Advertisement

ಗದಗ: ಫೆ. 11ರಿಂದ ಐತಿಹಾಸಿಕ ಲಕ್ಕುಂಡಿ ಉತ್ಸವ ಆರಂಭ

03:39 PM Jan 10, 2023 | Team Udayavani |

ಗದಗ: ಮುಂಬರುವ ಫೆ. 11 ಹಾಗೂ 12ರಂದು ಐತಿಹಾಸಿಕ ಲಕ್ಕುಂಡಿ ಉತ್ಸವವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು. ತಾಲೂಕಿನ ಲಕ್ಕುಂಡಿಯ ಶ್ರೀ ಅನ್ನದಾನೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಜರುಗಿದ ಲಕ್ಕುಂಡಿ ಉತ್ಸವ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಕಳೆದ ಮೂರು ವರ್ಷಗಳಿಂದ ಪ್ರವಾಹ ಹಾಗೂ ಕೊರೊನಾ ಕಾರಣಗಳಿಂದಾಗಿ ಲಕ್ಕುಂಡಿ ಉತ್ಸವ ಜರುಗಿಸಲು ಸಾಧ್ಯವಾಗಿಲ್ಲ. ಈ ಭಾರಿ ಅರ್ಥಪೂರ್ಣವಾಗಿ ಎರಡು ದಿನಗಳ ಲಕ್ಕುಂಡಿ ಉತ್ಸವ ಜರುಗಿಸಲು ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮಸ್ಥರ ಅಭಿಪ್ರಾಯ ಪಡೆದುಕೊಳ್ಳಲು ಈ ಸಭೆ ಆಯೋಜಿಸಲಾಗಿದೆ ಎಂದರು.

ಫೆ. 11 ಹಾಗೂ 12ರಂದು ಜರುಗಿಸಲಾಗುವ ಲಕ್ಕುಂಡಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸರ್ವ ಕ್ರಮ ಕೈಗೊಳ್ಳಲಾಗುವುದು. ಉತ್ಸವದ ದಿನಗಳಂದು ಆಯೋಜಿಸಲಾಗುವ ಕಾರ್ಯಕ್ರಮಗಳ ಕುರಿತು ಗ್ರಾಮದ ಸಾರ್ವಜನಿಕರ ಅಭಿಪ್ರಾಯ ಪಡೆದ ಸಚಿವರು ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ದಾನ ಚಿಂತಾಮಣಿ ಅತ್ತಿಮಬ್ಬೆ ಮಹಾದ್ವಾರ ನಿರ್ಮಾಣಕ್ಕೆ ಅಗತ್ಯದ ಕ್ರಮ ವಹಿಸಲಾಗುವುದು. ಲಕ್ಕುಂಡಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಹದಿನೈದು ದಿನಗಳೊಳಗಾಗಿ ಸರಿಪಡಿಸಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ನಿರ್ದೇಶಿಸಿದರು.ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು
ಸೂಚಿಸಿದರು.

ಲಕ್ಕುಂಡಿ ಉತ್ಸವದ ಯಶಸ್ವಿಗೆ ಗ್ರಾಮಸ್ಥರ ಸಹಕಾರವು ಅಗತ್ಯವಿದ್ದು, ಲಕ್ಕುಂಡಿ ಉತ್ಸವವನ್ನು ಊರ ಹಬ್ಬವನ್ನಾಗಿ ಆಚರಿಸಲು ಗ್ರಾಮಸ್ಥರು ಮುಂದಾಗಬೇಕು. ಉತ್ಸವದ ಯಶಸ್ವಿಗಾಗಿ ಅಗತ್ಯದ ಸಮಿತಿಗಳನ್ನು ರಚಿಸಿ ಫೆ. 11 ಹಾಗೂ 12ರಂದು ಜರುಗುವ ದಾನಚಿಂತಾಮಣಿ ಅತ್ತಿಮಬ್ಬೆಯ ಕೀರ್ತಿಯನ್ನು ರಾಷ್ಟ್ರಾದ್ಯಂತ ಪಸರಿಸಲು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಮಾತನಾಡಿ, ಲಕ್ಕುಂಡಿ ಉತ್ಸವದ ಪೂರ್ವಭಾವಿ ಸಭೆ ಜರುಗಿಸಲಾಗುತ್ತಿದ್ದು, ಉತ್ಸವದ ರೂಪುರೇಷೆಗಳ ಕುರಿತು ಗ್ರಾಮಸ್ಥರ ಅಭಿಪ್ರಾಯ ಪಡೆದು ಸಚಿವರ ಆಶಯಂದತೆ ಲಕ್ಕುಂಡಿ ಉತ್ಸವವನ್ನು ಐತಿಹಾಸಿಕವನ್ನಾಗಿಸೊಣ ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ತಿಳಿಸಿದರು.

Advertisement

ನಂತರ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಭೆಯಲ್ಲಿ ಲಕ್ಕುಂಡಿ ಗ್ರಾಪಂ ಅಧ್ಯಕ್ಷೆ ಲಲಿತಾ ಗದಗಿನ, ಉಪಾಧ್ಯಕ್ಷ ಸಿದ್ದು ಮುಳಗುಂದ, ಗ್ರಾಮ ಪಂಚಾಯತ್‌ ಸದಸ್ಯರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಜಿಪಂ ಸಿಇಒ ಡಾ| ಸುಶೀಲಾ ಬಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ., ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಸೇರಿದಂತೆ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು, ಲಕ್ಕುಂಡಿ ಗ್ರಾಮದ ಗಣ್ಯರು, ಸಾರ್ವಜನಿಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next