Advertisement

ಕನ್ನಡಕ್ಕಾಗಿಯೇ ಜೀವಿಸಿದ ಜಿ. ವೆಂಕಟಸುಬ್ಬಯ್ಯ

12:51 AM Apr 20, 2021 | Team Udayavani |

ವಿದ್ಯೆ, ವಿದ್ವತ್ತು, ವಿನಯ, ವಿನೋದಪ್ರಜ್ಞೆ, ಸೃಜನಶೀಲ ಪ್ರತಿಭೆ, ಕನ್ನಡದ ಪ್ರೀತಿ ಮತ್ತು ಮನುಷ್ಯ ಪ್ರೀತಿ- ಇವೆಲ್ಲವನ್ನೂ ಮೈಯ ಕಣಕಣದಲ್ಲೂ ತುಂಬಿಕೊಂಡಿದ್ದವರು ಪ್ರೊ| ಜಿ. ವೆಂಕಟಸುಬ್ಬಯ್ಯ. ಜಿ.ವಿ. ಎಂಬ ಎರಡಕ್ಷರದಿಂದಲೇ ಖ್ಯಾತರಾಗಿದ್ದ ಅವರು, ಈ ಶತಮಾನ ಕಂಡ ಶ್ರೇಷ್ಠ ವಿದ್ವಾಂಸರು. ಕನ್ನಡದಲ್ಲಿ ಯಾವುದಾದರೂ ಒಂದು ಪದಕ್ಕೆ ಅರ್ಥ ಹೊಳೆಯಲಿಲ್ಲ ಅಂದರೆ, ಪಾಮರರ ಮಾತು ಬಿಡಿ, ಪಂಡಿತರು ಕೂಡ ಎಡತಾಕುತ್ತಿದ್ದುದು ಜಿ.ವಿ. ಅವರನ್ನೇ.

Advertisement

ಶ್ರೀರಂಗಪಟ್ಟಣದ ಬಳಿಯ ಗಂಜಾಂ, ಜಿ.ವಿ ಯವರ ಹುಟ್ಟೂರು. ತಂದೆ ತಿಮ್ಮಣ್ಣಯ್ಯ, ಮೈಸೂರಿನ ಅರಮನೆ ವಿದ್ವಾಂಸರು. ಕನ್ನಡ- ಸಂಸ್ಕೃತದಲ್ಲಿ ಅವರಿಗೆ ಅಪಾರ ತಿಳಿವಳಿಕೆಯಿತ್ತು. ಪುರಾಣಗಳನ್ನು, ಅದರೊಂದಿಗೇ ಬೆರೆತುಹೋಗಿದ್ದ ಉಪಕಥೆಗಳನ್ನು ತಿಳಿಯುವುದರಲ್ಲಿ ಆಸಕ್ತಿಯಿತ್ತು. ಈ ಗುಣಗಳು ತಂದೆಯ ಮೂಲಕ ಜಿ.ವಿ. ಅವರಿಗೂ ಬಂದವು. ಮುಂದೆ ಕನ್ನಡದಲ್ಲಿ ಎಂ. ಎ ಮುಗಿಸಿದಾಗ ಜಿ. ವಿ. ಅವರಿಗೆ ಮೌಖೀಕ ಪರೀಕ್ಷೆ ಮಾಡಿದ ಬಿ. ಎಂ. ಶ್ರೀ- “ನಮಗೆ ವಯಸ್ಸಾಯಿತು. ಕನ್ನಡವನ್ನು ನಿಮ್ಮ ಕೈಯ್ಯಲ್ಲಿ ಇಟ್ಟಿದ್ದೇವೆ. ಅದನ್ನು ಕಾಪಾಡಿ…’ ಎಂದರಂತೆ. ಈ ಮಾತು, ಜಿ. ವಿ. ಅವರ ಮೇಲೆ ಅಗಾಧ ಪರಿಣಾಮ ಬೀರಿತು. ಕನ್ನಡವನ್ನು ಉಳಿಸಿ, ಬೆಳೆಸುವ ಕಾಯಕವೇ ತಮ್ಮ ಬದುಕಿನ ಮುಖ್ಯ ಗುರಿ ಎಂದು ಅವತ್ತೇ ನಿಶ್ಚಯಿಸಿದರು ಜಿ.ವಿ.

