Advertisement

ಆರ್ಥಿಕ ಅಪರಾಧಿಗಳ ಬಗ್ಗು ಬಡಿಯಲು ಮೋದಿ ನವ ಸೂತ್ರ

06:00 AM Dec 02, 2018 | |

ಬ್ಯುನಸ್‌ ಐರಿಸ್‌: ಆರ್ಥಿಕ ಅಪರಾಧಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ನೆರವಾಗುವ 9 ಅಂಶಗಳ ಕಾರ್ಯ ಸೂಚಿಯೊಂದನ್ನು ಪ್ರಧಾನಿ ಮೋದಿ ಅವರು ಜಿ-20 ಸದಸ್ಯ ರಾಷ್ಟ್ರಗಳ ಮುಂದಿಟ್ಟಿದ್ದಾರೆ. “ಅಂತಾರಾಷ್ಟ್ರೀಯ ವ್ಯಾಪಾರ, ಅಂತಾರಾಷ್ಟ್ರೀಯ ಆರ್ಥಿಕ ಮತ್ತು ತೆರಿಗೆ ವ್ಯವಸ್ಥೆ’ ವಿಚಾರದ ಮೇಲೆ ಜಿ-20 ಒಕ್ಕೂಟದ ಸದಸ್ಯ ರಾಷ್ಟ್ರಗಳಿಗಾಗಿ ಶುಕ್ರವಾರ ಆಯೋಜಿಸಲಾಗಿದ್ದ 2ನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, “”ತಮ್ಮಲ್ಲಿ ಆಶ್ರಯ ಪಡೆದಿರುವ ಆರ್ಥಿಕ ಅಪರಾಧಿಗಳನ್ನು ಮೂಲ ದೇಶಕ್ಕೆ ಆದಷ್ಟು ಬೇಗನೆ ಹಸ್ತಾಂತರಿಸಿ ಸಂಬಂಧಪಟ್ಟ ದೇಶದ ಪ್ರಗತಿಗೆ ಕೈಜೋಡಿಸ ಬೇಕು” ಎಂದು ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

Advertisement

ಭಾರತ, ರಷ್ಯಾ, ಚೀನ ತ್ರಿಪಕ್ಷೀಯ ಸಭೆ
ಶೃಂಗಸಭೆಗಾಗಿ ಸೇರಿರುವ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ಶನಿವಾರ ತ್ರಿಪಕ್ಷೀಯ ಸಭೆ ನಡೆಯಿತು. ಈ ಮೂರೂ ದೇಶಗಳ ನಡುವೆ 12 ವರ್ಷಗಳ ಅನಂತರ ನಡೆದ ತ್ರಿಪಕ್ಷೀಯ ಸಭೆಯಿದು. ಶನಿವಾರದ ಸಭೆಯಲ್ಲಿ ಮೂವರೂ ನಾಯಕರು, ಮುಕ್ತ ವಿಶ್ವ ಆರ್ಥಿಕತೆಯ ಈ ಕಾಲಘಟ್ಟದಲ್ಲಿ  ತಮ್ಮ ನಡುವಿನ ವಾಣಿಜ್ಯ ಚಟುವಟಿಕೆಗಳನ್ನು ಪರಸ್ಪರ ಸಹಕಾರದೊಂದಿಗೆ ಮುಂದುವರಿಸಿಕೊಂಡು ಹೋದಲ್ಲಿ ಆಗುವ ಲಾಭಗಳ ಬಗ್ಗೆ ಚರ್ಚಿಸಿದರು. ಮಾತುಕತೆ ಬಗ್ಗೆ ವಿವರಿಸಿದ ಪ್ರಧಾನಿ ಮೋದಿ, “ರಿಕ್‌ (ರಷ್ಯಾ-ಇಂಡಿಯಾ-ಚೀನ) ದೇಶಗಳ ನಡುವಿನ ಚರ್ಚೆ ಮಹತ್ವದ್ದಾಗಿದ್ದು, ಮೂರೂ ರಾಷ್ಟ್ರಗಳ ನಡುವಿನ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಲು, ವಿಶ್ವಶಾಂತಿಗೆ ಗಣನೀಯ ಕೊಡುಗೆ ನೀಡಲು ತೀರ್ಮಾನಿಸಲಾಯಿತು’ ಎಂದರು.

