Advertisement

ಕಾನನದ ಯೋಧರು: ಅರಣ್ಯ ಇಲಾಖೆಯ ದಿನಗೂಲಿ ನೌಕರರು

06:00 AM Jun 24, 2018 | |

ಆನೆ ಓಡಿಸಲು ಹೋಗಿ ವಿಧಿವಶರಾದ ಚಿಕ್ಕೀರಯ್ಯ, ಬಿಳಿಗಿರಿರಂಗನಬೆಟ್ಟದ ಬುಡದಲ್ಲಿ ಕಾಡ್ಗಿಚ್ಚು ನಂದಿಸಲು ಹೋಗಿ ಕಣ್ಣು ಕಳೆದುಕೊಂಡ ಕಂಚಗಳ್ಳಿಯ ಮಾದೇಗೌಡ, ಕಳ್ಳಬೇಟೆಗಾರರನ್ನು ತಡೆಯಲು ಹೋಗಿ ತಾನೇ 32 ಚಿಲ್ಲುಗಳಿಂದ ಗಾಯಗೊಂಡ ಬೆಂಡುಗೋಡಿನ ಸಿದ್ದರಾಜು ಹೀಗೆ ಅರಣ್ಯ ಇಲಾಖೆಯ ನೂರಾರು ದಿನಗೂಲಿ ನೌಕರರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಕಾಡು, ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

Advertisement

ಮಾರ್ಚ್‌ ತಿಂಗಳ ಬಿಸಿಲಿನ ಕಾಲ, ಕಾಡು ಒಣಗಿದೆ. ಕನಕಪುರ ತಾಲೂಕಿನ ಯಡಮಾರನಹಳ್ಳಿ ಗ್ರಾಮದ ಹತ್ತಿರವಿರುವ ಕೆರೆಗೆ ಏಳು ಕಾಡಾನೆಗಳು ನೀರು ಕುಡಿಯಲು ಬಂದಿವೆ, ಆರು ಹೆಣ್ಣಾನೆಗಳು ಮತ್ತೂಂದು ಸಲಗ. ಸುಂದರ ಕುಟುಂಬ ಎನ್ನಬಹುದು.
ಕಾಡಿನ ಬದಿಯಲ್ಲಿದ್ದ ಕೆರೆಗೆ ಆನೆಗಳು ಮತ್ತು ಇತರ ವನ್ಯ ಜೀವಿಗಳು ಬರುವುದು ಸಾಮಾನ್ಯ. ಆದರೆ ಕೆರೆಯ ಬದಿಯಲ್ಲೇ ಹಳ್ಳಿಯಿದ್ದುದರಿಂದ ಸ್ಥಳೀಯ ಜನರಿಗೆ ಆನೆಗಳ ಇರುವಿಕೆಯ ಬಗ್ಗೆ ಇರಿಸುಮುರಿಸು. ಆನೆಗಳೇನಾದರೂ ತಮ್ಮ ಜಮೀನಿಗೆ ಬಂದರೆ, ನೀರಾವರಿ ಮಾಡಿ ಕಷ್ಟಪಟ್ಟು ಬೆಳೆಸಿರುವ ಬೆಳೆಗಳು ಹಾಳಾಗಬಹುದೆನ್ನುವ ಆತಂಕ. ಅದಕ್ಕಾಗಿ ಆನೆಗಳನ್ನು ಕಾಡಿಗೆ ಓಡಿಸಬೇಕೆಂದು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಲಾಯಿತು. ಸರಿ ಅಧಿಕಾರಿಗಳ ಆಜ್ಞೆಯ ಮೇರೆಗೆ ಆನೆಗಳನ್ನು ಕೆರೆಯಿಂದ “ಓಡಿಸುವ’ ಕಾರ್ಯ ಆರಂಭವಾಯಿತು. ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದವರಲ್ಲಿ, ಅರಣ್ಯ ಇಲಾಖೆ ಯಲ್ಲಿ ಹನ್ನೆರಡು ವರ್ಷದಿಂದ ದಿನಗೂಲಿ ಆಧಾರದ ಮೇಲೆ ಅರಣ್ಯ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ 45 ವರ್ಷದ ಚಿಕ್ಕೀರಯ್ಯ ಕೂಡ ಒಬ್ಬರು. 

