Advertisement

ಮಂಗಳೂರಿನಲ್ಲೂ ಜಾರಿಗೆ ಬರಲಿ ಉಚಿತ ಕಸ ವಿಲೇವಾರಿ ದಿನ

12:09 AM Jul 21, 2019 | Sriram |

ಲ್ಯಾಕ್ಸಿಂಗ್‌ಟನ್‌ ಎಂಬ ನಗರ ತನ್ನ ನಗರದ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಹಾಗೂ ನಗರ ವಾಸಿಗಳು ಉಪಯೋಗಿಸದೆ ಬಿಟ್ಟಿರುವ ಕೆಲವು ವಸ್ತುಗಳ ಮರುಬಳಕೆ ಮಾಡಲು ವರ್ಷದ ಒಂದು ದಿನವನ್ನು ಉಚಿತವಾಗಿ ಕಸ ವಿಲೇವಾರಿಗಾಗಿ ಅಲ್ಲಿನ ಆಡಳಿತ ಮಂಡಳಿ ಅವಕಾಶ ನೀಡಿದೆ. ಇದೊಂದು ವಿಶೇಷ ರೀತಿಯ ಆಚರಣೆ. ತ್ಯಾಜ್ಯ ವಿಲೇವಾರಿಗೆ ಸಾರ್ವಜನಿಕರು ಇಂತಿಷ್ಟು ಹಣ ನೀಡುವುದು ಸಾಮಾನ್ಯ. ಆದರೆ ಲ್ಯಾಕ್ಸಿಂಗ್‌ಟನ್‌ ಕೈಗೊಂಡಿರುವ ಯೋಜನೆಯಲ್ಲಿ ಆ ಒಂದು ದಿನ ಅಲ್ಲಿ ಉಚಿತವಾಗಿ ಕಸಗಳ ವಿಲೇವಾರಿ ನಡೆಯುತ್ತದೆ ಹಾಗೂ ಅಲ್ಲಿನ ನಗರವಾಸಿಗಳು ಭಾರೀ ಉತ್ಸಾಹದಿಂದ ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ.

Advertisement

ನಗರದಲ್ಲಿ ವಾಸಿಸುವವರಿಗೆ ಮನೆಗಳಲ್ಲಿ ಹೆಚ್ಚಿನ ವಸ್ತುಗಳನ್ನಿಡಲು ಸ್ಥಳಾವಕಾಶವು ಇರುವುದಿಲ್ಲ. ಕೆಲವೊಂದು ವಸ್ತುಗಳು ಮನೆಯಿಂದ ಹೊರಹಾಕಲಾಗದೇ, ಯಾವುದೋ ಮೂಲೆಯಲ್ಲಿ ಹಾಗೆ ಇಟ್ಟಲ್ಲಿ ಮನೆಯ ಅಂದಗೆಡುವುದು, ಇಕ್ಕಟ್ಟಿನ ಸ್ಥಿತಿ ನಿರ್ಮಾಣ ವಾಗುವು ದುಂಟು. ಸೋಫಾ ಸೆಟ್, ಹಳೆಯದಾದ ಫ್ರಿಜ್ಡ್, ವಾಷಿಂಗ್‌ ಮಿಷನ್‌ ಹೀಗೆ ದೊಡ್ಡ ವಸ್ತುಗಳನ್ನು ಎತ್ತ ಬಿಸಾಡುವುದು ಎಂದು ತಿಳಿಯದೆ ಮನೆಯ ಸ್ಟೋರ್‌ ರೂಮ್‌ಗಳಲ್ಲೇ ಉಳಿದು ಬಿಡುತ್ತವೆ. ಇವುಗಳಿಗೆ ಪರಿಹಾರ ಫ್ರೀ ಟ್ರಾಶ್‌ ಡಿಸ್‌ಪೋಸಲ್ ಡೇ.

ಮನೆಯಲ್ಲಿನ ಬೃಹತ್‌ ಗಾತ್ರದ ವಸ್ತುಗಳನ್ನು ತ್ಯಾಜ್ಯದ ಗಾಡಿಗಳಲ್ಲಿ ಕೊಂಡೊಯ್ಯಲು ನಿರ್ಬಂಧವಿದೆ. ನಾವೇ ಮುತುವರ್ಜಿ ವಹಿಸಿ ಗಾಡಿ ಮಾಡುವುದಾದರೆ ಖರ್ಚು ಮತ್ತು ಎಲ್ಲಿಗೆ ಸಾಗಿಸುವುದು ಎನ್ನುವ ಗೊಂದಲ ತಪ್ಪಿದ್ದಲ್ಲ. ಇದನ್ನು ತಪ್ಪಿಸಲೆಂದೇ ಲ್ಯಾಕ್ಸಿಂಗ್‌ಟನ್‌ ನಗರದ ಫಾಯೆಟ್ಟೆ ಕೌಂಟಿ ರೆಸಿಡೆಂಟ್ಸ್‌ ನಲ್ಲಿ ಫ್ರೀ ಟ್ರಾಶ್‌ ಡಿಸ್‌ಪೋಸಲ್ ಡೇ (ಉಚಿತ ಕಸ ವಿಲೇವಾರಿ ದಿನ) ಎಂಬ ಒಂದು ದಿನದ ಅಭಿಯಾನ ಕೈಗೊಂಡಿದೆ.

