Advertisement

ಆರೂರು ಗ್ರಾಮ ಪಂಚಾಯತ್‌ಗೆ ಗಾಂಧಿ ಗ್ರಾಮ ಪುರಸ್ಕಾರ

12:35 AM Oct 01, 2019 | Sriram |

ಬ್ರಹ್ಮಾವರ: ಆರೂರು ಗ್ರಾಮ ಪಂಚಾಯತ್‌ 2018-19ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.ಕುಂಜಾಲು ಗ್ರಾ.ಪಂ.ನಿಂದ ವಿಂಗಡನೆಗೊಂಡು ಹೊಸದಾಗಿ 2015ರಲ್ಲಿ ಆರೂರು ಗ್ರಾಮ ಪಂಚಾಯತ್‌ ಉದಯಗೊಂಡಿತು. ಕುಂಜಾಲಿನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಪಂಚಾಯತ್‌ ಹೊಸ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

Advertisement

ಪಂಚಾಯತ್‌ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ 35 ಕುಟುಂಬ, 200ಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಕುಟುಂಬಗಳಿದ್ದು, 5ಅಂಗನವಾಡಿ, ಒಂದು ಹಿರಿಯ, ಒಂದು ಕಿರಿಯ ಪ್ರಾಥಮಿಕ ಮತ್ತು ಒಂದು ವಸತಿ ಶಾಲೆಯನ್ನು ಹೊಂದಿದೆ.

ಪಂಚಾಯತ್‌ ಸಾಧನೆ
14ನೇ ಹಣಕಾಸು ಯೋಜನೆಯಡಿ ಅನುದಾನ ವನ್ನು ವಲಯವಾರು ಸಂಪೂರ್ಣ ಸಮರ್ಪಕವಾಗಿ ಬಳಕೆ, ವರ್ಗ1ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಕ್ರೀಡೆ, ಅಂಗವಿಕಲರಿಗೆ ಕಾದಿರಿಸುವಿಕೆಯ ಅನುದಾನದ ಸಂಪೂರ್ಣ ಬಳಕೆ, ಸಂಪನ್ಮೂಲ ಕ್ರೋಡೀಕರಣದ ಮುಖ್ಯ ಆಧಾರವಾಗಿರುವ ತೆರಿಗೆ ವಸೂಲಾತಿಯಲ್ಲಿ ಶೇ.98 ಸಾಧನೆ,ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಹಾಗೂ ಪರಿಣಾಮಕಾರಿ ಅನುಷ್ಠಾನ, ಪಂಚಾಯತ್‌ ವ್ಯಾಪ್ತಿಯಲ್ಲಿ ರೂ.13.01ಲಕ್ಷದಷ್ಟು ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತುತ ಸಾಲಿನಲ್ಲಿ ಖರ್ಚು, ನಿಯಮಿತವಾಗಿ ಗ್ರಾಮ ಸಭೆ, ಸಾಮಾನ್ಯ ಸಭೆ, ಸ್ಥಾಯೀ ಸಮಿತಿ ಸಭೆಗಳು ಮತ್ತು ಇತರ ಮಾಹಿತಿ ಸಭೆಗಳನ್ನು ಆಯೋಜಿಸುತ್ತಿದೆ.

ವಾಟ್ಸಾಪ್‌ ಸಂದೇಶ
ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ, ಗ್ರಾಮಸ್ಥರಿಗೆ ಪಂಚಾಯತ್‌ ಮತ್ತು ಗ್ರಾಮದಲ್ಲಿ ನಡೆಯುವ ವಿದ್ಯಮಾನಗಳು ಹಾಗೂ ಸಮಸ್ಯೆಗಳ ಬಗ್ಗೆ ಅಧ್ಯಕ್ಷರು, ಪಿಡಿಒ, ಸದಸ್ಯರಿಗೆ ವಾಟ್ಸಾಪ್‌ ಗ್ರೂಪ್‌ಗ್ಳ ಮೂಲಕ ಸಂದೇಶ ರವಾನಿಸುವ ಅವಕಾಶ ಮತ್ತು ಸಲಹೆ ಸೂಚನೆಗಳನ್ನು ನೀಡುವ ಅವಕಾಶ ಕಲ್ಪಿಸಿರುವುದು ವಿಶೇಷವಾಗಿದೆ.