ಬೆಳೆಗ್ಗೆ ಸುಮಾರು 10 ಗಂಟೆಯ ಸಮಯ ಅಧಿಕಾರಿಗಳ ಆದೇಶದ ಮೇರೆಗೆ ಕೆಲಸ ಆರಂಭವಾಯಿತು. ಮೂರೂ ದಿಕ್ಕಿ ನಿಂದ ಆನೆಗಳನ್ನು ಕಾಡಿನ ಕಡೆ ಓಡಿಸಲು ಪ್ರಯತ್ನ ಪ್ರಾರಂಭವಾಯಿತು. ಪಟಾಕಿ ಸಿಡಿಸುವುದು, ಅರಣ್ಯ ಇಲಾಖೆಯ ಸಿಬ್ಬಂದಿಯೊಡನೆ ಹಳ್ಳಿಯವರೂ ಕೂಡಿ ಹೋ, ಹೋ ಎಂದು ಎತ್ತರದ ದನಿಯಲ್ಲಿ ಕೂಗುವುದು ಎಲ್ಲವೂ ನಡೆಯುತಿತ್ತು. ಚಿಕ್ಕೀರಯ್ಯ ಕೂಡ ಈ ಕಾರ್ಯಾಚರಣೆಯಲ್ಲಿ ತಮ್ಮದೇ ರೀತಿ ಯಲ್ಲಿ ಭಾಗಿಯಾಗಿದ್ದರು ಮತ್ತು ಇದು ತಮ್ಮ ಕೆಲಸವಾದುದರಿಂದ ಸ್ವಯಂಪ್ರೇರಿತರಾಗಿ ಮುಂಚೂಣಿಯಲ್ಲಿದ್ದರು. 

ಎಲ್ಲರೂ ಎಣಿಸಿದ ಹಾಗೆ ಆನೆಗಳ ಗುಂಪು ಕಾಡಿನ ದಿಕ್ಕಿನಲ್ಲಿ ಓಡಲು ಪ್ರಾರಂಭಿಸಿದವು. ಆನೆಗಳು ಹಿಮ್ಮೆಟ್ಟುವುದನ್ನು ಕಂಡು ಹಳ್ಳಿಯವರಿಗೆ ಹುರುಪು ಬಂದು ಬಿಟ್ಟಿತು. ಇನ್ನೂ ಎತ್ತರದ ದನಿಯಲ್ಲಿ ಕೂಗುತ್ತಾ ಆನೆಗಳ ಹತ್ತಿರವೇ ಓಡಲು ಪ್ರಾರಂಭಿಸಿ ದರು. “ನೋಡ್ಲಾ, ನೋಡ್ಲಾ ಎಂಗ್‌ ಬಾಲಾ ಎತ್ಕಂಡ್‌ ಓಡ್ತಾವೆ’ ಎಂದು ಒಬ್ಬನು ತಮ್ಮ ಎದೆಗಾರಿಕೆಯ ಬಗ್ಗೆ ಕೀರೀಟ ತೊಟ್ಟುಕೊಂಡರೆ, ಇನ್ನೊಬ್ಬ “ನಾನ್‌ ಬೆಳಿಗ್ಗೆನೇ ಯೊಳ್‌ಲಿಲ್ವಾ, ಓಡುದ್ರೆ ಬೀದಿ ನಾಯ್‌ ತರ ಓಡ್‌ ಹೋಯ್ತವೆ’ ಅಂತ. ಹೀಗೆ ಒಬ್ಬೊಬ್ಬರದ್ದೂ ಒಂದೊಂದು ವೀರಗಾಥೆ. 

