Advertisement

ಅನಿಲಭಾಗ್ಯ ಯೋಜನೆ: ಉಚಿತ ಅನಿಲ ಸಿಲಿಂಡರ್‌, ಸ್ಟೌ 

12:11 PM Apr 25, 2017 | Team Udayavani |

ಮಂಗಳೂರು: ಅಡುಗೆ ಅನಿಲ ಸಂಪರ್ಕ ಹೊಂದಿರದ ಕುಟುಂಬಗಳಿಗೆ ಉಚಿತ ಅನಿಲ ಸಿಲಿಂಡರ್‌ ಹಾಗೂ ಸ್ಟೌ ವಿತರಣೆಯನ್ನು ರಾಜ್ಯ ಸರಕಾರ ಅನಿಲ ಭಾಗ್ಯ ಯೋಜನೆ ಮೂಲಕ ಜಾರಿಗೊಳಿಸಲಿದ್ದು, ಈ ಸಂಬಂಧ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮೇ ತಿಂಗಳಿಂದ ಪ್ರಾರಂಭಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.

Advertisement

ನೈಜ ಫಲಾನುಭವಿಗಳಿಗೆ ಮಾತ್ರ ಯೋಜನಾ ಸೌಲಭ್ಯ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಗ್ಯಾಸ್‌ ಏಜೆನ್ಸಿಗಳಿಂದ ಅಡುಗೆ ಅನಿಲ ಹೊಂದಿದವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುತ್ತದೆ. ಕೇಂದ್ರ ಸರಕಾರದ ಉಜ್ವಲ್‌ ಯೋಜನೆ ಫಲಾನುಭವ ಪಡೆಯಲು ರಾಜ್ಯದಲ್ಲಿ ಸುಮಾರು 2.50 ಲಕ್ಷ ಮಂದಿ ಅನಿಲ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಈ ಯೋಜನೆಗೆ ರಾಜ್ಯದಿಂದಲೂ ಬೆಂಬಲ ನೀಡಿದರೂ ರಾಜ್ಯಕ್ಕೆ ಮಾತ್ರ ವಿಸ್ತರಣೆಯಾಗಿಲ್ಲ. ಉಜ್ವಲ್‌ ಯೋಜನೆಯಲ್ಲಿ ಬಿಟ್ಟುಹೋದ ಅರ್ಜಿದಾರರಿಗೂ ಅನಿಲ ಭಾಗ್ಯದಲ್ಲಿ ಸೌಲಭ್ಯ ಕಲ್ಪಿಸಲಾಗುವುದು. ಪ್ರತೀ ಸಂಪರ್ಕಕ್ಕೆ 1,900 ರೂ. ವೆಚ್ಚ ತಗುಲಲಿದ್ದು, ಇದನ್ನು ರಾಜ್ಯ ಸರಕಾರವೇ ಭರಿಸಲಿದೆ ಎಂದರು.

ಪಡಿತರ ಚೀಟಿ-ಶೀಘ್ರದಲ್ಲಿ  ವ್ಯವಸ್ಥೆ 
ರಾಜ್ಯದಲ್ಲಿ ಹೊಸ ಪಡಿತರ ಚೀಟಿಗೆ ಸುಮಾರು 10 ಲಕ್ಷ ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಅವರಿಗೆ ನೇರವಾಗಿ ರೇಷನ್‌ ಕಾರ್ಡ್‌ ಮನೆಗೆ ತಲುಪುವ ವ್ಯವಸ್ಥೆ ಮಾಡಲಾಗುತ್ತಿದೆ. ರೇಷನ್‌ ಕಾರ್ಡ್‌ ಸಂಬಂಧಿಸಿ ಯಾರು ಕೂಡ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ. ಹೊಸ ಸಾಫ್ಟ್‌ವೇರ್‌ ವ್ಯವಸ್ಥೆ ಮಾಡಲಾಗಿದ್ದು, ಮೇ 3ರಿಂದ ಅರ್ಜಿದಾರರ ಪರಿಶೀಲನ ಪ್ರಕ್ರಿಯೆ ನಡೆಯಲಿದೆ. 

ಕೆಲವೆಡೆ ಗ್ರಾ. ಪಂ.ಗಳಲ್ಲಿ ತೆರಿಗೆ ಪಾವತಿಸಿಲ್ಲ ಎಂದು ಪಡಿತರ ಚೀಟಿ ನೀಡಲು ವಿಳಂಬ ಧೋರಣೆ ಅನುಸರಿಸುವ ಕುರಿತು ದೂರು ಕೇಳಿ ಬಂದಿವೆ. ಇಂತಹ ಸನ್ನಿವೇಶ ಮುಂದುವರಿದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು. 
ಕಾಂಗ್ರೆಸ್‌ ಸಮಾಜ ಕಲ್ಯಾಣದ ಕೆಲಸ ಮಾಡು ತ್ತಿದೆ ಎಂದು ಸಚಿವರು ಹೇಳಿದರು.‌

Advertisement

Udayavani is now on Telegram. Click here to join our channel and stay updated with the latest news.

Next