ಮಾಹಿತಿ ಶಿಬಿರ
ಸ್ಥಳೀಯ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ, ಸರಕಾರದ ಸವಲತ್ತು ನೋಂದಣಿ, ಮಾಹಿತಿ ಶಿಬಿರ, ಮೆಸ್ಕಾಂ ಜತೆಗೂಡಿ ವಿದ್ಯುತ್‌ ಸರಬರಾಜಿಗೆ ತೊಂದರೆ ಆಗುತ್ತಿರುವ ಮರದ ಕೊಂಬೆಗಳನ್ನು ಕಡಿಯುವುದಕ್ಕೆ ಸಹಕಾರ ನೀಡುತ್ತಿದೆ.

Advertisement

ಸರಕಾರದ ಮಾನದಂಡ ಪ್ರಕಾರದ ಅನುಪಾತದಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿ ಮೊದಲ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಅ. 2ರಂದು ಬೆಂಗಳೂರಿನಲ್ಲಿ ನಡೆಯುವ ಗಾಂಧಿ ಜಯಂತಿ ಸಮಾರಂಭದಲ್ಲಿ ಮುಖ್ಯಮಂತ್ರಿಗಳಿಂದ ಈ ಪುರಸ್ಕಾರವನ್ನು ಅಧ್ಯಕ್ಷರು, ಪಿಡಿಒ ಪಡೆಯಲಿದ್ದಾರೆ.

ಸ್ವತ್ಛತೆ
ವಿದ್ಯುತ್‌ ಹಾಗೂ ಕುಡಿಯುವ ನೀರಿನ ಅಪವ್ಯಯ ತಡೆಯಲು ಓವರ್‌ ಹೆಡ್‌ ಟ್ಯಾಂಕ್‌ಗೆ ಮೊಬೈಲ್‌ ವಾಟರ್‌ ಲೆವೆಲ್‌ ಕಂಟ್ರೋಲರ್‌ ಅಳವಡಿಕೆ, ಗ್ರಾಮದಲ್ಲಿ ದಾರಿದೀಪ, ಸೋಲಾರ್‌ ದೀಪಗಳ ಅಳವಡಿಕೆ, ಸ್ವತ್ಛತೆಗೆ, ತ್ಯಾಜ್ಯ ನಿರ್ಮೂಲನೆಗೆ ವಿಶೇಷ ಕ್ರಮ ಕೈಗೊಳ್ಳುವ ಜತೆಗೆ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ.

ಇನ್ನಷ್ಟು ಸ್ಫೂರ್ತಿ
ಪಂಚಾಯತ್‌ ತಂಡದ ಸತತ ಪ್ರಯತ್ನ ಹಾಗೂ ಮೇಲಧಿಕಾರಿ, ಜನಪ್ರತಿನಿಧಿಯವರ, ಗ್ರಾಮಸ್ಥರ ಸಹಕಾರದಿಂದ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ಮುಂದೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಸ್ಫೂರ್ತಿ ನೀಡಿದೆ.
-ಗೀತಾ ಬಾಳಿಗಾ,ಪಿಡಿಒ ಆರೂರು

ತಂಡ ಪ್ರಯತ್ನದ ಫಲ
ಪಂಚಾಯತ್‌ನ ಸರ್ವಾಂಗೀಣ ಅಭಿವೃದ್ಧಿ ಗುರುತಿಸಿ ರಾಜ್ಯ ಸರಕಾರ ನೀಡಿರುವ ಪುರಸ್ಕಾರ ಸಂತಸ ತಂದಿದೆ. ಸಹಕರಿಸಿದ ಗ್ರಾಮಸ್ಥರನ್ನು ಮರೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಪಂಚಾಯತ್‌ ಸಂಪನ್ಮೂಲ ಹೆಚ್ಚಿಸುವಲ್ಲಿ, ಅರ್ಹರಿಗೆ ನಿವೇಶನ, ಸುಸಜ್ಜಿತ ಸ್ಮಶಾನ ರಚನೆ, ಸಭಾಭವನ ರಚನೆ ಮತ್ತು ಮೂಲ ಸೌಕರ್ಯ, ಸ್ವತ್ಛತೆಗೆ ಒತ್ತು ನೀಡಲಾಗುವುದು. ತಂಡ ಪ್ರಯತ್ನಕ್ಕೆ ಫಲ ಸಿಕ್ಕಿದೆ.
-ರಾಜೀವ ಕುಲಾಲ್‌,
ಅಧ್ಯಕ್ಷರು,ಆರೂರು,ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next