ಚಿಕ್ಕೀರಯ್ಯ ಅವರಿಗೆ ಸ್ವಲ್ಪ ಅಧೈರ್ಯವಾಯಿತು. ಜನ ಆನೆಗಳ ಗುಂಪಿಗೆ ಬಹು ಸಮೀಪದಲ್ಲಿದ್ದರು. ಅವುಗಳು ಯಾವು ದಾದರೂ ಕಾರಣಕ್ಕೆ ಹಿಂದಕ್ಕೆ ತಿರುಗಿದರೆ ಏನಾದರೂ ದುರಂತ ವಾಗುವುದು ಖಚಿತ. ಹಾಗಾಗಿ ತಾವೇ ಆನೆ ಮತ್ತು ಜನಗಳ ಮಧ್ಯೆ ಬಂದು ಜನರಿಗೆ “ಏಯ…, ಹತ್ತಿರ ಹೋಗಬ್ಯಾಡ್ರೋ, ಆನೆಗುಳು ತಿರುಗ್‌ ಬಂದಾವು’ ಎಂದು ಸೂಚನೆ ಕೊಡಲು ಪ್ರಾರಂಭಿಸಿದರು. ಚಿಕ್ಕೀರಯ್ಯ ಜನಗಳ ದಿಕ್ಕಿನಲ್ಲಿ ನೋಡುತ್ತಾ ಕೂಗುತ್ತಿದ್ದರೆ ಓಡುತ್ತಿದ್ದ ಸಲಗವೊಂದು ಹಿಂದೆ ತಿರುಗಿ ಇವರ ದಿಕ್ಕಿನಲ್ಲಿ ಬರಲಾರಂಭಿಸಿತು. ಇದು ಚಿಕ್ಕೀರಯ್ಯ ಅವರಿಗೆ ತಿಳಿಯಲೇ ಇಲ್ಲ! ಆನೆ ಬಂದದ್ದೇ ಅವರ ಮೇಲೆ ದಾಳಿ ಮಾಡಿತು. ಹತ್ತಾರು ಸೆಕೆಂಡ್‌ಗಳ ನಂತರ ಮನಸ್ಸು ಬದಲಾಯಿಸಿ ಹಿಂದಿರುಗಿ ತನ್ನ ಗುಂಪು ಸೇರಿತು. 

Advertisement

ಆನೆ ದಾಳಿಯಿಂದ ಚಿಕ್ಕೀರಯ್ಯ ಅವರ ಪಕ್ಕೆ ಎಲುಬು ಮುರಿ ದಿತ್ತು, ಮಿದುಳಿಗೆ ಸಾಕಷ್ಟು ಹಾನಿಯಾಗಿ ಆಸ್ಪತ್ರೆ ಸೇರಿದರು. ಕೆಲ ದಿನಗಳಾದ ಮೇಲೆ ಮನೆಗೆ ಹಿಂದಿರುಗುತ್ತಾರೆ ಎಂಬ ಮನೆಯವರ ಆಸೆ ಮೂರು ತಿಂಗಳಾದರೂ ನೆರವೇರಲೇ ಇಲ್ಲ. ದುರದೃಷ್ಟವಶಾತ್‌ ಮೇ ತಿಂಗಳ ಕೊನೆಯಲ್ಲಿ ಚಿಕ್ಕೀರಯ್ಯ ವಿಧಿವಶರಾಗಿಬಿಟ್ಟರು! ಮನೆಯಲ್ಲಿ ಇಬ್ಬರು ಚಿಕ್ಕ ಮಕ್ಕಳು. ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಕೈಲಾಗುವಷ್ಟು ಸಹಾಯ ಮಾಡಿ ಆಸ್ಪತ್ರೆಯ ಖರ್ಚಿನ ಜವಾಬ್ದಾರಿ ಹೊತ್ತರು. ಆದರೆ ಮಕ್ಕಳ ಮುಂದಿನ ಭವಿಷ್ಯ ಡೋಲಾಯಮಾನ. 