ಮೋದಿಗೆ ಅಪು ಹೋಲಿಸಿದ ವಾಹಿನಿಗೆ ಛೀಮಾರಿ
ಶೃಂಗಸಭೆಗಾಗಿ ಗುರುವಾರ ಬ್ಯುನಸ್‌ ಐರಿಸ್‌ಗೆ ಪ್ರಧಾನಿ ಮೋದಿ ಆಗಮಿಸಿದ್ದನ್ನು ನೇರಪ್ರಸಾರ ಮಾಡಿದ ಅರ್ಜೆಂಟೀನದ “ಕ್ರೋನಿಕಾ ಟಿವಿ’ ಎಂಬ ವಾಹಿನಿ, ಮೋದಿಯವರನ್ನು ಅಮೆರಿಕದ ಜನಪ್ರಿಯ ಕಾಮಿಕ್‌ ಟಿವಿ ಧಾರಾವಾಹಿಯೊಂದರಲ್ಲಿ ಬರುವ “ಅಪು’ ಎಂಬ ಪಾತ್ರಕ್ಕೆ ಹೋಲಿಸಿ ವಿವಾದಕ್ಕೀಡಾಗಿದೆ. 

ಭಾರತ-ಚೀನ ಸ್ನೇಹ ವೃದ್ಧಿ
ಕಳೆದ ವರ್ಷ, ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಜಿನ್‌ಪಿಂಗ್‌ ನೇತೃತ್ವದಲ್ಲಿ ನಡೆದಿದ್ದ ಉಭಯ ದೇಶಗಳ ನಡುವಿನ “ವುಹಾನ್‌ ಶಾಂತಿ ಒಪ್ಪಂದ’ದ ತರುವಾಯ ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದು ಇಬ್ಬರೂ ನಾಯಕರು ತಿಳಿಸಿದ್ದಾರೆ. ಜತೆಗೆ ಒಪ್ಪಂದದ ಅಂಶಗಳ ಜಾರಿಯನ್ನು ಉಭಯ ರಾಷ್ಟ್ರಗಳು ಈಗಾಗಲೇ ಎರಡು ಬಾರಿ ಪರಾಮರ್ಶಿಸಿವೆ. ಇಂಥ ನಡೆಗಳು ಎರಡೂ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದಿದ್ದಾರೆ. ಅಂದಹಾಗೆ ಮೋದಿ, ಜಿನ್‌ಪಿಂಗ್‌ ಪರಸ್ಪರ ಭೇಟಿಯಾಗುತ್ತಿರುವುದು ಈ ವರ್ಷದಲ್ಲಿ ಇದು ನಾಲ್ಕನೇ ಬಾರಿ.

