Advertisement

ವಿಜಯಪುರ ಕಮಲ ಟಿಕೆಟ್‌ಗೆ ಸ್ನೇಹಿತರ ಸವಾಲ್‌

12:35 AM Apr 05, 2023 | Shreeram Nayak |

ವಿಜಯಪುರ: ಬಸವನಾಡಿನ ಕೃಷ್ಣೆ-ಭೀಮೆಯ ಮಧ್ಯದಲ್ಲಿ ಪಂಚನದಿಗಳ ನಾಡಿನಲ್ಲಿ ಕಮಲ ಅರಳಿಸಲು ಒಟ್ಟೊಟ್ಟಾಗಿ ಶ್ರಮಿಸಿದ್ದ ಸ್ನೇಹಿತರಿಬ್ಬರು ಕೇಂದ್ರದ ಮಾಜಿ ಸಚಿವ-ರಾಜ್ಯ ಮಾಜಿ ಸಚಿವರ ಮಧ್ಯೆ ಟಿಕೆಟ್‌ಗಾಗಿ ಕದನ ಏರ್ಪಟ್ಟಿದ್ದು ಬದ್ಧವೈರಿಗಳಂತೆ ಕಿತ್ತಾಡತೊಡಗಿದ್ದಾರೆ.

Advertisement

ಕಾಂಗ್ರೆಸ್‌-ಜನತಾ ಪರಿವಾರದ ಹಿಡಿತದಲ್ಲಿದ್ದ ವಿಜಯಪುರ ನಗರ ಕ್ಷೇತ್ರದಲ್ಲಿ ಕೇಸರಿ ಕೋಟೆ ಕಟ್ಟುವಲ್ಲಿ ಕೇಂದ್ರದ ಮಾಜಿ ಸಚಿವರೂ ಆಗಿರುವ ವಿಜಯಪುರ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ರಾಜ್ಯದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜತೆಯಾಗಿ ಶ್ರಮಿಸಿದವರು.

ಊಟ-ಉಪಾಹಾರ ಮರೆತು ಜಿಲ್ಲೆಯಲ್ಲಿ ಮನೆ ಮನೆಗಳಲ್ಲಿ ಕಮಲ ಚಿಹ್ನೆ ಪರಿಚಯಿಸುವಲ್ಲಿ ಮಾಜಿ ಸಚಿವದ್ವಯರಾದ ಯತ್ನಾಳ ಹಾಗೂ ಪಟ್ಟಣಶೆಟ್ಟಿ ಇಬ್ಬರೂ ಶ್ರಮಿಸಿದ್ದರು. ಕಾಂಗ್ರೆಸ್‌ ಹಾಗೂ ಜನತಾ ಪರಿವಾರದ ಅಬ್ಬರ ಇದ್ದಾಗಲೂ ವಾಜಪೇಯಿ, ಎಲ್‌.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್‌ ಅವರಂಥ ಮಹಾನ್‌ ನಾಯಕರನ್ನು ಜಿಲ್ಲೆಗೆ ಕರೆಸಿ ಕಾರ್ಯಕ್ರಮ ಮಾಡಿದವರು.

ಸಾಲದ್ದಕ್ಕೆ 1994ರಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. ಇದಾದ ಬಳಿಕ 1996ರಲ್ಲಿ ಲೋಕಸಭೆಗೆ ಸ್ಪ ರ್ಧಿಸಿ ಸೋಲುಂಡ ಯತ್ನಾಳ, 1999ರಲ್ಲಿ ವಿಜಯಪುರ ಕ್ಷೇತ್ರದಿಂದ ಗೆದ್ದು ವಾಜಪೇಯಿ ಸರ್ಕಾರದಲ್ಲಿ ಜವಳಿ, ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಈ ಹಂತದಲ್ಲಿ 1999ರಲ್ಲಿ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದವರು ಯತ್ನಾಳ ಅವರ ಪರಮಾಪ್ತ ಗೆಳೆಯ ಪಟ್ಟಣಶೆಟ್ಟಿ. ಆದರೆ 29 ವರ್ಷದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಕೇವಲ 3153 ಮತಗಳಿಂದ ಸೋಲುಂಡರು.

Advertisement

ಆದರೆ, 2004 ಹಾಗೂ 2008ರಲ್ಲಿ ಸತತವಾಗಿ ಎರಡು ಬಾರಿ ಜಯ ಸಾಧಿ ಸಿದ್ದ ಪಟ್ಟಣಶೆಟ್ಟಿ, ರಾಜ್ಯದಲ್ಲಿ ಕುಮಾರಸ್ವಾಮಿ-ಯಡಿಯೂರಪ್ಪ ಸಾರಥ್ಯದ ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದರು. ಆಗ ಯತ್ನಾಳ ಹಾಗೂ ಪಟ್ಟಣಶೆಟ್ಟಿ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯ ಆರಂಭಗೊಂಡು ದಿನೇ ದಿನೆ ತಾರಕಕ್ಕೇರಿತು. ಈ ಹಂತದಲ್ಲಿ ವಿಜಯಪುರ ಲೋಕಸಭೆ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.

