Advertisement

ಆನೆಗೊಂದಿ ಉತ್ಸವ-24ಕ್ಕೆ ಭರದ ಸಿದ್ಧತೆ ಉತ್ಸವಕ್ಕೆ ಹಂಸಲೇಖ, ಧ್ರುವ ಸರ್ಜಾ ಮೆರುಗು

03:53 PM Mar 06, 2024 | Team Udayavani |

ಉದಯವಾಣಿ ಸಮಾಚಾರ
ಗಂಗಾವತಿ: ಕನ್ನಡ ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ನೇತೃತ್ವದಲ್ಲಿ ತಾಲೂಕಿನ ಆನೆಗೊಂದಿಯಲ್ಲಿ ಮಾ.11 ಮತ್ತು 12 ರಂದು ಆಯೋಜಿಸಿರುವ ಆನೆಗೊಂದಿ ಉತ್ಸವ-2024ಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಆನೆಗೊಂದಿ ಉತ್ಸವದ ವೇದಿಕೆ ನಿರ್ಮಾಣ ಹಾಗೂ ಲಾಂಛನ(ಲೋಗೋ) ರಚನೆಯ ಜವಾಬ್ದಾರಿಯನ್ನು ಬೆಂಗಳೂರಿನ ಕಲಾ ವಿನ್ಯಾಸಕರ ತಂಡಕ್ಕೆ ವಹಿಸಲಾಗಿದೆ.

Advertisement

ಜಿಲ್ಲಾಡಳಿತ ಸೂಚನೆಯಂತೆ ಇಡೀ ಕಿಷ್ಕಿಂಧಾ-ಆನೆಗೊಂದಿಯನ್ನೊಳಗೊಂಡ ಸ್ಥಳ ಮಹಿಮೆಯನ್ನು ವೇದಿಕೆ ಹಾಗೂ ಲಾಂಛನದಲ್ಲಿ ತೋರಿಸಲಾಗಿದೆ. ಉತ್ಸವದ ಮುಖ್ಯ ವೇದಿಕೆಯನ್ನು ಈ ಬಾರಿ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಸೀತೆಯ ಅಪಹರಣ ನಂತರ ರಾಮ -ಲಕ್ಷ್ಮಣರು ಪಂಚವಟಿ ಮೂಲಕ ಹೇಮಕೂಟ ದಾಟಿ ಕಿಷ್ಕಿಂಧಾ ಗುಡ್ಡ ಪ್ರದೇಶಕ್ಕೆ ಆಗಮಿಸುವ ಮತ್ತು ಆಂಜನೇಯನನ್ನು ಭೇಟಿಯಾಗಿ ನಂತರ ವಾನರ ರಾಜ ಸುಗ್ರೀವನನ್ನು ಕಂಡು ಕಷ್ಟ ನಿವೇದಿಸಿಕೊಂಡ ದೃಶ್ಯ, ಋಷ್ಯಮುಖ ಪರ್ವತ, ಸ್ಕಂಧ ಪುರಾಣದಂತೆ ಪಾರ್ವತಿಯನ್ನು ಕಳೆದುಕೊಂಡ ಶಿವ ಪಂಪಾ ಸರೋವರಕ್ಕೆ ಆಗಮಿಸಿ ತಪಸ್ಸು ಮಾಡಿದ ದೃಶ್ಯ, ನಂತರ 1336 ರಲ್ಲಿ ವಿದ್ಯಾರಣ್ಯರ ಆಶೀರ್ವಾದ ಸಲಹೆ ಮೇರೆಗೆ ಹಕ್ಕರಾಯ, ಬುಕ್ಕರಾಯರು ಆನೆಗೊಂದಿಯಲ್ಲಿ
ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಪ್ರಸಂಗ, ವಿಜಯನಗರ ಅರಸರ ರಾಜ ಲಾಂಛನ, ಕಿಷ್ಕಿಂಧಾ ಬೆಟ್ಟ ಪ್ರದೇಶದಲ್ಲಿ ಕೋತಿಗಳ ಚಿತ್ರ ಹಾಗೂ ಜಾಂಬುವಂತನ ಫೋಟೋಗಳನ್ನು ಒಳಗೊಂಡಂತೆ ವೇದಿಕೆ ನಿರ್ಮಾಣವಾಗುತ್ತಿದೆ.

ಲಾಂಛನ: ಉತ್ಸವದ ಲಾಂಛನದಲ್ಲಿ ಹನುಮ ಜನಿಸಿದ ಕಿಷ್ಕಿಂಧಾ ಅಂಜನಾದ್ರಿ, ಆನೆಗೊಂದಿ ರಾಜಮನೆತನದ ಗಗನ ಮಹಲ್‌, ವಾಲೀಕಿಲ್ಲಾ ಕೋಟೆ, ಹುಚ್ಚಯ್ಯನಮಠ, ಋಷ್ಯಮುಖ, ಶಿಲಾರೋಹಣದ ಪರ್ವತ ಶ್ರೇಣಿ ಸೇರಿ ಎರಡೂ ಬದಿಯಲ್ಲಿ ಆನೆಯ ಚಿತ್ರಗಳು ಗಮನ ಸೆಳೆಯುತ್ತಿವೆ. ರಂಗಭೂಮಿ, ಸಿನೆಮಾ ಕ್ಷೇತ್ರದಲ್ಲಿ ಕಲಾ ನಿರ್ದೇಶನ ಮಾಡುವ ಬೆಂಗಳೂರಿನ ಸನತಕುಮಾರ, ಉಮೇಶ ಕುಂಟಿ, ಯಲ್ಲಾಪೂರ ಗುರುಪ್ರಸಾದ ಕೊಠಾರಕರ್‌ ಹಾಗೂ ತಂಡದ ಸದಸ್ಯರು ಉತ್ಸವದ ವೇದಿಕೆ ಹಾಗೂ ಲಾಂಛನ ಡಿಸೈನ್‌ ಮಾಡಿದ್ದಾರೆ.

