Advertisement

 ಈ ಕೋಟೆಯಲ್ಲಿ  ಮದ್ದು ಗುಂಡುಗಳ ವಾಸನೆ ಇದೆ…

12:39 PM Jul 22, 2017 | |

 ಇಲ್ಲಿ ಎರಡು ಕೋಟೆಗಳಿವೆ.  ಮಳೆಗಾಲದ ಭಾವಚಿತ್ರಗಳನ್ನು ನೋಡಲು ಈ ಕೋಟೆಗಳ ನೆತ್ತಿಯ ಮೇಲೆ ನಿಲ್ಲಬೇಕು.  ಜಿನುಜಿನುಗೋ ಜೇನ ಮಳೆ ತಲೆಯ ಮೇಲೆ, ಹಾಗೇ ಕಣ್ಣು ಹಾಯಿಸಿದಷ್ಟೂr  ದೂರಕ್ಕೆ ಪ್ರಕೃತಿ ನಿರ್ಮಿತ ಕ್ಯಾನ್‌ವಾಸ್‌. ಅಬ್ಬಬ್ಟಾ, ಮಳೆಗಾಲವನ್ನು ಹೀಗೂ ಸವಿಯಬಹುದು ನೋಡಿ. 

Advertisement

ಗಜೇಂದ್ರಘಡದ ಕೋಟೆಯನ್ನು ಬದುಕಿನಲ್ಲಿ ಒಮ್ಮೆಯಾದರೂ ನೋಡಲೇಬೇಕು. ನಿಜ ಹೇಳಬೇಕೆಂದರೆ, ಈ ಕೋಟೆ ನೋಡಲು ಇದೇ ಸರಿಯಾದ ಸಮಯ. ಡಿಸೆಂಬರ್‌ ದಾಟಿದರೆ ರಣ ಬಿಸಿಲು. ಸುಡು ಬಿಸಿಲಿನ ಕಾಲದಲ್ಲಿ ಗಜೇಂದ್ರ ಘಡದಲ್ಲಿ ಕೋಟೆ ಹತ್ತುವುದು ಕಷ್ಟ ಕಷ್ಟ.   ಗದಗ ಜಿಲ್ಲೆ ರೋಣದ ಗಜೇಂದ್ರಗಡದಲ್ಲಿನ ಕೋಟೆ-ಕೊತ್ತಲುಗಳಲ್ಲಿ ಅಗಾಧ ಪ್ರಕೃತಿ ಸೌಂದರ್ಯವಿದೆ.  ಬೆಟ್ಟದ ಮೇಲೆ ನಿರ್ಮಾಣಗೊಂಡಿರುವ ಐತಿಹಾಸಿಕ ಕೋಟೆ-ಕೊತ್ತಲುಗಳು, ಅಕ್ಕ ತಂಗಿಯರ ಹೊಂಡ , ಹುಲಿಹೊಂಡ, ಆಕಳ ಹೊಂಡ, ಮಂಗನಹೊಂಡಗಳ ಜೊತೆಗೆ ಗಜೇಂದ್ರಗಡದ ಪಟ್ಟಣದಲ್ಲಿನ ದೇವಸ್ಥಾನ ಬಾವಿ, ವೀರಗಲ್ಲುಗಳು, ಶಾಸನ, ಸ್ಮಾರಕಗಳಿವೆ. 

    ಅಗಾಧ ಐತಿಹಾಸಿಕ ಸಂಪತ್ತಿನಿಂದ ಕೂಡಿರುವ ಗಜೇಂದ್ರಗಡದಲ್ಲಿನ ಸ್ಮಾರಕಗಳಿಗೆ ಬರವಿಲ್ಲ.  800 ಅಡಿ ಎತ್ತರದ ಐತಿಹಾಸಿಕ ಬೆಟ್ಟದ ತುದಿಯಲ್ಲಿ ಆಕರ್ಷಣೀಯ ಕೋಟೆಯನ್ನು ನಿರ್ಮಿಸಲಾಗಿದೆ.    ಕೋಟೆಯ ಒಳಗಿನಿಂದಲೇ ಪಿರಂಗಿ ಹಾರಿಸಿ ವೈರಿಗಳನ್ನು ಸದೆ  ಬಡಿಯುವ ತಂತ್ರ ಇಲ್ಲಿದೆ. ಇವತ್ತಿಗೂ ಇಲ್ಲಿ ಮದ್ದಿನ ವಾಸನೆಯಾಡುತ್ತಿರುತ್ತದೆ.  ವೈರಿ ಪಡೆಯ ದಾಳಿಗಳನ್ನು ಎದುರಿಸುವ ಸಲುವಾಗಿಯೇ ಕೋಟೆಯ  ಪ್ರವೇಶ ದ್ವಾರದ ಬಳಿ, ಪಶ್ಚಿಮಕ್ಕೆ ಮದ್ದಿನ ಮನೆ ಹಾಗೂ ತೊಟ್ಟಿಲ ಹುಡೆ ಇದೆ.

