Advertisement

ಬಾವಿ ನೀರಿಗಾಗಿ ಅಂಬೆಜೂಗ್‌ ಹಳ್ಳ ದಾಟಬೇಕು

02:09 PM May 15, 2019 | Team Udayavani |

ಕಾರವಾರ: ಅಂಬೆಜೂಗ್‌ ಮಜಿರೆಯ 200 ಕುಟುಂಬಗಳ ಮಹಿಳೆಯರು ಕುಡಿಯುವ ನೀರಿಗಾಗಿ ನಿತ್ಯ ಹಳ್ಳ ದಾಟಿ ನೀರು ಹೊತ್ತು ತರುವ ಸಂಕಷ್ಟ ದಶಕಗಳಿಂದ ಮುಂದುವರಿದಿದೆ. ಬೇಸಿಗೆಯಲ್ಲಿ ಟ್ಯಾಂಕರ್‌ ನೀರು ಕಿನ್ನರ ತಲುಪಿದರೂ, ಈ ಭಾಗದ ಮಹಿಳೆಯರು ಹಳ್ಳ ದಾಟುವುದ ಬಿಟ್ಟಿಲ್ಲ.

Advertisement

ತಾಲೂಕಿನ ಕಿನ್ನರ ಗ್ರಾಪಂ ವ್ಯಾಪ್ತಿಯ ಅಂಬೆಜೂಗ್‌, ಭಾಗವಾಡ, ಚಾಮಕುಳಿವಾಡ, ಝಾಡಕಿ ಮಜಿರೆಗಳ ನಿವಾಸಿಗಳು ಕುಡಿಯುವ ನೀರಿಗಾಗಿ ಬವಣೆ ಪಡುತ್ತಿದ್ದಾರೆ. ಅಂಬೆಜೂಗ ಮತ್ತು ದಿಗಾಳಿ ಮಜಿರೆ ಮಧ್ಯೆ ದೊಡ್ಡ ಹಳ್ಳವೊಂದು ಹರಿಯುತ್ತಿದ್ದು, ಹಳ್ಳ ದಾಟಿಯೇ ದಿಗಾಳಿ ಮಜಿರೆ ತಲುಪಬೇಕಿದೆ. ಕಾರಣ ದಿಗಾಳಿಯಲ್ಲಿ ಹನಮಬಾವಿ ಎಂಬ ಸಿಹಿ ನೀರಿನ ಬಾವಿ ಇದೆ. ಅಂಬೆಜೂಗ ಮಜಿರೆಯಲ್ಲಿ ಸುಮಾರು 200 ಮನೆಗಳಿವೆ. ಅಂಬೆಜೂಗ ಮಜಿರೆಯ ಭಾಗವಾಡ, ಚಾಮಕುಳಿವಾಡ, ಝಾಡಕಿಯ 200 ಕುಟುಂಬಗಳ ಜನರು ಬಾವಿ ನೀರಿಗಾಗಿ ದಿನನಿತ್ಯ ಹೊಳೆ ದಾಟುತ್ತಾರೆ. ಇದು ದಶಕಗಳಿಂದ ನಡೆದು ಬಂದಿದೆ. ಈ ಕಷ್ಟ ತಪ್ಪಿಸಲು ಅಂಬೆಜೂಗ್‌ ಮತ್ತು ದಿಗಾಳಿ ಮಧ್ಯೆ ಒಂದು ತೂಗು ಸೇತುವೆ ಅಥವಾ ಕಿರು ಸೇತುವೆ ನಿರ್ಮಿಸಿಕೊಡಬೇಕು ಎಂಬುದು ಅವರ ಬೇಡಿಕೆ. ಆದರೆ ಇದು 40 ರಿಂದ 50 ಲಕ್ಷ ವೆಚ್ಚದ ಯೋಜನೆ ಆದ ಕಾರಣ ತಾಪಂ ಮತ್ತು ಜಿಪಂ ಎದುರು ಬೇಡಿಕೆ ಇಟ್ಟಿದೆ. ಬೇಡಿಕೆ ಸರ್ಕಾರವನ್ನು ತಲುಪಿಲ್ಲ.

ಈಗ ಟ್ಯಾಂಕರ್‌ ನೀರು ಬರುತ್ತಿದೆ: ಕಿನ್ನರ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ಬೇಸಿಗೆಯಲ್ಲಿ ನೀರು ಪೂರೈಸಲಾಗುತ್ತಿದೆ. ಆದರೆ ಉಳಿದ ದಿನಗಳಲ್ಲಿ ಜನರು ಬಾವಿ ನೀರನ್ನು ಅವಲಂಬಿಸಿದ್ದಾರೆ. ಅಂಬೆಜೂಗ ಹಳ್ಳವನ್ನು ಮಹಿಳೆಯರು ಮತ್ತು ಪುರುಷರು ಸಹ ದಾಟಿ ಹನಮಬಾವಿಯಿಂದ ಸಿಹಿ ನೀರು ತರುವ ಕಷ್ಟ ಮುಂದುವರಿದಿದೆ. ಜನರು ಕುಡಿಯುವ ನೀರಿಗಾಗಿ ಹಳ್ಳ ದಾಟುವುದು ರೂಢಿಯಾಗಿದೆ. ದಿಗಾಳಿ ಮಜಿರೆಗೆ ರಸ್ತೆ ಮಾರ್ಗವೂ ಇದೆ. ಅದು 2 ಕಿ.ಮೀ. ದೂರ ಸಾಗಬೇಕಾದ ಕಾರಣ ಜನರು 300 ಮೀಟರ್‌ ದೂರವನ್ನು ಹಳ್ಳ ದಾಟಿ ದಿಗಾಳಿ ಮಜಿರೆ ತಲುಪಿ ನೀರು ತರುವುದು ರೂಢಿ ಮಾಡಿಕೊಂಡಿದ್ದಾರೆ.

ಜಿಲ್ಲಾ ಕೇಂದ್ರದ ಸಮೀಪವೇ ಇರುವ ಕಿನ್ನರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಬವಣೆ ಪಡುವುದು ಮುಂದುವರಿದಿದೆ. ಕೆರವಡಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಹಂತದಲ್ಲಿದ್ದರೂ, ಸಣ್ಣ ಸಣ್ಣ ಮಜಿರೆಗಳಿಗೆ, ನದಿ ದಂಡೆಯ ಹಿನ್ನೀರಿನ ಗ್ರಾಮ ಮಜಿರೆಗಳಿಗೆ ಬಾವಿ ನೀರು ಕುಡಿಯುವ ಮೂಲಜಲವಾಗಿದೆ. ರಾಜ್ಯ ಸರ್ಕಾರ ಮತ್ತು ಜಿಪಂ ಅಂಬೆಜೂಗ ಗ್ರಾಮಕ್ಕೆ ಕಿರು ಸೇತುವೆ ಮಾಡಿಕೊಟ್ಟರೆ ಸಾಕು. ನಾವು ಹಳ್ಳ ದಾಟುವ ಕಷ್ಟ ತಪ್ಪುತ್ತದೆ ಎಂದು ಭಾಗವಾಡ ನಿವಾಸಿ ಶೈಲಜಾ ತಳೇಕರ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next