Advertisement

ಗಮಕ ಸಪ್ತಾಹ ಸಂಭ್ರಮ

06:14 PM Jun 27, 2019 | mahesh |

ಉಜಿರೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ದ.ಕ. ಜಿಲ್ಲೆ ಮತ್ತು ಬೆಳ್ತಂಗಡಿ ತಾಲೂಕಿನ ಕಾವ್ಯ ವಾಚನ ಮತ್ತು ವ್ಯಾಖ್ಯಾನ ಪರಿಣತರು ಜೂ.10ರಿಂದ 16ರ ತನಕ ನಡೆಸಿಕೊಟ್ಟ ಕುಮಾರ ವ್ಯಾಸನ ಕಾವ್ಯದಿಂದ ಆಯ್ದ ಭಾಗಗಳ ಕಥಾ ರಸ ನಿರೂಪಣೆಯ ಗಮಕ ಸಪ್ತಾಹ ತಣ್ಣಗೆ ಹನಿಯುತ್ತಿದ್ದ ಮಳೆಯಲ್ಲಿಯೂ ಸಂಭ್ರಮದ ಘಮ ಹರಡಿತು.

Advertisement

ಉದ್ಘಾಟನೆಯ ದಿನ ಮಧೂರು ಮೋಹನ ಕಲ್ಲೂರಾಯರ ಕುಮಾರವ್ಯಾಸ ನಮನದೊಂದಿಗೆ ಪ್ರಸ್ತುತಿಗೊಂಡ ಕಾರ್ಯಕ್ರಮದ ಆದಿಯಲ್ಲಿ ಈ ಮಹಾಕವಿಯ ಆದಿ ಪರ್ವದಿಂದಲೇ ಕಾರ್ಯಕ್ರಮ ಆರಂಭವಾಗಿ ಕಳೆಯೇರಿಸಿತು. ಬೆಳಾಲು ರಾಜಾರಾಮ ಶರ್ಮರ ವ್ಯಾಖ್ಯಾನ. ಜಯರಾಮ ಕುದ್ರೆಂತಾಯರ ವಾಚನ. “ಪೆತ್ತಳಾಕೆಯು ವಹಿ°ವೀರ್ಯನ| ಮತ್ತೆ ಕಾಲಾಂತರಕೆ ತಂದಳು| ಚಿತ್ತವಿಸು ತನ್ನರಸನಾಳುವ ದೇಶದರಮನೆಗೆ’ ಎಂದು ಹೇಳಿದ ಕುಮಾರವ್ಯಾಸನು ವರ್ಣಿಸಿದ ಕುರು ಪಾಂಡವ ವೃತ್ತಾಂತದ ಮನೋಜ್ಞ ವಿವರಣೆ ಪ್ರಶಂಸೆ ಗಳಿಸಿತು.

ಎರಡನೆಯ ದಿನ ವೆಂಕಟರಮಣ ರಾವ್‌ ವಾಚನ, ಗಮಕದೊಂದಿಗೆ ಯಕ್ಷಗಾನ ಶೈಲಿಯನ್ನು ಸೇರಿಸಿಕೊಂಡು ಹೊಸ ದಾಟಿ ಪ್ರದರ್ಶಿಸಿ ಮನ ರಂಜಿಸಿದ ವಿದ್ಯಾಶ್ರೀ ಐತಾಳರ ಸಹವಾಚನ, ಕುಲಮರ್ವ ಗಣಪತಿ ಭಟ್ಟರ ವ್ಯಾಖ್ಯಾನ. “ಅರಸ ಕೇಳೈ ಕೌರವೇಂದ್ರನ| ಕರೆಸಿದನು ದುಶಾÏಸನಾದಿನ| ದುರುಳ ದುಸ್ಸಹ ಶತಕಸಹಿತಾ ಸಭೆಗೆ ನಡೆತಂದ’ ಕೌರವನು ದ್ರೌಪದಿಯ ಸೀರೆಯನ್ನೆಳೆಸುವ ಕರುಣಾಜನಕ ಸಂದರ್ಭದಲ್ಲಿ ಅಕ್ಷಯಾಂಬರವಿತ್ತ ಕೃಷ್ಣನ ಕಾರುಣ್ಯದ ಪರಮೋಚ್ಚ ಸನ್ನಿವೇಶ ಸಭಾ ಪರ್ವದ ಆಖ್ಯಾನದಲ್ಲಿ ಚೆನ್ನಾಗಿ ಮೂಡಿಬಂತು.

