Advertisement

ತೊಗರಿ ಬೆಳೆಗೆ ಹುಳ-ಕೀಟ, ಫಂಗಸ್‌ ಕಾಟ

10:41 AM Oct 11, 2021 | Team Udayavani |

ಮುದಗಲ್ಲ: ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ಮೋಡ ಮುಸುಕಿನ ವಾತಾವರಣ ಇರುವುದರಿಂದ ತೊಗರಿ ಬೆಳೆಗೆ ಹುಳ-ಕೀಟ ಬಾಧೆ ಶುರುವಾಗಿದ್ದು, ಆತಂಕ ಸೃಷ್ಟಿಸಿದೆ.

Advertisement

ತೊಗರಿ ಬೆಳೆಗೆ ಅತಿ ತೇವಾಂಶ ಆಗಿ ಬರಲ್ಲ, ಈ ಭಾಗದಲ್ಲಿ ಆಗಾಗ ಜಿಟಿ ಜಿಟಿ ಮಳೆ ಸುರಿದಾಗಿನಿಂದ ವಾತಾವರಣದಲ್ಲಿ ತಂಪೇರಿದೆ. ಮಣ್ಣಿನಿಂದ ಬರುವ ಫಂಗಸ್‌ ರೋಗ ತೊಗರಿ ಗಿಡದ ಕಾಂಡಗಳಿಗೆ ನೀರು ಹೋಗದಂತೆ ತಡೆಯುತ್ತದೆ. ಇದರಿಂದ ಗಿಡಗಳು ಒಣಗುತ್ತವೆ. ಕೃಷಿ ಇಲಾಖೆಯಿಂದ ಫಂಗಸ್‌ ರೋಗಕ್ಕೆ ಹಾಳಾದ ತೊಗರಿ ಬೆಳೆ ಸರ್ವೇ ಈಗಾಗಲೇ ನಡೆಯುತ್ತಿದೆ.

­ತೊಗರಿ ನಾಶಪಡಿಸಿದ ರೈತರು

ಗುಡಿಹಾಳ ಗ್ರಾಮದಲ್ಲಿ ಸುಮಾರು 20 ಎಕರೆ ತೊಗರಿ ಸಿಡಿರೋಗಕ್ಕೆ ತುತ್ತಾದ ಪರಿಣಾಮ ಪಂಪಾಪತಿ ಎಂಬುವರು ತನ್ನ ಜಮೀನಿನಲ್ಲಿನ ತೊಗರಿಯನ್ನು ಟ್ರ್ಯಾಕ್ಟರ್‌ ಮೂಲಕ ನಾಶಪಡಿಸಿದ್ದಾರೆ. ಹಿರೇಲಕ್ಕಿಹಾಳ ಗ್ರಾಮದಲ್ಲಿ 10 ಎಕರೆ ತೊಗರಿಗೆ ಸಿಡಿರೋಗ, ಆಶಿಹಾಳ ಗ್ರಾಮದಲ್ಲಿ 8 ಎಕರೆ, ಮುದಗಲ್ಲ ಪಟ್ಟಣದಲ್ಲಿ 25 ಎಕರೆ ತೊಗರಿ ಫಂಗಸ್‌ ರೋಗಕ್ಕೆ ತುತ್ತಾಗಿವೆ ಎಂದು ಕೃಷಿ ಅಧಿಕಾರಿಗಳೇ ತಿಳಿಸಿದ್ದಾರೆ.

ಇದನ್ನೂ ಓದಿ: ಕಂಚಿನಡ್ಕಪದವು ತ್ಯಾಜ್ಯ ಘಟಕ ವಿವಾದ: ಶಾಶ್ವತ ಪರಿಹಾರ ಅಗತ್ಯ

Advertisement

­ವಾಡಿಕೆ ಮಳೆ

2021-22ರ ಜನವರಿಯಿಂದ ಅ.7ರವರೆಗೆ ವಾಡಿಕೆ ಮಳೆ 518 ಮಿ.ಮೀ. ಇದ್ದು, 536 ಮಿ.ಮೀ. ಮಳೆಯಾಗಿದೆ. ಈ ಮಳೆ ತೊಗರಿಗೆ ಫಂಗಸ್‌ ಹರಡಲು ಕಾರಣವಾಗಿದೆ. ಆರಂಭದಲ್ಲಿ ಚೆನ್ನಾಗಿಯೇ ಬಂದಿದ್ದ ತೊಗರಿಯ ಎಲೆ, ಗಿಡಗಳು ದಷ್ಟಪುಷ್ಟವಾಗಿ ಕಾಣುತ್ತಿವೆ. ಹೂವು-ಕಾಯಿ ಇರುವಾಗಲೇ ತೇವಾಂಶ ಹೆಚ್ಚಾಗಿದ್ದರಿಂದ ಹೂವು-ಮೊಗ್ಗು ತನ್ನಿಂದ ತಾನೇ ಕತ್ತರಿಸಿ ಬೀಳುವುದು ಒಂದಡೆಯಾದರೆ, ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಗಿಡಗಳು ಒಣಗುತ್ತಿರುವ ಚಿಂತೆ ತೊಗರಿ ಬೆಳೆಗಾರರನ್ನು ಕಾಡುತ್ತಿದೆ.