ಸಂಭ್ರಮಕ್ಕೆ ಸಹಕರಿಸಿ : ಸಚಿವ ತಂಗಡಗಿ

ಮಾ.11 ಮತ್ತು ಮಾ.12ರಂದು ನಿಗದಿಪಡಿಸಿದ ಐತಿಹಾಸಿಕ ಆನೆಗೊಂದಿ ಉತ್ಸವದ ಸಿದ್ಧತೆಗೆ ಅ ಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದ್ದು ಸಾರ್ವಜನಿಕರು ಸಹ ಉತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

Advertisement

ಕನಕಗಿರಿ ಉತ್ಸವದ ಸಿದ್ಧತೆ ನಡೆಸಿದ 18 ತಂಡಗಳೇ ಇಲ್ಲಿ ಕೂಡ ಕಾರ್ಯನಿರ್ವಹಿಸಲಿವೆ. ಕನಕಗಿರಿ ಉತ್ಸವವನ್ನು ಯಶಸ್ವಿಗೊಳಿಸಿದಂತೆ ಜನ ಮೆಚ್ಚುವ ಹಾಗೆ ಆನೆಗೊಂದಿ ಉತ್ಸವವನ್ನು ಸಹ ನಡೆಸಲಾಗುವುದು. ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಮಾಧ್ಯಮ ಬಳಗವು ಕನಕಗಿರಿ ಉತ್ಸವಕ್ಕೆ ಸಹಕಾರ ನೀಡಿದ್ದು ಧನ್ಯವಾದ ಎಂದರು.

ಹೆಸರು ನೋಂದಾಯಿಸಲು ಕಲಾವಿದರಿಗೆ ಮನವಿ:
ಜಿಲ್ಲೆಯ ಐತಿಹಾಸಿಕ ಆನೆಗೊಂದಿ ಉತ್ಸವದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಜಿಲ್ಲಾ ವ್ಯಾಪ್ತಿಯ ಆಸಕ್ತ ಕಲಾವಿದರು, ಕಲಾ ತಂಡಗಳು ತಮ್ಮ ಸ್ವ ವಿವರಗಳು, ಪ್ರದರ್ಶನದ ವಿವರದ ದಾಖಲೆಗಳು ಹಾಗೂ ಆಧಾರ್‌ ಕಾರ್ಡನೊಂದಿಗೆ ಮಾ.07ರ ಸಂಜೆ 06 ಗಂಟೆಯೊಳಗೆ ಅರ್ಜಿಗಳನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರ ಕಚೇರಿಗೆ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮಾರಬನಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಡೀ ಭಾರತದ ಇತಿಹಾಸವನ್ನು ವಿಜಯನಗರ ಸಾಮ್ರಾಜ್ಯದ ಮೂಲಕ ನೋಡಲಾಗುತ್ತಿದೆ. ಆನೆಗೊಂದಿ ಹಂಪಿ ಕಲೆ, ಸಾಹಿತ್ಯದ ಹಿರಿಮೆ ಸೊಬಗನ್ನು ಅಡಗಿಸಿಕೊಂಡಿದ್ದು ಮಾ.11, 12ರಂದು ಆನೆಗೊಂದಿ ಉತ್ಸವ ಮೂಲಕ ಮತ್ತೊಮ್ಮೆ ಅನಾವರಣಗೊಳ್ಳಲಿದೆ. ಉತ್ಸವದ ವೇದಿಕೆ ಹಾಗೂ ಲಾಂಛನದ ಕಾರ್ಯವನ್ನು ಬೆಂಗಳೂರಿನ ಕಲಾ ತಂಡದವರು ಮಾಡಿದ್ದು, ಇಡೀ ಆನೆಗೊಂದಿ-ಕಿಷ್ಕಿಂಧಾ ಪ್ರದೇಶವನ್ನು ಪ್ರತಿಬಿಂಬಿಸಲಾಗಿದೆ. ಎರಡು ದಿನಗಳ ಕಾಲ ನಾಡಿನ ಕಲಾ ಸೌಂದರ್ಯ, ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಣ್ಮುಂಬಿಕೊಳ್ಳಬೇಕಿದೆ.
ಗಾಲಿ ಜನಾರ್ದನರೆಡ್ಡಿ, ಶಾಸಕರು, ಗಂಗಾವತಿ.

*ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next