ಯತ್ನಾಳಗೆ ಕೈ ತಪ್ಪಿದ ಟಿಕೆಟ್‌:
ಹೀಗಾಗಿ 2013ರಲ್ಲಿ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಪಕ್ಷ ಮಣೆ ಹಾಕಿದ್ದರಿಂದ ನಗರ ಕ್ಷೇತ್ರದಿಂದ ಸ್ಪರ್ಧೆ ಬಯಸಿದ ಯತ್ನಾಳ ಅವರಿಗೆ ಟಿಕೆಟ್‌ ಕೈತಪ್ಪಿತು. ಇದರಿಂದ ಪಕ್ಷದ ವರಿಷ್ಠರ ವಿರುದ್ಧ ವಾಗ್ಧಾಳಿ ನಡೆಸಿ ಯತ್ನಾಳ ಅವರನ್ನು ಕಮಲ ಪಕ್ಷ ಉಚ್ಚಾಟನೆ ಮಾಡಿದ್ದರಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಹಾಲಿ ಶಾಸಕರಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅಪ್ಪು ಪಟ್ಟಣಶೆಟ್ಟಿ ಹಾಗೂ ಯತ್ನಾಳ ಇಬ್ಬರೂ ಕಾಂಗ್ರೆಸ್‌ ಅಭ್ಯರ್ಥಿ ಡಾ.ಎಂ.ಎಸ್‌. ಬಾಗವಾನ ವಿರುದ್ಧ ಸೋಲುಂಡರು.

ಬಳಿಕ ಮತ್ತೆ ಬಿಜೆಪಿ ಸೇರಿ 2016ರಲ್ಲಿ ನಡೆದ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮೇಲ್ಮನೆ ಚುನಾವಣೆಯಲ್ಲಿ ಯತ್ನಾಳ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಈ ಹಂತದಲ್ಲೂ ಟಿಕೆಟ್‌ ಕೈ ತಪ್ಪಿದ್ದರಿಂದ ಯತ್ನಾಳ ಮತ್ತೆ ಪಕ್ಷದ ವರಿಷ್ಠರ ವಿರುದ್ಧ ಟೀಕೆ ಮಾಡಿ ಮತ್ತೊಮ್ಮೆ ಪಕ್ಷದಿಂದ ಉಚ್ಚಾಟನೆಗೊಂಡಿದ್ದರು.
2018ರ ಚುನಾವಣೆ ಹಂತದಲ್ಲಿ ಮೇಲ್ಮನೆ ಶಾಸಕ ಸ್ಥಾನದ ಅವಧಿ ಇದ್ದರೂ ರಾಜೀನಾಮೆ ನೀಡಿ ಮತ್ತೆ ಮಾತೃಪಕ್ಷ ಬಿಜೆಪಿ ಸೇರಿದ ಯತ್ನಾಳ, ವಿಜಯಪುರ ನಗರ ಕ್ಷೇತ್ರದಿಂದ ಟಿಕೆಟ್‌ ಗಿಟ್ಟಿಸಿ ಜಯ ಸಾಧಿಸಿದರು. ಆದರೆ ಪಕ್ಷ ತಮ್ಮನ್ನು ಪರಿಗಣಿಸುವ ವಿಶ್ವಾಸದಲ್ಲಿದ್ದ ಪಟ್ಟಣಶೆಟ್ಟಿ ಅವರಿಗೆ ನಿರಾಸೆಯಾಯ್ತು. ಪಕ್ಷ ಬಿಡುತ್ತಾರೆ ಎಂಬ ಗುಲ್ಲುಗಳೆಲ್ಲ ಹುಸಿಯಾಗಿ ಪಟ್ಟಣಶೆಟ್ಟಿ ಬಿಜೆಪಿಯಲ್ಲೇ ಉಳಿದರು.

ಇಂದಿಗೂ ಒಂದಾಗಿಲ್ಲ ಏಕೆ?:
ಆದರೆ ಪಕ್ಷ ಕಟ್ಟಲು ಜತೆಯಾಗಿ ಹೆಗಲು ಕೊಟ್ಟಿದ್ದ ಯತ್ನಾಳ-ಪಟ್ಟಣಶೆಟ್ಟಿ ಇಬ್ಬರೂ ಒಂದೇ ಪಕ್ಷದಲ್ಲಿದ್ದರೂ ಪರಸ್ಪರ ಮುಖ ನೋಡದಷ್ಟು ದೊಡ್ಡ ಮಟ್ಟಕ್ಕೆ ಬಿರುಕು ಬೆಳೆಯಿತು. ಇಬ್ಬರ ಮಧ್ಯೆ ಪರಸ್ಪರ ವೈಯಕ್ತಿಕ ಹಂತದ ಟೀಕೆ ಆರಂಭಗೊಂಡು ಇಬ್ಬರ ಮಧ್ಯದ ರಾಜಕೀಯ ವೈಮನಸ್ಸು ದೊಡ್ಡ ಮಟ್ಟದಲ್ಲಿ ವೈರತ್ವಕ್ಕೆ ತಿರುಗಿತು. ಬಳಿಕ ಇಬ್ಬರ ಮಧ್ಯದ ರಾಜಕೀಯ ಮೀರಿದ ಸ್ನೇಹದ ಆಂತರಿಕ ಅಪ್ಪುಗೆಗೆ ಮತ್ತೆ ಬೆಸುಗೆ ಆಗಲೇ ಇಲ್ಲ. ಇಬ್ಬರನ್ನು ಒಂದುಗೂಡಿಸುವಲ್ಲಿ ಪಕ್ಷದ ವೇದಿಕೆಯಲ್ಲೂ ಹೈಕಮಾಂಡ್‌ ಯಶಸ್ವಿಯಾಗಲಿಲ್ಲ. ಪರಿಣಾಮ ಇದೀಗ ವಿಜಯಪುರ ನಗರ ಕ್ಷೇತ್ರದಿಂದ ಮತ್ತೂಮ್ಮೆ ಹಳೆಯ ಸ್ನೇಹಿತರ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ.

-ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next