Advertisement

ಗಣೇಶ ಸ್ಥಾಪಿಸಲು ಮುಗಿಯದ ಗೊಂದಲ

03:07 PM Sep 07, 2021 | Team Udayavani |

ಬೆಂಗಳೂರು: ಗಣೇಶ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಗೊಂದಲ ನಿವಾರಣೆಯಾಗಿರಬಹುದು. ಆದರೆ, ಸ್ವಲ್ಪಒಳಹೊಕ್ಕರೆ ಆಚರಣೆ ಇನ್ನೂ ಗೋಜಲು ಆಗಿಯೇ ಉಳಿದಿದೆ!

Advertisement

ಸರ್ಕಾರ ಹೊರಡಿಸಿರುವ ನಿಯಮಗಳ ಪ್ರಕಾರ ವಾರ್ಡ್‌ಗೆ ಒಂದರಂತೆ ನಗರಾದ್ಯಂತ 198 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲು ಮಾತ್ರ ಅವಕಾಶ ಇದೆ. ಆದರೆ, ಆ ಗಣೇಶನನ್ನು ಪ್ರತಿಷ್ಠಾಪನೆ ಮಾಡು ವವರು ಯಾರು ಎಂಬ ಪ್ರಶ್ನೆಗೆ ಸದ್ಯಕ್ಕೆ ಸ್ಥಳೀಯ ಸಂಸ್ಥೆ ಬಳಿಯಾಗಲಿ ಅಥವಾ ನಿಯಮ ರೂಪಿಸಿದ ಸ್ವತಃ ಸರ್ಕಾರದ ಬಳಿಯಾಗಲಿ ಸ್ಪಷ್ಟ ಉತ್ತರ ಇಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳುವುದೇ ಈಗ ದೊಡ್ಡ ಸವಾಲಾಗಿದೆ.

ಯಾಕೆಂದರೆ, ನಗರಾದ್ಯಂತ ಪ್ರತಿ ವರ್ಷ ಸಾವಿರಾರು ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆ ಆಗುತ್ತದೆ. ಇದಕ್ಕಾಗಿ ನೂರಾರು ಸಂಘಟನೆಗಳು ನೇತೃತ್ವ ವಹಿಸಿಕೊಂಡಿರುತ್ತವೆ. ಬಿಬಿಎಂಪಿ ಅಧಿಕಾರಿಗಳ ಮಾಹಿತಿ ಪ್ರಕಾರವೇ ಕೋರ್‌ ಏರಿಯಾದಲ್ಲಿರುವ ಒಂದೊಂದು ವಾರ್ಡ್‌ನಲ್ಲಿ ಕನಿಷ್ಠ
200-300 ಗಣೇಶನ ಪ್ರತಿಷ್ಠಾನೆ ಆಗುತ್ತದೆ. ಅಂದಾಜು ಎರಡು ಸಾವಿರವಿವಿಧ ಸಂಘ-ಸಂಸ್ಥೆಗಳು ನಗರದಲ್ಲಿವೆ. ಹಾಗಿದ್ದರೆ, ಯಾರಿಗೆ ಪ್ರತಿಷ್ಠಾಪನೆಗೆ ಅನುಮತಿ ನೀಡುತ್ತಾರೆ? ಅದಕ್ಕಿರುವ ಮಾನದಂಡಗಳು ಏನು? ಎಂಬುದನ್ನು ಬಿಬಿಎಂಪಿ ಸ್ಪಷ್ಟಪಡಿಸಬೇಕಿದೆ.