ಆನೆ ಓಡಿಸಲು ಹೋಗಿ ವಿಧಿವಶರಾದ ಚಿಕ್ಕೀರಯ್ಯ, ಬಿಳಿಗಿರಿ ರಂಗನಬೆಟ್ಟದ ಬುಡದಲ್ಲಿ ಕಾಡ್ಗಿಚ್ಚು ನಂದಿಸಲು ಹೋಗಿ ಕಣ್ಣು ಕಳೆದುಕೊಂಡ ಕಂಚಗಳ್ಳಿಯ ಮಾದೇಗೌಡ, ಕಳ್ಳಬೇಟೆಗಾರರನ್ನು ತಡೆಯಲು ಹೋಗಿ ತಾನೇ 32 ಚಿಲ್ಲುಗಳಿಂದ ಗಾಯಗೊಂಡ ಬೆಂಡುಗೋಡಿನ ಸಿದ್ದರಾಜು ಹೀಗೆ ಅರಣ್ಯ ಇಲಾಖೆಯ ನೂರಾರು ದಿನಗೂಲಿ ನೌಕರರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಕಾಡು, ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಏನಾದರೂ ದುರಂತವಾದಾಗ ಸಹೃದಯಿ ಅಧಿಕಾರಿಗಳಿದ್ದರೆ ಸ್ವಲ್ಪವಾದರೂ ಬೆಂಬಲ ಸಿಗುತ್ತದೆ, ಇಲ್ಲವಾದಲ್ಲಿ ಅವರ ಗತಿ ಚಿಂತಾಜನಕ. 

ರಾಜ್ಯದಲ್ಲಿ ಹೀಗೆ ದಿನಗೂಲಿ ನೌಕರರಾಗಿ ನೂರಾರು ಸಿಬ್ಬಂದಿ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿ¨ªಾರೆ. ಕಳ್ಳಬೇಟೆ ತಡೆ ಶಿಬಿರಗಳ ನಿರ್ವಹಣೆ, ಕಾಡಿನಲ್ಲಿ ಹಗಲು ರಾತ್ರಿಯೆನ್ನದೆ ಗಸ್ತು ತಿರುಗುವುದು, ಜನವಸತಿ ಪ್ರದೇಶಕ್ಕೆ ಆನೆ, ಚಿರತೆ, ಕರಡಿ, ಹುಲಿಯಂತಹ ವನ್ಯಜೀವಿಗಳು ಬಂದರೆ ಅವುಗಳನ್ನು ಹಿಮ್ಮೆಟ್ಟಿಸುವ ಕಾರ್ಯ, ಬೆಂಕಿ ತಡೆ ಕೆಲಸ ಮತ್ತು ಬೆಂಕಿ ಬಿ¨ªಾಗ ಅದನ್ನು ನಂದಿಸುವುದು ಹೀಗೆ ಹಲವಾರು ಅಪಾಯಕರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. 

ಕಳ್ಳಬೇಟೆ ತಡೆ ಶಿಬಿರಗಳಲ್ಲಿದ್ದರಂತೂ ಹಲವು ದಿನಗಳಿಗೊಮ್ಮೆ ಮಾತ್ರ ಕುಟುಂಬದ ಮುಖ ನೋಡಲು ಅವಕಾಶ. ಮಕ್ಕಳು ಶಾಲೆಗೆ ಹೋಗುತಿ¨ªಾರೋ, ಸರಿಯಾಗಿ ಕಲಿಯುತ್ತಿದ್ದಾರೋ ಇಲ್ಲವೋ, ಕುಟುಂಬದವರ ಆರೋಗ್ಯ ಹೇಗಿದೆ, ಏನೂ ತಿಳಿಯದು. ಬೆಳಗಾದರೆ ಸೌದೆ ಒಲೆಯ ಹೊಗೆ ಕುಡಿದುಕೊಂಡು ಅಡುಗೆ ಮಾಡಬೇಕು. ನಮ್ಮ ದೇಶವನ್ನು ಹೊಗೆಮುಕ್ತ ಮಾಡುತ್ತೇವೆಂದು ಹಲವಾರು ಜಾಹೀರಾತುಗಳಿವೆ! ದುರದೃಷ್ಟ ವಶಾತ್‌ ದೇಶವೆಂಬ ವ್ಯಾಖ್ಯಾನದಲ್ಲಿ ಕಾಡುಕಾಯುವ ಈ ಯೋಧರನ್ನು ಸೇರಿಸಿಕೊಂಡಿಲ್ಲ. ಇವರು ಇಷ್ಟೆಲ್ಲಾ ಕಷ್ಟಪಟ್ಟರೂ ಸಂಬಳ ಕೈಸೇರುವುದೂ ಹಲವು ತಿಂಗಳಿಗೊಮ್ಮೆ, ಬಂದರೂ ಕೆಲವೊಮ್ಮೆ ಯಾವುದ್ಯಾವುದೋ ವಿಚಾರಕ್ಕಾಗಿ “ಕಟ್‌’ ಆಗಿ ಪೂರ್ಣ ಸಂಬಳವೂ ಕೈಸೇರುವುದಿಲ್ಲ. ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವ ಹಾಗಿಲ್ಲ. ದನಿಯೆತ್ತಿದರೆ “ನಾಳೆಯಿಂದ ಕೆಲಸಕ್ಕೆ ಬರಬೇಡ’ ಎಂದು ಆಜ್ಞೆಯಾಗುತ್ತದೆ. 

