Advertisement

ಸರ್ವಕಾಲಕ್ಕೂ ಸಲ್ಲುವುದು,  ಸರ್ವರಿಗೂ ಆದರ್ಶವಾಗೋದು ಹೀಗೇ ತಾನೇ

01:39 PM Sep 18, 2017 | |

ಕಾಡಿನಂತಹ ತೋಟ.ಅಲ್ಲೊಂದು ಪುಟ್ಟ ಮನೆ. ಸದಾ ಜುಳುಜುಳು ಹರಿಯುವ ತೊರೆ. ತೋಟದಲ್ಲಿ ಎಲ್ಲಿಂದಲ್ಲೋ ಬಂದ ನೂರಾರು ಪಕ್ಷಿಗಳ ಕಲರವ, ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ. ಸದಾ ಕಣ್ಣಿಗೆ ತಂಪೆರೆಯುವ ಹಸಿರು. ಇಷ್ಟು ಸಾಲದು ಎಂಬಂತೆ ಪಕ್ಕದಲ್ಲೇ ಕೈಬೀಸಿ ಕರೆಯುವ ಕಾನನ.  ಈ ಬದುಕು ಹೇಗಿರಬೇಡ ಕಲ್ಪಿಸಿಕೊಳ್ಳಿ ?. ಕೈಯಲ್ಲಿ ಕ್ಯಾಮರಾ, ಹೆಗಲಮೇಲೆ ಕೋ, ಜೊತೆಗೆ “ಕಿವಿ’. ಕ್ಯಾಮೆರಾದಲ್ಲಿ ಹಕ್ಕಿಗಳ ಪೋಟೊ ಸೆರೆ ಹಿಡಿಯುತ್ತಾ, ಹರಿಯುವ ನದಿಯಲ್ಲಿ ಮೀನಿಗಾಗಿ ಗಾಳ ಎಸೆದು ಧ್ಯಾನಸ್ಥನಂತೆ ಕುಳಿತುಬಿಡುವ,ಇದೆಲ್ಲಾ ಬೇಸರವಾದಾಗ ಎಲ್ಲವನ್ನೂ ಮೂಲೆಗೆ ಎಸೆದು ಹೆಗಲಿಗೆ ಕೋವಿ ಏರಿಸಿಕೊಂಡು ನಂಬಿಕಸ್ತ “ಕಿವಿ’ಯೊಂದಿಗೆ ಶಿಕಾರಿ ಹುಡುಕುತ್ತಾ ಕಾಡಿಗೆ ನಡೆದು ಬಿಡುವ ಸ್ವಾತಂತ್ರ್ಯ. ಇಂತಹ ಬದುಕು ಯಾರಿಗೆ ತಾನೇ ಬೇಡ?

Advertisement

ಅಲ್ಲಿ ಕಾಲದ ನೆನಪೆ ಇಲ್ಲ. ಬೇಸರ ಎನ್ನುವ ಮಾತೂ ಇಲ್ಲ. ಇಷ್ಟೊಂದು ಬೇಗ ಸಮಯ ಕಳೆದುಹೋಗುತ್ತಿದೆಯಲ್ಲಾ ಎಂಬ ಧಾವಂತವನ್ನು ಬಿಟ್ಟರೆ ಬೇರೇನೂ ಒತ್ತಡಗಳಿಲ್ಲ. ಹೌದು, ಕನ್ನಡದ ಮಹತ್ವದ ಲೇಖಕ ಪೂರ್ಣಚಂದ್ರ ತೇಜಸ್ವಿ ನಮ್ಮೊಳಗೆ ಇಳಿದ ಬಗೆ ಹೀಗೆ. ತೇಜಸ್ವಿ ಕಟ್ಟಿಕೊಟ್ಟ ಆದರ್ಶದ ಬದುಕು,ಸುಂದರ ಕನಸು ಇದು.

