Advertisement

ಆಸ್ಪತ್ರೆಯಿಂದ ಸಿದ್ಧಗಂಗಾ ಶ್ರೀ ಮಠಕ್ಕೆ

10:43 AM May 14, 2017 | Team Udayavani |

ಬೆಂಗಳೂರು/ತುಮಕೂರು: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಾಧೀಶ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರನ್ನು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಿಂದ ಶನಿವಾರ ಬಿಡುಗಡೆ ಮಾಡಲಾಗಿದೆ. ಬಳಿಕ, ಮಧ್ಯಾಹ್ನ 1.30ರ ವೇಳೆಗೆ ಅವರು ಮಠಕ್ಕೆ ಆಗಮಿಸಿದ್ದು, ನೆರೆದಿದ್ದ ಸಾವಿರಾರು ಭಕ್ತರು ಹಾಗೂ ಮಠದ ವಿದ್ಯಾರ್ಥಿಗಳಿಗೆ ದರ್ಶನ ನೀಡಿದರು.

Advertisement

ಕಳೆದ ಬುಧವಾರ ರಾತ್ರಿ ನಿರ್ಜಲೀಕರಣಕ್ಕೆ ಒಳಗಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳಿಗೆ ಮಠದಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಗುರುವಾರ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯ ವೈದ್ಯರ ತಂಡದ ಬಂದು, ಮಠದಲ್ಲಿಯೇ ಚಿಕಿತ್ಸೆ ಆರಂಭಿಸಿದರು. ಶ್ರೀಗಳ ರಕ್ತ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ, ಶುಕ್ರವಾರ ಅವರನ್ನು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಸತತ 24 ಗಂಟೆಗಳ ನಿರಂತರ ವೈದ್ಯಕೀಯ ತಪಾಸಣೆ, ಚಿಕಿತ್ಸೆ ನಂತರ ಶ್ರೀಗಳ ದೇಹದಲ್ಲಿ ಚೇತರಿಕೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಶ್ರೀಗಳೊಂದಿಗೆ ಸಿದ್ದಲಿಂಗಸ್ವಾಮೀಜಿ, ಮಾಜಿ ಸಚಿವ ಎಸ್‌.ಶಿವಣ್ಣ, ಜೆಡಿಎಸ್‌ ಮುಖಂಡ ಡಿ.ಸಿ.ಗೌರಿಶಂಕರ್‌, ಹಲವು ಹರಗುರು ಚರಮೂರ್ತಿಗಳು ಆಗಮಿಸಿದರು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ನೇರವಾಗಿ ಸಿದ್ಧಗಂಗಾ ಕ್ಷೇತ್ರದ ಹಳೆಯ ಮಠಕ್ಕೆ ಆಗಮಿಸಿದ ಶ್ರೀಗಳು, ವ್ಹೀಲ್‌ ಚೇರ್‌ನಲ್ಲಿ ಮಠದ ಕೊಠಡಿ ಪ್ರವೇಶಿಸಿದರು.

ವೈದ್ಯರ ತಪಾಸಣೆಯ ನಂತರ ಮೊದಲಿಗೆ ಭಕ್ತರನ್ನು ನೋಡುವ ಇಚ್ಚೆಯನ್ನು ಶ್ರೀಗಳು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

ಬಿಗಿ ಭದ್ರತೆ: ಮಠಕ್ಕೆ ಶ್ರೀಗಳು ಮರಳುವ ಸುದ್ದಿ ತಿಳಿದುಮಠದ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಈ ಹಿನ್ನೆಲೆಯಲ್ಲಿ ಕ್ಯಾತ್ಸಂದ್ರ ಪೋಲೀಸರು ಮಠದ ಆವರಣದಲ್ಲಿ ಬಿಗಿ ಭದ್ರತೆ ಒದಗಿಸಿದ್ದರು. ಆಸ್ಪತ್ರೆಯಿಂದ ಮಠಕ್ಕೆ ಬರುವ ದಾರಿಯಲ್ಲಿ ವಾಹನಗಳ ಸಂಚಾರ ಇಲ್ಲದಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಮಠಕ್ಕೆ ಸ್ವಾಮೀಜಿ ಇದ್ದ ಕಾರು ಬರುತ್ತಲೇ ಭಕ್ತರು ಹಾಗೂ ವಿದ್ಯಾರ್ಥಿಗಳು ಹರ್ಷೋದ್ಘಾರ ಮೊಳಗಿಸಿದರು.

