Advertisement

ಗಾಂಧೀಜಿಯ ವೈಜ್ಞಾನಿಕ ಧೋರಣೆಯ ಅನಾವರಣ ಸತ್ಯಾಗ್ರಹಿ ವಿಜ್ಞಾನಿ ಗಾಂಧಿ

12:38 AM Dec 27, 2019 | mahesh |

ಮಾನವನ ವಿಕಾಸವೆಂದರೆ ಅವನ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಅರಿವಿನ ವಿಕಾಸ. ಸಮಾಜದ ಪ್ರತಿಯೊಬ್ಬರ ಶ್ರಮವನ್ನು ಹಗುರಮಾಡಿ ಅವರು ಸ್ವಾವಲಂಬನೆಯಿಂದ ಬದುಕಲು ಸಹಕರಿಸುವ ವೈಜ್ಞಾನಿಕ ಆವಿಷ್ಕಾರಗಳು ಬೇಕು. ವಿಜ್ಞಾನ ಮಾನವೀಯಗೊಳ್ಳಬೇಕು. ಇದು ವಿಜ್ಞಾನದ ಬಗೆಗೆ ಗಾಂಧೀಜಿಯವರಿಗಿದ್ದ ಖಚಿತವಾದ ನಿಲುವು. ಇದನ್ನೇ ಮುಖ್ಯ ತಿರುಳನ್ನಾಗಿ ಹೊಂದಿರುವ ನಾಟಕ ಸತ್ಯಾಗ್ರಹಿ ವಿಜ್ಞಾನಿ ಗಾಂಧಿ. ಎಸ್‌. ಎಂ. ಎಸ್‌. ಆಂಗ್ಲಮಾಧ್ಯಮ ಶಾಲೆ ಬ್ರಹ್ಮಾವರ ಇಲ್ಲಿನ ವಿದ್ಯಾರ್ಥಿಗಳು ಗಾಂಧೀಜಿ -150ಯ ಅಂಗವಾಗಿ ಇಂಥದ್ದೊಂದು ಅಪರೂಪದ ವಿಷಯವನ್ನೊಳಗೊಂಡ ವಿಜ್ಞಾನ ನಾಟಕವನ್ನು ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಪ್ರಸ್ತುತಪಡಿಸಿದರು.

Advertisement

ಪುಟ್ಟ ಹುಡುಗಿ ಮೋನುವಿಗೆ ಗಾಂಧೀಜಿಯ ಜೀವನಚರಿತ್ರೆಯನ್ನು ಓದಿ ಪ್ರಬಂಧ ಬರೆಯುವ ಆಸೆ. ಆದರೆ ಅವರ ಸಹಪಾಠಿಗಳೆಲ್ಲರಿಗೆ ಚಂದ್ರಯಾನದ ಬಗ್ಗೆ ಗಾಂಧೀಜಿಯ ಅಭಿಪ್ರಾಯ ಏನಿದ್ದೀತೆಂಬ ಕುತೂಹಲ. ಇವೆರಡು ವಿಚಾರಗಳ ತಾಕಲಾಟದಲ್ಲಿ ವಿಜ್ಞಾನದ ಬಗ್ಗೆ ಗಾಂಧೀಜಿಯವರ ನಿಲುವು ಏನಾಗಿತ್ತು ಎಂಬ ಬಗ್ಗೆ ಚರ್ಚೆ ಪ್ರಾರಂಭವಾಗುತ್ತದೆ. ಗಾಂಧೀಜಿಯವರ ಪುಸ್ತಕದಿಂದ ಈಚೆಗೆ ಬರುವ ಬಾಪು ತಮ್ಮದೇ ಕತೆಯನ್ನು ಹೇಳತೊಡಗುತ್ತಾರೆ. ಅಷ್ಟಕ್ಕೂ ಗಾಂಧೀಜಿಯವರ ಆಶ್ರಮವೇ ಸರಳಜೀವನದ ಸತ್ಯಗಳನ್ನು ಅನ್ವೇಷಿಸುವ ಪ್ರಯೋಗಶಾಲೆಯಾಗಿತ್ತು ತಾನೆ? ದೇಶಾದ್ಯಂತ ವ್ಯಾಪಿಸಿದ ಅಹಿಂಸಾ ಚಳವಳಿಯು ಪೂರ್ಣವಾಗಿ ವೈಜ್ಞಾನಿಕ ಮಾದರಿಯಲ್ಲೇ ಕಟ್ಟಲ್ಪಟ್ಟಿತೆಂಬುದಕ್ಕೆ ಅದರ ಯಶಸ್ಸೇ ಸಾಕ್ಷಿಯಾಗಿದೆ. ಶಾಂತಿಗಾಗಿ, ಪ್ರೀತಿಗಾಗಿ, ಸತ್ಯಕ್ಕಾಗಿ, ಅಹಿಂಸೆಗಾಗಿ ವಿಜ್ಞಾನವನ್ನು ಬಳಸಬೇಕು. ನೈತಿಕತೆಯಿಲ್ಲದ ವಿಜ್ಞಾನ ವ್ಯರ್ಥ ಎಂಬುದನ್ನು ಗಾಂಧೀಜಿ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಇವೆಲ್ಲವನ್ನೂ ಮಕ್ಕಳು ಪರಿಣಾಮಕಾರಿಯಾಗಿ ರಂಗದ ಮೇಲೆ ಪ್ರಸತುತಪಡಿಸಿದರು.

