Advertisement

ಹದಿನೈದು ದಿನ ಮೊದಲೇ ಬಂದ ಸುಡುಬೇಸಿಗೆ

12:30 AM Feb 26, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹದಿನೈದು ದಿನಗಳ ಮೊದಲೇ ಬೇಸಿಗೆ ಆರಂಭವಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ತಲುಪಿದೆ.ವಾತಾವರಣ ಹಾಗೂ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ವಾಡಿಕೆಗಿಂತಲೂ 4-5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಹೆಚ್ಚಳವಾಗಿರುವುದು ಕಂಡುಬಂದಿದೆ.

Advertisement

ಫೆಬ್ರವರಿ ತಿಂಗಳಲ್ಲಿ ಸಾಮಾನ್ಯವಾಗಿ 30-35 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುತ್ತದೆ. ಆದರೆ, ರಾಜ್ಯ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ 38-39 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಒಣಹವೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶುಭ್ರ ಆಕಾಶ ಹಾಗೂ ವಾತಾವರಣದಲ್ಲಿ ತೇವಾಂಶ ಪ್ರಮಾಣ ಕಡಿಮೆಯಾದಂತೆ ಬಿಸಿಲಿನ ತಾಪಮಾನವೂ ಹೆಚ್ಚಾಗಲಿದೆ. ಜತೆಗೆ ಯಾವುದೇ ಭಾಗದಲ್ಲಿ ಟ್ರಫ್ ಹಾಗೂ ವಾಯು ಕುಸಿತವಾಗದ ಪರಿಣಾಮ ಅವಧಿಗೆ ಮೊದಲೇ ಬೇಸಿಗೆಯ ಅನುಭವವಾಗುತ್ತಿದೆ ಎಂದು ಬೆಂಗಳೂರು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್‌.ಪಾಟೀಲ್‌ ಹೇಳಿದ್ದಾರೆ.

ಮಂಗಳೂರು, ರಾಯಚೂರು, ಕಲಬುರಗಿ, ಚಿತ್ರದುರ್ಗ, ಗದಗ, ಬಳ್ಳಾರಿ, ಬೆಂಗಳೂರು, ಕಾರವಾರ, ವಿಜಯಪುರ, ಧಾರವಾಡ, ಮೈಸೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ ಮೀರಿದ್ದು, ಸೋಮವಾರ ಬಳ್ಳಾರಿಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇದರೊಂದಿಗೆ ಕಳೆದ ಶನಿವಾರ ಮಂಗಳೂರಿನಲ್ಲಿ 39 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ರಾಜಧಾನಿಯಲ್ಲಿಯೂ ಹೆಚ್ಚಿನ ಉಷ್ಣಾಂಶ
ಬೆಂಗಳೂರಿನಲ್ಲಿಯೂ ಗರಿಷ್ಠ ತಾಪಮಾನ ಫೆಬ್ರವರಿ ಅಂತ್ಯಗೊಳ್ಳುವ ಮೊದಲೇ 35 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಇನ್ನು ಕೆಲವು ದಿನಗಳಲ್ಲಿ 38 ಡಿಗ್ರಿ ಸೆಲ್ಸಿಯಸ್‌ ಏರುವ ಸಾಧ್ಯತೆಯಿದೆ. ಜತೆಗೆ ಮುಂಜಾನೆ 15-17 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನವಿದ್ದರೆ, ಮಧ್ಯಾಹ್ನದ ವೇಳೆ 30 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ.

Advertisement

ಫೆ.25ರಂದು ದಾಖಲಾದ ತಾಪಮಾನ
ಕೇಂದ್ರ            ಗರಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌ಗಳಲ್ಲಿ)

ಬಳ್ಳಾರಿ            40
ಕಲಬುರಗಿ        39
ರಾಯಚೂರು        38.5
ಗದಗ            36.4
ಮಂಡ್ಯ            36.4
ವಿಜಯಪುರ        36.5
ಮೈಸೂರು        35.5
ಬೆಂಗಳೂರು        35.5

ಹದಿನೈದು ದಿನಗಳ ಮೊದಲೇ ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದ್ದು, ಶುಭ್ರ ಆಕಾಶ ಹಾಗೂ ವಾತಾವರಣದಲ್ಲಿ ತೇವಾಂಶವಿಲ್ಲದ ಕಾರಣದಿಂದ ಉಷ್ಣಾಂಶ ಹೆಚ್ಚಾಗಿದ್ದು, ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ 4-5 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ.
– ಶ್ರೀನಿವಾಸರೆಡ್ಡಿ, ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಅಧ್ಯಕ್ಷ

– ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next