Advertisement

ಪೋಷಕರನ್ನು ಬೈದಿದ್ದಕ್ಕೆ ಸ್ನೇಹಿತನನ್ನೇ ಕೊಂದ

03:39 PM Nov 01, 2022 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪೋಷಕರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂಬ ಕಾರಣಕ್ಕೆ ವೆಲ್ಡಿಂಗ್‌ ಕೆಲಸಗಾರನೊಬ್ಬ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಪಿಳ್ಳಗಾನಹಳ್ಳಿಯ ನಿವಾಸಿ ಶಫೀರ್‌ ಅಹ್ಮದ್‌ (23) ಕೊಲೆಯಾದವ. ಈ ಸಂಬಂಧ ಆತನ ಸ್ನೇಹಿತ ಸೈಯದ್‌ ವಾಜೀದ್‌ ಎಂಬಾತನನ್ನು ಬಂಧಿಸಲಾಗಿದೆ.

ಶಫೀರ್‌ ಅಹ್ಮದ್‌ ಮತ್ತು ಸೈಯದ್‌ ವಾಜೀದ್‌ ಸ್ನೇಹಿತರಾಗಿದ್ದು, ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದಾರೆ. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಇಬ್ಬರು ಕಂಠಪೂರ್ತಿ ಮದ್ಯ ಸೇವಿಸಿ ಬನ್ನೇರುಘಟ್ಟ ರಸ್ತೆಯ ಪಿಳ್ಳಗಾನಹಳ್ಳಿಯ ಬಳಿಯ ಆಕಾಶ್‌ ವೃತ್ತದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಶಫೀರ್‌ ಅಹ್ಮದ್‌, ಕ್ಷುಲ್ಲಕ ಕಾರಣಕ್ಕೆ ಸೈಯದ್‌ ವಾಜೀದ್‌ ಜತೆ ಜಗಳ ಮಾಡಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಶಫೀರ್‌ ಅಹ್ಮದ್‌, ವಾಜೀದ್‌ನ ಪೋಷಕರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅದರಿಂದ ಆಕ್ರೋಶಗೊಂಡ ಆರೋಪಿ, ಮನೆಯಿಂದ ಚಾಕು ತಂದು, ಶಫೀರ್‌ ಅಹ್ಮದ್‌ನ ಹೊಟ್ಟೆ ಹಾಗೂ ಎದೆ ಭಾಗಕಕ್ಕೆ ಇರಿದಿದ್ದಾನೆ. ತೀವ್ರ ರಕ್ತಸ್ರಾವ ದಿಂದ ಕೆಳಗೆ ಬಿದ್ದಿದ್ದ ಶಫೀರ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದರು.

ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next