Advertisement

ನಾಗರಹೊಳೆ ಹೆಬ್ಟಾಗಿಲಿನಿಂದಲೇ ಗಜಪಯಣ

11:22 AM Sep 03, 2018 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ, ವಿಜಯ ದಶಮಿಯ ದಿನ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ ಮೊದಲ ತಂಡದ ಆರು ಆನೆಗಳ ಪೈಕಿ ಐದು ಆನೆಗಳನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಟಾಗಿಲು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿಯಿಂದ ಸಾಂಪ್ರದಾಯಿಕ ಗಜಪಯಣದ ಮೂಲಕ ಅರಮನೆ ನಗರಿಗೆ ಕಳುಹಿಸಿಕೊಡಲಾಯಿತು. ಬಂಡೀಪುರದ ಆನೆ ಶಿಬಿರದಲ್ಲಿರುವ ಚೈತ್ರ ಆನೆಯನ್ನು ಅಲ್ಲಿಂದ ನೇರವಾಗಿ ಮೈಸೂರಿಗೆ ಕರೆತರಲಾಯಿತು.

Advertisement

ಬಳ್ಳೆ ಆನೆ ಶಿಬಿರದಿಂದ ಅರ್ಜುನ, ಮತ್ತಿಗೋಡು ಆನೆಶಿಬಿರದಿಂದ ವರಲಕ್ಷ್ಮೀ, ದುಬಾರೆ ಆನೆ ಶಿಬಿರದಿಂದ ಗೋಪಿ, ವಿಕ್ರಮ, ಧನಂಜಯ ಆನೆಗಳನ್ನು ನಾಗರಹೊಳೆಗೆ ಕರೆತಂದ ಮಾವುತ ಮತ್ತು ಕವಾಡಿಗಳು, ಭಾನುವಾರ ಮುಂಜಾನೆಯೇ ನಾಗರಹೊಳೆ ಅರಣ್ಯ ಪ್ರದೇಶದ ಮೂರ್ಕಲ್‌ ಕೆರೆಯಲ್ಲಿ ಆನೆಗಳ ಮೈತೊಳೆದು ಶುಚಿಗೊಳಿಸಿ, ಸಿಂಗರಿಸಿದ ನಂತರ ತಾವೂ ಪೋಷಾಕು ಧರಿಸಿದ ಮಾವುತ-ಕವಾಡಿಗರು ವಾಡಿಕೆಯಂತೆ ಅಲ್ಲಿನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವೀರನಹೊಸಹಳ್ಳಿ ಬಳಿಯ ಹೆಬ್ಟಾಗಿಲಿಗೆ ಕರೆತಂದರು. 

ಕಳೆದ 21 ವರ್ಷದಿಂದ ಗಜಪೂಜೆ ನೆರವೇರಿಸುತ್ತಾ ಬಂದಿರುವ ಅರ್ಚಕ ಪ್ರಹ್ಲಾದರಾವ್‌ ಅವರು ನಿಗದಿಪಡಿಸಿದಂತೆ ಭಾನುವಾರ ಬೆಳಗ್ಗೆ 10.30 ರಿಂದ 11.30ರ ಸಪ್ತಮಿ, ಸಿಂಹಲಗ್ನ, ಕೃತಿಕಾ ನಕ್ಷತ್ರದಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.

ಗಜಪೂಜೆ: ನಾಗರಹೊಳೆ ಅರಣ್ಯದ ಹೆಬ್ಟಾಗಿಲಿನಲ್ಲಿ ಐದು ಆನೆಗಳನ್ನೂ ಸಾಲಾಗಿ ನಿಲ್ಲಿಸಿ, ಕಾಲು ಕೊಳೆದು ಅರಿಶಿಣ-ಕುಂಕುಮ ಹಚ್ಚಿ, ಹೂ ಮಾಲೆಗಳನ್ನು ಹಾಕಿ ಪೂಜೆ ಸಲ್ಲಿಸಲಾಯಿತು. ಪಂಚಫ‌ಲ, ಚಕ್ಕುಲಿ, ಕೋಡುಬಳೆ, ಮೋದಕ, ದ್ರಾಕ್ಷಿ-ಗೋಡಂಬಿ, ಕಬ್ಬು, ತೆಂಗಿನ ಕಾಯಿ, ಬೆಲ್ಲಗಳನ್ನು ತಿನ್ನಿಸಿದ ನಂತರ, ಷೋಡಶೋಪಚಾರ ಪೂಜೆ, ಗಣಪತಿ ಅರ್ಚನೆ ಮಾಡಿ, ವನದೇವತೆ ಮತ್ತು ಚಾಮುಂಡೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಬೆಳಗ್ಗೆ 10.15ಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಹುಣಸೂರು ಶಾಸಕ ಅಡಗೂರು ಎಚ್‌.ವಿಶ್ವನಾಥ್‌, ಶಾಸಕರಾದ ತನ್ವೀರ್‌, ಕೆ.ಮಹದೇವ್‌, ಬಿ.ಹರ್ಷವರ್ಧನ್‌, ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಮೊದಲಾದವರು ಹೆಬ್ಟಾಗಿಲ ಬಳಿ ಇರುವ ಪುರಾತನವಾದ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ

Advertisement

ಪೂಜೆ ಸಲ್ಲಿಸಿದ ನಂತರ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ದಕ್ಷಿಣ ವಲಯ ಐಜಿಪಿ ಶರತ್‌ ಚಂದ್ರ, ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಾಪುರ, ನಾಗರಹೊಳೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ರವಿಶಂಕರ್‌ ಮೊದಲಾದವರು ಅರ್ಜುನ ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಆನೆಗಳಿಗೆ ಪುಷ್ಪವೃಷ್ಟಿಗರೆಯುವುದರೊಂದಿಗೆ ಗಜಪಯಣಕ್ಕೆ ಚಾಲನೆ ನೀಡಲಾಯಿತು.

