Advertisement

ಸಿಗಲಿದೆ ಹೊಸ ಪ್ರವೇಶ ಪತ್ರ: ಜೂನ್‌ 2ನೇ ವಾರ ವಿದ್ಯಾರ್ಥಿಗಳ ಕೈಗೆ?

04:11 AM May 20, 2020 | Hari Prasad |

ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆ ಎದುರಿಸುವ 8.40 ಲಕ್ಷ ವಿದ್ಯಾರ್ಥಿಗಳಿಗೆ ಹೊಸದಾಗಿ ಪ್ರವೇಶ ಪತ್ರ ವಿತರಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ.

Advertisement

ಮಾರ್ಚ್‌ ತಿಂಗಳಲ್ಲಿ ನಡೆಯಬೇಕಿದ್ದ ಎಸೆಸೆಲ್ಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಈಗಾಗಲೇ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಲಾಗಿದ್ದರೂ ಅವು ಈಗ ಮಾನ್ಯತೆ ಕಳೆದುಕೊಂಡಿವೆ.

ಈಗ ಪರೀಕ್ಷೆ ದಿನಾಂಕ ಮತ್ತು ವೇಳಾಪಟ್ಟಿ ಪರಿಷ್ಕರಿಸಿರುವುದರಿಂದ ಹೊಸ ಪ್ರವೇಶ ಪತ್ರ ವಿತರಿಸಲು ನಿರ್ಧರಿಸಲಾಗಿದೆ.

ತಿದ್ದುಪಡಿಗೂ ಅವಕಾಶ
ಈಗಾಗಲೇ ವಿತರಿಸಿರುವ ಪ್ರವೇಶ ಪತ್ರದ ತಿದ್ದುಪಡಿಗೆ ಮಂಡಳಿ ಈ ಹಿಂದೆ ಅವಕಾಶ ನೀಡಿತ್ತು. ಈಗ ಮತ್ತೆ ಹೊಸ ಪ್ರವೇಶ ಪತ್ರ ಸಿದ್ಧಪಡಿಸಲಾಗುತ್ತಿದ್ದು, ಮತ್ತೆ ತಪ್ಪುಗಳು ಸಂಭವಿಸಬಹುದು, ಹೀಗಾಗಿ ಮತ್ತೆ ತಿದ್ದುಪಡಿಗೆ ಅವಕಾಶ ನೀಡಿ, ಸರಿಪಡಿಸಿಯೇ ಪರೀಕ್ಷೆ ಬರೆಯಲು ಅನುವು ಮಾಡಿಕೊಡುತ್ತೇವೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿವಿಧ ವಸತಿ ಶಾಲೆಗಳಲ್ಲಿದ್ದು ವ್ಯಾಸಂಗ ಮಾಡುತ್ತಿದ್ದ ಮತ್ತು ವಲಸೆ ಕಾರ್ಮಿಕರ ಮಕ್ಕಳಿಗೆ ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ ನೀಡಲಾಗಿದೆ. ಎಷ್ಟು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾಯಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಮೇ ಅಂತ್ಯಕ್ಕೆ ಮಂಡಳಿಗೆ ಸಿಗಲಿದೆ.

Advertisement

ಜೂನ್‌ ಮೊದಲ ವಾರದಲ್ಲಿ ಪ್ರವೇಶ ಪತ್ರ ಸಿದ್ಧಪಡಿಸುವ ಕಾರ್ಯ ಆರಂಭವಾಗಲಿದೆ ಎಂದು ಮಂಡಳಿಯ ನಿರ್ದೇಶಕಿ ವಿ. ಸುಮಂಗಳಾ ‘ಉದಯವಾಣಿ’ಗೆ ಖಚಿತಪಡಿಸಿದ್ದಾರೆ.

ಮುಖ್ಯ ಶಿಕ್ಷಕರಿಂದ ವಿತರಣೆ
ವಿದ್ಯಾರ್ಥಿಗಳ ಪ್ರವೇಶ ಪತ್ರವನ್ನು ಪರೀಕ್ಷೆಗೆ ಹತ್ತು ದಿನ ಇರುವಾಗಲೇ ಶಾಲೆಗಳಿಗೆ ಆನ್‌ಲೈನ್‌ ಮೂಲಕ ದೊರಕುವಂತೆ ಮಾಡುತ್ತೇವೆ. ಶಾಲಾ ಮುಖ್ಯ ಶಿಕ್ಷಕರು ಇವುಗಳನ್ನು ಡೌನ್‌ಲೋಡ್‌ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಣೆ ಮಾಡಬಹುದಾಗಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹಳೆಯ ಪ್ರವೇಶ ಪತ್ರದಲ್ಲಿ ಪರೀಕ್ಷೆ ಬರೆಸಲು ಸಾಧ್ಯವಿಲ್ಲ. ಹೀಗಾಗಿ ಹೊಸ ಪ್ರವೇಶ ಪತ್ರ ನೀಡಬೇಕು. ಪರೀಕ್ಷಾ ಕೇಂದ್ರ ಬದಲಾವಣೆಯ ಪೂರ್ಣ ಮಾಹಿತಿ ಸಿಗುತ್ತಿದ್ದಂತೆ ಈ ಕಾರ್ಯ ಆರಂಭಿಸುತ್ತೇವೆ.
– ವಿ. ಸುಮಂಗಳಾ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next