Advertisement

ಗದಗ: ನಯನ ಮನೋಹರ ಶೆಟ್ಟಿಕೆರೆಗೆ ಬೇಕಿದೆ ಕಾಯಕಲ್ಪ

06:09 PM Jun 19, 2023 | Team Udayavani |

ಲಕ್ಷ್ಮೇ ಶ್ವರ: ಲಕ್ಷ್ಮೇ ಶ್ವರ ತಾಲೂಕಿನ ಬಟ್ಟೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶೆಟ್ಟಿಕೆರೆ ಸಸ್ಯ, ಪ್ರಾಣಿ, ಜಲ, ಖನಿಜ ಸಂಪತ್ತಿನ ಸುಂದರ ಪರಿಸರದೊಂದಿಗೆ ಮಲೆನಾಡಿನ ಭಾವನೆ ಮೂಡಿಸುತ್ತದೆ. ಸೌರಾಷ್ಟ್ರದಿಂದ ಪುಲಿಗೆರೆ(ಲಕ್ಷ್ಮೇ ಶ್ವರ) ಗೆ ಶ್ರೀ ಸೋಮೇಶ್ವರನನ್ನು ತಂದು ಪ್ರತಿಷ್ಠಾಪಿಸಿದಶಿವಶರಣ ಆದಯ್ಯನೇ ಶೆಟ್ಟಿಕೇರಿ ಕೆರೆ ಕಟ್ಟಿಸಿದ್ದಾನೆ ಎಂಬ ಪ್ರತೀತಿ ಇದೆ. ಆದರೆ, ಈ ಶೆಟ್ಟಿಕೆರೆ ಪಕ್ಷಿಧಾಮದ ಅಭಿವೃದ್ಧಿಗೆ ಸರಕಾರ ಆದ್ಯತೆ ನೀಡಬೇಕೆಂಬುದು ಈ ಭಾಗದ ಜನರ ಆಶಾವಾದ.

Advertisement

ಕೈಬೀಸಿ ಕರೆಯುವ ಸಸ್ಯಕಾಶಿ: ಲಕ್ಷ್ಮೇ ಶ್ವರದಿಂದ 10ಕಿ.ಮೀ. ದೂರದ ಶೆಟ್ಟಿಕೇರಿ 224 ಎಕರೆ ವಿಶಾಲವಾಗಿದ್ದು, ಈ ವ್ಯಾಪ್ತಿಯಲ್ಲಿ 500 ಎಕರೆ ಅರಣ್ಯ ಪ್ರದೇಶವಿದೆ. ಇದಕ್ಕೆ ಹೊಂದಿಕೊಂಡು 40 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರ ವಿವಿಧ ಸಸ್ಯಗಳಿಂದ ಸದಾ ಹಸಿರಾಗಿದ್ದು, ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ.

ವಿದೇಶಿ ಪಕ್ಷಿಗಳ ಕಲರವ: ಉತ್ತರ ಕರ್ಣಾಟಕದ ರಂಗನತಿಟ್ಟು ಎನ್ನುವ ಸಮೀಪದ ಮಾಗಡಿ ಕೆರೆಗೆ
ಚಳಿಗಾಲದಲ್ಲಿ ಹಾರಿ ಬರುವ ವಿದೇಶಿ ಪಕ್ಷಿಗಳು ಸಮೀಪದ ಶೆಟ್ಟಿಕೆರಿಯಲ್ಲೂ ಬಿಡಾರ ಹೂಡುತ್ತವೆ. ಮಾಗಡಿ ಕೆರೆಗಿಂತಲೂ ಶೆಟ್ಟಿಕೆರೆ ಎರಡು ಪಟ್ಟು ಅಂದರೆ 234 ಎಕರೆ ವಿಸ್ತಾರವಾಗಿದೆ.