Advertisement

     ವೈರಿ ಸೈನ್ಯ ಪಟ್ಟಣ ಪ್ರವೇಶವಾಗುತ್ತಿದೆಯೇ ಎಂದು ತಿಳಿಯಲು ನಾಲ್ಕೂ ದಿಕ್ಕಿನಲ್ಲೂ ಎತ್ತರ ಪ್ರದೇಶದಲ್ಲಿ ದೊಡ್ಡ ಕಿಂಡಿಗಳನ್ನು ಮಾಡಿದ್ದಾರೆ.  ಈ ಕಿಂಡಿಗಳ ಮೂಲಕ ನೋಡಿದರೆ ತುಂಬ ದೂರದವರೆಗಿನ ದೃಶ್ಯವೂ ಸ್ಪಷ್ಟವಾಗಿ ಗೋಚರಿಸುತ್ತದೆ.  ಇಲ್ಲಿರುವ ತೊಟ್ಟಿಲು ಹುಡೇಯ ಹಿಂಭಾಗದಲ್ಲಿ ಒಂದು ಹುಲಿಹೊಂಡವಿದೆ. ಈ ಹೊಂಡದ ಪಶ್ಚಿಮ ದಿಕ್ಕಿಗೆ ಹುಲಿ, ಪೂರ್ವದಿಕ್ಕಿಗೆ ಬಸವಣ್ಣನ ಪ್ರತಿಮೆ ಇದೆ. ಹುಲಿ ಅಪ್ರತಿಮ ಪರಾಕ್ರಮದ ಸಂಕೇತವಾದರೆ, ಪೂಜ್ಯತೆ ಹಾಗೂ ನಮ್ರತೆಯ ಸಂಕೇತ ನಂದಿ(ಬಸವಣ್ಣ)ವಾಗಿದೆ ಎಂಬ ಸಂದೇಶ ಇಲ್ಲಿ ಅಡಗಿದೆ.      ಇವುಗಳಿಂದ ಸ್ವಲ್ಪ ಮುಂದೆ ಸಾಗಿದರೆ ಪಕ್ಕದಲ್ಲಿಯೇ ಅಕ್ಕ-ತಂಗಿ ಹೊಂಡಗಳಿವೆ. 

   ಸುಮಾರು ಮುಕ್ಕಾಲು ಭಾಗ ಗುಡ್ಡ ಏರಿದ ಬಳಿಕ ವೀರ ಹನುಮಾನ  ಗುಡಿಸಿಗುತ್ತದೆ. ಇಲ್ಲಿರುವ ಸಂಜೀವಿನಿ ಪರ್ವತವನ್ನು ಎತ್ತಿ ಹಿಡಿದಿರುವ ಹನುಮಾನ್‌ನ ಮೂರ್ತಿ ಭಕ್ತಾದಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಪೂರ್ವಾಭಿಮುಖವಾಗಿ ಮತ್ತಷ್ಟು ಪಾವಟಿಗೆ(ಮೆಟ್ಟಿಲು)ಗಳನ್ನು ಏರಿದ ಮೇಲೆ ತೊಟ್ಟಿಲು ಹುಡೆ ಹಾಗೂ ಅಗಸಿ ಬಾಗಿಲು ಮೂಲಕವಾಗಿ ಕೋಟೆ ಪ್ರವೇಶಿಸುವ ಮಾರ್ಗಸಿಗುತ್ತದೆ. ಬೆಟ್ಟದಲ್ಲಿನ ಕೋಟೆ ಪ್ರವೇಶಿಸುತ್ತಿದ್ದಂತೆ ಎದುರಾಗುವ ಬಾಲಾಜಿ ಬಾಜಿರಾವ್‌ ಪೇಶ್ವೆಯವರ ಕುದುರೆ ಮೇಲೆ ಕುಳಿತು ಖಡ್ಗವನ್ನು ಬೀಸಿದ ಭಂಗಿಯಲ್ಲಿನ ಚಿತ್ರ ಕೋಟೆ ಗೋಡೆಯ ಕಲ್ಲಿನಲ್ಲಿಯೇ ಕೆತ್ತಲ್ಪಟ್ಟಿದೆ.

