Advertisement

ನೂತನ ರೈಲ್ವೆ ಮಾರ್ಗಗಳಿಗೆ ಸಿಕ್ಕಿಲ್ಲ ಕಾಯಕಲ್ಪ

01:09 PM Oct 15, 2022 | Team Udayavani |

ಗದಗ: ಸ್ವಾತಂತ್ರ್ಯ ಪೂರ್ವದಿಂದಲೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮುಖ ಜಂಕ್ಷನ್‌ ಆಗಿ ಗುರುತಿಸಿಕೊಂಡಿರುವ ಗದಗ ರೈಲ್ವೆ ನಿಲ್ದಾಣ ಇಂದು ಅನೇಕ ಸೌಲಭ್ಯಗಳನ್ನು ಕಂಡಿದೆ. ಆದರೆ, ಹಲವು ದಶಗಕಳ ಬೇಡಿಕೆಯಾಗಿದ್ದ ಹೊಸ ರೈಲು ಮಾರ್ಗ ಯೋಜನೆಗಳು ಈವರೆಗೂ ಈಡೇರಿಲ್ಲ.

Advertisement

ಮೊದಲಿದ್ದ ಹೊಸಪೇಟೆ-ಗದಗ-ಹುಬ್ಬಳ್ಳಿ ಹಾಗೂ ಗದಗ-ಬಾಗಲಕೋಟೆ-ವಿಜಯಪುರ ರೈಲು ಮಾರ್ಗಗಳು ಡಬ್ಲಿಂಗ್‌ ಹಾಗೂ ವಿದ್ಯುದ್ದೀಕರಣ ಗೊಂಡಿದ್ದು ಬಿಟ್ಟರೆ ಹೊಸ ರೈಲು ಮಾರ್ಗ ಯೋಜನೆ ಗಳು ಗದಗ ಜಿಲ್ಲೆಗೆ ಹಗಲುಗನಸಾಗೇ ಉಳಿದುಬಿಟ್ಟಿದೆ.

ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಮುಂಡರಗಿ ಭಾಗದ ಜನತೆ ಗದಗ-ಮುಂಡರಗಿ-ಹೂವಿನ ಹಡಗಲಿ-ಹರಪ್ಪನಹಳ್ಳಿ ಹಾಗೂ ಗದಗ ಭಾಗದಲ್ಲಿ ಗದಗ-ಕೋಟುಮುಚಗಿ-ನರೇಗಲ್‌- ಗಜೇಂದ್ರಗಡ- ಹನುಮಸಾಗರ-ಇಳಕಲ್‌ ಮಾರ್ಗವಾಗಿ ವಾಡಿ ತಲುಪಲು ಹೊಸ ರೈಲು ಮಾರ್ಗ ಯೋಜನೆ ಆರಂಭಿಸಲು ಅನೇಕ ಹೋರಾಟಗಳು ನಡೆದಿದ್ದವು. ಆದರೆ, ಈವರೆಗೆ ಹೋರಾಟಕ್ಕೆ ಪ್ರತಿಫಲ ಇಲ್ಲದಂತಾಗಿದೆ. ಮೇಲಾಗಿ, ಗದಗ-ವಾಡಿ ಮಾರ್ಗ ಕೊಪ್ಪಳಕ್ಕೆ ಸ್ಥಳಾಂತರಗೊಂಡಿರುವುದು ಗದಗ ಜಿಲ್ಲೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕನಸು ಈಡೇರುವ ಸಮಯ: ಕಳೆದ ಎರಡು ದಶಗಳ ಹೋರಾಟದ ಫಲವಾಗಿ 52 ಕಿ.ಮೀ. ಮಾರ್ಗದ ಗದಗ-ಲಕ್ಷ್ಮೇಶ್ವರ-ಯಲವಿಗಿ ಹೊಸ ರೈಲು ಮಾರ್ಗ ಯೋಜನೆಯ ಕನಸು ಈಡೇರುವ ಸಮಯ ಬಂದಂತಾಗಿದೆ. ಯೋಜನೆ ನಿರ್ಮಾಣದ ಕುರಿತು ಪಿಂಕ್‌ ಬುಕ್‌ನಲ್ಲಿ ಸೇರ್ಪಡೆಯಾಗಿ ಅನುಮೋದನೆ ದೊರೆತಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಗದಗ- ಲಕ್ಷ್ಮೇಶ್ವರ -ಯಲವಿಗಿ ಮಾರ್ಗ ನಿರ್ಮಾಣಕ್ಕೆ 640 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ರಾಜ್ಯ ಸರ್ಕಾರ 250 ಕೋಟಿ ರೂ. ಮೀಸಲಿಟ್ಟಿದೆ. ಡಿಸೆಂಬರ್‌ ಅಂತ್ಯ ಇಲ್ಲವೇ ಜನವರಿ ಆರಂಭದಲ್ಲಿ ಯೋಜನೆಯ ಕಾಮಗಾರಿ ಆರಂಭವಾಗುವ ನಿರೀಕ್ಷೆಯಲ್ಲಿದೆ.

