Advertisement

ಭವಿಷ್ಯನಿಧಿ ಹಣ ಸಾರಿಗೆ ಸಂಸ್ಥೆ ನ್ಯಾಸ ಮಂಡಳಿಗೆ ವರ್ಗಾಯಿಸಲು ಒತ್ತಾಯ

05:25 PM Feb 17, 2022 | Team Udayavani |

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 1998ರ ಏಪ್ರಿಲ್‌ 1ರ ನಂತರ ನೇಮಕವಾದ ಸಿಬ್ಬಂದಿ ಭವಿಷ್ಯ ನಿಧಿ ಹಣವನ್ನು ಸಾರಿಗೆ ಸಂಸ್ಥೆಯ ನ್ಯಾಸ ಮಂಡಳಿಗೆ ವರ್ಗಾಯಿಸಬೇಕು, ಕುಟುಂಬ ಪಿಂಚಣಿ ಮಂಜೂರಾತಿ ಮಾಡಬೇಕು ಸೇರಿದಂತೆ ಇತರೆ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಕೆಎಸ್‌ ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಶನ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಇಲ್ಲಿನ ನವನಗರದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿ ಎದುರು ಬುಧವಾರ ಒಕ್ಕೂಟದ ಉಪಾಧ್ಯಕ್ಷ ಆರ್‌.ಎಫ್‌. ಕವಳಿಕಾಯಿ, ಭವಿಷ್ಯ ನಿಧಿ ಧರ್ಮದರ್ಶಿ ಎಂ.ವಿ. ಭಗವತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು, 2010ರ ಜನವರಿ 1ರಿಂದ ಸಂಸ್ಥೆಯ ಸಿಬ್ಬಂದಿ ತಮ್ಮ ಭವಿಷ್ಯ ನಿಧಿ ಹಣವನ್ನು ನ್ಯಾಸ ಮಂಡಳಿಗೆ ಜಮಾ ಮಾಡುತ್ತ ಬಂದಿದ್ದಾರೆ. ಆದರೆ 2009ರ ಡಿಸೆಂಬರ್‌ 31ರ ವರೆಗೆ ಈ ಸಿಬ್ಬಂದಿಗಳ ಜಮಾವಿದ್ದ ಭವಿಷ್ಯ ನಿಧಿ ಹಣ ನ್ಯಾಸ ಮಂಡಳಿಗೆ ಜಮಾ ಮಾಡುವಂತೆ ಫೆಡರೇಶನ್‌ ಮತ್ತು ಆಡಳಿತ ವರ್ಗ ಆಗ್ರಹಿಸಿದರೂ ಇದುವರೆಗೆ ಯಾವ ಪ್ರಯೋಜನವಾಗಿಲ್ಲ.

ಇದರಿಂದ 13 ಸಾವಿರ ಸಿಬ್ಬಂದಿ ಪಾಡು ಹೇಳತೀರದಾಗಿದೆ. ಈ ಸಿಬ್ಬಂದಿ ಭವಿಷ್ಯ ನಿಧಿ ಹಣ 2010ರ ಜನವರಿ 1ರಿಂದ ಸಂಸ್ಥೆಯ ನ್ಯಾಸ ಮಂಡಳಿಗೆ ಜಮಾ ಆಗುತ್ತಿದೆ. ಆದರೆ ಪಿಎಫ್‌ ಕಚೇರಿಯ ಸಿಬ್ಬಂದಿ ಸದಸ್ಯರಿಗೆ ಎಷ್ಟೆಷ್ಟು ಹಣವಿದೆ ಎಂಬ ವಿವರ ಕೊಡುತ್ತಿಲ್ಲ. ಸಿಬ್ಬಂದಿ ವೈಯಕ್ತಿಕ ಕಾರಣಕ್ಕೆ ಹಣ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಿದರೆ ಮಂಜೂರು ಮಾಡುತ್ತಿಲ್ಲ.

ಅರ್ಜಿ ತಿರಸ್ಕರಿಸಿ ಮರಳಿ ಕಳುಹಿಸುವುದು ವಾಡಿಕೆಯಾಗಿದೆ. ಹೀಗಾಗಿ ಸದಸ್ಯರು ಪಿಎಫ್‌ ಕಚೇರಿಗೆ ಅಲೆದಾಡುವುದು ಸಾಮಾನ್ಯವಾಗಿದೆ. ಜತೆಗೆ 1998ರ ಏಪ್ರಿಲ್‌ 1ರ ನಂತರ ನೇಮಕವಾದ ಸಿಬ್ಬಂದಿಗಳು ಮರಣ ಹೊಂದಿದ ಅವಲಂಬಿತರಿಗೆ ಹಾಗೂ ವಜಾ/ನಿವೃತ್ತಿ ಆದವರಿಗೂ ಕೂಡ ಭವಿಷ್ಯ ನಿಧಿ ಹಣ ಮಂಜೂರು ಮಾಡುವುದು, ಕುಟುಂಬ ಪಿಂಚಣಿ ಮಂಜೂರು ಮಾಡುವುದು, 13-ಎ ಮತ್ತು ಇಡಿಎಲ್‌ಐ ಇತ್ಯರ್ಥ ಪಡಿಸುವುದು ಕೂಡ ವಿಳಂಬ ಮಾಡಲಾಗುತ್ತಿದೆ. ಇದರಿಂದ ಸದಸ್ಯರಿಗೆ ತುಂಬಾ ಸಮಸ್ಯೆ ಆಗುತ್ತಿದೆ.