ಮೂರನೆಯ ದಿನ ಅರಣ್ಯಪರ್ವ ಮತ್ತು ವಿರಾಟಪರ್ವದ ಕಥೆ. ಸುನಿಲ್‌ ಪಂಡಿತರ ವ್ಯಾಖ್ಯಾನ, ದಿವಾಕರ ಆಚಾರ್ಯರ ವಾಚನ ರಸದೌತಣ ನೀಡಿತು. ಪಾಂಡವರ ವನಾಗಮನ ಸಮಯದ ಕಷ್ಟಗಳ ನಡುವೆಯೂ ಕರುಣವಾರಿಧಿ ಹರಿಯ ಕಟಾಕ್ಷದ ಪರಿಯನ್ನು ಕುಮಾರವ್ಯಾಸ ಹಿಡಿದಿಟ್ಟ ಭಾವೋತ್ತುಂಗದ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ ಪ್ರಸಂಗದಲ್ಲಿ ವಿರಾಟನ ಮನೆಯ ಊಳಿಗದಾಳುಗಳಾಗಿ ದಿನ ಕಳೆಯುವ ಪಂಚ ಸಹೋದರರ ಬದುಕಿನ ದುರ್ಭರ ದಿನಗಳಲ್ಲಿ ಏನೇನು ನಡೆಯಿತೆಂಬುದರ ಚಿತ್ರಣ ಆಕರ್ಷಕವಾದ ಬಗೆಯಲ್ಲಿ ಧ್ವನಿಸಿತು.

ಸಂಧಾನ ಕೌಶಲ ನಾಲ್ಕನೆಯ ದಿನದ ವಾಚನವಾಗಿ ಎ. ಡಿ. ಸುರೇಶ್‌ ಅವರ ಸಿರಿ ಕಂಠದಲ್ಲಿ ಮೋಹಕವಾಗಿದ್ದರೆ ವ್ಯಾಖ್ಯಾನದಲ್ಲಿ ಅವರಿಗೆ ಸಾಟಿಯಾಗಿ ಕಥೆಯನ್ನು ವೇದ್ಯವಾಗಿಸಿದ ರಾಮಕೃಷ್ಣ ಭಟ್ಟರದು ಶ್ಲಾಘನೀಯ ಪ್ರಯತ್ನ. “ದಾನವಿರಹಿತನಾಗಿ ಜನಿಸುವ| ಮಾನವಗೆ ದಾರಿದ್ರ್ಯವದರಿನ| ನೂನ ದುಷ್ಕೃತಗೆಯÌನದರಿಂದ ಘೋರತರ ನರಕ’ ಎಂದು ಸೂಜಿ ಮೊನೆಯೂರುವ ಜಾಗವನ್ನೂ ಬಿಟ್ಟು ಕೊಡಲಾರೆನೆಂದು ಸೆಟೆದು ನಿಂತು ಸಂಧಿಯೋ ಸಂಗ್ರಾಮವೋ ಎಂಬ ಪ್ರಶ್ನೆಗೆ ಸಂಗ್ರಾಮವೇ ನಿರ್ಣಯವೆಂದು ಸಾರುವ ದುಯೋಧನನ ಬಳಿ ಸಂಧಾನದ ಕೌಶಲವನ್ನು ಪ್ರದರ್ಶಿಸುವ ಶ್ರೀಕೃಷ್ಣನ ಲೀಲಾನಾಟಕವನ್ನು ಮನಃಸ್ಪರ್ಶಿಯಾಗಿ ಕಾರ್ಯಕ್ರಮ ರೂಪಿಸಿತು.

