Advertisement

ಹೆಸರು ಬೆಳೆಗೆ ಕೀಟಗಳ ಕಾಟ

01:30 PM Jul 11, 2019 | Naveen |

ಡಿ.ಜಿ. ಮೋಮಿನ್‌
ಗಜೇಂದ್ರಗಡ
: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬೆಳೆದ ಹೆಸರು ಬೆಳೆಗೆ ಕೀಟಗಳ ಕಾಟ ಜೊತೆ ಹಳದಿ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.

Advertisement

ಮುಂಗಾರು ಹಂಗಾಮಿನ ಮಳೆಗಳು ಆರಂಭದಲ್ಲಿ ಅಲ್ಪಸ್ವಲ್ಪ ಸುರಿದ ಪರಿಣಾಮ ಈ ಬಾರಿ ಬೆಳೆಗಳು ಉತ್ತಮವಾಗಿ ಫಸಲು ಬರುತ್ತದೆಂದು ಹಿಗ್ಗಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಆದರೆ ಬೆಳೆದು ನಿಂತಿರುವ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿರುವುದು ರೈತರ ಕನಸಿಗೆ ಹಿನ್ನಡೆಯಾದಂತಾಗಿದೆ.

ಹುಲಸಾಗಿ ಬೆಳೆಯುತ್ತಿರುವ ಹೆಸರು ಫಸಲಿಗೆ ಹಳದಿ ರೋಗ ಕಂಡು ಬಂದಿದ್ದು, ಇಳುವರಿ ಕಡಿಮೆ ಬರುವ ಸಾಧ್ಯತೆ ಇದೆ. ಇನ್ನು ಮಳೆಯ ಕೊರತೆಯಿಂದ ಅಲ್ಪಸ್ವಲ್ಪ ಜೀವಂತವಿರುವ ಬೆಳೆಯೂ ಸಹ ಒಣಗುವ ಹಂತ ತಲುಪುತ್ತಿರುವುದು ರೈತಾಪಿ ವಲಯದಲ್ಲಿ ಆತಂಕದ ಛಾಯೆ ಆವರಿಸಿದೆ.

ನಿರಂತರ ಬರಗಾಲಕ್ಕೆ ತುತ್ತಾಗಿರುವ ತಾಲೂಕಿನ ರೈತರು ಕಳೆದ ಮೂರ್ನಾಲ್ಕು ವರ್ಷಗಳಿಂದ ಮುಂಗಾರು ಕೈ ಕೊಡುತ್ತಾ ಬಂದಿದೆ. ಹುಲುಸಾಗಿ ಬೆಳೆದ ಹೆಸರು ಕಾಳು ಕಟ್ಟುವಾಗ ಮಾತ್ರ ರೈತನ ಕೈ ಹಿಡಿಯುತ್ತಿಲ್ಲ. ಆದರೂ ರೈತ ಭೂ ತಾಯಿಯನ್ನು ನಂಬಿ ಕೃಷಿ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಬೆಳೆಯ ಕುರಿತು ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ.

ತಾಲೂಕಿನಾದ್ಯಾಂತ ರೈತರು ಬೆಳೆದ ಹೆಸರು ಉತ್ತಮ ಸ್ಥಿತಿಯಲ್ಲಿವೆ. ನಿರೀಕ್ಷೆಗೂ ಮೀರಿ ಫಸಲು ಬರುವ ಆಶಾಭಾವನೆಯನ್ನು ರೈತರು ಹೊಂದಿದ್ದಾರೆ. ಆದರೆ ಫಸಲು ಬರುವ ಮುನ್ನವೇ ಬೆಳೆಗೆ ಹಳದಿ ರೋಗದ ಜೊತೆಗೆ ಕೀಡೆಯ ಕಾಟವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಳೆ ಹಸಿ ಇರುವಾಗಲೇ ಹಳದಿ ರೋಗ ಹರಡಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಹೆಸರು ಬೆಳೆಯಲ್ಲಿ ಎಲೆಗೆ ಹಳದಿ ರೋಗ ಕಾಡಿದೆ. ಪ್ರತಿ ಗಿಡದಿಂದ ಹಿಡಕ್ಕೆ ಹಬ್ಬುವ ಹಳದಿ ರೋಗ ಫಸಲನ್ನು ಹಾಳು ಮಾಡುತ್ತಿವೆ.