ಆದರೆ, ಅದು ಅಷ್ಟು ಸುಲಭವೂ ಇಲ್ಲ. ಒಂದು ಸಂಸ್ಥೆಗೆ ನೀಡಿದರೆ, ಮತ್ತೂಬ್ಬರಿಗೆ ಮುನಿಸು. ತಮ್ಮ ಬೆಂಬಲಕ್ಕೆ ನಿಂತಿರುವ ಸಂಘ-ಸಂಸ್ಥೆಗಳಿಗೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸುವಲ್ಲಿ ಸ್ಥಳೀಯ ನಾಯಕರು ವಿಫ‌ಲವಾದರೆ, ತಮ್ಮಿಂದ ವಿಮುಖರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಯಲ್ಲಿ ನಾಯಕರಿಗೂ ಇದು ಪ್ರತಿಷ್ಠೆಯಾಗಿದೆ. ಇದೇ ಕಾರಣಕ್ಕೆ ಅತ್ತ ಹೊಸ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ ಬೆನ್ನಲ್ಲೇ ಸ್ಥಳೀಯ
ನಾಯಕರಿಗೆ ಅನುಮತಿ ಕೊಡಿಸುವಂತೆ ಅಹವಾಲುಗಳ ಮಹಾಪೂರ ಹರಿದುಬರುತ್ತಿದೆ. “ನಮಗೆ ಪರ್ಮಿಷನ್‌ ಕೊಡಿಸದಿದ್ದರೆ, ಈ ಬಾರಿ ನಿಮ್ಮ ಚುನಾವಣೆಗೆ ಬೆಂಬಲ ನೀಡುವುದೇ ಇಲ್ಲ!’ ಎಂಬ ಎಚ್ಚರಿಕೆಗಳೂ ಬರುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ಮಾಜಿ ಸದಸ್ಯರೊಬ್ಬರು
ಅಲವತ್ತುಕೊಂಡರು. ಈ ಬೆಳವಣಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ:ಲಸಿಕೆ ಪಡೆದವರಿಗೆ ಮಾತ್ರ ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶ

Advertisement

ಸ್ಥಳೀಯ ಆಡಳಿತವೇ ನಿರ್ಧಾರ: ಅಶೋಕ್‌
“ವಾರ್ಡ್‌ಗೆ ಒಂದೇ ಕಡೆ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಅದಕ್ಕಿಂತ ಹೆಚ್ಚಿನ ಬೇಡಿಕೆ ಬಂದರೆ ಅದನ್ನು ಸ್ಥಳೀಯ ಆಡಳಿತ ನಿರ್ಧರಿಸುತ್ತದೆ. ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ಅವರುಕೂಡ ಸರಳವಾಗಿ ಆಚರಿಸುವ ಕುರಿತು ತಿಳಿಸಿದ್ದಾರೆ. ವಿಘ್ನಗಳು ಬರದಂತೆ ಪೂಜೆ ಮಾಡಲಾಗುತ್ತಿದೆ. ಎಲ್ಲವೂ ಒಳಿತಾಗಲಿದೆ. ಸಕಾರಾತ್ಮಕವಾಗಿ ಯೋಚನೆ ಮಾಡೋಣ’ ಎಂದು ಸಚಿವ ಆರ್‌. ಅಶೋಕ್‌ ತಿಳಿಸುತ್ತಾರೆ.
“ಗೊಂದಲ ನಿವಾರಣೆ ಮಾಡಲು ಹೋಗಿ ಮತ್ತಷ್ಟು ಗೊಂದಲ ಸೃಷ್ಟಿಸಿದಂತಾಗಿದೆ. ಅನುಮತಿ ಕೊಡಿ ಸದ್ದರೆ ಸಿಟ್ಟಾಗುತ್ತಾರೆ. ಪ್ರತಿಭಟನೆಗೆ
ಮುಂದಾಗುವ ಸಾಧ್ಯತೆಗಳೂ ಇವೆ. ಎಲ್ಲ ಸಂಘಟನೆಗಳೂ ಒಟ್ಟಾಗಿ ಯಾಕೆ ಆಚರಿಸಬಾರದು ಎಂದು ಕೇಳಬಹುದು. ಆದರೆ, ವಾಸ್ತವವಾಗಿ ಅದು ಸಾಧ್ಯವಿಲ್ಲ. ಹಲವಾರು ಭಿನ್ನಾಭಿಪ್ರಾಯಗಳಿರುತ್ತವೆ, ಮುಂದಾಳತ್ವ ವಹಿಸುವವರು ಯಾರು ಎಂಬ ಪ್ರತಿಷ್ಠೆ ಅಡ್ಡಿಬರುತ್ತದೆ. ಸ್ಥಳೀಯವಾಗಿ ನಿರ್ಧಾರ ಕೈಗೊಳ್ಳುವುದು ಕೂಡ ಕಷ್ಟ. ಯಾಕೆಂದರೆ, ಪೊಲೀಸರು ಅಥವಾ ವಿಭಾಗೀಯ ಎಂಜಿನಿಯರ್‌ಗಳು ಯಾವ ಮಾನದಂಡದ ಮೇಲೆ
ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಮತ್ತೊಬ್ಬ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಏನು ಮಾಡಬಹುದು?
ಕಳೆದ 5 ಅಥವಾ 10 ವರ್ಷಗಳಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆ, ಬೆಸ್ಕಾಂ, ಬಿಬಿಎಂಪಿ, ಪೊಲೀಸರಿಂದ ಅಗತ್ಯ ಅನುಮತಿ ಪಡೆದು,
ನಿಯಮಿತವಾಗಿ ಗಣೇಶನ ಪ್ರತಿಷ್ಠಾಪನೆ ಮಾಡುತ್ತಾ ಬಂದ ಸಂಘ-ಸಂಸ್ಥೆಗೆ ಅನುಮತಿ ನೀಡಲಾಗುವುದು ಎಂದು ನಿಯಮ ರೂಪಿಸಬೇಕು. ಆಗ, ಭಾಗಶಃ ಗೊಂದಲ ನಿವಾರಣೆ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಲಸಿಕೆ ಕೇಂದ್ರ ಹೇಗೆ?
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿಕೊರೊನಾಲಸಿಕೆ ಮೇಳವನ್ನು ನಡೆಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.ಆದರೆ,ಇದಕ್ಕೆ ಆರೋಗ್ಯ ಇಲಾಖೆ ಸಹಕಾರ ನೀಡುತ್ತದೆಯೋ? ಅಥವಾಖಾಸಗಿ ಆಸ್ಪತ್ರೆ ಸಹಯೋಗದೊಂದಿಗೆ ಸ್ವಂತಖರ್ಚಿನಲ್ಲಿಲಸಿಕೆ ನೀಡಬೇಕೊ? ಎಂಬುದು ಸ್ಪಷ್ಟವಾಗಿಲ್ಲ ಉಲ್ಲೇಖೀಸಿಲ್ಲ. ಲಸಿಕಾ ಮೇಳ ಕಡ್ಡಾಯ ಎಂಬುದನ್ನು ತಿಳಿಸಿಲ್ಲ.ಇದರಿಂದ ಆಯೋಜಕರು ಗೊಂದಲದಲ್ಲಿದ್ದಾರೆ.

ಸೊಂಕು ನೆಗೆಟಿವ್‌ ವರದಿ ಯಾವಾಗ
ಆಯೋಜಕರಿಗೆ ಕೋವಿಡ್‌ ಸೊಂಕು ನೆಗೆಟಿವ್‌ ವರದಿ ಕಡ್ಡಾಯ ಎಂದು ತಿಳಿಸಲಾಗಿದೆ. ಆದರೆ, ಪ್ರತಿಷ್ಠಾಪನೆಗೆ ಅರ್ಜಿಸಲ್ಲಿಸುವಾಗಲೇ ನೆಗೆಟಿವ್‌ ವರದಿಯನ್ನು ನೀಡಬೇಕೊ, ಹಬ್ಬದ ಹಿಂದಿನ ದಿನ ಪರೀಕ್ಷೆಗೊಳಪಟ್ಟು ನೆಗೆಟಿವ್‌ ವರದಿ ಹೊಂದಬೇಕೋ ಎಂಬುದನ್ನುಕೂಡಾ ಸರಿಯಾಗಿ ಉಲ್ಲೇಖೀಸಿಲ್ಲ.

ತಡವಾದ ಸರ್ಕಾರದ ನಿರ್ಧಾರ-ನಿರಾಸೆ
ಸರ್ಕಾರ ಗಣೇಶ ಮೂರ್ತಿ ಎತ್ತರ ನಾಲ್ಕು ಅಡಿಗೆ ಸೀಮಿತಗೊಳಿಸಿ, ವಾರ್ಡ್‌ಗೊಂದು ಗಣೇಶ ಪತಿಷ್ಠಾಪನೆಗೆ ಮಾತ್ರ ಅನುಮತಿ ನೀಡಿದೆ. ಆದರೆ, ಈ ನಿರ್ಧಾರವು ಹಬ್ಬ ನಾಲ್ಕು ದಿನ ಬಾಕಿ ಇರುವಾಗ ಹೊರಬಿದ್ದಿರುವುದು ಸಾವಿರಾರು ಗಣೇಶ ಮೂರ್ತಿ ಕಲಾವಿದರು ಮತ್ತು ಗಣೇಶ ಪ್ರತಿಷ್ಠಾನ ಸಂಘ-ಸಂಸ್ಥೆಗಳಿಗೆ ನಿರಾಸೆ ಉಂಟುಮಾಡಿದೆ.

