Advertisement

ನಾಲ್ಕು ನಾಡ ಪಿಸ್ತೂಲ್‌ ವಶ; ನಾಲ್ವರ ಸೆರೆ

02:47 PM Sep 02, 2022 | Team Udayavani |

ಕಲಬುರಗಿ: ಅಕ್ರವಾಗಿ ನಾಡ ಪಿಸ್ತೂಲ್‌ ಹೊಂದಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ನಾಲ್ಕು ನಾಡ ಪಿಸ್ತೂಲ್‌ ಮತ್ತು 18 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮುಖೇನ ಅಕ್ರಮ ನಾಡ ಪಿಸ್ತೂಲ್‌ ಮಾರಾಟ ಮಾಡುವವರ ಮುಖವೂ ಬಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ತಿಳಿಸಿದರು.

Advertisement

ನಗರದ ಪೊಲೀಸ್‌ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರನ್ನು ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದ ನಿವಾಸಿಗಳಾದ ಭೀಮಣ್ಣ ಅಮ್ಮಣ್ಣ ಪೂಜಾರಿ (35), ಸಿದ್ಧಪ್ಪ ಸಿದ್ರಾಮಪ್ಪ ಡಿಗ್ಗಾವಿ(37), ಜೇವರ್ಗಿ ತಾಲೂಕಿನ ಮಂದೇವಾಲ್‌ ಗ್ರಾಮದ ಸಲಿಂ ಮಿಟ್ಟೆಸಾಬ್‌ ಶಿರಸಗಿ (22) ಮತ್ತು ಮಳ್ಳಿ ಗ್ರಾಮದ ಪರಸಯ್ಯ ಮಲ್ಲಿಕಾರ್ಜುನ ಗುತ್ತೇದಾರ (21) ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ನಾಡ ಪಿಸ್ತೂಲ್ಹೇಗೆ ಪತ್ತೆ?: ಬಂಧಿತ ಸುಂಬಡ ಗ್ರಾಮದ ಭೀಮಣ್ಣ ಮತ್ತು ಆಳಂದ ತಾಲೂಕಿನ ಝಳಕಿ (ಕೆ) ಗ್ರಾಮದ ನಿವಾಸಿ ಸೈಪನಸಾಬ್‌ ಇಬ್ಬರೂ ಮುಂಬೈನಲ್ಲಿ ಇರುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು. ಪರಸ್ಪರ ಸ್ನೇಹಿತರಾಗಿದ್ದರು. ಈ ಮಧ್ಯೆ ಸೈಪನ್‌ಸಾಬ್‌ ಕೆಲಸ ಬಿಟ್ಟು ನಿಧಿ ಅಗೆಯುವ ಕೆಲಸಕ್ಕೆ ಇಳಿದು ಮುಂಬೈ ಬಿಟ್ಟು ಬಂದಿದ್ದ. ಆದರೆ, ಕೆಲ ದಿನಗಳ ಬಳಿಕ ಪುನಃ ಸಂಪರ್ಕಕ್ಕೆ ಬಂದಿದ್ದರು. ಆಗ ನಾಡ ಪಿಸ್ತೂಲ್‌ ಖರೀದಿ ಮಾಡಿ ಸ್ಥಳೀಯರಿಗೆ ಮಾರಾಟ ಮಾಡುವ ಕುರಿತು ಚರ್ಚಿಸಿದ್ದರು. ಅಲ್ಲಿಂದ ನಾಡ ಪಿಸ್ತೂಲ್‌ ವ್ಯವಹಾರ ಆರಂಭಿಸಿದ್ದರು ಎಂದು ಪಂತ್‌ ವಿವರಿಸಿದರು.

