ಭೋಪಾಲ್: ಕೇಂದ್ರದ ಮಾಜಿ ಸಚಿವೆ,ಬಿಜೆಪಿ ನಾಯಕಿ ಉಮಾಭಾರತಿ ಅವರು ಅನಾರೋಗ್ಯದ ಕಾರಣ ಶನಿವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರು ರವಿವಾರ ರಾತ್ರಿ ಟ್ವಿಟರ್ ಪೋಸ್ಟ್ನಲ್ಲಿ ತಮ್ಮ ಅನಾರೋಗ್ಯದ ವಿಚಾರ ಬಹಿರಂಗಪಡಿಸಿದ್ದಾರೆ.
ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ, ನಾನು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದಾಗ ನನ್ನನ್ನು ನನ್ನ ನಿವಾಸದ ಬಳಿಯ ಸ್ಮಾರ್ಟ್ ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನನ್ನ ಎಲ್ಲಾ ಪರೀಕ್ಷೆಗಳಲ್ಲಿ, ನಾನು ಆರೋಗ್ಯವಾಗಿದ್ದೇನೆ ಆದರೆ ತುಂಬಾ ದಣಿದಿದ್ದೇನೆ ಮತ್ತು ದುರ್ಬಲಳಾಗಿದ್ದೇನೆ ಎಂದು ಟ್ವಿಟರ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ನನಗೆ ಹಲವು ತಿಂಗಳ ವಿಶ್ರಾಂತಿ ಸೂಚಿಸಲಾಗಿದೆ ಎಂದು ಉಮಾ ಟ್ವೀಟ್ ಮಾಡಿದ್ದಾರೆ.ಇದಲ್ಲದೇ, 55 ವರ್ಷ ನಾನು ಜನಸೇವೆ ಮಾಡಿದ್ದೇನೆ.ನನ್ನನ್ನು ಮರೆಯಬೇಡಿ ಎಂದು ಜನತೆಗೆ ಕೋರಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ನನ್ನ ಕುಟುಂಬದ ಸದಸ್ಯೆ, ಗೌರವಾನ್ವಿತ ಉಮಾಭಾರತಿ ಅವರು ಅಸ್ವಸ್ಥರಾಗಿದ್ದಾರೆ ಎಂದು ತಿಳಿಯಿತು. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಮತ್ತು ಬಿಜೆಪಿ ನಾಯಕ ಸಿಂಧಿಯಾ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.