Advertisement

ಕಳೆದ 10 ದಿನಗಳಿಂದ ನಿತ್ಯ ಚಿಟಿ, ಚಿಟಿಯಾಗಿ ಮಳೆ ಸುರಿಯುತ್ತಿರುವುದರಿಂದ ಹೆಸರು ಬೆಳೆ ಉತ್ತಮ ಸ್ಥಿತಿಯಲ್ಲಿದೆ. ಬೆಳೆಗೆ ಮಂಕು ರೋಗ ಆವರಿಸುತ್ತಿದೆ. ಅಲ್ಲದೇ ಕೀಡೆಯ ಕಾಟ ವಿಪರೀತವಾಗಿದೆ. ಬೆಳೆಯ ರಕ್ಷಣೆ ರೈತರಿಗೆ ಸವಾಲಾಗಿದೆ. ಹೀಗಾಗಿ ಅನ್ನದಾತರು ಬೆಳೆ ಉಳಿಸಿಕೊಳ್ಳಲು ಹಳದಿ ರೋಗವಿರುವ ಬೆಳೆಯನ್ನು ಕೀಳುವಲ್ಲಿ ತಲ್ಲೀನರಾಗಿದ್ದಾರೆ.

ಈ ಬಾರಿ ವರುಣ ದೇವ ಕೃಪೆ ತೋರಿದ್ದಾನೆ. ಬಿತ್ತಿದ ಬೆಳೆ ಕೈಗೆಟುಕತ್ತದೆ ಎನ್ನವಷ್ಟರಲ್ಲೇ ಹೆಸರು ಬೆಳೆಗೆ ತಗುಲಿದ ಹಳದಿ ರೋಗದಿಂದ ಬೆಳೆ ನಾಶಗೊಳ್ಳುತ್ತಿದೆ. ಇದರಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಬೆಳೆಯನ್ನೇ ನಂಬಿ ಕುಳಿತ ರೈತರನ್ನು ಒಂದಲ್ಲ ಒಂದು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.

ಈ ಸಲ ಮಳಿಯಪ್ಪ ಕೈ ಹಿಡಿದಾನ್‌ ಫಸಲ ಚೊಲೋ ಬಂದ್‌, ಏನೋ ಚಾರು, ಚೂರು ರೊಕ್ಕ ಮಾಡಕೊಂತಿವಿ ಅಂತ್‌ ಬಾಳ್‌ ಆಸೆ ಇಟ್ಕೊಂಡಿವ್ರಿ. ಆದ್ರ ಕೀಡಿ ಹುಳು, ಹಳದಿ ರೋಗ ಬೆಳಿ ಹಾಳ್‌ ಮಾಡಾಕತ್ಯಾವ್ರಿ. ರೈತರಿಗೆ ಒಂದಿಲ್ಲಾ ಒಂದು ಕಾಟ ತಪ್ಪಿದ್ದಲ್ರಿ.
ಪ್ರಭಯ್ಯ ಹಿರೇಮಠ,
ಕೊಡಗಾನೂರ ರೈತ

ತಾಲೂಕಿನಾದ್ಯಂತ ಈ ಬಾರಿ ಬೆಳೆದ ಹೆಸರು ಫಸಲು ಉತ್ತಮ ಸ್ಥಿತಿಯಲ್ಲಿವೆ. ಆದರೆ ಹೆಸರು ಬೆಳೆಗೆ ತಗುಲಿದ ಕೀಡಿ ಹುಳುಗಳ ನಾಶಕ್ಕೆ ಲ್ಯಾಂಬಡಾ ಮತ್ತು ಪ್ರಪೊಫಸ್‌ ಕ್ರೀಮಿನಾಶಕ ಸಿಂಪರಣೆ ಮಾಡಬೇಕು. ಈ ಕ್ರಿಮಿನಾಶಕ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆದು ಬೆಳೆ ರಕ್ಷಣೆಗೆ ಮುಂದಾಗಬೇಕು. ಜೊತೆಗೆ ಬೆಳೆಗೆ ತಗುಲಿದ ಹಳದಿ ರೋಗ ಕಾಣುವ ಹಳದಿ ಗಿಡಗಳನ್ನು ಕಿತ್ತೂಗೆಯಬೇಕು.
ಸಿದ್ದೇಶ ಕೋಡಳ್ಳಿ,
ತಾಲೂಕು ಸಹಾಯಕ ಕೃಷಿ ನಿರ್ದೇಶಕ.

Advertisement

Udayavani is now on Telegram. Click here to join our channel and stay updated with the latest news.

Next