ಸಾಮಾನ್ಯವಾಗಿ ಗಣೇಶಮೂರ್ತಿ ತಯಾರಿಕೆಗೆಕನಿಷ್ಠ ಒಂದೆರಡು ತಿಂಗಳ ಮುಂಚಿತವಾಗಿಯೇ ಮುಂಗಡ ಹಣನೀಡಿ, ಬುಕ್ಕಿಂಗ್‌ ಮಾಡಲಾಗಿರುತ್ತದೆ. ಈ ಹಿಂದೆ ಐದು ಅಡಿಯ ಮೂರ್ತಿಗೆ ಅನುಮತಿ ನೀಡಲಾಗಿತ್ತು, ಈ ಬಾರಿ ಮೂರ್ತಿಯ ಎತ್ತರದ ಬಗ್ಗೆ ಯಾವುದೇ
ಪ್ರಸ್ತಾಪವು ಇರಲಿಲ್ಲ. ಹೀಗಾಗಿ, ಲಕ್ಷಾಂತರ ಸಂಖ್ಯೆಯಲ್ಲಿ ಐದು ಮತ್ತು ಅದಕ್ಕಿಂತ ಎತ್ತರದ ಮೂರ್ತಿಯನ್ನು ನಮ್ಮಂತಹ ಕಲಾವಿದರು
ಸಿದ್ಧಪಡಿಸಿದ್ದಾರೆ.ಕೆಲವರು ಹೀಗಾಗಲೇ ಮುಂಗಡ ಹಣ ನೀಡಿ ಬುಕ್ಕಿಂಗ್‌ ಮಾಡಿದ್ದು, ಹೊಸ ನಿಯಮಗಳಿಂದ ಇಬ್ಬರಿಗೂ ಸಮಸ್ಯೆಯಾಗುತ್ತಿದೆ
ಎಂದು ಶೇಷಾದ್ರಿಪುರಕಲಾವಿದ ಎಂ. ಶ್ರೀನಿವಾಸ ಬೇಸರ ವ್ಯಕ್ತಪಡಿದರು. ಇನ್ನೊಂದೆಡೆ ಪ್ರತಿ ವರ್ಷ ಬೆಂಗಳೂರಿನಲ್ಲಿ 50 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 8-10 ಸಾವಿರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.
ಹಬ್ಬಕ್ಕಾಗಿ ಸಂಘ-ಸಂಸ್ಥೆಗಳು ಒಂದು ತಿಂಗಳ ಪೂರ್ವ ದಲ್ಲಿಯೇ ತಯಾರಿ ನಡೆಸಿರುತ್ತವೆ. ಅವರ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ.

ಮನೆಯಲ್ಲಿ ಪ್ರತಿಷ್ಠಾಪಿಸುವ ಮೂರ್ತಿ ಎತ್ತರ ನಿರ್ಧರಿಸುವ ಹಕ್ಕು ಸರ್ಕಾರಕ್ಕಿಲ್ಲ. ಮೂರ್ತಿ ಎತ್ತರ ಮತ್ತು ಸೀಮಿತ ಸಂಘಟನೆಗಳಿಗೆ ಅನುಮತಿ ನೀಡಲಿರುವುದ ಸಾಕಷ್ಟು ಗೊಂದಲಸೃಷ್ಟಿಸಿದೆ. ಶೀಘ್ರ ಗೊಂದಲಗಳನ್ನು ಬಗೆಹರಿಸಬೇಕು.
– ಪ್ರಕಾಶ್‌ ರಾಜು, ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ.

ಲಸಿಕೆ ಮೇಳ ಆಯೋಜಿಸುವ ಕುರಿತು ಸ್ಪಷ್ಟ ಮಾಹಿತಿ ನೀಡಿಲ್ಲ. ಸ್ವಂತಖರ್ಚಿನಲ್ಲಿ ಲಸಿಕೆ ಮೇಳ ಆಯೋಜಿಸಲು ಹೆಚ್ಚು ಹಣಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಗಳು ಕೈಜೋಡಿಸಿದರೆ ಮೇಳಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುತ್ತದೆ.
-ಎ.ಆರ್‌.ಸಂತೋಷ್‌ ಕುಮಾರ್‌, ಅಧ್ಯಕ್ಷರು, ಸ್ನೇಹಬಳಗ, ಡಿವಿಜಿ ರಸ್ತೆ

– ವಿಜಯಕುಮಾರ್‌ ಚಂದರಗಿ /
ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next