವ ಹಬ್ಬಗಳು ಖುಷಿಯನ್ನು ದುಪ್ಪಟ್ಟುಗೊಳಿಸುತ್ತವೆ. ಹಬ್ಬಗಳ ಆದಿಯಾಗಿ ವಿಘ್ನಗಳ ನಿವಾರಕ ಗಣೇಶ ಮೂಶಕವೇರಿ ಬರುತ್ತಾನೆ. ಗಣೇಶನ ಆಚರಣೆಯ ಸುವಾಸನೆ ವಿಶ್ವದೆಲ್ಲೆಡೆ ಇಂದು ಪಸರಿಸಿದೆ. ಗಣೇಶ ಹಬ್ಬದ ಆಚರಣೆಯಲ್ಲಿ ಹಾಗೂ ಅದರ ತಯಾರಿಯಲ್ಲಿ ಸಿಗುವ ಖುಷಿ ವರ್ಣಿಸಲಾಗದ್ದು. ಚೌತಿಯು ಅಷ್ಟೊಂದು ಆಸಕ್ತಿ ಮೂಡಿಸಲಿಕ್ಕೆ ಇನ್ನೊಂದು ಕಾರಣ, ಹಬ್ಬಕ್ಕೆ ತಯಾರಿಸುವ ಬಗೆಬಗೆ ತಿಂಡಿಗಳಿಗಾಗಿ. ಈ ತಿಂಡಿಗಳನ್ನು ಸವಿಯಬೇಕೆಂದೇ ಎಷ್ಟೋ ಸಮಯ ಕಾದು ಕುಳಿತುಕೊಳ್ಳುವ ಪ್ರಸಂಗಗಳಿವೆ. ಹಬ್ಬಕ್ಕೆಂದು ಊರ ಕೇರಿಯಲ್ಲಿ ಹಾಕುವ ಗಣೇಶನ ಪೆಂಡಾಲಿನ ವಿಜೃಂಭಣೆಯ ಸೊಗಸೇ ಬೇರೆ.

Advertisement

ಅಲ್ಲಿನ ಗಣೇಶನ ಮೆರವಣಿಗೆ, ಅಲ್ಲಿ ಎಲ್ಲರೊಂದಿಗೆ ಹೆಜ್ಜೆ ಹಾಕುವುದು, ಭಜನೆ ಹಾಡುವುದು…..ಹೀಗೆ ವರ್ಷಕ್ಕೊಮ್ಮೆ ಬರುವ ಗಣೇಶನನ್ನು ಕೊನೆಯ ದಿನ ಬೀಳ್ಕೊಡುವಾಗ ಮನಸ್ಸು ಮನೆಯ ಸದಸ್ಯನನ್ನು ಕಳಿಸುಕೊಡುವಂತೆ ಭಾರವಾಗಿ ನಿಂತಿರುತ್ತದೆ….

ಶ್ರಾವಣ-ಭಾದ್ರಪದ ಮಾಸದಲ್ಲಿ ವರುಷದ ಅರ್ಧದಷ್ಟು ಹಬ್ಬ-ವ್ರತಗಳು ಸಾಲು ಸಾಲಾಗಿ ಮೆರವಣಿಗೆಯ ರೂಪದಲ್ಲಿ ಬಂದು ಹೋಗುವುದೇ ಗೊತ್ತಾಗುವುದಿಲ್ಲ. ಇವೆಲ್ಲ ಹಬ್ಬದಾಚರಣೆಗಳು ರಾಷ್ಟ್ರಕ್ಕೆ ಸಾಂಸ್ಕೃತಿಕ ಆಚರಣೆಯ ವಿದ್ಯುದ್ದೀಪಕ ಪ್ರಜ್ಞೆಯನ್ನು ತುಂಬುತ್ತದೆ. ಇವುಗಳಲ್ಲಿ ಭಾದ್ರಪದ ಶುಕ್ಲ ಚತುರ್ಥಿ ಪ್ರಮುಖವಾದುದು. ಹಬ್ಬಗಳ ಹಬ್ಬ ಚೌತಿ. ಭಾದ್ರಪದ ತಿಂಗಳಲ್ಲಿ ಭಾರತದಾದ್ಯಂತ ಮಿತಿಯಿಲ್ಲದೆ ಉತ್ಸಾಹದಿಂದ ಆಚರಿಸಲಾಗುವ ಪರ್ವ ಗಣೇಶ ಚತುರ್ಥಿ. ಗಣೇಶನ ಹಬ್ಬವು ವರ್ಣಿಸಲಾಗದ ಸಂತೋಷದ ಭಾವನೆಯನ್ನು ತುಂಬುವುದಲ್ಲದೆ, ಕಿರಿಯರಿಂದ ಹಿರಿಯರವರೆಗೆ ಎಲ್ಲ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.

