Advertisement

Ganesh Chathurthi: ವಿಘ್ನನಿವಾರಕ ವಿಘ್ನೇಶ್ವರ

08:49 AM Sep 18, 2023 | Team Udayavani |

ಮುದಾಕರಾತ್ತಮೋದಕಂ ಸದಾ ವಿಮುಕ್ತಿ ಸಾಧಕಂ

Advertisement

ಕಲಾಧರಾವತಂ ಸಕಂ ವಿಲಾಸಿ ಲೋಕ ರಕ್ಷಕಂ

ಅನಾಯ ಕೈಕ ನಾಯಕ ವಿನಾಶ ತೇಭ ದೈತ್ಯ ಕಂ

ನತಾಶುಭಾಶುನಶಕಂ ನಮಾಮಿತಮ್‌ ವಿನಾಯಕ

ಮಂದಸ್ಮಿತನಾಗಿ ಸದಾ ಕೈಯಲ್ಲಿ ಕಡುಬನ್ನು ಹಿಡಿದಿರುವ ಮೋಕ್ಷ ವಿಮುಕ್ತನಾದ ಚಂದ್ರನನ್ನೇ ಆಭರಣದಂತೆ ತಲೆಯ ಮೇಲೆ ಧರಿಸಿರುವ ತನ್ನ ಲೀಲಾಜಾಲದಿಂದ ಜನರನ್ನು ರಕ್ಷಿಸುವ ಅನಾಥರಿಗೆ ದಿಕ್ಕಾದ ಆ ಭಾಸುರನೆಂಬ ಅಸುರನನ್ನು ಸಂಹರಿಸಿದ ತನ್ನನ್ನು ನೆನೆದವರ ಕಷ್ಟಗಳನ್ನು ಬೇಗನೆ ನಿವಾರಿಸುವ ವಿಘ್ನ ವಿನಾಯಕನಿಗೆ ನಮಸ್ಕರಿಸುತ್ತಾ ನಾವು ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಗಣಪತಿಯನ್ನು ಪೂಜಿಸುತ್ತೇವೆ. ಹಿಂದೊಮ್ಮೆ ಶಿವಪಾರ್ವತಿಯರು ತಮ್ಮ ಮಕ್ಕಳಾದ ಷಣ್ಮುಖ ಹಾಗೂ ಗಣಪತಿಯನ್ನು ಕರೆಸಿ ನೀವಿಬ್ಬರೂ ಭೂಲೋಕವನ್ನು ಸುತ್ತಿ ಬರಬೇಕು.

Advertisement

ಯಾರು ಮೊದಲಿಗೆ ಸುತ್ತಿ ಬರುತ್ತಾರೋ ಅವರಿಗೆ ವಿಶೇಷವಾದ ಉಡುಗೊರೆ ನೀಡುವುದಾಗಿ ತಿಳಿಸಿದರು. ಹೇಳಿದ್ದೇ ತಡ ಷಣ್ಮುಖ ತನ್ನ ವಾಹನ ನವಿಲಿನ ಬೆನ್ನೇರಿ ಹಾರತೊಡಗಿದ. ಆದರೆ ಗಣಪನ ವಾಹನ ಇಲಿ ಅಲ್ಲವೇ, ಅದರ ಬೆನ್ನೇರಿ ಭೂಲೋಕ ಸುತ್ತಿ ಬರುವುದುಂಟೇ ಎಂಬುದು ಚಿಂತೆಯಾಯಿತು. ಆದ್ದರಿಂದ ಗಣಪ ತನ್ನ ಬುದ್ಧಿವಂತಿಕೆಯಿಂದ ಶಿವ ಪಾರ್ವತಿಯರ ಸುತ್ತುವರಿದು ಕೈ ಮುಗಿದು ನಿಂತ. ಷಣ್ಮುಖ ಭೂಲೋಕವನ್ನು ಸುತ್ತಿ ಮರಳಿ ಬಂದಾಗ ಗಣಪತಿ ಅಲ್ಲೇ ಇದ್ದುದನ್ನು ನೋಡಿ ಆತನಿಗೆ ಆಶ್ಚರ್ಯವಾಯಿತು. ಗಣಪತಿಯಲ್ಲಿ ಬಂದು ಷಣ್ಮುಖ ಕೇಳಿದ ನೀನು ಇಷ್ಟು ಬೇಗ ಭೂಲೋಕವನ್ನು ಸುತ್ತಿ ಬಂದಿರುವೆಯಾ ? ಇದು ಹೀಗೆ ಸಾಧ್ಯ ? ಎಂದು ಕೇಳಿದಾಗ ಗಣಪತಿ ಹೇಳಿದ ಎಲ್ಲರಿಗೂ ಅವರವರ ತಂದೆ ತಾಯಿ ಸರ್ವಸ್ವ. ಆದ್ದರಿಂದ ನಾನು ತಂದೆ ತಾಯಿಗೆ ಸುತ್ತುವರಿದು ನಿಂತೆ. ಅವರೇ ನನ್ನೆಲ್ಲ ಪ್ರಪಂಚ ಎಂದನು.

