Advertisement

ಪ್ರೀತಿಗೆ ಎದುರಾಗಿದ್ದಕ್ಕೆ ಉಸಿರಡಗಿಸಿದ ಕಿರಾತಕರು

08:03 PM Apr 19, 2021 | Team Udayavani |

ಧಾರವಾಡ: ಕೆಲ ದಿನಗಳ ಹಿಂದೆ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ರುಂಡ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಎಸ್‌ಪಿ ಪಿ.ಕೃಷ್ಣಕಾಂತ ಹೇಳಿದರು.

Advertisement

ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಹೋದರಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಗದರಿಸುತ್ತಿದ್ದ ಅಣ್ಣನನ್ನು, ಪ್ರಿಯಕರ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಹತ್ಯೆ ಮಾಡಿರುವ ಪ್ರಕರಣ ಇದಾಗಿದೆ. ನಿಯಾಜ್‌ ಅಹ್ಮದ್‌ ಸೈಪುದ್ದೀನ್‌ ಕಟಿಗಾರ (21), ತೌಸೀಫ್‌ ಚನ್ನಾಪುರ (21), ಅಲ್ತಾಫ್‌ ಮುಲ್ಲಾ (24) ಹಾಗೂ ಅಮನ್‌ ಉರ್ಫ್‌ ಮಹ್ಮದ ಉಮರ್‌ ಗಿರಣಿವಾಲೆ (19) ಎಂಬುವರನ್ನು ಬಂಧಿಸಲಾಗಿದೆ ಎಂದರು.

ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ರುಂಡ ಪತ್ತೆಯಾಗಿತ್ತು. ರುಂಡ ನೋಡಿದ್ದ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದರು. ರುಂಡವನ್ನು ಸುಟ್ಟು ಹಾಕಿದ್ದರಿಂದ ಪೊಲೀಸರು ಅದನ್ನು ಕಿಮ್ಸ್‌ ಆಸ್ಪತ್ರೆಗೆ ರವಾನಿಸಿ ಪರೀಕ್ಷೆಗೆ ಕಳಹಿಸಿದ್ದರು. ಇಷ್ಟರಲ್ಲೇ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರುಂಡವಿಲ್ಲದ ಕೈ, ಕಾಲುಗಳಿಲ್ಲದ ಮುಂಡ ಸಿಕ್ಕಿತ್ತು. ಇದೂ ಅರೆಬೆಂದ ದೇಹವಾಗಿತ್ತು. ಕೂಡಲೇ ಕೇಶ್ವಾಪುರ ಪೊಲೀಸರು ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಗೆ ವಿಷಯ ತಿಳಿಸಿದ್ದರು. ಆಗ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು ಎಂದು ಹೇಳಿದರು.

ತನಿಖಾಧಿಕಾರಿಗಳ ನಿರಂತರ ವಿಚಾರಣೆಯಿಂದ ಮೃತ ವ್ಯಕ್ತಿ ರಾಕೇಶ ಕಾಟವೆ ಎಂದು ಗುರುತಿಸಲಾಗಿದೆ. ಈತನನ್ನು ಕೊಲೆ ಮಾಡಿದ ಹುಬ್ಬಳ್ಳಿ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ 1ನೇ ಆರೋಪಿ ನಿಯಾಜ್‌ ಅಹ್ಮದ್‌ ಕಟಿಗಾರನು ಮೃತ ರಾಕೇಶ ಕಾಟವೆಯ ಸಹೋದರಿಯನ್ನು ಪ್ರೀತಿಸುತ್ತಿದ್ದ. ಹೀಗಾಗಿ ರಾಕೇಶನು ನಿಯಾಜ್‌ ಅಹ್ಮದನಿಗೆ ಗದರಿಸಿದ್ದಾನೆ. ಇದರಿಂದ ಕೋಪಗೊಂಡ ನಿಯಾಜ್‌ ಅಹ್ಮದ್‌ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ರಾಕೇಶನನ್ನು ಹತ್ಯೆ ಮಾಡಿ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಆತನ ಮೃತ ದೇಹದ ರುಂಡ ಮತ್ತು ಮುಂಡವನ್ನು ಬೇರೆ ಬೇರೆಯ ಸ್ಥಳದಲ್ಲಿ ಎಸೆದಿದ್ದಾಗಿ ಆರೋಪಿತರು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಡಿವೈಎಸ್‌ಪಿ ಎಂ.ಬಿ. ಸಂಕದ ನೇತೃತ್ವದಲ್ಲಿ ಸಿಪಿಐಗಳಾದ ರಮೇಶ ಗೋಕಾಕ, ಪ್ರಭು ಸೂರಿನ್‌, ಪಿಎಸ್‌ಐಗಳಾದ ಮಹೇಂದ್ರ ನಾಯಕ, ಕಿರಣ ಮೋಹಿತೆ, ಎಸ್‌.ಆರ್‌. ಕಣವಿ, ಚಾಮುಂಡೇಶ್ವರಿ, ಬಸವರಾಜ ಹೂಗಾರ, ಪ್ರೊಬೆಷನರಿ ಪಿಎಸ್‌ಐ ಮಧು ಎಲ್‌., ರೂಪಾಲಿ ಗುಡೋಡಗಿ ಹಾಗೂ ಆರ್‌.ಎಂ. ಭದ್ರಾಪುರ, ಡಿ.ಎನ್‌. ನೀಲಮ್ಮನವರ, ಬಿ.ಎಸ್‌. ಹುಬ್ಬಳ್ಳಿ, ಎನ್‌.ಐ.ಹಿರೆಹೊಳಿ, ಎಚ್‌.ಬಿ. ಐಹೊಳೆ, ಎಂ.ಆರ್‌. ಗೊಲಂದಾಜ್‌, ಎಂ.ಎಫ್‌. ವಾಲೀಕಾರ, ಎಂ.ಎನ್‌. ತಡಹಾಳ, ದೇವರಾಜ ಎಸ್‌.ಎಂ., ಮಹಾಂತೇಶ ನಾನಾಗೌಡ, ಎ.ಎ. ಠಕ್ಕಾಯಿ, ಸಿ.ಬಿ. ಜನಗಣ್ಣವರ, ಎಂ.ಎಫ್‌. ಹೆಳವರ, ಆರ್‌.ಬಿ. ಕುಂದಗೋಳ, ಉದಯಕುಮಾರ, ಮಕುºಲ್‌ ಹುಲ್ಲೂರ, ಎಫ್‌. ಎಚ್‌. ಯಲಿಗಾರ, ವೈ.ಡಿ. ಕುಂಬಾರ, ಡೆವಿಡ್‌ ಕರಬಣ್ಣವರ, ಸಂತೋಷ ಜವಳಿ, ಅಮ್ಜದ್‌ ನವಲೂರ, ಸಿ.ಬಿ. ಮಾಳಗಿ ಅವರನ್ನೊಳಗೊಂಡ ತಂಡ ಆರೋಪಿಗಳ ಸೆರೆ ಕಾರ್ಯಾಚರಣೆ ನಡೆಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next