Advertisement

ವಿಘ್ನನಾಶಕನ ಹಬ್ಬ ಆರೋಗ್ಯಪೂರ್ಣವಾಗಿರಲಿ

12:09 AM Aug 31, 2022 | Team Udayavani |

ಕೊರೊನಾದಂಥ ಮಹಾವಿಘ್ನದಿಂದಾಗಿ ಎರಡು ವರ್ಷಗಳಲ್ಲಿ ಗಣಪನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವಕಾಶ ಆಗಲೇ ಇಲ್ಲ. ಈಗ ಸಾರ್ವಜನಿಕವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲು ಕೊನೆಯ ಹಂತದ ಸಿದ್ಧತೆಗಳು ನಡೆದಿವೆ. ಈ ಸಂಭ್ರಮದ ಕ್ಷಣದಲ್ಲೇ ನಾವು ಮೈ ಮರೆಯುವ ಹಾಗಿಲ್ಲ. ಈ ವರ್ಷವೂ ನಾವೆಲ್ಲರೂ ಎಚ್ಚರಿಕೆಯಿಂದ ಹಬ್ಬವನ್ನು ಆಚರಿಸ ಬೇಕಾಗಿದೆ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೊರೊನಾ ಸೋಂಕಿನ ಹಾವಳಿ ನಿಧಾನವಾಗಿ ಇಳಿಕೆಯಾಗುತ್ತಿದೆ ಮತ್ತು ಸೋಂಕಿನ ಪ್ರಭಾವದಿಂದ ಉಂಟಾಗಿರುವ ಆರ್ಥಿಕ ಹೊಡೆತದಿಂದ ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕವಾಗಿ ಹಬ್ಬ ಆಚರಣೆಯ ವೇಳೆ ಗರಿಷ್ಠ ಪ್ರಮಾಣದ ಎಚ್ಚರಿಕೆಯನ್ನು ವಹಿಸಿಕೊಳ್ಳುವುದು ಅಗತ್ಯ. ಕೊರೊನಾ ಸಮಸ್ಯೆಯ ತೀವ್ರತೆ ತಗ್ಗಿದ್ದರೂ ನಮ್ಮ ಸುತ್ತಮುತ್ತಲಿನಿಂದ ಅದು ಸಂಪೂರ್ಣವಾಗಿ ನಿವಾರಣೆ ಆಗಿಲ್ಲ.

Advertisement

ಹೀಗಾಗಿ ಎಲ್ಲರೂ ಮಾಸ್ಕ್ ಧರಿಸುವುದು, ಅಂತರ ಪಾಲನೆಯನ್ನು ಕಾಯ್ದುಕೊಳ್ಳುವುದು ಅನಿವಾರ್ಯ. ಏಕೆಂದರೆ ಆಚರಣೆ ಮತ್ತು ಭಕ್ತಿಯ ಪರಾಕಾಷ್ಠೆಯಲ್ಲಿ ನಾವು ಆರೋಗ್ಯವನ್ನು ಕಡೆಗಣಿಸುವಂತೆ ಆಗಬಾರದು.

ಆರೋಗ್ಯದಷ್ಟೇ ಮತ್ತೊಂದು ಕಾಳಜಿಯುಕ್ತ ಕ್ಷೇತ್ರವೆಂದರೆ ಪರಿಸರ ರಕ್ಷಣೆ. ಕೆಲವು ಕಡೆಗಳಲ್ಲಿ ಬುಧವಾರ ಒಂದು ದಿನ ಮಾತ್ರ ಗಣಪನ ಹಬ್ಬ ಆಚರಿ ಸಲಾಗುತ್ತದೆ. ಗಣಪನ ವಿಗ್ರಹವನ್ನು ವಿಸರ್ಜಿಸಿದ ಬಳಿಕ ಆ ಸ್ಥಳದಿಂದ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಎಲ್ಲರೂ ನೆರವಾಗಬೇಕಾಗಿದೆ. ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ಇದ್ದರೆ ಅದು ರೋಗ ರುಜಿನಗಳಿಗೆ ತಿರುಗುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ ಗಣೇಶನ ವಿಗ್ರಹ ಇರಿಸುವ ಸಂಘಟನೆಗಳು ಎಚ್ಚೆತ್ತು ಕೊಳ್ಳಬೇಕು. ಇದರ ಜತೆಗೆ ಸಾರ್ವಜನಿಕರು ಪಾಲಿಸಬೇಕಾದ ಕೆಲವು ಕರ್ತವ್ಯಗಳಿವೆ. ಗಣೇಶನ ವಿಗ್ರಹಗಳು ಇರಿಸುವ ಸ್ಥಳಗಳಲ್ಲಿ ನೀಡಲಾದ ಪ್ರಸಾದ, ಆಹಾರದ ಪೊಟ್ಟಣಗಳನ್ನು ಅಲ್ಲಿಯೇ ಇರುವ ಕಸದ ಡಬ್ಬದಲ್ಲಿ ಹಾಕುವ ಮೂಲಕ ಸಂಘಟಕರಿಗೆ ಮತ್ತು ಆಯಾ ಸ್ಥಳೀಯ ಸಂಸ್ಥೆಗಳಿಗೆ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಸಹಕರಿಸಲು ನೆರವಾಗಬೇಕು.

ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗಣಪನನ್ನು ಇರಿಸಿ ದವರೂ ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಇರುವ ನಿಯಮಗಳನ್ನು ಅನುಸರಿಸಿ ಪರಿಸರ ಸ್ನೇಹ ಮತ್ತು ಆರೋಗ್ಯಯುತವಾಗಿರುವ ವಾತಾವರಣದಲ್ಲಿ ವಿಘ್ನ ನಿವಾರಕನ ಹಬ್ಬ ಆಚರಿಸಿ, ನಮ್ಮೆಲ್ಲರಿಗೆ ಇರುವ ವಿಘ್ನಗಳನ್ನು ನಿವಾರಿಸಿಕೊಳ್ಳಬೇಕಾಗಿದೆ.

ಹಲವು ಕಾರಣಕ್ಕಾಗಿ ಪರಿಸರ ನಾಶ ಉಂಟಾಗುತ್ತಿದೆ. ಅದರ ಪ್ರತಿಕೂಲ ಪರಿಣಾಮ ಗಣೇಶನ ಹಬ್ಬದ ಮೇಲೆ ಕೂಡ ಆಗಿದೆ ಎಂದು ಹೇಳಲಾಗುತ್ತಿದೆ. ಮಣ್ಣಿನ ವಿಗ್ರಹಗಳು ಬೇಕು ಎಂಬುವರಿಗೆ ಪ್ರಸಕ್ತ ವರ್ಷ ಅದನ್ನು ಪಡೆದುಕೊಳ್ಳುವುದು ಕಷ್ಟವಾಗಿದೆ ಎನ್ನುವುದನ್ನು ಬೇರೆ ಹೇಳ ಬೇಕಾಗಿಲ್ಲ. ಏಕೆಂದರೆ ಹಲವು ಕಾರಣಗಳಿಂದಾಗಿ ವಿಗ್ರಹ ತಯಾರಿಸಲು ಬೇಕಾಗಿರುವ ಮಣ್ಣು ಸ್ಥಳೀಯವಾಗಿ ಸಿಗದಂತೆ ಆಗಿದೆ. ದೊಡ್ಡ ಪ್ರಮಾಣದ ಮಣ್ಣಿನ ಗಣಪನ ವಿಗ್ರಹಗಳನ್ನೂ ದೂರದ ಊರುಗಳಿಂದ ತರಿಸುವ ಅನಿವಾರ್ಯ ಉಂಟಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next