ಹಾನಗಲ್ಲ: ಮೋದಿ ಸರ್ಕಾರ ಬಡವರ ಸರ್ಕಾರವಾಗಿದ್ದು ರಾಷ್ಟ್ರೀಯ ಬದ್ಧತೆಗೆ ಇನ್ನೊಂದು ಹೆಸರು ನರೇಂದ್ರ ಮೋದಿ ಎಂದು ಶಾಸಕ ಸಿ.ಎಂ.ಉದಾಸಿ ಬಣ್ಣಿಸಿದರು.
ಶುಕ್ರವಾರ ಹಾನಗಲ್ಲಿನ ಉದಾಸಿ ಸಾವಿತ್ರಮ್ಮ ಕಲ್ಯಾಣಮಂಟಪದಲ್ಲಿ ಭಾರತ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ವಿತರಣೆ ಕಾರ್ಯಕ್ರಮದಲ್ಲಿ ಬಡ ಫಲಾನುಭವಿಗಳಿಗೆ ಅಡುಗೆ ಅನಿಲ ಸಿಲೆಂಡರ್ ಕಿಟ್ ವಿತರಿಸಿ ಮಾತನಾಡಿದ ಅವರು, ದೇಶದ ಪ್ರತಿ ಪ್ರಜೆಯೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ಸದುದ್ದೇಶದಿಂದ ಪ್ರಧಾನಿ ಮೋದಿ ಅವರು ಕೈಗೊಂಡ ಕ್ರಮ ದೇಶದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಿಸಲು ಈ ಬ್ಯಾಂಕ್ ಖಾತೆ ಸಹಕಾರಿಯಾಗಿವೆ.
ಸರ್ಕಾರದಿಂದ ಸಿಗುವ ಯೋಜನೆಗಳ ಲಾಭ ನಿಜವಾದ ಫಲಾನುಭವಿಗಳಿಗೆ ಸಿಗಬೇಕೇ ಹೊರತು ದಲ್ಲಾಳಿಗಳ ಪಾಲಾಗಬಾರದು ಎಂಬುದು ಮೋದ ಅವರ ಕಾರ್ಯ ವೈಖರಿ ಹಿಂದಿರುವ ಸದುದ್ದೇಶ ಎಂದರು.
2022ರ ಹೊತ್ತಿಗೆ ದೇಶದ ಎಲ್ಲ ಮನೆಗಳಲ್ಲಿ ಅಡುಗೆ ಅನಿಲ ಬಳಕೆಯಾಗುತ್ತದೆ. ಈ ಮೂಲಕ ಪರಸರ ರಕ್ಷಣೆ, ಆರೋಗ್ಯ ರಕ್ಷಣೆಯೇ ಮುಖ್ಯ ಉದ್ದೇಶವಾಗಿದ್ದು, ಬಡವರಿಗೆ ಈ ಸೌಲಭ್ಯವನ್ನು ಉಚಿತವಾಗಿ ಪಡೆಯಲು ಮೋದಿ ಅವಕಾಶ ನೀಡಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ನ್ಯಾಯವಾದಿ ಬಿ.ಎಸ್.ಅಕ್ಕಿವಳ್ಳಿ, ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 6 ಕೋಟಿ ಜನರಿಗೆ ಉಜ್ವಲ್ ಯೋಜನೆಯಡಿ ಉಚಿತವಾಗಿ ಅಡುಗೆ ಅನಿಲ ವ್ಯವಸ್ಥೆ ಒದಗಿಸಿದೆ. ಹಾನಗಲ್ಲಿನಲ್ಲಿ ಈ ಇಂದು 150 ಬಡ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಕಿಟ್ ನೀಡಲಾಗುತ್ತಿದೆ. ಈ ಯೋಜನೆ ಬಡವರ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ. ಈ ಮೂಲಕ ಹೊಗೆ ರಹಿತ ಮನೆ ನಿರ್ಮಿಸಿ ಮಹಿಳೆಯರ ಆರೋಗ್ಯ ಕುರಿತು ಕಾಳಜಿ ವಹಿಸಲಾಗಿದೆ. ಮೋದಿ ಸರ್ಕಾರ ಬಡವರ ಸರ್ಕಾರ ಎಂದ ಅವರು, ಆವಾಸ ಯೋಜನೆಯಲ್ಲಿ ಬಹುಪಾಲು ಬಡವರು ಲಾಭ ಪಡೆದಿದ್ದಾರೆ ಎಂದು ತಿಳಿಸಿದರು.
ಮೂಕಾಂಬಿಕಾ ಗ್ಯಾಸ್ ಏಜೇನ್ಸಿ ಮಾಲೀಕ ಎಚ್.ರವಿಕುಮಾರ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಪುರಸಭೆ ಮಾಜಿ ಅಧ್ಯಕ್ಷೆ ಹಸೀನಾಬಿ ನಾಯ್ಕನವರ, ಸುನಕವ್ವ ಚಿಕ್ಕಣ್ಣನವರ, ಶೋಭಾ ಉಗ್ರಣ್ಣನವರ, ಬಸವರಾಜ ಯಲಿ, ಚನ್ನವೀರಸ್ವಾಮಿ ಹಿರೇಮಠ, ಭಾಸ್ಕರ ಹುಲಮನಿ, ಚಂದ್ರಕಾಂತ ಉಗ್ರಣ್ಣನವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.