 ತೇಜಸ್ವಿ ಅವರ ಪರಿಸರದ ಕತೆಗಳನ್ನು ಓದುತ್ತಾ ಓದುತ್ತಾ ಇಂತಹದೊಂದು ಕನಸು ಕಟ್ಟಿಕೊಂಡು ಬೆಳೆದವರು ನಾವು. ಮೂಡಿಗೆರೆ ಸಮೀಪ ತೋಟ ಮಾಡಿ ಅದಕ್ಕೆ “ಚಿತ್ರಕೂಟ’ ಅಂತ ಕರೆದಾಗಲೇ ನಮ್ಮ ಕನಸುಗಳಿಗೂ ರೆಕ್ಕೆ ಮೂಡತೊಡಗಿದವು. ಕೃಷಿಯಲ್ಲಿ ಎಲ್ಲಾ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ನಷ್ಟವನ್ನು ಸಹಿಸಿಕೊಂಡು “ಚಿತ್ರಕೂಟ’ವನ್ನು ಮಾರಾಟಮಾಡಿ “ನಿರುತ್ತರ’ ದಲ್ಲಿ ಅವರು ಗಟ್ಟಿಯಾಗಿ ನೆಲೆನಿಂತಾಗಲೇ ನನಗೆ ಕೃಷಿಯ ಬಗ್ಗೆ ಇನ್ನಿಲ್ಲದ ಮೋಹ ಬೆಳೆದುಬಿಟ್ಟಿತು. ನಾನೂ ತೇಜಸ್ವಿ ಅವರಂತೆ ಕೃಷಿಕನಾಗಬೇಕೆಂಬ ಕನಸು ಹುಟ್ಟಿತು. ದೂರದ ಕಾಡಿನಂತಹ ಪರಿಸರದಲ್ಲಿ ಕುಳಿತು ಸದಾ ವರ್ತಮಾನಕ್ಕೆ ಸ್ಪಂದಿಸುತ್ತಿದ್ದ ತೇಜಸ್ವಿ,  ಕಾಲೇಜು ದಿನಗಳಲ್ಲೇ ನನ್ನಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಆದರ್ಶವಾದರು.

“ಪರಿಸರದ ಕತೆ’ ಕೃತಿಯ ಮುನ್ನುಡಿಯಲ್ಲಿ “ನಾನು ಮಲೆನಾಡಿನ ಮೂಡಿಗೆರೆಯಲ್ಲಿ ಕಾಡು ತೆಗೆದುಕೊಂಡು ಕಾಫಿ ತೋಟ ಮಾಡಲು ನಿರ್ಧರಿಸಿದ್ದು ಕಾಫಿ ತೋಟದ ಲಾಭಕ್ಕಾಗಲಿ, ಹಳ್ಳಿಗೆ ಹಿಂತಿರುಗುವ ಆದರ್ಶಕ್ಕಾಗಲೀ, ವ್ಯವಸಾಯದ ಮೇಲಿನ ಪ್ರೀತಿಯಿಂದಾಗಲೀ ಖಂಡಿತಾ ಅಲ್ಲ.ಯಾರ ಹಂಗು, ಭಯ, ಬೈಗುಳಗಳ ಕಾಟ ಇಲ್ಲದೆ ಕಾಡುಮೇಡು ಅಲೆದುಕೊಂಡು ಇರಬೇಕು ಎಂಬುದೊಂದೇ ಮುಖ್ಯ ಕಾರಣ ಎಂದು ಅವರು ವಿವರಿಸುತ್ತಾರೆ. ಪರಿಸರದ ಕತೆಯ ಒಂದಕ್ಷರವನ್ನು ಬಿಡದೆ ಆಪ್ತವಾಗಿ ಓದಿಕೊಂಡ ನಾನು ಮಾಸ್ತಿ, ಭೈರ, ಪುಂಗಿ ವೆಂಕಟ, ಬಿರಿಯಾನಿ ಕರಿಯಪ್ಪನಂತವರನ್ನು ನಮ್ಮ ಪರಿಸರದಲ್ಲೂ ಹುಡುಕಿಕೊಂಡು ಖುಷಿಗಾಗಿ ಕೃಷಿಮಾಡಲು ಹಳ್ಳಿಗಳತ್ತ ಮುಖಮಾಡಿದೆ. ಹೀಗೆ ಒಂದಲ್ಲ ಒಂದು ರೀತಿ ಎಲ್ಲರ ಮೇಲೂ ಈಗಲೂ ಪ್ರಭಾವ ಬೀರುತ್ತಿರುವ ಮಹತ್ವದ ಲೇಖಕ ತೇಜಸ್ವಿ.