ಕಷ್ಟಪಟ್ಟು ಬಟ್ಟೆಯನ್ನು ಹೊಲಿಯುತ್ತಿದ್ದ ಮಡದಿಯ ಕೆಲಸವನ್ನು ಹಗುರಗೊಳಿಸಲು ಸಿಂಗರ್‌ ಹೊಲಿಗೆಯ ಯಂತ್ರವನ್ನು ಕಂಡುಹಿಡಿದ. ಆಶ್ರಮದಲ್ಲಿ ಕಲಿತ ಹುಡುಗ ಮಾರಿಸ್‌ ಸುಲಭವಾಗಿ ಮನೆಯಲ್ಲೇ ಸಾಬೂನು ಮತ್ತು ಕಾಗದ ತಯಾರಿಸುವ ಯಂತ್ರವನ್ನು ತಯಾರಿಸಿ ಗಾಂಧೀಜಿಯವರಿಗೆ ತೋರಿಸಿದಾಗ ಅವರು ತುಂಬ ಸಂತಸಪಟ್ಟಿದ್ದರಲ್ಲದೇ ಸಂಶೋಧಕರನ್ನು ಪ್ರೋತ್ಸಾಹಿಸುವ ಸಲುವಾಗಿ ಒಂದು ಲಕ್ಷ ಬಹುಮಾನವನ್ನು ಕೂಡ ಘೋಷಿಸಿದ್ದರು. ಸಮಾಜದ ಕಟ್ಟಕಡೆಯ ಬಡವನ ಕೆಲಸವನ್ನು ಹಗುರಗೊಳಿಸುವ ಯಂತ್ರಗಳು ಅನ್ವೇಷಣೆಯಾಗಬೇಕು. ಆದರೆ ಯಂತ್ರಗಳು ನಮ್ಮ ಅಧೀನದಲ್ಲಿರಬೇಕೇ ಹೊರತು ನಮ್ಮನ್ನು ಆಳಬಾರದು ಎಂಬುದನ್ನು ಗಾಂಧಿ ಪಾತ್ರ ನಿರ್ವಹಿಸಿದ ಸಾತ್ವಿಕ್‌ ಆಚಾರ್ಯ ಸಲೀಸಾಗಿ ಪ್ರೇಕ್ಷಕರಿಗೆ ದಾಟಿಸಿಬಿಡುತ್ತಾರೆ. ಉತ್ಸುಕತೆ ತುಂಬಿದ ಹುಡುಗಿಯಾಗಿ ಸುಪ್ತ ಶೆಟ್ಟಿಯವರ ಅಭಿನಯ ಸೊಗಸಾಗಿದೆ. ಶ್ರೀನಿಧಿ ಎಸ್‌. ರಾವ್‌, ಸುಜಿತ್‌, ವೈಷ್ಣವಿ ಶ್ರೀನಿವಾಸ, ಟಿ. ಶ್ರೀಕರ್‌ ಪೈ, ಪಲ್ಲವಿ ಎಮ್‌. ಎಸ್‌. ವಿಲ್ಸನ್‌ ಮಾರ್ಟಿಸ್‌ ನಾಟಕದುದ್ದಕ್ಕೂ ಅನೇಕ ಪಾತ್ರಗಳಾಗಿ ಬದಲಾಗುತ್ತ ತಮ್ಮ ಲವಲವಿಕೆಯಿಂದ ರಂಗವನ್ನು ರಂಗೇರಿಸುತ್ತಾರೆ. ರಂಗಪರಿಕರಗಳ ಅಚ್ಚುಕಟ್ಟಾದ ನಿರ್ವಹಣೆ, ಸಂಗೀತ ನಿರ್ವಹಣೆಯನ್ನು ನಟರೇ ನಿರ್ವಹಿಸಿದ್ದು ನಾಟಕದ ಧನಾತ್ಮಕ ಅಂಶಗಳಾಗಿವೆ.

ವಿಜ್ಞಾನದ ಬಗೆಗೆ ಗಾಂಧೀಜಿಯವರ ನಿಲುವು ಏನಾಗಿತ್ತೆಂಬುದನ್ನು ಖಚಿತವಾದ ಮಾಹಿತಿಗಳ ಮೂಲಕ ಪ್ರಸ್ತುತಪಡಿಸುವ ಈ ನಾಟಕವನ್ನು ರಚಿಸಿದವರು ಅಭಿಲಾಷಾ ಎಸ್‌. , ನಿರ್ದೇಶಿಸಿದವರು ರೋಹಿತ್‌ ಎಸ್‌. ಬೈಕಾಡಿ. ಕೇವಲ ಸತ್ಯಾಗ್ರಹಿಯಾಗಿಯಷ್ಟೇ ಗಾಂಧೀಜಿಯವರನ್ನು ಗ್ರಹಿಸಿದ್ದ ನಮಗೆ ವಿಜ್ಞಾನಿ ಗಾಂಧಿಯವರನ್ನು ದರ್ಶಿಸಿದೆ.

ಸುಧಾ ಆಡುಕಳ

Advertisement
Advertisement

Udayavani is now on Telegram. Click here to join our channel and stay updated with the latest news.

Next