ಉಪಯೋಗ: ಗದಗ-ಲಕ್ಷೆ ¾àಶ್ವರ-ಯಲವಿಗಿ ರೈಲು ಮಾರ್ಗದಿಂದ ಯಲವಿಗಿ-ಗದಗ-ಬಾಗಲಕೋಟೆ ನೇರ ರೈಲು ಸಂಪರ್ಕ ಹೊಂದಲಿದ್ದು, 100 ಕಿ.ಮೀ. ಉಳಿತಾಯವಾಗಲಿದೆ. ಅಲ್ಲದೇ, ಬೆಂಗಳೂರಿನಿಂದ ಸೊಲ್ಲಾಪುರ- ಮುಂಬೈಗೆ ತೆರಳುವ ರೈಲುಗಳು ಕಡಿಮೆ ಅವ ಧಿಯಲ್ಲಿ ನಿರ್ಧರಿತ ನಿಲ್ದಾಣ ತಲುಪಬಹುದಾಗಿದೆ. ಜೊತೆಗೆ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಹೊರೆ ಕಡಿಮೆಯಾಗಲಿದೆ.

Advertisement

ಯೋಜನೆಗೆ ರೈಲ್ವೆ ಬೋರ್ಡ್‌ ತಡೆ: ಗದಗ ಜಿಲ್ಲೆಯ ಪ್ರಮುಖ ಬೇಡಿಕೆಗಳಾಗಿದ್ದ ಗದಗ-ಮುಂಡರಗಿ- ಹೂವಿನ ಹಡಗಲಿ-ಹರಪನಳ್ಳಿ ಹಾಗೂ ಗದಗ- ವಾಡಿ ಮಾರ್ಗದ ರೈಲು ಯೋಜನೆಗಳಲ್ಲಿ ಗದಗ-ವಾಡಿ ಮಾರ್ಗ ಜಿಲ್ಲೆಯಿಂದ ಕೈತಪ್ಪಿದೆ. ಇನ್ನು ಗದಗ-ಮುಂಡರಗಿ-ಹೂವಿನ ಹಡಗಲಿ-ಹರಪನಳ್ಳಿ ಮಾರ್ಗಕ್ಕೆ ರೈಲು ಅಧಿ ಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. 2014ರಲ್ಲಿ ಅಂದಿನ ರೈಲ್ವೆ ಮಂತ್ರಿ ಸದಾನಂದಗೌಡರು ಮಂಜೂರು ಮಾಡಿದರು. 10-7-2019ರಲ್ಲಿ ಗದಗ- ಮುಂಡರಗಿ-ಹರಪ್ಪನಹಳ್ಳಿ 94 ಕಿ.ಮೀ. ರೈಲು ಮಾರ್ಗದ ಸರ್ವೇ ಮಾಡಲಾಯಿತು. 813 ಕೋಟಿ ರೂ. ಅನುದಾನದ ಅವಶ್ಯಕತೆ ಇರುವ ಕಾರಣ ಅನುದಾನದ ವೆಚ್ಚ ಅಧಿಕವಾದ ಹಿನ್ನೆಲೆಯಲ್ಲಿ ರೈಲ್ವೆ ಬೋರ್ಡ್‌ ತಡೆ ಹಿಡಿದಿದೆ. 2022ರ ಮಾರ್ಚ್‌ನಲ್ಲಿ ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ರೈಲು ಮಾರ್ಗ ಆರಂಭಿಸುವಂತೆ ಪ್ರಧಾನಿಗೆ ಮನವಿ ಪತ್ರ ರವಾನಿಸಿ ಒತ್ತಾಯಿಸಿದೆ.

ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ವಿಶ್ವಾಸ: ಗದಗ-ಕೋಟುಮುಚಗಿ-ನರೇಗಲ್-ಗಜೇಂದ್ರಗಡ‌ – ಹನುಮಸಾಗರ- ಇಳಕಲ್‌-ವಾಡಿ ಮಾರ್ಗ ಕೈತಪ್ಪಿದ್ದರಿಂದ ಸಂಸದ ಶಿವಕುಮಾರ ಉದಾಸಿ ಅವರು ಆಸಕ್ತಿಯಿಂದ ಹೊಸ ರೈಲು ಮಾರ್ಗಕ್ಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಗದಗ- ಕೋಟುಮುಚಗಿ- ನರೇಗಲ್‌- ಗಜೇಂದ್ರಗಡ-ಹನುಮಸಾಗರ- ಇಳಕಲ್‌-ಕೃಷ್ಣಾವರ ರೈಲು ಮಾರ್ಗದ ಸರ್ವೇ ಕಾರ್ಯ ಪೂರ್ಣಗೊಂಡು ರೈಲ್ವೆ ಬೋರ್ಡ್‌ಗೆ ವರದಿ ಸಲ್ಲಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಹಸಿರು ನಿಶಾನೆ ದೊರೆಯುವ ವಿಶ್ವಾಸದಲ್ಲಿದೆ.