ಪ್ರಕೃತಿ ವಿಸ್ಮಯಗಳ ಬಗ್ಗೆ ಸದಾ ಚಿಂತಿಸುತ್ತಿದ್ದ ತೇಜಸ್ವಿ ತಂದೆ ಕುವೆಂಪು ಅವರಂತೆಯೇ ಜೀವನದಲ್ಲಿ ಏನು ಹೇಳುತ್ತಿದ್ದರೋ ಹಾಗೆಯೇ ಬದುಕಿದವರು. ಇತ್ತೀಚಿಗೆ ಕೃಷಿ ಎನ್ನುವುದು  ಸಾಫ್ಟ್ವೇರ್‌ ಉದ್ಯೋಗಿಗಳಿಗೆ ಒಂದು “ಫ್ಯಾಶನ್‌’ ಆಗಿದೆ. ಕೈತುಂಬ ಸಂಬಳ. ಐಷಾರಾಮಿ ಬದುಕು ಎಲ್ಲವನ್ನೂ ಬಿಟ್ಟು ಎಲ್ಲೋ ಜಮೀನು ಖರೀದಿಸಿ ಕೃಷಿಕರಾಗುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ಬಹುತೇಕ ಇವರೆಲ್ಲ ತೇಜಸ್ವಿ ಅವರ ಓದಿನ ಪ್ರೇರಣೆ ಪಡೆದವರೇ ಆಗಿರುತ್ತಾರೆ. ತೇಜಸ್ವಿ ಅವರ ಸಾಹಿತ್ಯ ಮತ್ತು ಬದುಕಿನ ಕ್ರಮದಿಂದ ಪ್ರಭಾವಿತರಾಗಿ ಪರಿಸರದ ಚೆಲುವನ್ನು, ಖುಷಿಯನ್ನು ಅರಸಿ ಪರಿಸರದ ಕಡೆಗೆ ಮುಖಮಾಡಿದವರಾಗಿರುತ್ತಾರೆ. ಒಬ್ಬ ಲೇಖಕ ಸರ್ವಕಾಲಕ್ಕೂ ಸಲ್ಲುವುದು, ಯುವಜನಾಂಗಕ್ಕೆ ಆದರ್ಶವಾಗುವುದು ಎಂದರೆ ಹೀಗೇ ತಾನೇ.

Advertisement

ಜಪಾನಿನ ಸಹಜ ಕೃಷಿಕ ಮಸನೊಬ ಫ‌ುಕುವೋಕಾನ ಒನ್‌ ಸ್ಟ್ರಾ ರೆವಲ್ಯಾಷನ್‌ (ಒಂದು ಹುಲ್ಲಿನ ಕ್ರಾಂತಿ) ಎಂಬ ಪುಸ್ತಕವನ್ನು ತ್ತೂಂಬತ್ತರ ದಶಕದಲ್ಲಿ “ಸಹಜ ಕೃಷಿ’ ಎನ್ನುವ ಹೆಸರಿನಲ್ಲಿ ತೇಜಸ್ವಿ ಬರೆದು ಪ್ರಕಟಿಸಿದಾಗ ಕೃಷಿ ವಲಯದಲ್ಲಿ ದೊಡ್ಡ ಸಂಚಲನ ಉಂಟಾಯಿತು. ಇದನ್ನು ಓದಿದ ಸರಕಾರಿ ಉದ್ಯೋಗದಲ್ಲಿ ಹಲವರು ರೈತರಾದರು. ಈಗಲೂ ತೇಜಸ್ವಿಯೇ ಅವರಿಗೆ ಆದರ್ಶ.