ಮಧ್ಯಪ್ರವೇಶ ರಾಜ್ಯದಿಂದ ಖರೀದಿ: ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿ ಅಕ್ರಮವಾಗಿ ಪಿಸ್ತೂಲ್‌ಗ‌ಳನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಮಾಹಿತಿ ದೊರೆತ ತಕ್ಷಣ ಭೀಮಣ್ಣ ಮಧ್ಯಪ್ರದೇಶಕ್ಕೆ ಹೊರಡಲು ತಯಾರಾಗಿದ್ದ. ಸೈಫ್‌ನ್‌ ಸಾಬ್‌ ನೆರವಿನಿಂದ ಬಾಬು ಎನ್ನುವ ವ್ಯಕ್ತಿ ಜತೆಯಲ್ಲಿ 2022ರ ಮೇ ತಿಂಗಳಲ್ಲಿ ಮಧ್ಯಪ್ರದೇಶಕ್ಕೆ ಹೋಗಿ 20ರಿಂದ 25ಸಾವಿರ ರೂ. ನೀಡಿ ಪಿಸ್ತೂಲ್‌ ಖರೀದಿ ಮಾಡಿಕೊಂಡು ಬಂದಿದ್ದರು. ಅದನ್ನು ಪರಸಯ್ಯ ಎನ್ನುವ ವ್ಯಕ್ತಿಗೆ 65ಸಾವಿರ ರೂ.ಗೆ ಮಾರಾಟ ಮಾಡಲಾಗಿತ್ತು. ಇದರಿಂದ ಆದಾಯ ಮಾಡಬಹುದು ಎನ್ನುವುದು ಖಾತರಿ ಆಗುತ್ತಿದ್ದಂತೆ ಪುನಃ ಜೂನ್‌ ತಿಂಗಳಲ್ಲಿ ಸಿದ್ಧಪ್ಪನ್ನನು ಕರೆದುಕೊಂಡು ಮತ್ತೂಂದು ಪಿಸ್ತೂಲ್‌ ತಂದು ಸಲೀಂ ಎನ್ನುವರಿಗೆ ಮಾರಾಟ ಮಾಡಿದ್ದ. ಹೀಗೆ ಒಟ್ಟು ನಾಲ್ಕು ಪಿಸ್ತೂಲ್‌ ಗಳನ್ನು ತಂದು ಮಾರಾಟ ಮಾಡಿದ್ದಾನೆ ಎಂದು ಪಂತ್‌ ಮಾರಾಟ ಜಾಲವನ್ನು ಬಿಡಿಸಿಟ್ಟರು.

ಸೈಫನ್ಸಾಬ್ಪರಾರಿ: ಪಿಸ್ತೂಲ್‌ ಮಾರಾಟಕ್ಕೆ ನೆರವು ಮತ್ತು ಮಾಹಿತಿ ನೀಡಿ ಸಂಪರ್ಕ ಕಲ್ಪಿಸಿಕೊಟ್ಟಿದ್ದ ಆಳಂದ ಮೂಲದ ಸೈಫನ್‌ಸಾಬ್‌ ಪರಾರಿಯಾಗಿದ್ದಾನೆ. ಆತನ ವಿರುದ್ಧ ಒಟ್ಟು 10 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಹುಡುಕಾಟ ನಡೆಯುತ್ತಿದೆ. ಆತ ಸಿಕ್ಕ ಬಳಿಕ ಇನ್ನಷ್ಟು ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆಗಳಿವೆ ಎಂದರು. ಎಎಸ್ಪಿ ಪ್ರಸನ್ನ ದೇಸಾಯಿ, ಆಳಂದ ಡಿವೈಎಸ್ಪಿ ರವೀಂದ್ರ ಶಿರೂರ್‌, ಅಫಜಲಪುರ ಸಿಪಿಐ ರಾಜಶೇಖರ ಬಡದೆಸಾರ್‌ ಮತ್ತಿತರರಿದ್ದರು.

Advertisement

ಜಿಲ್ಲೆಯಲ್ಲಿ ಪಿಸ್ತೂಲ್ಮಾರಾಟ ಜಾಲ ಸಕ್ರಿಯ?

