Advertisement

ಆರ್‌ಸಿಬಿ ವೈದ್ಯನಿಂದ ಬಡ ಕ್ರೀಡಾಪಟುಗಳಿಗೆ ಉಚಿತ ಚಿಕಿತ್ಸೆ !

06:25 AM Feb 16, 2018 | Team Udayavani |

ಬೆಂಗಳೂರು: ಕೊಡಗು ಮೂಲದ ಈ ವೈದ್ಯರ ಹೆಸರು ಶ್ರವಣ್‌. ಇರುವುದು ಬೆಂಗಳೂರಿನ ಜಕ್ಕೂರಿನಲ್ಲಿ. ಸದ್ಯ ಆರ್‌ಸಿಬಿ ಐಪಿಎಲ್‌ ತಂಡಕ್ಕೆ ಫಿಸಿಯೋ ಥೆರಪಿಸ್ಟ್‌ (ದೈಹಿಕ ತರಬೇತುದಾರ). ಶ್ರೀಮಂತ ಕ್ರಿಕೆಟಿಗರು ಯಾವಾಗಲೂ ಇವರಿಂದ ಚಿಕಿತ್ಸೆ ಪಡೆಯುತ್ತಾರೆ. ಇವರ ವಿಶೇಷವೇನೆಂದರೆ ಬಡ ಕ್ರೀಡಾಪಟುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ಇದು ದೇಶಕ್ಕೆ ತಾವು ನೀಡುತ್ತಿರುವ ಅಲ್ಪ ಕಾಣಿಕೆ ಎಂದು ನಮ್ರವಾಗಿ ನುಡಿಯುತ್ತಾರೆ.

Advertisement

ಪೂರ್ಣ ಹೆಸರು ಡಾ.ಶ್ರವಣ್‌ ಕುಂಬಗೌಡನ. ಈಗ 33 ವರ್ಷ. ಮೂಲತಃ ಕೊಡಗಿನ ಮಡಿಕೇರಿಯವರು. ರಾಜ್ಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ, ಹಾಲಿ ಕ್ರಿಕೆಟಿಗರ ಅಚ್ಚು ಮೆಚ್ಚಿನ ಫಿಸಿಯೋ. ಶ್ರವಣ್‌ ಅಂದರೆ ವಿದೇಶಿ ಕ್ರಿಕೆಟಿಗರಿಗೂ ಅಚ್ಚುಮೆಚ್ಚು. ಎಬಿಡಿ ವಿಲಿಯರ್, ಕ್ರಿಕೆಟ್‌ ದೈತ್ಯ ವೆಸ್ಟ್‌ ಇಂಡೀಸ್‌ನ ಕ್ರೀಸ್‌ ಗೇಲ್‌ ಇವರಿಂದ ಚಿಕಿತ್ಸೆ ಪಡೆದಿದ್ದಾರೆ. ಶ್ರವಣ್‌ ಕೈಚಳಕದಿಂದ ಬೇಗ ಚೇತರಿಸಿಕೊಂಡಿದ್ದಾರೆ. ಶ್ರವಣ್‌ ತಮ್ಮ ಅಮೃತ ಹಸ್ತದಿಂದಲೇ ವಿಶ್ವ ಕ್ರಿಕೆಟಿಗರ ಮನಸ್ಸನ್ನೂ ಸೆಳೆದಿದ್ದಾರೆ.

ಸದ್ಯ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌)ಗೆ ಆಟಗಾರರ ಫಿಟೆ°ಸ್‌ ತಯಾರಿ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ತಮ್ಮದೇ ಆದ ಚಿಕಿತ್ಸಾ ಕೇಂದ್ರವನ್ನು ಬೆಂಗಳೂರಿನ ಜಕ್ಕೂರಿನಲ್ಲಿ ತೆರೆದಿದ್ದಾರೆ. ಕೆಲಸದ ಒತ್ತಡದ ನಡುವೆಯೇ ಉದಯವಾಣಿಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಕ್ರಿಕೆಟಿಗರ ಫಿಟೆ°ಸ್‌, ಆರ್‌ಸಿಬಿ ತಂಡ-ಆಟಗಾರರ ಒಡನಾಟ, ಈ ಸಲದ ಐಪಿಎಲ್‌ ತಯಾರಿ, ಬಡ ಕ್ರೀಡಾಪಟುಗಳಿಗೆ ನೆರವು ಸೇರಿದಂತೆ ಹಲವು ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನದ  ಪೂರ್ಣ ವಿವರವನ್ನು ಅವರ ಮಾತುಗಳಲ್ಲೇ ವಿವರಿಸಲಾಗಿದೆ.