ಸಹಜ ಕೃಷಿ ಪುಸ್ತಕದಲ್ಲಿ ನಮ್ಮ ವಿದ್ಯಾಭ್ಯಾಸದ ಶಿಸ್ತು, ಅಲ್ಲಿ ಅವರು ಕಲಿಸುವ ವಿಚಾರಗಳು ನಮ್ಮ ವಿಜಾನಿಗಳನ್ನು ರೈತ ಸಮಾಜದೊಂದಿಗೆ ಸಂವಾದ ಸಾಧ್ಯಲ್ಲದಷ್ಟು ಪರಕೀಯಗೊಳಿಸುತ್ತಿದೆಯೆ? ಪದವೀಧರರಾಗುತ್ತಿದ್ದಂತೆಯೇ ತಮ್ಮ ಪಿತ್ರಾರ್ಜಿತ ಜಮೀನಿಗೆ ವಿದಾಯ ಹೇಳಿ ಹೇಗಾದರೂ ಮಾಡಿ ಸರ್ಕಾರಿ ನೌಕರಿಯೊಂದನ್ನು ಗಿಟ್ಟಿಸಿ ಜೀವನಯಾಪನೆ ಮಾಡಲು ನಮ್ಮ ಯುವ ಸಮುದಾಯ ಹಂಬಲಿಸುತ್ತದಲ್ಲ ! ತಮಗೇ ಇಷ್ಟಲ್ಲದೆ ತಿರಸ್ಕರಿಸಿದ ಜೀವನ ಕ್ರಮವನ್ನು, ತಾವು ಅನುಷ್ಠಾನಕ್ಕೆ ತಂದುಕೊಳ್ಳದ ಆದರ್ಶಗಳನ್ನು ರೈತರಿಗೆ ಹೇಗೆ ಇವರು ಬೋಧಿಸುತ್ತಾರೆ ಮತ್ತು ಅವರು ಹೇಗೆ ಇವರ ಪ್ರವಚನಗಳನ್ನು ನಂಬುತ್ತಾರೆ ಎಂದು ಆಧುನಿಕ ವಿದ್ಯಾಭ್ಯಾಸದ ಕ್ರಮವನ್ನು ನೇರವಾಗಿ ಟೀಕಿಸಿದರು ತೇಜಸ್ವಿ. ನಮ್ಮ ವಿದ್ಯಾಭ್ಯಾಸವೇ ನಮ್ಮ ಹುಡುಗರನ್ನು ಹಳ್ಳಿಗಳಿಗೆ ಪರಕೀಯರನ್ನಾಗಿ ಮಾಡುತ್ತಿದೆ ಎಂದರು. ಕೃಷಿಯನ್ನು ಕೇವಲ ಒಂದು ಉತ್ಪಾದನಾ ವಿಧಾನ ಎಂದು ಪರಿಗಣಿಸದೆ ಅದೊಂದು ಜೀವನ ವಿಧಾನ ಎಂದು ಪರಿಗಣಿಸಬೇಕು ಎಂದು ಕಲಿಸಿಕೊಟ್ಟರು.

ಪುಕುವೊಕಾನ ಸಹಜ ಕೃಷಿಯಲ್ಲಿ ಮಂಡಿಸುವ ತತ್ವ ಮತ್ತು ಸಿದ್ಧಾಂತಗಳು ಕೇವಲ ರೈತರ ಕೃಷಿ ಕ್ಷೇತ್ರಕ್ಕೆ ಮಾತ್ರ ಸಿಮೀತವಾಗಿರದೆ ಕಲೆ, ಸಾಹಿತ್ಯ,ಸಂಗೀತ ಮತ್ತು ತತ್ವ ಮೀಮಾಂಸೆಯ ಮೇಲೆ ದೂರಗಾಮಿ ಪರಿಣಾಮ ಬೀರುತ್ತವೆ. ರಾಸಾಯನಿಕ ಕೃಷಿ ಆಹಾರ ಬೆಳೆಯುವ ಸಿದ್ಧ ಸಮೀಕರಣವನ್ನು ನೀಡುತ್ತದೆ. ಆದರೆ ಸಹಜ ಕೃಷಿ ಒಂದು ಜೀವನ ಕ್ರಮ, ಆಲೋಚನಾ ವಿಧಾನ, ಆಧ್ಯಾತ್ಮಿಕ ದೃಷ್ಟಿಯನ್ನೂ ಬೋಧಿಸುತ್ತದೆ ಎನ್ನುವುದು ತೇಜಸ್ವಿ ಅವರ ನಂಬಿಕೆಯಾಗಿತ್ತು.