ಆಗಬೇಕಾದ ಯೋಜನೆಗಳು: ಹಿಂದಿನ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದಂತೆ ಗದಗ ರೈಲು ನಿಲ್ದಾಣ ವಿಶ್ವ ಮೇಲ್ದರ್ಜೆಗೇರಿಸಬೇಕಿದೆ. ಹುಬ್ಬಳ್ಳಿಯಿಂದ ಗದಗ ಮಾರ್ಗವಾಗಿ ರಾತ್ರಿ ವೇಳೆ ಸೋಲಾಪೂರ, ಹೈದರಾಬಾದ್‌ ಕಡೆಗೆ ರೈಲು ಓಡಿಸಬೇಕಿದೆ. ಗದಗ-ಬಾಗಲಕೋಟೆ ಮಧ್ಯೆ ಸಾಮಾನ್ಯ ರೈಲುಗಳ ಸಂಖ್ಯೆ ಹೆಚ್ಚಿಸಬೇಕಿದೆ.

ಪೂರ್ಣಗೊಂಡ ಅಭಿವೃದ್ಧಿ ಕಾಮಗಾರಿ: ಗದಗ ಬೈಪಾಸ್‌ ಗೂಡ್ಸ್‌ ರೈಲ್ವೆ ನಿಲ್ದಾಣ 80-110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಕಾರ್ಯಾರಂಭ ಮಾಡಿದೆ. ಗದಗ-ಬದಾಮಿ, ಬಾಗಲಕೋಟೆ-ವಿಜಯಪುರ-ಹೂಟಗಿ 284 ಕಿ.ಮೀ. ವಿದ್ಯುದ್ದೀಕರಣ ಮತ್ತು ಡಬ್ಲಿಂಗ್‌ 1100 ಕೋಟಿ ರೂ. ಯೋಜನೆಯಾಗಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಿದ್ದ 350 ಕೋಟಿ ರೂ. ಕಾಮಗಾರಿಯ ಆಯ್ದ ಭಾಗ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ಹಂತದಲ್ಲಿದೆ. ಗದಗ-ಹೊಂಬಳ ಮಾರ್ಗದಲ್ಲಿ ರೈಲ್ವೆ ಮೇಲ್ಸೇತುವೆ 2023ರ ಮಾರ್ಚ್‌ನಲ್ಲಿ ಪೂರ್ಣಗೊಂಡು ಲೋಕಾ ರ್ಪಣೆ ಮಾಡುವುದಾಗಿ ರೈಲ್ವೆ ಅಧಿ ಕಾರಿಗಳು ತಿಳಿಸಿದ್ದಾರೆ.

ಗದಗ ರೈಲು ನಿಲ್ದಾಣದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ನೂತನ ವಿದ್ಯುತ್‌ ಚಾಲಿತ ಎಸ್ಕಲೇಟರ್‌ ಕಾಮಗಾರಿ, ಉದ್ಯಾನ ಹಾಗೂ ಫುಟ್‌ಪಾತ್‌ ನವೀಕರಣಗೊಂಡಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಹೊಸಪೇಟೆ-ಕೊಪ್ಪಳ-ಗದಗ- ಹುಬ್ಬಳ್ಳಿ ಡಬ್ಲಿಂಗ್‌ ಮತ್ತು ವಿದ್ಯುತ್ತೀಕರಣ ಪೂರ್ಣಗೊಂಡು ಚಾಲನೆಯಲ್ಲಿದೆ. ಸ್ಥಗಿತಗೊಂಡಿದ್ದ ಹಳ್ಳಿಗುಡಿ ರೈಲು ನಿಲ್ದಾಣ ನವೀಕರಣಗೊಂಡು ಉದ್ಘಾಟನೆ ಹಂತದಲ್ಲಿದೆ.

ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಗದಗ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ಹಂತದಲ್ಲಿವೆ. ಕೆಲವೇ ತಿಂಗಳಲ್ಲಿ ಗದಗ-ಯಲವಿಗಿ ರೈಲು ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಚಾಲನೆ ದೊರೆಯಲಿದೆ. ಮೇಲಾಗಿ, ಗದಗ-ಕೃಷ್ಣಾವರ ಹೊಸ ರೈಲ್ವೆ ಮಾರ್ಗದ ಸರ್ವೇ ಕಾರ್ಯ ಪೂರ್ಣಗೊಂಡು ರೈಲ್ವೆ ಬೋರ್ಡ್‌ಗೆ ವರದಿ ಸಲ್ಲಿಕೆಯಾಗಿದೆ. ಮುಂಬರುವ ಬಜೆಟ್‌ನಲ್ಲಿ ಗದಗ-ಕೃಷ್ಣಾವರ ನೂತನ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ದೊರೆಯುವ ವಿಶ್ವಾಸವಿದೆ.  -ಶಿವಕುಮಾರ ಉದಾಸಿ, ಸಂಸದರು

ಅರುಣಕುಮಾರ ಹಿರೇಮಠ

 

Advertisement

Udayavani is now on Telegram. Click here to join our channel and stay updated with the latest news.

Next