ಗುಡ್ಡಗಳ ನಡುವಿರುವ ವಿಶಾಲವಾದ ಕೆರೆಯ ಸುತ್ತಲೂ ಅರಣ್ಯ, ಪ್ರಶಾಂತ ವಾತಾವರಣದಿಂದ ವಿದೇಶಿ ಹಕ್ಕಿಗಳ ವಾಸ್ತವ್ಯ, ಸಂತಾನೋತ್ಪತ್ತಿ, ಕಲರವಕ್ಕೆ ನೈಸರ್ಗಿಕವಾಗಿ ರೂಪಿತವಾದ ಪ್ರದೇಶವಾಗಿದೆ. ಪ್ರತಿವರ್ಷ ಇಲ್ಲಿಗೆ ಮಂಗೋಲಿಯಾ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ, ಭೂತಾನ್‌ ಮತ್ತು ಜಮ್ಮು-ಕಾಶ್ಮೀರದ ಲಡಾಕ್‌ನಿಂದ ಸುಮಾರು 16 ಜಾತಿಯ ಸಾವಿರಾರು ವಿದೇಶಿ ಪಕ್ಷಿಗಳು ಬಿಡಾರ ಹೂಡುತ್ತವೆ. ಶೆಟ್ಟಿಕೆರೆಯಲ್ಲಿನ ಪಕ್ಷಿಗಳ ಚಲ್ಲಾಟ, ನೀರಿನಲ್ಲಿ ಬಣ್ಣಗಳ ರಂಗೋಲಿ ಚಿತ್ತಾರ, ಬಾನಿನಲ್ಲಿ ರಾಕೆಟ್‌, ಕ್ಷಿಪಣಿಗಳ ರೀತಿಯ ಹಾರಾಟದ ವಿಸ್ಮಯದ ದೃಶ್ಯ, ನೀರಿನಿಂದ ಮೇಲೆ ಹಾರುವ, ಕೆಳಗಿಳಿಯುವ, ತೇಲುವ ಪಕ್ಷಿಗಳ ಲೋಕದ ನಯನಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಜನ ಬರುತ್ತಾರೆ.

ವನ್ಯ ಪ್ರಾಣಿಗಳ ಆಶ್ರಯ ತಾಣ: ಶೆಟ್ಟಿಕೇರಿಯಲ್ಲಿ ಮೀನುಗಾರಿಕೆಯೂ ನಡೆಯುತ್ತದೆ ಮತ್ತು ಕೆರೆಯಲ್ಲಿ ಅಪರೂಪದ ಮೃದು ಚರ್ಮದ ನೀರು ನಾಯಿಗಳೂ ವಾಸಿಸುತ್ತಿವೆ. ಇಲ್ಲಿನ 500 ಎಕರೆ ವಿಸ್ತಾರದ ಅರಣ್ಯ ಪ್ರದೇಶದಲ್ಲಿ ಪುನುಗು ಬೆಕ್ಕು, ಕತ್ತೆಕಿರುಬ, ಜಿಂಕೆ, ನಕ್ಷತ್ರ ಆಮೆ, ಉಡಾ, ಹೆಬ್ಟಾವು, ನರಿ, ತೋಳ, ನವಿಲು, ಕಾಡು ಕುರಿ ಸೇರಿ ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ಕಲ್ಪಿಸಿದೆ.

Advertisement

ಶೆಟ್ಟಿಕೆರೆಗೆ ಮಾರ್ಗ: ಲಕ್ಷ್ಮೇ ಶ್ವರದಿಂದ ಬಟ್ಟೂರ ಮಾರ್ಗವಾಗಿ ಶೆಟ್ಟಿಕೆರೆ 10 ಕಿ.ಮೀ. ಅಂತರದಲ್ಲಿದೆ. ಶಿರಹಟ್ಟಿಯಿಂದ 8.ಕಿ.ಮೀ.
ಅಂತರದಲ್ಲಿದೆ. ಸುತ್ತಲೂ ಅರಣ್ಯ, ಗುಡ್ಡದ ಪ್ರದೇಶ ಪ್ರಶಾಂತ ವಾತಾವರಣವಿದೆ. ಪಕ್ಷಿ ಪ್ರೇಮಿಗಳು, ಶಾಲಾ ಮಕ್ಕಳು,
ನೌಕರರು ಒಂದು ದಿನದ ಬಿಡುವಿನ ವೇಳೆಯಲ್ಲಿ ಶೆಟ್ಟಿಕೇರಿಯಲ್ಲಿ ಪಕ್ಷಿ ವೀಕ್ಷಣೆ ಮಾಡಬಹುದು. ಹತ್ತಿರದಲ್ಲಿಯೇ ಇರುವ ಹೊಳಲಮ್ಮನಗುಡ್ಡ, ಅರಣ್ಯ ಇಲಾಖೆಯ ನರ್ಸರಿ, ಶಿರಹಟ್ಟಿ ಫಕ್ಕೀರೇಶ್ವರ ಮಠ, ವರವಿ ಮೌನೇಶ್ವರ, ಲಕ್ಷ್ಮೇ ಶ್ವರದ ಸೋಮೇಶ್ವರ ದೇವಸ್ಥಾನ, ಮುಕ್ತಿಮಂದಿರ ಧರ್ಮಕ್ಷೇತ್ರದ ದರ್ಶನ ಪಡೆಯಬಹುದು.