ಕ್ರಿಕೆಟಿಗರಾಗಿದ್ದ ಶ್ರವಣ್‌ ವೈದ್ಯರಾಗಿದ್ದು ಹೇಗೆ?: ನಾನು ವೈದ್ಯ ವೃತ್ತಿ ಆರಂಭಿಸುವ ಮೊದಲು ಕ್ರಿಕೆಟರ್‌ ಆಗಿದ್ದೆ. ಮೈಸೂರು ವಲಯ, ಕೆಎಸ್‌ಸಿಎ 22 ವರ್ಷ ವಯೋಮಿತಿಯೊಳಗಿನ ತಂಡದಲ್ಲಿ ಆಡಿದ್ದೇನೆ. ವೇಗದ ಬೌಲರ್‌ ಆಗಿ ಗುರುತಿಸಿಕೊಂಡಿದ್ದೆ. ರಾಜೀವ್‌ ಗಾಂಧಿ ವಿವಿ ತಂಡವನ್ನು ಪ್ರತಿನಿಧಿಸಿದ್ದೇನೆ. ಪ್ರತಿ ಪಂದ್ಯ ಆಡಿದಾಗಲೂ 2-3 ವಿಕೆಟ್‌ ಕಬಳಿಸುತ್ತಿದ್ದೆ. ಆದರೆ ವೈದ್ಯನಾಗುವ ಕನಸು ಕಾಣುತ್ತಿದ್ದ ನನಗೆ ಓದಿನ ಕಡೆಗೆ ಹೆಚ್ಚು ಗಮನ ಕೊಡಬೇಕಾಗಿ ಬಂತು. 

ಅನಿವಾರ್ಯವಾಗಿ ಕ್ರಿಕೆಟ್‌ನಿಂದ ಸ್ವಲ್ಪ ದೂರವಿದ್ದೆ. ಈ ವೇಳೆ ಕ್ರಿಕೆಟಿಗರು ಗಾಯಾಳುಗಳಾಗಿ ತಂಡದಿಂದ ಹೊರಬೀಳುತ್ತಿದ್ದನ್ನು ಹತ್ತಿರದಿಂದ ನೋಡಿ ಮನಸ್ಸಿಗೆ ನೋವಾಗುತ್ತಿತ್ತು. ಮುಂದೆ ವೈದ್ಯನಾಗಿ ಸೇವೆ ಸಲ್ಲಿಸುವ ಚಿಂತನೆ ನಡೆಸಿದೆ. ಅದರಂತೆ ಇದು ಫಿಸಿಯೋ ಆಗಿ ಗುರುತಿಸಿಕೊಂಡಿದ್ದೇನೆ.

Advertisement

ರಾಜ್ಯ ರಣಜಿ ತಂಡಕ್ಕೆ ಲಕ್ಕಿ ಫಿಸಿಯೋ: ವೃತ್ತಿ ಜೀವನದ ಆರಂಭದಲ್ಲಿ ಗೋವಾ ರಣಜಿ ತಂಡಕ್ಕೆ ಫಿಸಿಯೋ ಆದೆ. ಬಳಿಕ ರಾಜ್ಯ ರಣಜಿ ತಂಡಕ್ಕೆ ಮುಖ್ಯ ಫಿಸಿಯೋ ಆಗಿ ಆಯ್ಕೆಯಾದೆ. ರಣಜಿ, ಇರಾನಿ ಟ್ರೋಫಿ, ವಿಜಯ್‌ ಹಜಾರೆ ಟ್ರೋಫಿಯನ್ನು ಸತತ 2 ವರ್ಷ ಗೆದ್ದೆವು. ನಾನು ರಣಜಿ ತಂಡಕ್ಕೆ ಫಿಸಿಯೋ ಆಗಿದ್ದಾಗ 6 ಬಾರಿ ಕರ್ನಾಟಕ ರಣಜಿ ಟ್ರೋಫಿ ಗೆದ್ದಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. 2011ರಿಂದ ಆರ್‌ಸಿಬಿ ಜತೆ ಕೆಲಸ ಆರಂಭಿಸಿದೆ. ಕಳೆದ 2 ವರ್ಷದಿಂದ ಈಚೆಗೆ ಬೆಂಗಳೂರಿನ ಜಕ್ಕೂರಿನಲ್ಲಿ ನನ್ನದೇ ಕ್ಲಿನಿಕ್‌ ಕೂಡ ತೆರೆದಿದ್ದೇನೆ. ರಾಬಿನ್‌ ಉತ್ತಪ್ಪ, ಕೆ.ಎಲ್‌.ರಾಹುಲ್‌, ವರುಣ್‌ ಏರಾನ್‌, ಎಸ್‌.ಅರವಿಂದ್‌, ಅಭಿಮನ್ಯು ಮಿಥುನ್‌ ಸೇರಿದಂತೆ ಹಲವು ಕ್ರಿಕೆಟಿಗರು ನಮ್ಮಲ್ಲಿಗೆ ಆಗಮಿಸುತ್ತಾರೆ. ಜತೆಗೆ ಐಪಿಎಲ್‌ನತ್ತ ಕೂಡ ಹೆಚ್ಚು ಗಮನ ವಹಿಸಿದ್ದೇನೆ.