 ಪವನ ಗಾಳಿ  ಸ್ಥಾಪನೆ
ನಲುಗಿದ ಕೋಟೆಯ ಕಲ್ಲುಬಂಡೆಗಳ ಸಮೀಪದ ಕಾಲಕಾಲೇಶ್ವರ ಬೆಟ್ಟಕ್ಕೆ ಎದುರಾಗಿ ನಂದಿ ಸ್ವರೂಪದ ಗುಡ್ಡದ ಮೇಲೆ ರುದ್ರನ ಪಾದ ಒಡಮೂಡಿದ ದೇವಸ್ಥಾನದವಿದೆ. ಅನೇಕ ಮಹಿಮೆಗಳಿಂದ ಕೂಡಿದ ಈ ಪೌರಾಣಿಕ ದೇವಸ್ಥಾನದ ಪಕ್ಕ ಹಲವಾರು ಗಾಳಿ ವಿದ್ಯುತ್‌ ಯಂತ್ರಗಳ ಸ್ಥಾಪನೆಯಾಗಿದೆ. ಇವುಗಳನ್ನು  ಸ್ಥಾಪಿಸುವಾಗ ಜಿಲೆಟೆನ್‌ ನ್ಪೋಟಿಸಿದ್ದು ಇದರಿಂದ ದೇವಸ್ಥಾನ ಸೇರಿದಂತೆ ಐತಿಹಾಸಿಕ ಕೋಟೆಗಳು ನಲುಗಿವೆ. 

  ಚುಮು, ಚುಮು ಚಳಿ.   ಮಳೆ ಹನಿ ಉದುರಿದ್ದಕ್ಕೆ ಸಾಕ್ಷಿಯಾಗಿ ಮಣ್ಣಿನ ಘಮಲು. ಎದುರಿಗೆ ಕೋಟೆಗೆ ಹಸಿರ ಚಾದರ. ಹಾವಿನಂತೆ ಇಡೀ ಕೋಟೆಯ್ನು ಸುತ್ತಿದೆ. ಮಧ್ಯೆ ಬಂಡೆಗಳ ಅಂಚಿನಲ್ಲಿ ಹುಲ್ಲುಗಳ ಬಾರ್ಡರ್‌.  ಮತ್ತೆ ಕೋಟೆ ನೆನಪಾಗುತ್ತದೆ. ಮತ್ತೆ ಮತ್ತೆ ಕಾಡುತ್ತದೆ. 

ಮಂಜುನಾಥ ಎಸ್‌.

  ಹಸಿರ ಚಾದರದ ದುರ್ಗ

   ಸುತ್ತಲೂ ಹಸಿರು ಹೊದ್ದ ಬೆಟ್ಟ ಗುಡ್ಡಗಳು. ನಡುವೆ ತಲೆ ಎತ್ತಿ ನಿಂತ ನೂರಾರು ವರ್ಷ ಹಳೆಯದಾದ ಕೋಟೆ. ಇದಕ್ಕೆ ರಕ್ಷಣೆ ಒದಗಿಸುವಂತೆ ಸುಮಾರು 20ರಿಂದ 25 ಅಡಿ ಎತ್ತರದ ಬೃಹತ್‌  ಕಲ್ಲಿನ ಗೋಡೆ. ಅನುಮಾನವೇ ಬೇಡ. ಇದು  ಒಮ್ಮೆ  ನೋಡಿದರೆ ಮತ್ತೂಮ್ಮೆ ನೋಡಬೇಕೆನಿಸುವ ರಮ್ಯ ತಾಣ. ಇದನ್ನು ನೋಡಬೇಕೆಂದರೆ ನೀವು ಬರಬೇಕಾದದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕವಲೆದುರ್ಗಾಕ್ಕೆ.

    ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಕವಲೇದುರ್ಗಕ್ಕೆ, ಆ ದಿನಗಳಲ್ಲಿ ಭುವನಗಿರಿ ದುರ್ಗಾ ಎಂದು ಹೆಸರಿತ್ತು. ಮಲ್ಲವ ವಂಶದಲ್ಲೇ ಪ್ರಸಿದ್ಧರಾದ ಶಿವಪ್ಪನಾಯಕ ಹಾಗೂ ಚೆನ್ನಮ್ಮಾಜಿ-ಕೆಳದಿ, ಬಿದನೂರು, ಕವಲೇದುರ್ಗದಲ್ಲಿ ಕೋಟೆ ಕಟ್ಟಿ ಆಳ್ವಿಕೆ ನಡೆಸುತ್ತಿದ್ದರು. ಇದು, ಶಿವಾಜಿಯ ಮಗ ರಾಜಾರಾಮನಿಗೆ ಆಶ್ರಯ ನೀಡಿದ ಸ್ಥಳವೂ ಹೌದು. 

