ಕುಂದಾಪುರ: ಫೋಕ್ಸೋ ಕಾಯಿದೆಯಡಿ ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿದ್ದ ತಲ್ಲೂರು ಗ್ರಾಮದ ಕೋಟೆಬಾಗಿಲಿನ ನಿವಾಸಿ ಉದಯ್ ಗೆ ಉಡುಪಿಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಏನಿದು ಪ್ರಕರಣ:
ಆರೋಪಿಯು ಬಾಲಕಿಯೊಬ್ಬಳನ್ನು ಅಪಹರಿಸಿಕೊಂಡು ಹೋಗಿರುವುದಾಗಿ ಬಾಲಕಿಯ ತಾಯಿ ದೂರು ನೀಡಿದ್ದರು. ಪೊಲೀಸರು ಆರೋಪಿಯ ಪತ್ತೆಗೆ ಪ್ರಯತ್ನಿಸಿದ್ದ ಸಂದರ್ಭದಲ್ಲಿ ಆತ ಹಾಗೂ ಬಾಲಕಿ ಸಿಕ್ಕಿರಲಿಲ್ಲವಾಗಿತ್ತು.
ಪತ್ತೆಯಾದ ಮೇಲೆ ಅವರಿಬ್ಬರೂ ವಿವಾಹವಾಗಿ ಒಂದು ಮಗು ಇರುವುದು ಬೆಳಕಿಗೆ ಬಂದಿತ್ತು. 18 ವರ್ಷದ ಒಳಗಿನ ಬಾಲಕಿ ಜೊತೆ ದೈಹಿಕ ಸಂಪರ್ಕ ಬೆಳೆಸುವುದು ಅದು ಕಾನೂನಿನ ಪ್ರಕಾರ ಅತ್ಯಾಚಾರ ಎಂಬ ವ್ಯಾಖ್ಯಾನದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಆಕೆಯ ವಿವಾಹ ಹಾಗೂ ಸಮ್ಮತಿಯನ್ನೂ ಪರಿಗಣಿಸುವಂತಿಲ್ಲ, ಇದೊಂದು ವಿಶಿಷ್ಟವಾದ ಪ್ರಕರಣವಾಗಿದ್ದು, ಮಾನವೀಯ ವಿಚಾರ ಒಳಗೊಂಡಿತ್ತು. ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ ಅವರು ವಾದ, ಪ್ರತಿವಾದ ಆಲಿಸಿ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.