ಕನ್ನಡದ ಪದಗಳಿಗೆ ಅರ್ಥ ಹುಡುಕುವುದು, ಪದಮೂಲ ಕಂಡುಹಿಡಿಯುವುದು, ನಿಘಂಟು ರಚನೆಯ ಕೆಲಸದಲ್ಲಿ ಮೈಮರೆಯುವುದನ್ನು ದಶಕಗಳ ಕಾಲ ಮಾಡಿದವರು ಜಿ.ವಿ. ಒಂದು ರೀತಿಯಲ್ಲಿ ಇದು ಯಾರೂ ಗುರುತಿಸದ ಕೆಲಸ. ಅದಕ್ಕಾಗಿ ಜಿ.ವಿ ಬೇಸರಿಸಲಿಲ್ಲ. ಕನ್ನಡದ ಕೆಲಸವನ್ನು ನಾನು ಆತ್ಮ ತೃಪ್ತಿಗೆ ಮತ್ತು ಮನಸ್ಸಂತೋಷಕ್ಕೆ ಮಾಡ್ತೇನೆ. ಅದನ್ನು ಯಾರಾದರೂ ಗುರುತಿಸಲಿ, ಹೊಗಳಲಿ ಎಂದು ಯಾಕೆ ಬಯಸಬೇಕು? ಮನೆಯ ಕೆಲಸ ಮಾಡುವಾಗ ಯಾರಾದರೂ ನಮ್ಮನ್ನು ಮೆಚ್ಚಲಿ ಅಂತ ಮಾಡ್ತೇವಾ ? ಇಲ್ಲ ತಾನೇ, ಕನ್ನಡದ ಕೆಲಸವೂ ಹಾಗೆಯೇ ಅನ್ನುತ್ತಿದ್ದರು.

1944ರಿಂದಲೂ ಶಬ್ದ ಸಂಗ್ರಹ, ವಿಶ್ಲೇಷಣೆ ಮಾಡುತ್ತಾ ಬಂದವರು ಜಿ.ವಿ. ತತ#ಲವಾಗಿ, ನಿಘಂಟಿನಲ್ಲಿ ಪದಸಂಗ್ರಹದ ಸಂಖ್ಯೆ ಹೆಚ್ಚಿತು.ಮಾತ್ರವಲ್ಲ, ಎರವಲು ಪದಕೋಶ ಎಂಬ ಮತ್ತೂಂದು ಗ್ರಂಥವೂ ಸಿಕ್ಕಿತು. ಶಬ್ದ ಸಂಗ್ರಹವೆಂದರೆ ರೂಪಾಯಿ ಜೋಡಿಸಿದಂತೆ ಅಲ್ಲ. ಒಂದು ಶಬ್ದ ಎಲ್ಲಿ ಹುಟ್ಟಿತು? ಏಕೆ ಹುಟ್ಟಿತು? ಅದರ ಮೊದಲ ಪ್ರಯೋಗ ಎಲ್ಲಿ ಯಾವಾಗ ಆಯಿತು? ಆ ಪದ ಕಾಲಕಾಲಕ್ಕೆ ಹೇಗೆಲ್ಲ ಬದಲಾಯಿತು? ಯಾವ ಶಬ್ದ ಕನ್ನಡಕ್ಕೆ ಎಲ್ಲಿಂದ ಬಂದಿದೆ, ಅದರ ಮೂಲರೂಪವೇನು? ಯಾವ ಯಾವ ಕಾವ್ಯಗಳಲ್ಲಿ, ಗ್ರಂಥದಲ್ಲಿ ಆ ಪದ ಬಳಕೆಯಾಗಿದೆ? ಎಂಬುದನ್ನೆಲ್ಲ ತಿಳಿಯಬೇಕು. ಹೀಗೆ ತಿಳಿಯಬೇಕೆಂದರೆ ಅಪಾರ ತಾಳ್ಮೆ ಬೇಕು. ಮಾತ್ರವಲ್ಲ, ಕನ್ನಡದ ಜತೆಗೆ ಇಂಗ್ಲಿಷ್‌, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳ, ಅರಬಿ, ಪಾರ್ಶಿ, ಸಿಂಧಿ ಭಾಷೆಗಳಲ್ಲಿನ ಅರ್ಥವಿವರಣೆ ಯನ್ನೂ ತಡಕಾಡಬೇಕು. ಈ ಕೆಲಸವನ್ನು ಒಂದು ತಪಸ್ಸಿನಂತೆ ನಿರ್ವಹಿಸಿಕೊಂಡು ಬಂದವರು ಜಿ.ವಿ. ಈ ಕಾಯಕದ ಜತೆ ವಿಮರ್ಶೆ, ಚರಿತ್ರೆ, ಜೀವನ ಚರಿತ್ರೆ, ವ್ಯಕ್ತಿ ಚಿತ್ರ, ಮಕ್ಕಳ ಸಾಹಿತ್ಯ, ಅನುವಾದ, ಸಂಶೋಧನೆ ಪ್ರಕಾರಗಳಲ್ಲಿ ಗ್ರಂಥಗಳನ್ನು ಬರೆದು ಪ್ರಕಟಿಸಿದರು.