    ವೆಂಕಟಪ್ಪ, ಚೆಲುವರಂಗಪ್ಪ, ಹೈದರಾಲಿ…
ತೀರ್ಥಹಳ್ಳಿಯಿಂದ ಆಗುಂಬೆ ರಸ್ತೆಯಲ್ಲಿ ಸಾಗುವಾಗ ಕೌಳಿ ಎಂಬ ಗ್ರಾಮ ಸಿಗುತ್ತದೆ. ಈ ಊರಿಗೆ ಸಮೀಪದಲ್ಲಿಯೇ ಕವಲೇದುರ್ಗವಿದೆ. ಈ ಕೋಟೆಯನ್ನು ವೆಂಕಟಪ್ಪ ನಾಯಕನು ಕಟ್ಟಿಸಿದನು. 16ನೇ ಶತಮಾನದಲ್ಲಿ, ರಾಜಾ ಚೆಲುವರಂಗಪ್ಪನು ಇದನ್ನು ಮತ್ತಷ್ಟು ಭದ್ರಗೊಳಿಸಿದನು. ಆ ನಂತರದಲ್ಲಿ ಈ ಕೋಟೆಯನ್ನು ವಶಪಡಿಸಿಕೊಂಡ ಹೈದರಾಲಿ, ಕೋಟೆಯ ರಕ್ಷಣೆಗೆ ಕಾವಲುಗಾರರನ್ನು ಇರಿಸಿದನು. ಕಾವಲುಗಾರರಿಂದ ಕೂಡಿದ್ದ ಕೋಟೆಯೇ ಆ ನಂತರದಲ್ಲಿ ಕವಲೇದುರ್ಗ ಎಂದು ಹೆಸರಾಯಿತು. ಇದು, ಕವಲೇದುರ್ಗದ ಚಾರಿತ್ರಿಕ ಹಿನ್ನೆಲೆ.

 ಕೋಟೆಯ ಗೋಡೆಯು ಸುಮಾರು 20 ಅಡಿ ಎತ್ತರವಿದ್ದು, ಬೃಹತ್‌ ಕಲ್ಲಿನಿಂದ ಕೂಡಿದೆ. ಈ ಕೋಟೆಯು ಮೂರು ಸುತ್ತಿನಿಂದ ಕೂಡಿದ್ದು ಪ್ರತಿ ಸುತ್ತಿನಲ್ಲಿಯೂ ಒಂದೊಂದು ಮುಖ್ಯ ದ್ವಾರವನ್ನು ಹೊಂದಿದೆ. ಮಹಾದ್ವಾರದ ಇಕ್ಕೆಲಗಳಲ್ಲಿ ರಕ್ಷಣಾ ಕೊಠಡಿಗಳಿದ್ದು ಅವನ್ನು ಬೃಹತ್‌ ಆದ ಪೆಡಸು ಕಲ್ಲಿನಿಂದ ಕಟ್ಟಲಾಗಿದೆ. ಕೋಟೆಯ ಒಳ ನಡೆದಂತೆ ಎದುರಾಗುವ ದೇವಾಲಯ, ಅರಮನೆಯ ಅವಶೇಷ, ಬಂಡೆಯ ತುತ್ತ ತುದಿಯಲ್ಲಿ ಶ್ರೀ ಕಂಠೇಶ್ವರನ ಪುಟ್ಟ ಗುಡಿ ಎಲ್ಲವೂ ಇಲ್ಲುಂಟು. 
    
ಕೋಟೆಯ ಒಳಭಾಗಕ್ಕೆ ನಡೆದಂತೆ ರಾಣಿಯ ಸ್ನಾನ ಗೃಹ,ಅಡುಗೆ ಮನೆ, ಸಭಾಗೃಹಗಳು, ಪೂಜಾಗೃಹಗಳು, ಬೃಹತ್‌ ನೀರಿನ ತೊಟ್ಟಿ  ನೋಡುಗರನ್ನು ಆಕರ್ಷಿಸುತ್ತದೆ. ಗುಡ್ಡದ ತುತ್ತ ತುದಿಯಿಂದ ಕಾಣುವ ಸೂರ್ಯಾಸ್ತದ ವಿಹಂಗಮ ನೋಟ ಎಂಥವರನ್ನೂ ಆಕರ್ಷಿಸದೇ ಇರಲಾರದು.

