Advertisement

ಗಾಳಿಪಟ-2 ಸಾಂಗ್‌ ಬಂತು; ಎಕ್ಸಾಂ ಟೆನ್ಷನ್ ನಲ್ಲಿ ಬಾಯಿ ಬಡ್ಕ!

11:28 AM Apr 23, 2022 | Team Udayavani |

ಏಪ್ರಿಲ್‌ ತಿಂಗಳು ಅಂದ್ರೆ ಅದೊಂಥರಾ ಪರೀಕ್ಷಾ ಮಾಸ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹೀಗೆ ಬಹುತೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಎಲ್ಲರಿಗೂ ಒಂಥರಾ ಎಕ್ಸಾಂ ಟೆನ್ಶನ್‌ ಕೊಡುವ ತಿಂಗಳಿದು. ವರ್ಷವಿಡೀ ಕಲಿತ ಸಬ್ಜೆಕ್ಟ್ ಗಳನ್ನ ಉತ್ತರ ಪತ್ರಿಕೆಗೆ ಇಳಿಸುವ ವಿದ್ಯಾರ್ಥಿಗಳ ಕಸರತ್ತು ಎಲ್ಲರೂ ಹತ್ತಿರದಿಂದ ಕಂಡಿರುತ್ತೀರಿ. ಈಗ ಇದೇ ಎಕ್ಸಾಂ ಟೈಮ್‌ ಕುರಿತು ವಿದ್ಯಾರ್ಥಿಗಳ ಪರಿಪಾಟಲನ್ನು ನಿರ್ದೇಶಕ ಯೋಗರಾಜ್‌ ಭಟ್‌, ಎಂದಿನಂತೆ ತಮ್ಮದೇ ಆದ ವಿಡಂಭನಾ ಶೈಲಿಯಲ್ಲಿ ಹಾಡಿನ ಮೂಲಕ ಹೇಳಲು ಹೊರಟಿದ್ದಾರೆ. ಅದು ತಮ್ಮ ಮುಂಬರುವ “ಗಾಳಿಪಟ-2′ ಸಿನಿಮಾದ ಹಾಡಿನಲ್ಲಿ.

Advertisement

ಹೌದು, ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಯೋಗರಾಜ್‌ ಭಟ್‌ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ “ಗಾಳಿಪಟ-2′ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ ಚಿತ್ರತಂಡ. ಇನ್ನು “ಗಾಳಿಪಟ-2′ ಸಿನಿಮಾದಲ್ಲಿ ಎಕ್ಸಾಂ ಟೈಮಿನಲ್ಲಿ ವಿದ್ಯಾರ್ಥಿಗಳ ಪಾಡು ಹೇಗಿರುತ್ತದೆ ಅನ್ನೋದನ್ನ “ಬಾಯಿ ಬಡಕ…’ ಎಂಬ ಹಾಡಿನಲ್ಲಿ ಹೇಳಲಾಗಿದ್ದು, ಸದ್ಯ ಎಕ್ಸಾಂ ಬಿಸಿ ಜೋರಾಗಿರುವ ಸಂದರ್ಭದಲ್ಲಿಯೇ ಚಿತ್ರತಂಡ ಈ ಹಾಡನ್ನು ಚಿತ್ರದ ಪ್ರಚಾರ ಭಾಗವಾಗಿ ಬಿಡುಗಡೆ ಮಾಡಿದೆ.