ಶಿವ ತಪಸ್ಸಿಗಾಗಿ ಕೈಲಾಸಕ್ಕೆ ಹೋಗಿರುವ ಸಂದರ್ಭದಲ್ಲಿ ಪಾರ್ವತಿ ಸ್ನಾನ ಮಾಡುವಾಗ ತನ್ನ ಮೈಯ ಮಣ್ಣಿನಿಂದ ಒಂದು ಸುಂದರವಾದ ಮೂರ್ತಿಯನ್ನು ಮಾಡಿ ಜೀವ ಕಳೆ ನೀಡುತ್ತಾಳೆ. ಹೀಗೆ ಒಂದು ದಿನ ಪಾರ್ವತಿ ಸ್ನಾನಕ್ಕೆ ಹೊರಡುವ ಮೊದಲು ಗಣಪತಿಯಲ್ಲಿ ತಾನು ಮರಳಿ ಬರುವವರೆಗೂ ಯಾರನ್ನು ಒಳಗೆ ಬಿಡಬೇಡ ಎಂದು ದ್ವಾರಪಾಲಕನಾಗಿ ನಿಲ್ಲಿಸಿ ತೆರಳುತ್ತಾಳೆ.

ಕೈಲಾಸಕ್ಕೆ ಹೋದ ಪರಶಿವನು ಮರಳಿ ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ಗಣೇಶ ಆತನನ್ನು ತಡೆದು ನಿಲ್ಲಿಸುತ್ತಾನೆ. ಏನೇ ಆದರೂ ಒಳ ಬರಲು ಬಿಡುವುದೇ ಇಲ್ಲ. ಇದರಿಂದ ಕೋಪಗೊಂಡ ಶಿವನು ಗಣಪತಿಯ ತಲೆಯನ್ನು ಕಡಿಯುತ್ತಾನೆ. ದೇಹ ಬೇರೆ ತಲೆ ಬೇರೆ ಆಗಿಬಿಡುತ್ತದೆ. ಪಾರ್ವತಿ ಮರಳಿ ಬಂದಾಗ ಗಣಪತಿ ಸತ್ತು ಬಿದ್ದಿರುವುದನ್ನು ಕಂಡು ಗೋಳಾಡುತ್ತಾಳೆ. ಶಿವನಿಗೆ ಗಣೇಶನ ಜನನವಾದ ಸತ್ಯ ತಿಳಿದಿರಲಿಲ್ಲ. ಪಾರ್ವತಿಯನ್ನು ಕಂಡಮೇಲೆಯೇ ಎಲ್ಲ ತಿಳಿಯುತ್ತದೆ. ಹೇಗಾದರೂ ಮಾಡಿ ತನ್ನ ಮಗನನ್ನು ಬದುಕಿಸಿಕೊಡಬೇಕೆಂದು ಪಾರ್ವತಿ ಶಿವನಲ್ಲಿ ಕೇಳಿಕೊಂಡಾಗ ಆತ ತನ್ನ ಸೇವಕರನ್ನು ಕರೆದು ಈ ಲೋಕದಲ್ಲಿ ಯಾವುದೇ ಜೀವಿ ಉತ್ತರ ದಿಕ್ಕಿಗೆ ಮುಖ ಮಾಡಿದ್ದರೆ ಅದರ ತಲೆಯನ್ನು ಕಡಿದು ತನ್ನಿ ಎಂದು ಆದೇಶಿಸುತ್ತಾನೆ. ಸೇವಕರು ಎಷ್ಟೇ ಹುಡುಕಿದರೂ ಎಲ್ಲಿಯೂ ಉತ್ತರ ದಿಕ್ಕಿಗೆ ಮುಖ ಮಾಡಿದ ಮನುಷ್ಯರು ಸಿಗಲೇ ಇಲ್ಲ.