ಏನಿವು 9 ಅಂಶ?
1ಆರ್ಥಿಕ ಅಪರಾಧಿಗಳನ್ನು ಪತ್ತೆ ಹಚ್ಚಲು, ಮೂಲ ದೇಶಗಳಿಗೆ ಹಸ್ತಾಂತರಿಸಲು ಜಿ-20 ದೇಶಗಳ ನಡುವೆ ಒಂದು ಶಿಸ್ತುಬದ್ಧ ಸಿದ್ಧ ವ್ಯವಸ್ಥೆ ಜಾರಿಯಾಗಬೇಕು.
2    ಇನ್ನೊಂದು ದೇಶದ ಅಪರಾಧಿಗಳಿಗೆ ತಮ್ಮ ದೇಶದೊಳಕ್ಕೆ ಪ್ರವೇಶ, ಆಶ್ರಯ ನೀಡುವುದನ್ನು ಸದಸ್ಯ ರಾಷ್ಟ್ರಗಳು ನಿಲ್ಲಿಸಬೇಕು.
3    ಆರ್ಥಿಕ ಅಪರಾಧಿಗಳ ವಿರುದ್ಧ ಕೈಗೊಳ್ಳುವ ಕಾನೂನು ಕ್ರಮಗಳಿಗೆ ಸಹಕಾರ ನೀಡಬೇಕು.
4    ವಿಶ್ವಸಂಸ್ಥೆಯ ಭ್ರಷ್ಟಾಚಾರ ನಿಗ್ರಹ ಸಮ್ಮೇಳನ (ಯುಎನ್‌ಸಿಎಸಿ), ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಯೋಜಿತ ಅಪರಾಧಗಳ ನಿಗ್ರಹ ಸಮ್ಮೇಳನ (ಯುಎನ್‌ಒಟಿಸಿ)ಗಳಲ್ಲಿ ರೂಪಿಸಿರುವ ಕಾರ್ಯಸೂಚಿಗಳು ಸಂಪೂರ್ಣವಾಗಿ, ಕರಾರುವಾಕ್ಕಾಗಿ ಜಾರಿಗೊಳ್ಳಬೇಕು.
5    ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆರ್ಥಿಕ ಅವ್ಯವಹಾರಗಳ ನಿಗ್ರಹ ದಳ(ಎಫ್ಎಟಿಎಫ್) ವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು.
6    ಆರ್ಥಿಕ ಅಪರಾಧಿಗಳಿಗೆ ಸರಿಯಾದ ವ್ಯಾಖ್ಯಾನವನ್ನು ಎಫ್ಎಟಿಎಫ್ ನೀಡಬೇಕು.
7    ಆರ್ಥಿಕ ಅಪರಾಧಿಗಳು ಅಡಗಿರುವ ತಾಣಗಳನ್ನು ಪತ್ತೆಹಚ್ಚಲು, ಅವರನ್ನು ಅವರ ಮೂಲ ರಾಷ್ಟ್ರಗಳಿಗೆ ಹಸ್ತಾಂತರಿಸಲು ಹಾಗೂ ಕಾನೂನು ವ್ಯಾಪ್ತಿಯೊಳಗೆ ವಿಚಾರಣೆಗೊಳಪಡಿಸುವಂಥ ಒಂದು ಹೊಸ ವ್ಯವಸ್ಥೆಯನ್ನು ಎಫ್ಎಟಿಎಫ್ ರೂಪಿಸಬೇಕು.
8    ಅಪರಾಧಿಗಳನ್ನು ಹಿಡಿದು ತರುವ ವಿಚಾರಗಳಲ್ಲಿ ದೇಶವೊಂದು ಪಡೆಯುವ ಅನುಭವಗಳು, ಮಾಹಿತಿ ರೂಪದಲ್ಲಿ ಇತರ ಜಿ-20 ಸದಸ್ಯ ರಾಷ್ಟ್ರಗಳ ನಡುವೆ ಹಂಚಿಕೆಯಾಗಬೇಕು. ಇದಕ್ಕಾಗಿ ಒಂದು ಸಾಮಾನ್ಯ ವೇದಿಕೆ ಸೃಷ್ಟಿಯಾಗಬೇಕು.
9    ಆರ್ಥಿಕ ಅಪರಾಧಿಗಳ ಆಸ್ತಿ, ವ್ಯವಹಾರಗಳನ್ನು ಪತ್ತೆ ಹಚ್ಚಿ ಮೂಲ ರಾಷ್ಟ್ರಕ್ಕೆ ನೀಡುವಲ್ಲಿ ದೊಡ್ಡ ಮಟ್ಟದ ಸಹಾಯ ನೀಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next