ಕೆಲ ಅಧಿಕಾರಿಗಳು ಇವರ ಬಗ್ಗೆ ಮೃದು ಧೋರಣೆ ಹೊಂದಿದ್ದು ಆದಷ್ಟು ಬೆಂಬಲ ನೀಡಲು ಪ್ರಯತ್ನಿಸುತ್ತಾರೆ. ಆದರೆ, ಅವರು ಹೋಗಿ ಹೊಸ ಅಧಿಕಾರಿ ಬಂದರೆ ಅದೇ ಮೃದು ನಿಲುವಿನ ಖಚಿತತೆ ಇರುವುದಿಲ್ಲ. ಆದ್ದರಿಂದ ಈ ದಿನಗೂಲಿ ನೌಕರರಿಗೆ ಕಡ್ಡಾಯವಾಗಿ ಸರ್ಕಾರಿ ನಿಯಮಗಳಲ್ಲೇ ಕ್ಷೇಮಾಭಿವೃದ್ಧಿ ಕ್ರಮಗಳನ್ನು ಸಂಘಟಿಸಬೇಕು. ಸಂಬಳ ಯಾವ ಕಾರಣಕ್ಕೂ ತಡವಾಗಬಾರದು ಮತ್ತು ಕಡ್ಡಾಯವಾಗಿ ಅವರ ಬ್ಯಾಂಕ್‌ ಖಾತೆಗೆ ಮಾತ್ರ ಜಮೆಯಾಗಬೇಕು. ಯಾರೋ ಒಬ್ಬರ ಹೆಸರಿಗೆ ಜಮೆ ಮಾಡಿ ಅದನ್ನು ಬ್ಯಾಂಕ್‌ನಿಂದ ತೆಗೆದು ಆನಂತರ ನಗದಾಗಿ ಹಂಚುವ ಪದ್ಧತ್ತಿಗೆ ಯಾವ ಕಾರಣಕ್ಕೂ ಅವಕಾಶ ವಿರಬಾರದು. ಕಡ್ಡಾಯವಾಗಿ ವೈದ್ಯಕೀಯ ಮತ್ತು ಅಪಘಾತ ವಿಮೆ ಸರ್ಕಾರದ ವತಿಯಿಂದ ಜಾರಿ ಗೊಳಿಸಬೇಕು. ಇತ್ತೀಚಿಗೆ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರನ್ನು ಏಜೆನ್ಸಿ ಮೂಲಕ ಮಾತ್ರ ನಿಯಮ ಮಾಡಿ ಕೊಳ್ಳಬೇಕೆಂದು ಆದೇಶ ಜಾರಿಗೊಳಿಸ ಲಾಗಿದೆ. ಯಾವುದೇ ಕಾರಣಕ್ಕೂ ಅವರಿಗೆ ಸರ್ಕಾರ ಕೊಡುವ ನಿಗದಿತ ಸಂಬಳದಲ್ಲಿ ಏಜೆನ್ಸಿಯವರು ಕಡಿತಗೊಳಿಸಬಾರದು. 