ಆ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತ ಗೊಳಿಸಿದರು. ಮಾಸದ ಮುಗುಳ್ನಗೆ, ಮಗುವಿನ ಮುಗ್ಧತೆ ಮತ್ತು ಯುವಕನ ಕುತೂಹಲದೊಂದಿಗೇ ಬದುಕಿದವರು ಜಿ.ವಿ. ನೂರು ವರ್ಷ ದಾಟಿದ ಅನಂತರವೂ ಅವರು 20ರ ಹುಡುಗನ ಲವಲವಿಕೆಯನ್ನು ಉಳಿಸಿಕೊಂಡಿದ್ದರು. ಕನ್ನಡದ ಕೆಲಸವನ್ನು ಯಾರೇ ಮಾಡಿದರೂ ಅವರ ಬೆನ್ನು ತಟ್ಟುವುದು ಅವರ ಇಷ್ಟದ ಕೆಲಸವಾಗಿತ್ತು. “ಒಂದು ಕೃತಿಯ ಬಗ್ಗೆ ಅಭಿಪ್ರಾಯ ತಿಳಿಸುವುದು, ಒಂದು ಕೃತಿಯ ಬಗ್ಗೆ ನಾಲ್ಕು ಮಾತು ಬರೆಯುವುದು ಕೂಡ ಕನ್ನಡವನ್ನು ಕಟ್ಟುವ ಕೆಲಸವೇ. ಅದನ್ನು ನಾನು ಶ್ರದ್ಧೆಯಿಂದ ಮಾಡುತ್ತೇನೆ’ ಅನ್ನುತ್ತಿದ್ದರು.

Advertisement

ನಿಮ್ಮ ದೀರ್ಘಾಯುಷ್ಯದ ಗುಟ್ಟೇನು? ಎಂಬುದು ಅವರಿಗೆ ಮೇಲಿಂದ ಮೇಲೆ ಎದುರಾಗುತ್ತಿದ್ದ ಪ್ರಶ್ನೆ. ಆಗೆಲ್ಲ ಜಿ.ವಿ. ಒಂದು ತುಂಟ ನಗೆಯೊಂದಿಗೆ ಹೀಗೆನ್ನುತ್ತಿದ್ದರು: “ನನ್ನ ದೀರ್ಘಾಯುಷ್ಯದ ಗುಟ್ಟು ಏನು ಎಂಬುದು ನನಗೆ ಗೊತ್ತಿಲ್ಲ. ಆದರೆ ನನ್ನ ಆರೋಗ್ಯದ ಗುಟ್ಟು ಮಾತ್ರ ಗೊತ್ತು. ಅದೇನೆಂದರೆ- ನಾನು ಯಾವುದೇ ವಿಚಾರಕ್ಕೆ, ಯಾರ ಬಗ್ಗೆಯೇ ಆಗಲಿ ಹೊಟ್ಟೆಕಿಚ್ಚು ಪಡುವ ಸ್ವಭಾವ ಹೊಂದಿಲ್ಲ. ಆದುದರಿಂದ ಸದಾ ಆನಂದವಾಗಿ ಇರುತ್ತೇನೆ. ಈ ಕಾರಣದಿಂದಲೇ ಇದುವರೆಗೂ ಸಂತೋಷದಿಂದ ಬದುಕಲು ಸಾಧ್ಯವಾಗಿದೆ…’

ಬೌತಿಕವಾಗಿ ಜಿ.ವಿ. ಅವರು ನಮ್ಮೊಂದಿಗಿಲ್ಲ ನಿಜ. ಆದರೆ ನಿಘಂಟು ಬ್ರಹ್ಮ, ಕನ್ನಡದ ಕಿಟ್ಟೆಲ್‌- ಎಂಬ ಪದಗಳು ಕಿವಿಗೆ ಬಿದ್ದಾಗಲೆಲ್ಲ ಜಿ.ವಿ. ಅವರೂ ಅವರ ಮಾಸದ ಮುಗುಳ್ನಗೆಯೂ ನೆನಪಾಗುತ್ತಲೇ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next