Advertisement

ಕಟ್ಟೆಯೊಡೆದ ಮಣ್ಣಿನ ಮಕ್ಕಳ ಆಕ್ರೋಶ

09:57 AM Jun 08, 2019 | Team Udayavani |

ಬೆಳಗಾವಿ: ತಾಲೂಕಿನ ಹಲಗಾ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚರಂಡಿ ನೀರು ಶುದ್ಧೀಕರಣ ಘಟಕ ಕಾಮಗಾರಿ ಸ್ಥಗಿತಗೊಳಿಸುವಂತೆ ಶುಕ್ರವಾರವೂ ಪ್ರತಿಭಟನೆ ಮುಂದುವರಿಸಿದ ರೈತರು, ಫಲವತ್ತಾದ ಜಮೀನು ಕಬಳಿಸಲಾಗುತ್ತಿದೆ ಎಂದು ಆರೋಪಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಎದುರೇ ರೈತ ಮಹಿಳೆ ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು.

Advertisement

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ ನೂರಾರು ರೈತರು, ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು. ಘಟಕ ನಿರ್ಮಾಣ ಮಾಡಲು ಫಲವತ್ತಾದ ಜಮೀನು ಕಸಿದುಕೊಳ್ಳುವುದು ಯಾವ ನ್ಯಾಯ. ಯಾವುದೇ ಕಾರಣಕ್ಕೂ ನಮ್ಮ ಜಮೀನು ಬಿಟ್ಟು ಕೊಡುವುದಿಲ್ಲ. ಇಂಥ ಅಭಿವೃದ್ಧಿ ಕಾರ್ಯಗಳಿಗೆ ಬರಡು ಭೂಮಿ ಬಳಸಿಕೊಳ್ಳುವುದರ ಬದಲು ಇಂಥ ಬಂಗಾರದ ಭೂಮಿಗೆ ಕೈ ಹಾಕುವುದು ಸರಿಯಲ್ಲ ಎಂದು ಆರೋಪಿಸಿದರು.

ಜಿಲ್ಲಾಡಳಿತ ಕ್ರಮ ಖಂಡಿಸಿ ಪ್ರತಿಭಟನಾ ನಿರತ ಮಹಿಳೆಯೊಬ್ಬರು ವಿಷದ ಬಾಟಲಿ ಹಿಡಿದು ಘೋಷಣೆ ಕೂಗಿದರು. ಮನವಿ ಸ್ವೀಕರಿಸಲು ಬಂದ ಜಿಲ್ಲಾಧಿಕಾರಿ ಎದುರು ಮಹಿಳೆ ವಿಷದ ಬಾಟಲಿ ಹಿಡಿದು ಸೇವಿಸಲು ಯತ್ನಿಸಿದಾಗ ಕೂಡಲೇ ಸ್ಥಳದಲ್ಲಿದ್ದವರು ಬಾಟಲಿ ಕಸಿದುಕೊಂಡರು. ಪೊಲೀಸರು ಬಾಟಲಿ ವಶಕ್ಕೆ ಪಡೆದಕೊಂಡರು. ಜಿಲ್ಲಾಧಿಕಾರಿ ಭರವಸೆ ನೀಡಲು ಮುಂದಾದರೂ ರೈತರು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯಲು ಒಪ್ಪಲಿಲ್ಲ.

ನಂತರ ಜಿಲ್ಲಾಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ ಅವರು ತಮ್ಮ ಕಚೇರಿಯಿಂದ ಮನೆಗೆ ಊಟಕ್ಕೆ ಹೋಗುತ್ತಿದ್ದಾಗ ರೈತರು ಕಾರಿಗೆ ಮುತ್ತಿಗೆ ಹಾಕಿದರು. ಕಾರಿನ ಎದುರು ಮಲಗಿಕೊಂಡು ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮತ್ತೆ ಕಚೇರಿಗೆ ಜಿಲ್ಲಾಧಿಕಾರಿಗಳು ವಾಪಸಾದರು.

ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆ ಸಮೇತ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಪ್ರತಿಭಟನೆ ನಡೆಸಲು ಆಗಮಿಸಿದ್ದರು. ತಲೆ ಮೇಲೆ ಬೆಳೆ ಹೊತ್ತುಕೊಂಡು ಪ್ರತಿಭಟನೆ ನಡೆಸಿದರು. ಬೆಳಗ್ಗೆಯಿಂದ ಸಂಜೆವರೆಗೂ ಕುಳಿತು ನ್ಯಾಯಕ್ಕಾಗಿ ಮೊರೆ ಇಟ್ಟರು. ಕೃಷಿ ಭೂಮಿಯಲ್ಲಿ ತ್ಯಾಜ್ಯ ಹಾಗೂ ಕೊಳಕು ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡುತ್ತಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.

Advertisement

ಜನೆವರಿ 2019ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯ ನಿರ್ಣಯದಂತೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪೊಲೀಸರ ಗೂಂಡಾ ವರ್ತನೆಯನ್ನು ಮುಂದಿಟ್ಟುಕೊಂಡು ಜಿಲ್ಲಾಡಳಿತ ರೈತರ ಫಲವತ್ತಾದ ಜಮೀನಿನ ಮೇಲೆ ಜೆಸಿಬಿ ಹತ್ತಿಸಿ ಬೆಳೆ ನಾಶ ಮಾಡಿ ಭೂಮಿ ಕಬಳಸಿಕೊಳ್ಳಲಾಗುತ್ತಿದೆ. ಇದರಿಂದ ರೈತರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ದೂರಿದರು.

ಈ ರೀತಿ ಬೇಜವಾಬ್ದಾರಿ ಹಾಗೂ ಅವೈಜ್ಞಾನಿಕವಾಗಿ ಭೂಮಿ ಕಬಳಿಸಿಕೊಳ್ಳುತ್ತಿರುವ ಜಿಲ್ಲಾಡಳಿತ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಇಂಥ ವಿನಾಶಕಾರಿ ಕೃತ್ಯದಿಂದ ರೈತರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿದೆ. ಈ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರಾದ ಪ್ರಕಾಶ ನಾಯಕ, ಸಂಜು ಹುಡೇದ, ಸುಕುಮಾರ ಹುಡೇದ ಹುಸೇನ ಇಮ್ಮನ್ನವರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next