“ಪರೀಕ್ಷೆನ ಬಡಿಯಾ… ಕ್ವಶ್ಚನ್ನು ಪೇಪರ್‌ಗೆ ಎಂಟತ್ತು ನಾಗರಹಾವು ಕಡಿಯಾ… ಅತ್ಲ ಕಡೆ ಪ್ರಣಯ, ಇತ್ಲ ಕಡೆ ಪ್ರಳಯ… ಫೈನಲ್ಲು ಇಯರ್‌ಗೆ ನೂರಾ ಒಂದು ತೆಂಗಿನಕಾಯಿ ಒಡಿಯಾ…’ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿನಲ್ಲಿ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ನಿರ್ದೇಶಕ ಯೋಗರಾಜ್‌ ಭಟ್‌ ಹಾಸ್ಯದಾಟಿಯಲ್ಲಿ ಹೇಳಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆಯ ಈ ಗೀತೆಗೆ ವಿಜಯ ಪ್ರಕಾಶ್‌ ಧ್ವನಿಯಾಗಿದ್ದು, ಸ್ವತಃ ಭಟ್ಟರೇ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ:ಚಿತ್ರವಿಮರ್ಶೆ: ನಿಗೂಢ ರಹಸ್ಯ ಭೇದಿಸಿ ನಿಂತ ‘ಗಂಡುಲಿ’

ಗುರುವಾರ ಸಂಜೆ “ಆನಂದ್‌ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡಿನ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ವೀವ್ಸ್‌ ಪಡೆದುಕೊಂಡು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Advertisement

ಇನ್ನು ಈ ಹಾಡಿನ ಬಗ್ಗೆ ಮಾತನಾಡುವ ನಿರ್ದೇಶಕ ಯೋಗರಾಜ್‌ ಭಟ್‌, “ನಮ್ಮ ಸಿನಿಮಾದಲ್ಲಿ ಇಂದಿನ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರುತ್ತದೆ ಅನ್ನೋದನ್ನ ಹಾಡಿನ ಮೂಲಕ ಹೇಳಿದ್ದೇವೆ. ಪ್ರಸ್ತುತ ಎಲ್ಲ ಕಡೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿದ್ದರಿಂದ, ಈ ಹಾಡನ್ನ ಬಿಡುಗಡೆ ಮಾಡಿದ್ದೇವೆ. ಪರೀಕ್ಷೆ ಭಯ, ಹುಡುಗರ ಆಸಕ್ತಿ, ಅವರ ಒದ್ದಾಟ ಎಲ್ಲವನ್ನೂ ಈ ಹಾಡಿನಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇದು ನಮ್ಮ ಹುಡುಗರಿಗೆ ಕನೆಕ್ಟ್ ಆಗುತ್ತದೆ’ ಎಂದು ವಿವರಣೆ ಕೊಡುತ್ತಾರೆ.

ಈ ಹಾಡಿನಲ್ಲಿ ನಟ ಗಣೇಶ್‌, ದಿಗಂತ್‌, ಪವನ್‌ ಕುಮಾರ್‌, ಬುಲೆಟ್‌ ಪ್ರಕಾಶ್‌ ಹೀಗೆ ಅನೇಕ ಕಲಾವಿದರು ಕಾಣಿಸಿಕೊಂಡಿದ್ದಾರೆ. “ಎಕ್ಸಾಂ ಟೈಮಲ್ಲಿ ಹುಡುಗರ ಮೂಡ್‌ ಹೇಗಿರುತ್ತದೆ ಅನ್ನೋದನ್ನ ಭಟ್ಟರು ಮಜವಾಗಿ ಹೇಳಿದ್ದಾರೆ. ಸಿನಿಮಾದಲ್ಲಿ ಕಥೆಗೆ ಪೂರಕವಾಗಿರುವ ಈ ಹಾಡು, ಈಗಿನ ಎಕ್ಸಾಂ ಟೈಮಿಗೂ ಅನ್ವಯಿಸುತ್ತದೆ’ ಎನ್ನುವುದು ನಟ ಗಣೇಶ್‌ ಮಾತು.

“ಸೂರಜ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಎಂ. ರಮೇಶ್‌ ರೆಡ್ಡಿ ನಿರ್ಮಿಸುತ್ತಿರುವ “ಗಾಳಿಪಟ-2′ ಚಿತ್ರದಲ್ಲಿ ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next