ಕಾರಣ 1998ರ ಏಪ್ರಿಲ್‌ 1ರ ನಂತರ ನೇಮಕವಾದ ಸಿಬ್ಬಂದಿ ಭವಿಷ್ಯ ನಿಧಿ ಹಣವನ್ನು ಕೂಡಲೇ ಸಾರಿಗೆ ಸಂಸ್ಥೆಯ ನ್ಯಾಸ ಮಂಡಳಿಗೆ ವರ್ಗಾಯಿಸಬೇಕು. ವಿಭಾಗೀಯ ಕಚೇರಿಯಿಂದ ಕಳುಹಿಸಿದ ಮರಣ ಹೊಂದಿದ ಸದಸ್ಯರು ಹಾಗೂ 58ವರ್ಷ ಮುಗಿದ ಸಿಬ್ಬಂದಿಗಳ ಕುಟುಂಬ ಪಿಂಚಣಿ ವಿಳಂವಿಲ್ಲದೆ ಇತ್ಯರ್ಥ ಪಡಿಸಬೇಕು.

Advertisement

ವಾಯವ್ಯ ನಿಗಮದಲ್ಲಿ ಕೆಲಸ ಮಾಡಿ ಬೇರೆ ವಿಭಾಗಕ್ಕೆ ವರ್ಗಾವಣೆಯಾದ 13ಎ ಇತ್ಯರ್ಥ ಮಾಡಿ ಅನುಬಂಧ-ಕೆ ತಕ್ಷಣ ಆಯಾ ವಿಭಾಗಕ್ಕೆ ಕಳುಹಿಸಬೇಕು. 2016ರ ಮಾರ್ಚ್‌ 1ರಿಂದ ಜಾರಿಗೆ ಬಂದ ಮರಣ ಹೊಂದಿದ ಅವಲಂಬಿತರಿಗೆ ಇಡಿಎಲ್‌ಐ ಕ್ಲೇಮ್‌ ಅನ್ನು ಕೂಡಲೇ ಇತ್ಯರ್ಥ ಪಡಿಸಬೇಕು. ಮಂಜೂರಾದ ಬಗೆಗಿನ ಪ್ರತಿ ಹಾಗೂ ಕುಟುಂಬ ಪಿಂಚಣಿ ಮಂಜೂರಾದ ಪಿಪಿಒ ಪ್ರತಿ ಹಾಗೂ 13ಎ ಇತ್ಯರ್ಥ ಮಾಡಿದ ನಂತರ ಅನುಬಂಧ-ಕೆ ಅನ್ನು ಸದಸ್ಯರ ಮನೆ ವಿಳಾಸಕ್ಕೆ ನೇರವಾಗಿ ಕಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತ-2ರ ವೀರೇಶ ಟಿ.ಆರ್‌. ಅವರು, ಸಂಸ್ಥೆಯ ಫೆಡರೇಶನ್‌ ದವರ ಆಗ್ರಹ ಮೇರೆಗೆ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಇಲಾಖೆಯಿಂದ ತರಬೇತಿ ನೀಡಲಾಗುವುದು. ತಿಂಗಳಿಗೊಮ್ಮೆ ಸಂಸ್ಥೆಯ ವಿಭಾಗವಾರು ಸಭೆ ನಡೆಸಿ ಸಿಬ್ಬಂದಿಗಳ ಸಮಸ್ಯೆ ಆದಷ್ಟು ಬೇಗ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು. ಎಲ್ಲರೂ ಕಡ್ಡಾಯವಾಗಿ ಇ-ನಾಮಿನೇಷನ್‌ ಮಾಡಿಸಿ ಎಂದರು.

ಪ್ರತಿಭಟನೆಯಲ್ಲಿ ಶಾಂತಣ್ಣ ಮುಳವಾಡ, ಸಿ.ಎಸ್‌. ಬಿಡನಾಳ, ಮಂಜುನಾಥ ನಾಯ್ಕರ, ರಾಜಶೇಖರ ಜಟ್ಟಿ, ಎಂ.ಎನ್‌. ಹೂಗಾರ, ಸಿ.ಎನ್‌. ಹಿರೇಮಠ, ಡಿ.ಎಂ. ಮರಿಸಿದ್ದಣ್ಣವರ, ಎಂ.ಐ.ದಳವಾಯಿ, ಗೋಪಾಲ ರಾಯದ, ಬಸವರಾಜ ಕಟ್ಟಿ, ಜಗದೀಶ ರಿತ್ತಿ, ಶಿದಪ್ಪ ಗದಗಿನ, ಸುಭಾಷ ಅಳಗುಂಡಗಿ, ಪ್ರತಿಭಾ ಚರಂತಿಮಠ ಸೇರಿದಂತೆ ಒಕ್ಕೂಟದ ಚಿಕ್ಕೋಡಿ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಶಿರಸಿ, ಬಾಗಲಕೋಟೆ ವಿಭಾಗಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಿಬ್ಬಂದಿ, ನಿವೃತ್ತ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next