ಹೂವಿನಹಡಗಲಿ: ಇಡೀ ಜಗತನ್ನೆ ಕಾಡುತ್ತಿರುವ ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವನವನ್ನು ಪಣಕ್ಕಿಟ್ಟು ಆರೋಗ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಕ್ಷೇತ್ರದ ಶಾಸಕ ಪಿ.ಟಿ. ಪರಮೆಶ್ವರನಾಯ್ಕ ಹೇಳಿದರು.
ಪಟ್ಟಣದ ತಾಪಂ ರಾಜೀವ್ ಗಾಂಧಿ ಸಭಾಭವನದಲ್ಲಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸಹಕಾರಿ ಸಂಘದಿಂದ (ಬಿಡಿಸಿಸಿಬ್ಯಾಂಕ್) 4.35 ಲಕ್ಷ ರೂ. ಸಹಾಯ ಧನ ವಿತರಣೆ ಮಾಡಿ ಮಾತನಾಡಿದರು. ಆಶಾ ಕಾರ್ಯಕರ್ತೆಯರಿಗೆ ಕೊಡುತ್ತಿರುವ ಸಹಾಯ ಧನ ಆತ್ಯಲ್ಪವಾಗಿದ್ದು ಸರ್ಕಾರದಲ್ಲಿ ಈ ಕುರಿತು ಗಮನ ಸೆಳೆಯುವುದಾಗಿ ಸಹ ತಿಳಿಸಿದರು. ಮೊನ್ನೆ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ನೀಡಿರುವ ಪ್ರೋತ್ಸಾಹಧನ ಬದಲಾಗಿ ಅವರಿಗೆ ಶಾಶ್ವತವಾಗಿ ವೇತನ ಹೆಚ್ಚಳ ಮಾಡುವ ಕುರಿತು ಸರ್ಕಾರದ ಗಮನ ಸೆಳೆಯುವೆ ಎಂದರು.
ಇಂದು ಸಹಕಾರಿ ಸಂಘಗಳು ಸರ್ಕಾರಕ್ಕೆ ಸಮಾನವಾಗಿ ಅವರಿಗೆ 3000ರೂ. ಪ್ರೋತ್ಸಾಹ ಧನವನ್ನು ನೀಡಲಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸಹಕಾರಿ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೊಳ್ ಚಿದಾನಂದ್ ಮಾತನಾಡಿ, ನಮ್ಮ ಕೇಂದ್ರ ಬ್ಯಾಂಕಿನಿಂದ ಒಟ್ಟು 25 ಲಕ್ಷ ರೂಗಳನ್ನು ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿದ್ದು ಆದರಲ್ಲಿ ನಮ್ಮ ಕ್ಷೇತ್ರದ ಶಾಸಕರ ಮಾರ್ಗದರ್ಶನದಂತೆ ನಮ್ಮ ತಾಲೂಕಿನ ಪ್ರತಿ ಆಶಾ ಕಾರ್ಯಕರ್ತೆಯರಿಗೂ 3000 ರೂಗಳ ಸಹಾಯ ಧನ ನೀಡಲಾಗಿದೆ ಎಂದರು. ಅಶಾ ಕಾರ್ಯಕರ್ತೆಯರು ಯಾವುದೇ ಕಾರಣಕ್ಕೂ ಎದೆಗುಂದದೆ ನೀವುಗಳು ಕೆಲಸ ಮಾಡಿ ನಿಮ್ಮ ಜೊತೆ ನಾವಿರುತ್ತೇವೆ ಎಂದು ನೈತಿಕ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಕೊವಿಡ್ ಟಾಸ್ಕ್ಫೋರ್ಸ್ ಸಮಿತಿ ಆಧ್ಯಕ್ಷ ವಾರದ ಗೌಸುಮೊಹದ್ದಿನ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯುಎಚ್. ಸೋಮಶೇಖರ್, ನೋಡೆಲ್ ಅಧಿಕಾರಿ ಡಾ| ಜೆ.ಡಿ. ಉಮೇಶ್, ಬಿಡಿಸಿಸಿ ಬ್ಯಾಂಕ್ನ ಎಜಿಎಂ ಕೊಟ್ರೇಶ್, ವ್ಯವಸ್ಥಾಪಕ ಎಸ್. ಬೆನ್ನೂರು ಹಾಜರಿದ್ದರು.