ಹುಲಿ ಸಂರಕ್ಷಿತ ಪ್ರದೇಶ, ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳಿಗೆ ದಿನಗೂಲಿ ನೌಕರರ ಶ್ರಮ ಮತ್ತು ಕೊಡುಗೆ ಅಪಾರ. ಅವರಿಲ್ಲದಿದ್ದರೆ ನಮ್ಮ ವನ್ಯಜೀವಿಗಳು ಉಳಿಯುವುದೇ ಅನುಮಾನ. ಆದರೆ ಅವರ ಈಗಿನ ಪರಿಸ್ಥಿತಿ, ಅಲ್ಪ ಸಂಬಳ, ಸವಲತ್ತುಗಳಿಲ್ಲದ ಕೆಲಸ ಇತ್ಯಾದಿಗಳನ್ನು ಗಮನಿಸಿದರೆ ಮುಂದೊಂದು ದಿನ ಈ ಕಾಡು ಕಾಯುವ ಕೆಲಸಕ್ಕೆ ಯಾರಾದರೂ ಸಿಗುತ್ತಾರೋ ಎಂಬ ಅನುಮಾನ ಮೂಡುತ್ತದೆ. ಕೃಷಿ ಕಾರ್ಯಗಳಿಗೆ ಹೆಚ್ಚಿನ ವೇತನ ಕೊಟ್ಟರೂ ಕೆಲಸಕ್ಕೆ ಕಾರ್ಮಿಕರು ಸಿಗದಿರುವ ಈಗಿನ ಪರಿಸ್ಥಿತಿಯಲ್ಲಿ 24 ಗಂಟೆ ಮತ್ತು ಹೆಚ್ಚು ಅಪಾಯವಿರುವ ಕೆಲಸಕ್ಕೆ ಮುಂದೆ ಬರುವವರು ಯಾರೋ? ಇದೇ ಪರಿಸ್ಥಿತಿ ಮುಂದುವರಿದರೆ ಇನ್ನು ಹತ್ತು ವರ್ಷಗಳಲ್ಲಿ ವನ್ಯಜೀವಿ ಸಂರಕ್ಷಣೆಯ ಬಹು ಮುಖ್ಯಭಾಗವಾದ ಕಳ್ಳಬೇಟೆ ತಡೆ ಶಿಬಿರಗಳು, ಬೆಂಕಿ ನಂದಿಸುವ ಕೆಲಸಕ್ಕೆ ಜನ ಸಿಗುವುದೂ ಅನುಮಾನ. 

2004ರವರೆಗೆ ಇಪ್ಪತ್ತು ವರ್ಷ ಕೆಲಸ ಮಾಡಿದವರನ್ನು ಕ್ಷೇಮಾಭಿವೃದ್ಧಿ ಯೋಜನೆಯಡಿ ಕೆಲವು ನೌಕರರನ್ನು ಸರ್ಕಾರ ಕಾಯಂಗೊಳಿಸಿತು. ಆದರೆ ಇವರಿಗೆ ಕಾಯಂ ನೌಕರರಷ್ಟು ಸಂಬಳವಿಲ್ಲ, ಯಾವುದೇ ಭತ್ಯೆ, ಸವಲತ್ತುಗಳಿಗೆ ಅರ್ಹರಲ್ಲ. ಆದರೆ ಅರವತ್ತು ವರ್ಷವಾಗುವ ತನಕ ಸರ್ಕಾರಿ ಕೆಲಸವೆಂದು ಇರುತ್ತದೆ. ಇವರಿಗೂ ಸರ್ಕಾರ ಕಾಯಂ ನೌಕರರಿಗೆ ಕೊಡುವ ವನ್ಯಜೀವಿ ಭತ್ಯೆ ಕೊಡಬೇಕು, ರಜೆ ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ಅರ್ಹರು ಎಂದು ಘೋಷಿಸಬೇಕು. 

ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಗುತ್ತಿಗೆ ಆಧಾರದ ನೌಕರರಿಗೆ ಏನಾದರೂ ಸವಲತ್ತುಗಳನ್ನು ನೀಡಿದರೆ ಇತರ ಇಲಾಖೆಯ ನೌಕರರು ಕೂಡ ಅದೇ ಸವಲತ್ತುಗಳಿಗೆ ಬೇಡಿಕೆಯಿಡುತ್ತಾರೆಂದು ಯಾವುದೇ ಹೊಸ ಯೋಜನೆಗಳನ್ನು ಇವರಿಗೆ ಜಾರಿಮಾಡುವುದಿಲ್ಲ. ಆದರೆ ಅರಣ್ಯ ಇಲಾಖೆಯಲ್ಲಿ ಮಾಡುವ ಅತೀ ಕಷ್ಟದ ಕೆಲಸಗಳಿಗೆ ಬೇರೆ ಇಲಾಖೆಯಲ್ಲಿ ಮಾಡುವ ಕೆಲಸಗಳನ್ನು ಹೋಲಿಸಲಾಗುವುದಿಲ್ಲ. ಪ್ರತಿದಿನವೂ ಬೆಟ್ಟಗುಡ್ಡ ಹತ್ತಿಳಿಯುವುದು, ಕಳ್ಳಬೇಟೆಗಾರರು, ಮರ ಕಡಿಯುವವರ ಗುಂಡುಗಳಿಗೆ ಬಲಿಯಾಗುವವರು ಇವ ರೊಬ್ಬರೇ. ಹಾಗಾಗಿ ಇವರಿಗೆ ಹೆಚ್ಚಿನ ಸೌಲಭ್ಯ ಸವಲತ್ತು ನೀಡು ವುದು ಬಹು ಮುಖ್ಯ ಮತ್ತು ನೀಡಿದರೆ ಇದರಲ್ಲಿ ಯಾವುದೇ ತಾರತಮ್ಯವಾಗುವುದಿಲ್ಲ. 