ಹಿಂದಿನ ಸಾಂಸ್ಕೃತಿಕ ಆಚರಣೆಗಳು ಸದಾತನವಾದುವು, ವಿಸ್ತಾರವಾದುವು. ಸಚ್ಚಿದಾನಂದ ರೂಪ ಬ್ರಹ್ಮನನ್ನು ಕಾಣ ಹೊರಟವರು ಸನಾತನಿಗಳು. ಸಂಸ್ಕೃತಿಯು ಆಗುವಿಕೆಯ ಪ್ರತಿಫ‌ಲನ. ಬ್ರಹ್ಮಣಸ್ಪತಿ ಎಂಬ ಎಲ್ಲ ವೇದಗಳಿಂದಲೂ ಪ್ರತಿಪಾದ್ಯನಾದ ಪರತತ್ತ್ವ, ಪರಬ್ರಹ್ಮ ಗಣಪತಿ. ಎಲ್ಲ ಸನಾತನ ಆಚರಣೆಗಳ ಸಾರ ಮತ್ತು ಅಡಿಪಾಯವು ಭಾರತದ ಮಣ್ಣನ್ನು ಶ್ರೀಮಂತಗೊಳಿಸಿವೆ.

Advertisement

ಭಾರತದಿಂದಲೇ ಇಡೀ ವಿಶ್ವಕ್ಕೆ ಈ ಆಚರಣೆಗಳ ನಿಜವಾದ ಅರ್ಥ ಮತ್ತು ಪೂಜ್ಯತೆಯನ್ನು ಕಂಡುಕೊಳ್ಳಲು ಸಾಧ್ಯವಾಗಿವೆ. ಚೌತಿಯ ದಿನಕ್ಕೆ ಗಣಪನನ್ನು ತರುವುದರಿಂದ ಆರಂಭವಾಗಿ ವಿಸರ್ಜನೆಯವರೆಗೂ ಟೊಂಕಕಟ್ಟಿ ನಿಲ್ಲುವುದು ಚಿಣ್ಣರೇ. ಹಬ್ಬಕ್ಕೆ ಹೊಸಬಟ್ಟೆ ತೊಟ್ಟು ಮನೆಯಲ್ಲಿ ಮೋದಕ ಕಜ್ಜಾಯಗಳನ್ನು ಮಾಡುವಾಗ ಸಹಕರಿಸಿದ ನೆನಪು ಬಹಳ ರಮ್ಯ. ಮನೆಯಲ್ಲಿ ಮಂಟಪವನ್ನು ಶೃಂಗರಿಸಿ ಪಂಚಕಜ್ಜಾಯದ ವಿತರಣೆಯಲ್ಲೂ ಮುಂದು. ಸಾರ್ವಜನಿಕ ಗಣೇಶೋತ್ಸವದಲ್ಲಿ ಚಿಣ್ಣರನ್ನು ವಿವಿಧ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವ ಪರಂಪರೆಯನ್ನೂ ನೋಡಬಹುದು. ಗಣಪನ ಚಿತ್ರ ರಚನೆ, ಭಕ್ತಿಗೀತೆ, ರಸಪ್ರಶ್ನೆ ಸ್ಫರ್ಧೆಗಳಿಗೆ ವರುಷವೆಲ್ಲವೂ ಕಾಯುತ್ತಿದ್ದ ತವಕ ಅಪೂರ್ವವಾದುದು. ಹೀಗೆ ಸ್ಥಾಪಿಸಿದ ಗಣಪನಿಗೆ ತ್ರಿಕಾಲ ಪೂಜೆ, ಚೆಂಡೆ, ಕೊಂಬು, ಕಹಳೆಗಳ ನಾದದ ಸೊಬಗು ಒಂದು ಧ್ವನಿಮಂಡಲವನ್ನೇ ನಿರ್ಮಿಸುವುದು. ವಿಸರ್ಜನೆಗೆ ಮೊದಲು ನಡೆಯುವ ಪೂಜೆ, ಶೋಭಾಯಾತ್ರೆಯಲ್ಲಿ ಅರ್ಚಿತ ಗಣಪತಿಯ ಬಿಗುಮಾನದ ಸೌಂದರ್ಯವನ್ನು ನೋಡುವುದೇ ಖುಷಿ. ಸಾಮಾನ್ಯವಾಗಿ ಊರ ಹೆಸರಿನಲ್ಲಿ, ಮನೆಯ ಹೆಸರಿನೊಂದಿಗೆ ಗಣಪತಿಯನ್ನು ಎಣಿಸಿಟ್ಟುಕೊಳ್ಳುವುದು ಬಾಲ್ಯದ ಮಹತ್‌ ಕೆಲಸವೇ. ಮರುದಿನದ ಪತ್ರಿಕೆಯಲ್ಲಿ ಮತ್ತೆ ಮೊದಲಿನ ದಿನ ನೋಡಿದ ಗಣಪತಿಗಳನ್ನೆಲ್ಲ ನೋಡಿ ನಾನೂ ನೋಡಲು ಹೋಗಿದ್ದೆ ಎನ್ನುವ ಹೆಚ್ಚುಗಾರಿಕೆ. ಶೋಭಾಯಾತ್ರೆಗೆ ಸರಿಯಾಗಿ ಮಳೆಯ ಸೇಚನ, ಯಾಕಾದರೂ ಬಂದೆ ವರುಣ ಎಂದು ಶಪಿಸಲೂ ಕಾರಣವಾದದ್ದಿದೆ. ಅನಂತರ ಸಿಡಿಮದ್ದು, ಹುಲಿವೇಷ, ಟ್ಯಾಬ್ಲೋಗಳಿಂದ ಸಾಗಿ ಕೆರೆಯಲ್ಲಿ ವಿಸರ್ಜನೆಯಾಗುವ ಹೊತ್ತಿಗೆ ಮನೆಮಂದಿಯನ್ನೇ ಬೀಳ್ಕೊಟ್ಟಷ್ಟು ಭಾರವಾಗುವ ಹೃದಯ.

ಹಬ್ಬಗಳ ಆಚರಣೆಯ ಸೊಬಗೇ ತೊಡಗಿಸಿಕೊಳ್ಳುವಿಕೆಯಲ್ಲಿರುವುದು. ಚಿರಂತನ, ನಿರಂತರವಾದ ಸನಾತನ ಧರ್ಮದ ಹಬ್ಬಗಳ ಆಚರಣೆ ಬಾಂಧವ್ಯವನ್ನು ಬೆಸೆಯುತ್ತವೆ. ಗಣೇಶೋತ್ಸವವನ್ನು ತಿಲಕರು ಅಸ್ಮಿತೆಯ ರೂಪದಲ್ಲಿ ಆಚರಿಸಲು ಕರೆಕೊಟ್ಟಿದ್ದರು. ಸಧ್ಯದ ಕಾಲಘಟ್ಟದಲ್ಲಿ ವಿಘ್ನಹರ್ತನ ಹಬ್ಬದಾಚರಣೆಯಲ್ಲಿ ವಿಘ್ನಗಳು ಸಾಲುಸಾಲೇ. ಮೂರ್ತಿಯ ವಸ್ತು, ಜನಜಂಗುಳಿ, ಧ್ವನಿವರ್ಧಕ, ಶೋಭಾಯಾತ್ರೆ, ವಿಸರ್ಜನೆ, ಪೇಂಡಾಲಿಗೆ ಅನುಮತಿ ಹೀಗೆ ಆಚರಣೆಗೆ ಸಾಲುಸಾಲಿನ ಕಡಿವಾಣಗಳೇ. ಇದರೊಂದಿಗೆ ಡಿಜೆ-ಕುಣಿತ, ಆರ್ಕೆಸ್ಟ್ರಾ, ಮತ್ತು ರಾಜಕೀಯ ಪಕ್ಷಗಳು ಸ್ಥಾಪಿಸುವ ತಮ್ಮದೇ ಗಣಪನ ಮೇಲಾಟವೆನ್ನುವ ಮಟ್ಟಿಗೆ ಶ್ರದ್ಧೆ ಆಡಂಬರವಾಗಿ ವಿಜೃಂಭಿಸುತ್ತಿದೆ.