ಕೊನೆಗೆ ಒಂದು ಆನೆ ಉತ್ತರ ದಿಕ್ಕಿಗೆ ತಿರುಗಿ ಇದ್ದುದನ್ನು ಕಂಡು ಅದರ ತಲೆಯನ್ನು ಕಡಿದು ತಂದು ಶಿವನಿಗೆ ಕೊಟ್ಟಾಗ ಆತ ಆ ತಲೆಯನ್ನು ಗಣಪತಿಯ ದೇಹಕ್ಕೆ ಇಟ್ಟು ಮರುಜೀವ ಕೊಡುತ್ತಾನೆ. ಈ ಕಾರಣದಿಂದಾಗಿ ಗಣಪತಿ ಆನೆಯ ಮುಖ ವರ್ಣವನ್ನು ಹೋಲುತ್ತಾನೆ.

ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನದಂದು ಗಣೇಶನನ್ನು ವಿಶೇಷ ರೀತಿಯಲ್ಲಿ ಪೂಜಿಸುವ ಪದ್ಧತಿ ಇದೆ. ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಚೌತಿಯ ಹಿಂದಿನ ದಿನ ಗೌರಿ ಪೂಜೆ ಆಚರಿಸಲಾಗುವುದು. ಚೌತಿಯ ದಿನದಂದು ಯಾರೂ ಚಂದಿರನನ್ನು ನೋಡಬಾರದು ಎಂದು ಹೇಳುತ್ತಾರೆ. ಅದಕ್ಕೂ ಪುರಾಣದಲ್ಲಿ ಕಥೆಗಳಿವೆ. ಒಮ್ಮೆ ಚೌತಿಯ ದಿನದಂದು ಗಣೇಶ ಮೋದಕ ಇನ್ನಿತರೆ ತಿನಿಸುಗಳನ್ನು ತಿಂದು ಹೊಟ್ಟೆ ತುಂಬಿ ಬಿದ್ದಾಗ ಆತನ ಹೊಟ್ಟೆ ಒಡೆದು ಹೋಗುತ್ತದೆ.

ಅದೇ ಸಮಯದಲ್ಲಿ ಸರ್ಪ ಒಂದು ಹರಿಯುತ್ತಿರುವುದನ್ನು ಕಂಡು ಅದನ್ನು ತತ್‌ಕ್ಷಣ ತನ್ನ ಹೊಟ್ಟೆಗೆ ಬಿಗಿಯಾಗಿ ಕಟ್ಟುತ್ತಾನೆ. ಇದನ್ನು ಕಂಡ ಚಂದ್ರದೇವನು ನೋಡಿ ನಗುತ್ತಿರುತ್ತಾನೆ. ಇದರಿಂದ ಕೋಪಗೊಂಡ ಗಣಪತಿಯು ಆತನಿಗೆ ಶಾಪ ನೀಡುತ್ತಾನೆ, ಯಾರು ಚೌತಿಯ ದಿನದಂದು ನಿನ್ನನ್ನು ಕಾಣುತ್ತಾರೋ ಅವರಿಗೆ ಎಂದಿಗೂ ಅಪವಾದ ತಪ್ಪದು ಎನ್ನುತ್ತಾನೆ. ಹೀಗೆ ಇತಿಹಾಸದಲ್ಲಿ ಒಂದೊಂದು ರೀತಿಯಾಗಿ ಚೌತಿಯ ದಿನದಂದು ಚಂದ್ರನನ್ನು ಏಕೆ ಕಾಣಬಾರದು ಎಂಬ ಕಾರಣಕ್ಕೆ ಕಥೆಗಳನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದ್ದಾರೆ.

