Advertisement

ಆನೆ ಹಾವಳಿ ತಡೆಯಲು ಅರಣ್ಯ ಇಲಾಖೆಯ ಹೊಸ ಚಿಂತನೆ

11:38 AM Jun 11, 2018 | Team Udayavani |

ಮಹಾನಗರ: ಕೃಷಿ ಭೂಮಿಗೆ ಆನೆಗಳು ನುಗ್ಗುವುದನ್ನು ತಡೆಯಲು ಅರಣ್ಯ ಇಲಾಖೆಯು ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ‘ವಿಶೇಷ ತಡೆ’ (ಸ್ಪೆಷಲ್‌ ಸ್ಟ್ರಕ್ಚರ್) ನಿರ್ಮಿಸಲು ಯೋಜನೆ ರೂಪಿಸಿದೆ. ನೀರು ಹರಿಯುವ ತೋಡುಗಳಿಗೆ ಅಡ್ಡಲಾಗಿ ಇವನ್ನು ನಿರ್ಮಿಸಿ ಆನೆಗಳ ಪ್ರವೇಶ ತಡೆಯುವುದು ಇದರ ಸ್ಥೂಲ ಚಿತ್ರಣ.

Advertisement

ಆನೆಗಳಿಂದ ಬೆಳೆ ನಾಶ ತಡೆಯಲು ಈ ಹಿಂದೆ ಸೋಲಾರ್‌ ಬೇಲಿ, ಆನೆ ಕಂದಕ ನಿರ್ಮಿಸಲಾಗಿತ್ತು. ಆದರೆ ಸಂಪೂರ್ಣ ಪರಿಹಾರ ಸಿಕ್ಕಿರಲಿಲ್ಲ. ಜನ ಸಂಚಾರವಿರುವಲ್ಲಿ ಸೋಲಾರ್‌ ಬೇಲಿ ಅಳವಡಿಸಲು, ನೀರು ಹರಿಯುವ ನದಿ- ತೋಡುಗಳಲ್ಲಿ ಆನೆ ಕಂದಕ ನಿರ್ಮಿಸಲು ಅಸಾಧ್ಯ ಎಂಬುದೇ ಇದಕ್ಕೆ ಕಾರಣ. ಹೀಗಾಗಿ ಜಿಲ್ಲೆಯ ಕಾಡಿನಂಚಿನ ನದಿ, ತೋಡುಗಳಲ್ಲಿ ವಿಶೇಷ ತಡೆ ನಿರ್ಮಿಸಿ ಆನೆಗಳ ಪ್ರವೇಶಕ್ಕೆ ತಡೆ ಹಾಕಲು ಇಲಾಖೆ ಗಮನಹರಿಸಿದೆ.

ವಿಶೇಷ ತಡೆ ರಚನೆ ಹೇಗಿರುತ್ತದೆ ?
ಸಿಮೆಂಟ್‌ ಹಾಗೂ ಕಬ್ಬಿಣದ ಬೀಮ್‌ಗಳನ್ನು ತಯಾರಿಸಿ, ನೀರು ಹರಿಯುವ ತೋಡುಗಳಲ್ಲಿ ಪ್ರತಿ 80 ಸೆಂ.ಮೀ. ಅಥವಾ 1 ಮೀ. ಅಂತರದಲ್ಲಿ ಸುಮಾರು 2 ಮೀ. ಎತ್ತರಕ್ಕೆ ಕಂಬಗಳನ್ನಾಗಿ ನಿಲ್ಲಿಸಲಾಗುತ್ತದೆ. ಅನಂತರ ಅವುಗಳಿಗೆ ಕಬ್ಬಿಣದ ಮುಳ್ಳುಗಳನ್ನು ಜೋಡಿಸಲಾಗುತ್ತದೆ. ಕಂಬಗಳ ನಡುವೆ ಅವಕಾಶ ಕಿರಿದಾಗಿರುವುದರಿಂದ ಆನೆಗಳಿಗೆ ಇದನ್ನು ದಾಟಿ ಒಳಬರುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ದಾಟಲು ಪ್ರಯತ್ನಪಟ್ಟರೂ ಮುಳ್ಳು ಚುಚ್ಚುವ ಕಾರಣ ಆನೆಗಳು ಹಿಂಜರಿಯುತ್ತವೆ.

ಬಂಡೀಪುರ, ನಾಗರಹೊಳೆ ಉದಾಹರಣೆ
ಈ ವಿಶೇಷ ತಡೆ ರಚನೆ ಅಳವಡಿಕೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ. ಆದರೆ ಆನೆಗಳು ಅತೀ ಹೆಚ್ಚಿರುವ ಬಂಡೀಪುರ ಹಾಗೂ ನಾಗರಹೊಳೆಯಂತಹ ಅರಣ್ಯ ಪ್ರದೇಶಗಳಲ್ಲಿ ಈಗಾಗಲೇ ನಿರ್ಮಿಸಲಾಗಿದೆ; ಆನೆಗಳ ಹಾವಳಿ ತಡೆಯುವಲ್ಲಿ ಗಣನೀಯ ಯಶಸನ್ನನ್ನೂ ಸಾಧಿಸಿದೆ. ಹೀಗಾಗಿ ಈ ಪ್ರಯೋಗವನ್ನು ಜಿಲ್ಲೆಯಲ್ಲೂ ನಡೆಸಲು ಜಿಲ್ಲಾ ಅರಣ್ಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಆನೆ ಹಾವಳಿ ಹೆಚ್ಚಿರುವ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಇದರ ಅಳವಡಿಕೆ ಯಶಸ್ವಿಯಾಗಬಹುದು ಎನ್ನುವ ಲೆಕ್ಕಾಚಾರ ಅವರದು.

ಈ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ| ವಿ. ಕರಿಕಳನ್‌, ವಿಶೇಷ ತಡೆಗಳನ್ನು ಎಲ್ಲಿ ನಿರ್ಮಿಸಬಹುದೆನ್ನು ವುದಕ್ಕಾಗಿ ಸರ್ವೆ ನಡೆಸುವಂತೆ ಸೂಚನೆನೀಡಲಾಗಿದೆ. ವರದಿ ಬಂದ ಬಳಿಕ ಮೇಲಧಿಕಾರಿಗಳ ಅಂಗೀಕಾರ ಪಡೆದು ನಿರ್ಮಿಸಲಾಗುವುದು ಎಂದಿದ್ದಾರೆ. 

Advertisement

ಕಾಡಾನೆ ದಾಂಧಲೆ ಇಳಿಕೆ
ಜಿಲ್ಲೆಯಲ್ಲಿ ಕಾಡಾನೆಗಳು ಕೃಷಿ ಭೂಮಿಗೆ ನುಗ್ಗಿದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಇಳಿಕೆ ಆಗಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಇಲಾಖೆ ನಿರ್ಮಿಸಿರುವ ಆನೆ ಕಂದಕಗಳೂ ಕಾರಣ ಎನ್ನಬಹುದು. ಹಾಗಿದ್ದರೂ ಆನೆ ದಾಳಿ ಸಂಪೂರ್ಣ ನಿಲ್ಲದ ಕಾರಣ ಈಗ ಈ ವಿಶೇಷ ತಡೆ ರಚನೆಯ ಮೊರೆ ಹೊಗಲು ಇಲಾಖೆ ನಿರ್ಧರಿಸಿರುವುದು ಗಮನಾರ್ಹ.

ಗಣೇಶ್‌ ಮಾವಂಜಿ

Advertisement

Udayavani is now on Telegram. Click here to join our channel and stay updated with the latest news.

Next