ಪರಿಸರದ ಕಾಳಜಿಯಿಂದ ನೆಲದ ಕೌತುಕಗಳನ್ನು ಸರಳವಾಗಿ ಬರೆದ ತೇಜಸ್ವಿ, ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪದ ಪಡೆದು ನಂತರ ಯಾವುದೇ ಸರ್ಕಾರಿ ನೌಕರಿಗೂ ಸೇರದೆ, ನೇರವಾಗಿ ನಿಮ್ಮ ಹುಟ್ಟೂರಿನ ಕಡೆಗೆ ಪಯಣಬೆಳೆಸಿ ಕಾಫಿ, ಬತ್ತ,ಏಲಕ್ಕಿ ಬೆಳೆಯುತ್ತಾ, ಜೊತೆಗೆ ಸಾಹಿತ್ಯ ಕೃಷಿಯನ್ನೂ ಮಾಡಿದರು. ಇದು ನಮಗೆಲ್ಲಾ ಮಾದರಿ ಎನಿಸಿತು. 

ಸದಾ ಸಮಾಜಮುಖೀ ಚಿಂತಕರಾಗಿ ಬರವಣಿಗೆಯ ಜೊತೆಗೆ ರೈತ ಚಳವಳಿ,ಬರಹಗಾರರ ಒಕ್ಕೂಟ,ಬೂಸಾ ಪ್ರಕರಣ,ತುರ್ತು ಪರಿಸ್ಥಿತಿ, ಜೆಪಿ ಚಳವಳಿ, ಸಮಾಜವಾದಿ ಚಳವಳಿ ಹಾಗೂ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಒಬ್ಬ ಬರಹಗಾರ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾದರು.  ನಗರದ ಸಕಲಸವಲತ್ತುಗಳನ್ನು ಬಿಟ್ಟು ಮಲೆನಾಡಿನ ಮೂಡಿಗೆರೆಯಂತಹ ದೂರದ ಹಳ್ಳಿಯಲ್ಲಿ ಕುಳಿತು ವರ್ತಮಾನಕ್ಕೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ಕಲಿಸಿಕೊಟ್ಟರು.

ತೇಜಸ್ವಿ ಭೌತಿಕವಾಗಿ ದೂರಾವಾದರು ಎಲ್ಲೋ ಹೊಳೆಯ ದಡದಲ್ಲಿ ಗಾಳ ಹಾಕಿ ದೊಡ್ಡ ಮೀನುಡಿಯುವ ಹವಣಿಕೆಯಲ್ಲಿ ಕುಳಿತಿರಬಹುದು ಅನಿಸುತ್ತಿದೆ.  ಆ ಕಡೆ ನೋಡಿದರೆ ತಮಿಳುನಾಡು, ಈ ಕಡೆ ನೋಡಿದರೆ ಕೇರಳದ ಗಡಿ ನಡುವಿನ “ಜುಗಾರಿ ಕ್ರಾಸ್‌’ ನಲ್ಲಿ ವಡ್ಡಗೆರೆ ಎಂಬ ಪುಟ್ಟಹಳ್ಳಿಯಲ್ಲಿ ಬೇಸಾಯ ಮಾಡುತ್ತಿರುವ ನನಗೆ ಮತ್ತೆ ಮತ್ತೆ ತೇಜಸ್ವಿ ನೆನಪಾಗುತ್ತಾರೆ. ಮಾದರಿಯಾಗುತ್ತಾರೆ. 

ಚಿನ್ನಸ್ವಾಮಿ ವಡ್ಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next