ಏನಿದು ಫ್ರೀ ಟ್ರಾಶ್‌ ಡಿಸ್‌ಪೋಸಲ್ ಡೇ?
ಪ್ರತಿ ವರ್ಷ ಜನವರಿ 13ರಂದು ಫ್ರೀ ಟ್ರಾಶ್‌ ಡಿಸ್‌ಪೋಸಲ್ ಡೇ ಎನ್ನುವ ಅಭಿಯಾನವನ್ನು ಲ್ಯಾಕ್ಸಿಂಗ್‌ಟನ್‌ನಲ್ಲಿ ಒಂದು ರೀತಿಯ ಹಬ್ಬದಂತೆ ಕೈಗೊಳ್ಳಲಾಗುತ್ತದೆ. ನಗರವಾಸಿಗಳು ಈ ದಿನಕ್ಕೆಂದು ಕಾದು ಕುಳಿತುಕೊಳ್ಳುವುದಿದೆ. ಒತ್ತಡದ ಬದುಕಿನ ನಡುವೆ ಕೋಣೆಗಳನ್ನು ಖಾಲಿ ಮಾಡುವುದೇ ದೊಡ್ಡ ಸಂತಸ. ಈ ಅಭಿಯಾನ ಕೈಗೊಳ್ಳುವುದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ರವರೆಗೆ. ನಗರಾಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ದೊಡ್ಡ ದೊಡ್ಡ ಗಾಡಿಗಳಲ್ಲಿ ಬೇಡವಾದ ವಸ್ತುಗಳನ್ನು ಹೊತ್ತೂಯ್ಯಲು ಬರುತ್ತಾರೆ. ಆದರೆ ಎಲ್ಲಾ ವಸ್ತುಗಳನ್ನು ನೀಡಲು ಇಲ್ಲಿ ಅವಕಾಶವಿಲ್ಲ. ಮರುಬಳಕೆಗೆ ಯೋಗ್ಯವಾಗುವಂತಹ ಎಲೆಕ್ಟ್ರಾನಿಕ್‌ ವಸ್ತುಗಳು, ಮನೆಯ ಪೀಠೊಪಕರಣಗಳು, ಟಯರ್‌ ಮುಂತಾದ ವಸ್ತುಗಳನ್ನು ಯಾವುದೇ ವೆಚ್ಚವಿಲ್ಲದೆ ಸಾಗಹಾಕಬಹುದು. ಹೀಗೆ ಯಾವುದೋ ಮೂಲೆಯಲ್ಲಿ, ಅಥವಾ ಎಲ್ಲೆಂದರಲ್ಲಿ ಬಿಸಾಡುವ ವಸ್ತುಗಳನ್ನು ಒಂದೆಡೆ ಸೇರಿಸಿ ಮರುಬಳಕೆಗೆ ಪೂರಕವಾದ ವಸ್ತುಗಳನ್ನು ತಯಾರಿಸುವ ಈ ಕಾರ್ಯ ಸ್ವಚ್ಛ ನಗರ ನಿರ್ಮಾಣದೆಡೆಗೆ ಒಂದು ಉತ್ತಮ ಹೆಜ್ಜೆಯಾಗಿದೆ.

ಮಂಗಳೂರು ಅಭಿಯಾನಕ್ಕೆ ಮನಸ್ಸು ಮಾಡಲಿ
ಕೇಂದ್ರ ಸರಕಾರದ ಸ್ವಚ್ಛತಾ ಅಭಿಯಾನ ದೇಶದೆಲ್ಲೆಡೆ ಟ್ರೆಂಡ್‌ ರೀತಿಯಲ್ಲಿ ಹಬ್ಬಿಕೊಂಡು ಇವತ್ತಿಗೂ ಛಲಬಿಡದೆ ಈ ಕಾರ್ಯವನ್ನು ನಡೆಸುಕೊಂಡು ಬಂದಿರುವುದು ಪ್ರಶಂಸನೀಯ. ಇಂತಹ ಅಭಿಯಾನದ ಜತೆಗೆ ಮೇಲೆ ಹೇಳಿದ ಈ ರೀತಿಯ ಕಲ್ಪನೆ ಜೋಡನೆಗೊಂಡಾಗ ಇನ್ನಷ್ಟು ಸ್ವಚ್ಚತಾ ಕಾರ್ಯಕ್ಕೆ ಹೊಸ ಹುಮ್ಮಸ್ಸನ್ನು ನೀಡುತ್ತದೆ. ಈ ಕಲ್ಪನೆ ಕಾರ್ಯರೂಪಕ್ಕೆ ಬಂದಾಗ ಮುಂದೊಂದು ದಿನ ದೇಶದ ಪ್ರಮುಖ ನಗರಗಳ ಸಾಲಿನಲ್ಲಿ ಮಂಗಳೂರು ರಾರಾಜಿಸುವುದರಲ್ಲಿ ಸಂಶಯವಿಲ್ಲ.

Advertisement

-ವಿಶ್ವಾಸ್‌ ಅಡ್ಯಾರ್‌

Advertisement

Udayavani is now on Telegram. Click here to join our channel and stay updated with the latest news.

Next