    ಈ ಕೋಟೆಯ ಇನ್ನೊಂದು ವಿಶೇಷವೆಂದರೆ ಇಲ್ಲಿನ ಅರಸರಿಗೆ 7 ಎಂಬ ಸಂಖ್ಯೆಯ ಮೇಲೆ ಇದ್ದ ನಂಬಿಕೆ. ಇಲ್ಲಿ ಏಳು ಕೆರೆ, ಅರಸರು ಪೂಜಿಸುತ್ತಿದ್ದ ನಾಗನಿಗೆ ಏಳು ಹೆಡೆ ಇರುವುದನ್ನು ಕಾಣಬಹುದು. ಇಲ್ಲಿನ ಮಳೆನೀರು ಕೊಯ್ಲು ಒಂದು ರೀತಿಯಲ್ಲಿ ಜನರನ್ನು ಆಕರ್ಷಿಸುತ್ತದೆ. ಒಂದು ಕೆರೆಯಿಂದ ಒಂದು ಕೆರೆಗೆ ನೀರು ಹರಿಯುವಂತೆ ವ್ಯವಸ್ಥೆ ಇದ್ದು ನೂರಾರು ವರ್ಷಗಳ ಹಿಂದೆಯೇ ಆ ರಾಜರು ರೂಪಿಸಿದ್ದ ಒಳ ಚರಂಡಿ ವ್ಯವಸ್ಥೆಯನ್ನೂ ಕಾಣಬಹುದಾಗಿದೆ.

 ಕಾಶಿಯಿಂದ ತಂದದ್ದು
    ಕೋಟೆಯ ಒಳಭಾಗದಲ್ಲಿ ವಿಶ್ವನಾಥೇಶ್ವರ ದೇವಸ್ಥಾನವಿದ್ದು ಉತ್ತಮವಾದ ಶಿಲ್ಪ ಕಲೆಯಿಂದ ಕೂಡಿದೆ. ಇಲ್ಲಿನ ವಿಗ್ರಹವನ್ನು ಕಾಶಿಯಿಂದ ತಂದದ್ದೆಂಬ ಪ್ರತೀತಿಯಿದೆ. ಇದು ಅಮೃತ ಶಿಲೆಯ ವಿಗ್ರಹ. ಕೋಟೆಯ ಒಳ ಬಾಗದಲ್ಲಿ ಗಜ ಶಾಲೆ, ಕುದುರೆಲಾಯದ ಕುರುಹುಗಳಿವೆ. ಕೋಟೆಯ ತುತ್ತತುದಿಯಲ್ಲಿ ಬಂದೀಖಾನೆಯನ್ನು ಕಾಣಬಹುದು. ಒಂದು ವೇಳೆ ಖೈದಿ ತಪ್ಪಿಸಿಕೊಂಡರೆ ಕೋಟೆಯ ಒಳಭಾಗಕ್ಕೆ ಬರಬೇಕು. ಇಲ್ಲವೇ ಬೆಟ್ಟದಿಂದ ಬಿದ್ದು ಸಾಯಬೇಕು. ಅಂಥದೊಂದು ಕಠಿಣ ವ್ಯವಸ್ಥೆಯನ್ನು ಅಂದಿನ ಅರಸುಗಳು ಮಾಡಿದ್ದರು ಎಂಬುದಕ್ಕೆ ಕವಲೇದುರ್ಗದ ಕೋಟೆ ಸಾಕ್ಷಿ ಹೇಳುತ್ತದೆ. 

 ಹೋಗುವುದು ಹೇಗೆ?
ಕವಲೇದುರ್ಗ ಕೋಟೆಗೆ ತೆರಳಲು ಸ್ವಂತ ವಾಹನವಿದ್ದರೆ ಅನುಕೂಲ. ಕೋಟೆ ತಲುಪಲು ತೀರ್ಥಹಳ್ಳಿಯಿಂದ 20 ಕಿ.ಮೀ ತೆರಳಬೇಕು. ಹಾಗೂ ತೆರಳುವ ವೇಳೆ ಉಪಹಾರ ನೀರು ಕೊಂಡೊಯ್ಯುವುದು ಉತ್ತಮ. ಮುಖ್ಯ ರಸ್ತೆಯಿಂದ ಗದ್ದೆಯ ಅಂಚಿನಲ್ಲಿ ಹಾಗೂ ಕಾಲು ದಾರಿಯಲ್ಲಿ 2 ಕಿ.ಮೀ ತೆರಳಿದರೆ ಆಳೆತ್ತರಕ್ಕೆ  ಮೈ ತೆರೆದು ನಿಂತಿರುವ ಕೋಟೆ ಕಾಣ ಸಿಗುತ್ತದೆ.

ಆದಿತ್ಯ ಹೆಚ್‌.ಎಸ್‌ ಹಾಲ್ಮುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next