ಸನಾತನ ಧರ್ಮದ ಆಚಾರ-ವಿಚಾರಗಳೆಲ್ಲವು ವಿಸ್ತಾರವಾದ ಜ್ಞಾನದ ಸಾಗರದಂತೆ ಮತ್ತು ಸನಾತನ ಸಂಸ್ಕಾರ ಸಂಸ್ಕೃತಿಯ ಆಳವನ್ನು ಅರ್ಥಮಾಡಿಕೊಳ್ಳುವುದು ಸರಳ ಕಾರ್ಯವಲ್ಲ. ಹೀಗಾಗಿ ಈ ನಿರಂತರ ಸವಾಲುಗಳ ಹೊರತಾಗಿಯೂ, ಧರ್ಮದ ಸಾರವು ಹಾಗೇ ಉಳಿದಿದೆ ಹಾಗೂ ಅಜೇಯವಾಗಿ ನಿಂತಿದೆ. ಇಂತಹ ಆಚರಣೆಗಳಲ್ಲಿರುವ ತನ್ನ ಅಸ್ಪಷ್ಟತೆಯನ್ನು ಸುಸ್ಪಷ್ಟವಾಗಿ ಇನ್ನೊಬ್ಬರ ಮೇಲೆ ಹೊರಿಸುವ ಮನಸ್ಥಿತಿ ಸಾಮಾನ್ಯವಾಗುತ್ತಿರುವುದು ಖೇದಕರ.

ಷಟ್‌ ಚಕ್ರಗಳಲ್ಲಿ ಬುನಾದಿ ಮೂಲಾಧಾರ, ಮೂಲ ಚಕ್ರ. ಗಣೇಶನು ಮೂಲಧಾರ ಚಕ್ರವನ್ನು ಆಳುವ ಶಕ್ತಿ. “ತ್ವಾಂ ಯೋಗಿನೋ ಧ್ಯಾಯಂತಿ ನಿತ್ಯಂ’- ಎನ್ನುವಂತೆ ಗಣಪತಿಯ ಆರಾಧನೆ ಹೇಳುವುದು ಕರ್ಮ, ಜ್ಞಾನ ಮತ್ತು ಭಕ್ತಿಗಳ ಸಮನ್ವಯತೆ. ಗಣಪತಿಯ ವೈವಿಧ್ಯಗಳು, ರೂಪಗಳೂ ಅಪಾರ. ಮನರಂಜನೆಯ ಮಾದಕತೆಗೆ ತೆರೆದುಕೊಳ್ಳದೇ, ಮೃಣ್ಮಯ ಗಣಪನನ್ನು ಆರಾಧಿಸೋಣ.

ವಿಟ್ಲ ತನುಜ್‌ ಶೆಣೈ, ಚೆಲ್ಟೆನ್ಹ್ಯಾಮ್‌

Advertisement

Udayavani is now on Telegram. Click here to join our channel and stay updated with the latest news.

Next