Advertisement

ಐದನೆಯ ದಿನದ ವ್ಯಾಖ್ಯಾನದ ಸಾರಥ್ಯ ರಾಜಾರಾಮ ಶರ್ಮರದು. ಭೀಷ್ಮ ಪರ್ವದ ಕಾವ್ಯ ಭಾಗವನ್ನು ಹಿರಿಯ ಗಮಕಿಗಳಾದ ಗಿರಿಜಾ ದಾಸ್‌ ವಾಚನ ಮಾಡಿದರು. “ಆದಡರ್ಜುನ ನೋಡು ಸೈನ್ಯಮ| ಜೋದಧಿಯ ಮಧ್ಯದಲಿ ಮೆರೆವವ|ನಾ ದುರಂತ ಪರಾಕ್ರಮನು ಗಂಗಾಕುಮಾರಕನು’ ಎಂದು ಭೀಷಣ ಸಾಮರ್ಥ್ಯವಂತ ಭೀಷ್ಮನ ಕಲಿತನವನ್ನು ಬಯಲಿಗಿಟ್ಟ ಕವಿಯ ಆಶಯವನ್ನು ಹೃದಯಂಗಮವಾಗಿ ಕೇಳುಗರಿಗೆ ತಲುಪಿಸುವಲ್ಲಿ ಸಾರ್ಥಕ ಪ್ರಯತ್ನವೆನಿಸಿತು.

ಇಷ್ಟು ದಿನಗಳ ಕಾರ್ಯಕ್ರಮದಲ್ಲಿ ಆಳವಾಗಿ ಕೇಳುಗರ ಮನವನ್ನು ಕೊರೆದದ್ದು ಆರನೆಯ ದಿನ ಸುವರ್ಣ ಕುಮಾರಿಯವರು ನಡೆಸಿಕೊಟ್ಟ ವಾಚನ. ರಾಮಕೃಷ್ಣ ಭಟ್ಟರ ವ್ಯಾಖ್ಯಾನ. ದಾನಶೂರ ಕರ್ಣನ ಬದುಕಿನ ದುರಂತ ಅಂತ್ಯದ ಕರುಣಾಜನಕ ಕಾವ್ಯದ ಘಟ್ಟವನ್ನು ಸಮರ್ಥವಾದ ಶೈಲಿಯಲ್ಲಿ ರೂಪಿಸಿದ ಪರಿ ಕಣ್ಣಾಲಿಗಳನ್ನು ಹನಿಗೂಡಿಸುವಂತಿತ್ತು. “ವೈರಿಗಜ ಪಂಚಾನನನು ರಣ|ಧೀರನಪ್ರತಿಮ ಮಲ್ಲ ಕರ್ಣನು| ದಾರದಲಿ ಹಳಚಿದನು ಹನುಮನ ಹಳವಿಗೆಯ ರಥವ’ ಎಂದಿರುವ ಕುಮಾರವ್ಯಾಸನು ಇಂತಹ ಶೂರ ಕರ್ಣನ ಕೊನೆಗಾಲದ ಕಥೆಯನ್ನು ಬಹು ಭಾವಪೂರ್ಣವಾಗಿ ಚಿತ್ರಿಸಿದ್ದು ಇಲ್ಲಿ ಅದರ ಸ್ಪಷ್ಟ ಚಿತ್ರಣ ಅನಾವರಣಗೊಂಡಿತು.

ಕೊನೆಯ ದಿನ ಪಟ್ಟಾಭಿಷೇಕ. ಗದಾ ಪರ್ವದ ಕತೆ. ಡಾ| ಶ್ರೀಧರ ಭಟ್ಟರ ವ್ಯಾಖ್ಯಾನ ನವಿರು ಹಾಸ್ಯದ ಜೊತೆಗೆ ಗದಾಯುದ್ಧದ ಪರಿ ಸುಂದರ, ಸುಲಿತವಾಗಿ ಹರಿದುಬಂತು. ಸಮಯಾವಕಾಶ ಕಡಿಮೆಯಿದ್ದರೂ ಹೆಚ್ಚು ಮನ ಮುಟ್ಟುವಂತೆ ಪ್ರಸ್ತುತಪಡಿಸುವಲ್ಲಿ ಕಾರ್ಯಕ್ರಮ ಯಶಸ್ಸು ಗಳಿಸಿತು. ಮಧುರ ಕಂಠದ ಮನೋರಮಾ ತೋಳ್ಪಡಿತ್ತಾಯರ ವಾಚನ ಕಡೆಗೂ ದುಷ್ಟಶಕ್ತಿಗಳ ಹನನವಾಗಿ ಸಾತ್ವಿಕ ಶಕ್ತಿಯೇ ವಿಜಯ ಸಂಪಾದಿಸಿತೆಂಬ ಕತೆಯನ್ನು ವಿರಳವಾಗಿ ಶ್ರುತಪಡಿಸಿತು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next