ಪಿಕ್ನಿಕ್‌ ಸ್ಪಾಟ್‌ ಮಾಡಿ: ಅರಣ್ಯ ಸಂಪತ್ತು ವೀಕ್ಷಿಸಲು ವಾಚಿಂಗ್‌ ಟಾವರ್‌, ಬೈನಾಕ್ಯೂಲರ್‌, ಕಾವಲು ಸಿಬ್ಬಂದಿ ಇತರೇ ಅವಶ್ಯಕ ಸವಲತ್ತುಗಳನ್ನು ಕಲ್ಪಿಸಬೇಕು. ಸುತ್ತಲೂ ಗುಡ್ಡ, ಅರಣ್ಯ, ಕೆರೆ, ನರ್ಸರಿಯನ್ನೊಳಗೊಂಡ ನಯನಮನೋಹರ ಪ್ರದೇಶವಿದಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಈ ಕೆರೆಗೆ ನದಿ ನೀರು ಹರಿಸುವ ಯೋಜನೆ ಪ್ರಗತಿ ಹಂತದಲ್ಲಿದೆ. ಕೆರೆಯಲ್ಲಿನ ಹೂಳು, ಕಸ, ಗಿಡಗಂಟಿಗಳಿಂದ ಕೂಡಿರುವ ಕೆರೆಯ ಅಭಿವೃದ್ಧಿಗೆ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದ ಗಮನ ಸೆಳೆದು ಬೋಟಿಂಗ್‌ ವ್ಯವಸ್ಥೆ, ಪಿಕ್ನಿಕ್‌ ಸ್ಪಾಟ್‌ ಮಾಡಬಹುದಾಗಿದೆ ಎಂಬುದು ಪ್ರಜ್ಞಾವಂತರ ಒತ್ತಾಸೆಯಾಗಿದೆ.

ಶೆಟ್ಟಿಕೆರೆ ಪಕ್ಷಿಧಾಮ ಅಭಿವೃದ್ಧಿಗೂ ಆದ್ಯತೆ ನೀಡಿ

ಗದಗ ಜಿಲ್ಲೆಯ ಅಭಿವೃದ್ಧಿ ಕನಸು ಹೊತ್ತಿರುವ ಎಚ್‌.ಕೆ. ಪಾಟೀಲ ಅವರು ಇದೀಗ ಕಾನೂನು, ಪ್ರವಾಸೋದ್ಯಮ ಸಚಿವ ಸ್ಥಾನದ ಜತೆಗೆ ಅರಣ್ಯ, ವಸತಿ ಮತ್ತು ವಿಹಾರಧಾಮಗಳ ನಿಗಮ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ  ನಿಗಮದ ಅಧ್ಯಕ್ಷರೂ ಆಗಿರುವುದು ಜಿಲ್ಲೆಯ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಲ್ಲದೇ, ಸೋಮವಾರ ಸಚಿವರೊಂದಿಗೆ ಹಿರಿಯ ಐಎಎಸ್‌ ಅಧಿಕಾರಿ ಮನೋಜಕುಮಾರ ಅವರು ಜಿಲ್ಲೆಯ ವಿವಿಧ ಪ್ರವಾಸಿ, ಪ್ರೇಕ್ಷಣೀಯ ತಾಣಗಳಿಗೆ ಭೇಟಿ ನೀಡಿ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಕೈಗೊಳ್ಳಲಿದ್ದಾರೆ. ಮಾಗಡಿ ಪಕ್ಷಿಧಾಮಕ್ಕೆ ಆಗಮಿಸಿದ ಸಂದರ್ಭ ಶೆಟ್ಟಿಕೆರೆ ಪಕ್ಷಿಧಾಮಕ್ಕೂ ಭೇಟಿ ನೀಡಿ ಈ ಕ್ಷೇತ್ರದ ಅಭಿವೃದ್ಧಿಗೂ ಮುಂದಾಗಬೇಕು ಎಂದು ಗ್ರಾಪಂ ಅಧ್ಯಕ್ಷ ಜಗದೀಶಗೌಡ ಪಾಟೀಲ, ಮಂಜುನಾಥ
ಗೌರಿ, ದೀಪಕ ಲಮಾಣಿ, ಹನುಮಂತಪ್ಪ ಹರಿಜನ, ಶಿವಾನಂದ ಬನ್ನಿಮಟ್ಟಿ ಆಗ್ರಹಿಸಿದ್ದಾರೆ. ಈ ಹಿಂದೆ ಹಿಂದೆ ಅರಣ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಅವರು ಇಲ್ಲಿಗೆ ಭೇಟಿ ನೀಡಿದ್ದ ವೇಳೆ ಅಭಿವೃದ್ಧಿಯ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next