ವಿಶೇಷವಾಗಿ ನಾಗರಹಾಳ, ಭೋಗಾಪೂರ, ಬಯ್ನಾಪೂರ, ಖೈರವಾಡಗಿ, ನಾಗಲಾಪೂರ, ಹಡಗಲಿ, ಛತ್ತರ, ಮರಳಿ, ಉಳಿಮೇಶ್ವರ, ಕನ್ನಾಳ, ಪಿಕಳಿಹಾಳ, ಆಮದಿಹಾಳ, ಮಟ್ಟೂರ, ಕಿಲಾರಹಟ್ಟಿ, ಜಂತಾಪೂರ, ನಾಗರಹಾಳ, ಆಶಿಹಾಳ ಸೇರಿದಂತೆ ಹಲವೆಡೆ ಬೆಳೆದ ತೊಗರಿ ಕಾಂಡದಲ್ಲಿ ಸಣ್ಣ ಸಣ್ಣ ಕೀಟಗಳಿವೆ. ಹುಳು ಬಾಧೆ ಮತ್ತು ರೋಗ ಹತೋಟಿಗೆ ಯಾವುದೇ ಔಷಧ ಅಂಗಡಿಯಿಂದ ಖರೀದಿಸಿದ ಕ್ರಿಮಿ ಮತ್ತು ಕೀಟನಾಶಕ ಕೆಲಸ ಮಾಡುತ್ತಿಲ್ಲ ಎಂದು ತೊಗರಿ ಬೆಳೆಗಾರ ಪಂಪಾಪತಿ ಪತ್ರಿಕೆಗೆ ತಿಳಿಸಿದ್ದಾರೆ. ತೊಗರಿ ಬೆಳೆ ಕೀಟಬಾಧೆ ಹತೋಟಿಗೆ ಕೃಷಿ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ರೈತರಿಗೆ ಸಲಹೆ ನೀಡಬೇಕೆಂದು ಮಸ್ಕಿ ಭಾಗದ ದೇಸಾಯಿ ಭೋಗಾಪೂರ ಮತ್ತು ಯರದೊಡ್ಡಿ ಗ್ರಾಮದ ರೈತರಾದ ನಾಗಪ್ಪ, ಬಸವರಾಜ, ದುರುಗಪ್ಪ ಆಗ್ರಹಿಸಿದ್ದಾರೆ.

ಹತೋಟಿಗೆ ಕ್ರಮಗಳು

ಬಿತ್ತುವುದಕ್ಕಿಂತ ಮುಂಚೆ 4 ಗ್ರಾಂ. ಟ್ರೈಕೋಡರ್ಮ್ ಟ್ರೈಕೋಡರ್ಮ್ದಿಂದ ಬೀಜೋಪಚಾರ ಮಾಡುವುದರ ಮುಖಾಂತರ ಫಂಗಸ್‌ ಮುಖಾಂತರ ಹರಡುವುದು ಸಿಡಿ ರೋಗ ಅಥವಾ ಸೊರಗು ರೋಗವನ್ನು ಹತೋಟಿಗೆ ತರಬಹುದು. ರೋಗ ನಿರೋಧಕ ತಳಿಗಳು ಆದಂತಹ ಜಿಆರ್‌ಜಿ 811, ಬಿತ್ತನೆ ಮಾಡುವುದರ ಮುಖಾಂತರ ಈ ರೋಗ ತಡೆಯಬಹುದು.

ಥಿಯೋಪಿನೈಟ್‌ ಮಿಥೈಲ್‌ 1 ಗ್ರಾಂ.ಲೀಟರ್, ವೈಟ್‌ ವ್ಯಾಕ್ಸ್‌ ಪವರ್‌ 2ಗ್ರಾಂ.ಲೀಟರ್‌, ಕಾಬೆಂರ್ಡೇಜಿಂ 2ಗ್ರಾಂ ಪರ್‌ ಲೀಟರ್‌ ಬಳಸಿ ಸಿಂಪಡಿಸಿದರೆ ಫಂಗಸ್‌ ನಿಯಂತ್ರಣದಲ್ಲಿ ಬರುತ್ತದೆ.

ಆಕಾಶ ದಾನಿ,ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ಮುದಗಲ್ಲ

ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next