ನಾಲ್ಕು ನಾಡ ಪಿಸ್ತೂಲ್‌ ಮತ್ತು ನಾಲ್ವರ ಬಂಧನದೊಂದಿಗೆ ಜಿಲ್ಲೆಯಲ್ಲಿ ಅಕ್ರಮ ಪಿಸ್ತೂಲ್‌ಗ‌ಳ ಮಾರಾಟ ನಡೆಯುತ್ತಿರುವ ವಿಷಯ ಬಯಲಾಗಿದೆ. ಇದಕ್ಕೂ ಮುನ್ನ ಹಲವಾರು ಬಾರಿ ಅಕ್ರಮ ಪಿಸ್ತೂಲ್‌ಗ‌ಳ ಮಾರಾಟ ಮತ್ತು ಬಂಧನ, ಅಫಜಲಪುರ, ಆಳಂದ, ಚಿಂಚೋಳಿ ಭಾಗದಲ್ಲಿ ನಡೆದ ಬಗ್ಗೆ ಗೊತ್ತಿರುವ ವಿಚಾರವೇ. ಆಗೆಲ್ಲ ಪ್ರಕರಣ ಎರಡು ದಿನ ಸದ್ದು ಮಾಡಿ ಸದ್ದಡಗುತ್ತಿತ್ತು. ಎಸ್ಪಿ ಇಶಾ ಪಂತ್‌ ಜಿಲ್ಲೆಗೆ ಬಂದ ಬಳಿಕ ಈ ನಿಟ್ಟಿನಲ್ಲಿ ಹಲವಾರು ಕಡೆಗಳಲ್ಲಿ ತಪಾಸಣೆ ನಡೆದಿತ್ತು. ಅಲ್ಲದೇ, ಅಕ್ರಮ ಪಿಸ್ತೂಲ್‌ ಜಾಲದ ಕುರಿತು ಸುಳಿವು ಮತ್ತು ಅರಿವು ಇರುವ ಕೆಲ ಪೇದೆಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಮೂರು ತಂಡಗಳನ್ನು ರಚಿಸಲಾಗಿತ್ತು. ಇದರಿಂದಾಗಿ ಜಾಲವನ್ನು ಬಹುಬೇಗನೆ ಕಂಡು ಹಿಡಿಯಲು ಸಾಧ್ಯವಾಗಿದೆ. ಅಲ್ಲದೇ, ಕೆಲ ವರ್ಷಗಳ ಹಿಂದೆ ಅಫಜಲಪುರದಲ್ಲಿ ಇಂತಹ ನಾಡ ಪಿಸ್ತೂಲ್‌ಗ‌ಳ ಮಾರಾಟ ಹೆಚ್ಚಾಗಿತ್ತು ಎಂದು ಕೇಳಿ ಬಂದಿತ್ತು. ಜಿಲ್ಲೆಯ ಜಾಲ ಪಕ್ಕದ ಮಹಾರಾಷ್ಟ್ರಕ್ಕೂ ಹಬ್ಬಿದ್ದು ಯುವಕರು, ಬಾಲಕರನ್ನು ಬಳಕೆ ಮಾಡಿಕೊಂಡು ಪಿಸ್ತೂಲ್‌ಗ‌ಳನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಕುರಿತು ಪೊಲೀಸರಿಗೆ ಮಾಹಿತಿ ಇತ್ತು ಎನ್ನವು ಅಂಶ ಗಡಿ ಗ್ರಾಮಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಜಾಲದ ವಹಿವಾಟಿನ ರೂವಾರಿಗಳನ್ನು ಗುರುತು ಮಾಡಿರಲಿಲ್ಲ. ಈಗ ಸೈಫ್‌ನ್‌ಸಾಬ್‌ ಪತ್ತೆಯಾಗಿದ್ದು, ಶೀಘ್ರವೇ ಇನ್ನಷ್ಟು ಮಾಹಿತಿ ದೊರೆಯಲಿದೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

ಇಡೀ ಪ್ರಕರಣದಲ್ಲಿ ಆರೋಪಿತರನ್ನು ಅತ್ಯಂತ ಜಾಗರೂಕವಾಗಿ ಬಲೆಗೆ ಬೀಳಿಸಿದ ಅಫಜಲಪುರ ಠಾಣೆ ಪಿಎಸ್‌ಐ ಸುರೇಶಕುಮಾರ ಚವ್ಹಾಣ, ಯಡ್ರಾಮಿ ಪಿಎಸ್‌ಐ ಬಸವರಾಜ್‌ ಚಿತಕೋಟಿ, ಅಫಜಲಪುರ ಎಎಸ್‌ಐ ರಾಜಶೇಖರ, ಪೇದೆಗಳಾದ ಸಂತೋಷ, ಪಂಡಿತ, ಇಮಾಮ್‌, ಭಾಗಣ್ಣ, ಮಾಡಬೂಳ ಠಾಣೆಯ ಪೇದೆ ಆನಂದ ಅವರ ಕಾರ್ಯ ಶ್ಲಾಘನೀಯ.ಇಶಾ ಪಂತ್‌, ಎಸಿ

Advertisement

Udayavani is now on Telegram. Click here to join our channel and stay updated with the latest news.

Next