ಪೂರ್ಣಕುಂಭ ಸ್ವಾಗತ: ಹೆಬ್ಟಾಗಿಲಿನಿಂದ ಹೊರಟ ಆನೆಗಳಿಗೆ ಪೂರ್ಣಕುಂಭ ಸ್ವಾಗತ, ಡೊಳ್ಳುಕುಣಿತ, ಕಂಸಾಳೆ ತಂಡದಿಂದ ವೈಭವಯುತ ಸ್ವಾಗತದೊರೆಯಿತು. ಅಲ್ಲಿಂದ ಮತ್ತೆ ನಾಗರಹೊಳೆ ಅರಣ್ಯದೊಳಗೆ ಆನೆಗಳನ್ನು ಕರೆದೊಯ್ದು ಲಾರಿಗಳಿಗೆ ಹತ್ತಿಸಿ ಮೈಸೂರಿಗೆ ಕಳುಹಿಸಿಕೊಡಲಾಯಿತು.

ಹಬ್ಬದ ವಾತಾವರಣ: ಮೈಸೂರು ರಾಜರ ಆಳ್ವಿಕೆಯ ಕಾಲದಲ್ಲಿ ಸ್ವತಃ ಮಹಾರಾಜರೇ ನಾಗರಹೊಳೆ ಅರಣ್ಯಕ್ಕೆ ಬಂದು ದಸರಾ ಮಹೋತ್ಸವಕ್ಕೆ ಆನೆಗಳನ್ನು ಕರೆತರುವಂತೆ ಮಾವುತರು, ಕವಾಡಿಗಳಿಗೆ ಫ‌ಲ ತಾಂಬೂಲ ನೀಡಿ ಆಹ್ವಾನ ಕೊಟ್ಟು ಹೋಗುತ್ತಿದ್ದರು. ಆದರೆ, ಪ್ರಜಾ ಸರ್ಕಾರದಲ್ಲಿ ದಸರಾ ನಾಡಹಬ್ಬವಾದ ನಂತರ ಈ ಸಂಪ್ರದಾಯವನ್ನು ಕೈಬಿಡಲಾಗಿತ್ತು. 2004ರಲ್ಲಿ ಎಚ್‌.ವಿಶ್ವನಾಥ್‌ ಅವರು ಅರಣ್ಯ ಖಾತೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದಾಗ ಸಂಪ್ರದಾಯ ಆಚರಣೆ ಸಲುವಾಗಿ ಗಜಪಯಣವನ್ನು ಆರಂಭಿಸಿದ್ದರು.

ಮೊದಲ ವರ್ಷ ಕಾಲ್ನಡಿಗೆಯಲ್ಲೇ ಆನೆಗಳನ್ನು ಮೈಸೂರಿಗೆ ಕರೆತರಲಾಗಿತ್ತು. ಆದರೆ, ಡಾಂಬರು ರಸ್ತೆಯಲ್ಲಿ ಭಾರೀ ದೂರ ನಡೆದಿದ್ದು, ಹಾಗೂ ಮಾರ್ಗ ಮಧ್ಯ ಹಳ್ಳಿಗರು ನೀಡಿದ ತಿಂಡಿಗಳನ್ನು ತಿಂದು ಆನೆಗಳ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಗಜಪಯಣದ ನಂತರ ಲಾರಿಗಳಲ್ಲಿ ಮೈಸೂರಿಗೆ ಕರೆತರುವ ಪದ್ಧತಿ ರೂಢಿಗೆ ಬಂತು.

ನಂತರದ ವರ್ಷಗಳಲ್ಲಿ ನಾಗರಹೊಳೆ ಹೆಬ್ಟಾಗಿಲ ಬದಲಿಗೆ ನಾಗಾಪುರ ಗಿರಿಜನ ಆಶ್ರಮ ಶಾಲೆ ಬಳಿಯಿಂದ ಗಜಪಯಣ ಏರ್ಪಡಿಸಲಾಗುತ್ತಿತ್ತು. ಈ ಬಾರಿ ಎಚ್‌.ವಿಶ್ವನಾಥ್‌ ಅವರೇ ಹುಣಸೂರು ಶಾಸಕರಾಗಿರುವುದರಿಂದ ಆಸಕ್ತಿವಹಿಸಿ ಮತ್ತೆ ವೀರನಹೊಸಹಳ್ಳಿ ಬಳಿಯ ನಾಗರಹೊಳೆ ಬಳಿಯ ಹೆಬ್ಟಾಗಿಲಿನಿಂದಲೇ ಗಜಪಯಣಕ್ಕೆ ಏರ್ಪಾಡು ಮಾಡಿಸಿದ್ದರು. ಇದು ಸುತ್ತಮುತ್ತಲಿನ ಹಳ್ಳಿಗರಲ್ಲಿ ಹಬ್ಬದ ವಾತಾವರಣ ಮೂಡಿಸಿತ್ತು. ಸಿಂಗಾರಗೊಂಡು ಮೈಸೂರಿಗೆ ಹೊರಟು ನಿಂತ ಗಜಪಡೆಯ ಜೊತೆಗೆ ನಿಂತು ಫೋಟೋ-ಸೆಲ್ಫಿ ತೆಗೆದು ಕೊಂಡು ಜನತೆ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next