ಗಣಪತಿಗೆ “ಓಂಕಾರ’ ಎನ್ನುವ ಈ ಹೆಸರು ದೇವ ನಾಗರಿ ಲಿಪಿಯಲ್ಲಿ ಕಾಣಬಹುದಾಗಿದೆ. ಬಾಲಚಂದ್ರ, ಚಿಂತಾಮಣಿ, ಗಜಕರ್ಣ, ಗಜಾನನ, ಗಜವದನ, ಗಜ್ಯಾಧ್ಯಕ್ಷ, ಗಣಪತಿ, ವಿಶ್ವಧರ, ಜಗದೋದ್ಧಾರ, ಮೂಶಿಕ ವಾಹನ, ಶೂರ್ಪಕರಣ, ಸುಮುಖ, ಏಕದಂತ, ವಿಘ್ನ ಹರ್ತ, ವಿಘ್ನ ವಿನಾಯಕ ವಿಘ್ನೇಶ, ಬಾಲ ಗಣಪತಿ, ಬಾಲ ಗಣೇಶ, ಸುರೇಶ್ವರ, ಗಜೇಶ್ವರ, ಮಹೇಶ್ವರ, ಗಣೇಶ್ವರ ಹೀಗೆ ಹಲವಾರು ನಾಮದಿಂದ ಪೂಜಿಸಲ್ಪಡುತ್ತಾನೆ.

ಹಣೆಯಲ್ಲಿ ತ್ರಿಶೂಲದಂತಿರುವ ಬೊಟ್ಟು, ಅರ್ಧ ದಂತ, ಗಜ ಸುಂಡಿಲು, ವಿಶಾಲ ಕರ್ಣ, ಹಾವನ್ನು ಸೊಂಟಪಟ್ಟಿಯಂತೆ ಧರಿಸಿ, ಒಂದು ಕಾಲು ನೆಲಕ್ಕೆ ಸ್ಪರ್ಶಿಸಿ ಇನ್ನೊಂದು ಕಾಲನ್ನು ಸ್ವಲ್ಪ ಮೇಲೆತ್ತಿ ಹೀಗೆ ಹಲವಾರು ಗುಣಗಳಿಂದ ಕೂಡಿರುವ ಗಣೇಶನ ಪ್ರತಿಯೊಂದು ಗುಣಗಳಿಗೂ ಒಂದೊಂದು ಕಾರಣವೂ ಇದೆ.

ಎಲ್ಲ ಶಿವನ ದೇವಾಲಯದಲ್ಲೂ ಗಣಪತಿಯ ಗುಡಿ ಇದ್ದೇ ಇರುತ್ತದೆ. ಹೀಗೆ ಗಣಪತಿಯ ಬಗ್ಗೆ ಕಥೆಗಳನ್ನು ಹೇಳುತ್ತಾ ವಿವರಿಸುತ್ತಾ ಹೋದರೆ ಸಾಕಷ್ಟಿವೆ. ಡೊಂಕಾದ ಕೋರೆ ದಾಡೆ ಗಳುಳ್ಳವನೂ, ವಿಶಾಲ ದೇಹವನ್ನು ಹೋಲುವ, ಕೋಟಿ ಸೂರ್ಯರ ಪ್ರಕಾಶಕೆ ಸಮಾನನು ಆದಂತಹ ಗಣಪತಿ ನಮ್ಮ ಪ್ರತಿ ಕಾರ್ಯದಲ್ಲೂ ಸರ್ವ ವಿಘ್ನಗಳನ್ನು ನಿವಾರಣೆ ಮಾಡಲಿ ಎಂದು ಪ್ರಾರ್ಥಿಸೋಣ.

-ದೀಪ್ತಿ ಅಡ್ಡಂತ್ತಡ್ಕ

ವಿವೇಕಾನಂದ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next