ಲವಲವಿಕೆಯಿಂದ ಕಾರಿನಿಂದ ಇಳಿದ ಶ್ರೀಗಳು: ಸಿದ್ಧಗಂಗಾ ಮಠಕ್ಕೆ ಆಗಮಿಸುತ್ತಿದ್ದಂತೆ ಸಿದ್ಧಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಮಠದ ಅಧಿಕಾರಿಗಳು ಬರ ಮಾಡಿಕೊಂಡರು. ಶಿವಕುಮಾರ ಸ್ವಾಮೀಜಿಯವರು ಎಂದಿನಂತೆ  ಲವಲವಿಕೆಯಿಂದ ಕಾರಿನಿಂದ ಇಳಿದು, ವೀಲ್‌ ಛೇರ್‌ನಲ್ಲಿ ಹಳೆ ಮಠಕ್ಕೆ ತೆರಳಿದರು. ಇದೇ ವೇಳೆ, ನೆರೆದಿದ್ದ ಭಕ್ತರಿಗೆ ದರ್ಶನ ನೀಡಲು ಶ್ರೀಗಳು ಬಯಸಿದ್ದರಿಂದ ಭಕ್ತರ ದರ್ಶನಕ್ಕೆ ಸ್ವಲ್ಪ ಕಾಲಾವಕಾಶ ಕಲ್ಪಿಸಲಾಯಿತು. ಪ್ರಸ್ತುತ ಶ್ರೀಗಳು ಹಳೇ ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Advertisement

ಒಂದು ವಾರ ವಿಶ್ರಾಂತಿ: ಈ ವೇಳೆ, ಸುದ್ದಿಗಾರರ ಜತೆ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷ, ಶ್ರೀ ಸಿದ್ಧಲಿಂಗಸ್ವಾಮೀಜಿ, ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯ ಡಾ.ರವೀಂದ್ರ ಮಾರ್ಗದರ್ಶದಲ್ಲಿ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಸ್ಟೆಂಟ್‌ ಹಾಕಲಾಗಿದೆ. ಅಲ್ಲದೆ, ಶ್ರೀಗಳ ಮೂತ್ರಕೋಶ ಮತ್ತು ಕರುಳಿನಲ್ಲಿ ಸಮಸ್ಯೆ ಉಂಟಾಗಿತ್ತು. ಶ್ರೀಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಗೋಬ್ಲಿಲ್‌ ಆಸ್ಪತ್ರೆಯ ಮುಖ್ಯಸ್ಥರು, ಸಿಇಓ ಥಾಮಸ್‌, ಡಾ.ರವೀಂದ್ರ, ಡಾ.ವೆಂಕಟರಮಣ ಅವರ ನಿರಂತರ ನಿಗಾದಿಂದಾಗಿ ಶ್ರೀಗಳು ಬಹುಬೇಗ ಚೇತರಿಸಿಕೊಂಡಿದ್ದಾರೆ. ಮಠದಲ್ಲಿ ಎಂದಿನಂತೆ ಸ್ಥಳೀಯ ವೈದ್ಯರಾದ ಡಾ.ಪರಮೇಶ್ವರ್‌, ಡಾ.ಶಿವಪ್ಪ, ಡಾ.ರಜಿನಿ ಅವರು ನಿಗಾವಹಿಸಲಿದ್ದಾರೆ. ಒಂದು ವಾರದ ಕಾಲ ಅವರಿಗೆ ಯಾವುದೇ ಸೋಂಕು ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಹೀಗಾಗಿ, ಒಂದು ವಾರಗಳ ಕಾಲ ಅವರಿಗೆ ವಿಶ್ರಾಂತಿ ಬೇಕಿದೆ ಎಂದರು.

ದೂರದಲ್ಲಿ ನಿಂತು ದರ್ಶನ
ದೂರದ ಊರುಗಳಿಂದ ಬಂದಿರುವ ಭಕ್ತರಿಗೆ ನಿರಾಸೆ ಯಾಗಬಾರದೆಂಬ ಕಾರಣದಿಂದ ಹಳೇ ಮಠದಲ್ಲಿ ದೂರದಲ್ಲಿ ನಿಂತು ದರ್ಶನ ಪಡೆದುಕೊಂಡು ಹೋಗಲು ವ್ಯವಸೆœ ಮಾಡಲಾಗಿದೆ.

ಸ್ವಾಮೀಜಿ ಬಳಿ ಯಾರೂ ಹೋಗುವಂತಿಲ್ಲ. ವೈದ್ಯರು ಮತ್ತು ಮಠದ ಇಬ್ಬರಿಗೆ ಮಾತ್ರ ಅವಕಾಶವಿದೆ. ಈ ಮಧ್ಯೆ, ಶನಿವಾರ ಶ್ರೀಗಳು ವೈದ್ಯರ ಸಲಹೆಯಂತೆ ಲಿಕ್ವಿಡ್‌ ಆಹಾರವನ್ನೇ ಹೆಚ್ಚಾಗಿ ಸೇವಿಸಿದ್ದಾರೆ. ಒಂದು ಇಡ್ಲಿ, ಎರಡು ಪರಂಗಿ ಹಣ್ಣಿನ ಪೀಸ್‌, ಎರಡು ಪೀಸ್‌ ಸೇಬು ಸೇವಿಸಿದ್ದಾರೆ. ನಂತರ ಮಜ್ಜಿಗೆ, ಬಾದಾಮಿ ಹಾಲು, ಎಳನೀರು ಸೇವಿಸಿದ್ದಾರೆ. ನೀರನ್ನು ಹೆಚ್ಚು ಸೇವಿಸುತ್ತಿದ್ದಾರೆ ಎಂದು ಮಠದ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next