ದೇಶದ ಗಡಿ ಕಾಯುವ ಯೋಧರಂತೆ ನಮ್ಮ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಕೂಡ ಕಾಡಿನ ಗಡಿಯನ್ನು ಕಾಯುತ್ತಾರೆ. ಅವರಿಗೂ ಮಾನ್ಯತೆ ಸಿಕ್ಕಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಸರ್ಕಾರ ನಿಯೋಜಿಸಿದರೆ ಅವರು ಮಾಡುವ ಕೆಲಸಕ್ಕೆ ನಮ್ಮ ಒಂದು ಚಿಕ್ಕ ಗೌರವ ಸಲ್ಲಿಸಿದಂತಾಗುತ್ತದೆ. 

ಇನ್ನಾದರೂ ಎಚ್ಚೆತ್ತುಕೊಂಡು ನಂಜೇಗೌಡ, ಮಾದೇಗೌಡ, ಸಿದ್ದರಾಜುರಂಥವರ ಬವಣೆಯನ್ನು ಕಡಿಮೆಗೊಳಿಸಿದರೆ ಅವರಿ ಗಲ್ಲದೆ ಅವರ ಮೇಲೆ ಅವಲಂಬಿತವಾಗಿರುವ ವನ್ಯಜೀವಿಗಳಿಗೂ ಸುರಕ್ಷತೆಯೊದಗುತ್ತದೆ. ನಾವಿಂದು ನಾಗರಹೊಳೆ, ಬಂಡೀಪುರ ದಂತಹ ಕಾಡುಗಳಲ್ಲಿ ಹುಲಿ, ಆನೆಗಳನ್ನು, ಸೋಮೇಶ್ವರ ಅಭಯಾರಣ್ಯದಲ್ಲಿ ಅಥವಾ ಕುದುರೆಮುಖದಲ್ಲಿ ಸಿಂಗಳೀಕ ಗಳನ್ನೂ, ದಾಂಡೇಲಿಯಲ್ಲಿ ಮಂಗಟ್ಟೆ ಹಕ್ಕಿಗಳನ್ನು, ರಾಣಿಬೆನ್ನೂರಿ ನಲ್ಲಿ ಕೃಷ್ಣಮೃಗಗಳನ್ನು, ರಂಗನತಿಟ್ಟಿನಲ್ಲಿ ಹೆಜ್ಜರ್ಲೆ ಮತ್ತು ನೀರು ನಾಯಿಯನ್ನು ನೋಡಲು ಸಾಧ್ಯವಾಗುತ್ತಿದ್ದರೆ ಅದಕ್ಕೆ ಬಹು ಮುಖ್ಯ ಕಾರಣ ಅರಣ್ಯ ಇಲಾಖೆಯ ಈ ದಿನಗೂಲಿ ನೌಕರರ ಪರಿಶ್ರಮ. ಇವರ ಸವಲತ್ತುಗಳಿಗೆ, ಸೌಲಭ್ಯಗಳಿಗೆ ಎಲ್ಲರೂ ದನಿಗೂಡಿಸುವುದು ಬಹುಮುಖ್ಯ.

Advertisement

Udayavani is now on Telegram. Click here to join our channel and stay updated with the latest news.

Next