ಶ್ರವಣ್‌ಗೆ ಹರಿಣಗಳ ನಾಡಿನ ಗುರು ಮಾರ್ಗದರ್ಶನ: ಆರ್‌ಸಿಬಿ ಮುಖ್ಯ ಫಿಸಿಯೋ ಇವೆನ್ಸ್‌ ಸ್ಪೀಚ್‌ಲಿ ನನ್ನ ಗುರು. ಅವರು ಆಫ್ರಿಕಾ ಮೂಲದವರು. ಅವರಿಂದ ನಾನು ಬಹಳ ಕಲಿತೆ. ಆಟಗಾರನ ಗಾಯವನ್ನು ಅಳೆದು ತೂಗುವ, ಚಿಕಿತ್ಸೆ ನೀಡುವ ನನ್ನ ದೃಷ್ಟಿಕೋನವೇ ಬದಲಾಯಿತು. ಯಾವ ಆಯಾಮಗಳಲ್ಲಿ ಚಿಕಿತ್ಸೆ ನೀಡಿದರೆ ಒಳಿತು ಎನ್ನುವುದನ್ನು ಅವರೇ ಹೇಳಿಕೊಟ್ಟಿದ್ದಾರೆ. ಅವರು ಹೇಳಿದ ದಾರಿಯಲ್ಲಿಯೇ ಸಾಗುತ್ತಿದ್ದೇನೆ.

ಶ್ರವಣ್‌ ಚಿಕಿತ್ಸೆ ಎನ್‌ಸಿಎಗಿಂತ ಹೇಗೆ ಭಿನ್ನ?:  ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿ ಹೆಚ್ಚು ಭಾರವಾದ ಪರಿಕರಗಳಿಂದ ವ್ಯಾಯಾಮ ಮಾಡಿಸುತ್ತಾರೆ. ಕೆಲವೊಂದು ಸಲ ದೊಡ್ಡ ಯಂತ್ರಗಳನ್ನೂ ಬಳಸಿ ತರಬೇತಿ ನೀಡುತ್ತಾರೆ. ನಮ್ಮಲ್ಲಿ ಹಾಗಲ್ಲ. ಎನ್‌ಸಿಎಗೂ ಮೊದಲು ಗಾಯಾಳುಗಳು ನಮ್ಮಲ್ಲಿ ಚಿಕಿತ್ಸೆ ಪಡೆದುಕೊಂಡರೆ ಚೇತರಿಕೆಗೆ ಮತ್ತಷ್ಟು ಸಹಾಯಕವಾಗಲಿದೆ. ಸದ್ಯ 5 ಮಂದಿ ನುರಿತ ತಜ್ಞರು ನಮ್ಮಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಗಾಲ#ರ್‌, ಹಾಕಿ, ಫ‌ುಟ್‌ಬಾಲ್‌, ಟೇಬಲ್‌ ಟೆನಿಸ್‌, ಬ್ಯಾಡ್ಮಿಂಟನ್‌ ಆಟಗಾರರು ಇಲ್ಲಿ ನಮ್ಮಲ್ಲಿ ಚಿಕಿತ್ಸೆಗೆಂದು ಬರುತ್ತಾರೆ.

ಬಡ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉಚಿತ ಚಿಕಿತ್ಸೆ
ದೇಶ, ವಿದೇಶದ ಅಗ್ರ ಕ್ರಿಕೆಟಿಗರು ಶ್ರವಣ್‌ ಬಳಿ ಚಿಕಿತ್ಸೆಗೆಂದು ಬರುತ್ತಾರೆ. ದಿನವೊಂದರ 1 ಗಂಟೆಯ ಸೆಷನ್‌ಗೆ 1 ಸಾವಿರದಿಂದ 1.500 ರೂ.ವರೆಗೆ ಶುಲ್ಕ ನಿಗದಿಪಡಿಸಿದ್ದೇವೆ. ಆದರೆ ಆರ್ಥಿಕವಾಗಿ ಹಿಂದುಳಿದ ಶೇ.25ರಷ್ಟು ಕ್ರೀಡಾಪಟುಗಳು ನನ್ನ ಬಳಿಗೆ ಬರುತ್ತಾರೆ. ಅವರಿಗೆ ಉಚಿತ ಚಿಕಿತ್ಸೆ ನೀಡಿದ್ದೇನೆ. ಹಣದಿಂದಲೇ ಎಲ್ಲವನ್ನು ನೋಡಲು ಸಾಧ್ಯವಿಲ್ಲ. ದೇಶಕೋಸ್ಕರ ಸಿದ್ಧರಾಗುವ ಕ್ರೀಡಾಪಟುಗಳಿಗೆ ಖಂಡಿತ ಸಹಾಯ ಮಾಡುತ್ತೇನೆ ಎನ್ನುವುದು ಶ್ರವಣ್‌ .

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next