Advertisement

ಆಧಾರ್‌ಗೆ ಜನತೆ ಹರಸಾಹಸ, ಅಲೆದಾಟ, ಹೈರಾಣ

12:52 PM Jul 19, 2019 | Team Udayavani |

ಪಿರಿಯಾಪಟ್ಟಣ: ಪ್ರಸ್ತುತ ಸರ್ಕಾರದ ಸೌಲಭ್ಯ ಪಡೆಯಲು ಆಧಾರ್‌ ಕಾರ್ಡ್‌ ಅತ್ಯಗತ್ಯವಾಗಿದೆ. ಆದರೆ, ಆಧಾರ್‌ ಕಾರ್ಡ್‌ ಹಾಗೂ ತಿದ್ದುಪಡಿ ಮಾಡಿಸುವುದು ದೊಡ್ಡ ಸವಾಲಾಗಿದೆ. ಕೆಲಸ ಕಾರ್ಯ ಬಿಟ್ಟು ತಿಂಗಳು ಕಾಲ ಅಲೆದರೂ ನೋಂದಣಿ ಮಾಡಿಸಲಾಗುತ್ತಿದೆ. ಇದರ ಜೊತೆಗೆ ತಿದ್ದುಪಡಿಗಾಗಿ ಖಾಸಗಿ ಏಜೆನ್ಸಿಯವರು ಹಣ ಸುಲಿಗೆ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಪಟ್ಟಣದಲ್ಲಿ ಎರಡು ಕಡೆ ಮಾತ್ರ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಲಾಗುತ್ತಿದೆ. ಇದಕ್ಕಾಗಿ ಸಾರ್ವಜನಿಕರು ತಿಂಗಳುಗಟ್ಟಲೆ ಅಲೆದಾಡು ವುದಲ್ಲದೇ ಅರ್ಜಿ ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಸ್‌ಬಿಐ ಎರಡು ಶಾಖೆಗಳಲ್ಲಿ ಒಬ್ಬರೇ ಏಜೆನ್ಸಿ ಪಡೆದು ತಿದ್ದುಪಡಿ ಕೇಂದ್ರ ತೆರದಿದ್ದಾರೆ. ಇಲ್ಲಿ ಅರ್ಜಿ ಪಡೆಯಲು ಪ್ರತಿ ಗುರುವಾರ ಮಾತ್ರ ದಿನಾಂಕ ನಿಗದಿ ಮಾಡಿದ್ದು, ತಾಲೂಕಿನ ವಿವಿಧ ಭಾಗಗಳಿಂದ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ವಯೋವೃದ್ಧರು ಸರತಿ ಸಾಲಿನಲ್ಲಿ ಬೆಳಗಿನ ಜಾವ 3 ಗಂಟೆಗೆ ಬಂದು ಕಾಯುವಂತಾಗಿದೆ. ಅಲ್ಲದೇ ದೂರು ಊರಿ ನಿಂದ ಬರುವವರು ಬಸ್‌ ಸೌಲಭ್ಯವಿಲ್ಲದಿರು ವುದರಿಂದ ಒಂದು ದಿನ ಮುಂಚೆಯೇ ಪಟ್ಟಣದಲ್ಲಿ ಆಶ್ರಯಪಡೆಯಬೇಕಾಗಿದೆ.

ಮುನ್ನಾ ದಿನ ಬರಬೇಕು: ಗ್ರಾಮೀಣ ಪ್ರದೇಶ ಗಳಿಂದ ಬರುವ ಜನರಿಗೆ ಸಮರ್ಪಕವಾಗಿ ಸಾರಿಗೆ ಸೌಲಭ್ಯವಿಲ್ಲದಿರುವುದರಿಂದ ಒಂದು ದಿನ ಮುಂಚೆಯೇ ಪಟ್ಟಣಕ್ಕೆ ಬಂದು ವಸತಿ ನಿಲಯ ಅಥವಾ ಸಂಬಂಧಿಕರ ಮನೆಗಳಲ್ಲಿ ಅಶ್ರಯಪಡೆಯಬೇಕಾಗಿದೆ. ಪ್ರತಿ ದಿನ 25 ಮಂದಿಗೆ ಮಾತ್ರ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿ ಮಾಡಲಾಗುತ್ತಿದ್ದು, ವಾರಕೊಮ್ಮೆ ಅರ್ಜಿ ವಿತರಣೆ ಮಾಡುತ್ತಿರುವುದು ಜನರ ನೂಕುನುಗ್ಗಲಿಗೆ ಕಾರಣವಾಗಿದೆ.

ಕೇಂದ್ರ ಸ್ಥಗಿತ: ಪಟ್ಟಣದಲ್ಲಿ ನೆಮ್ಮದಿ ಕೇಂದ್ರ, ಅಂಚೆ ಕಚೇರಿ ಸೇರಿದಂತೆ ಹಲವು ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಆಧಾರ್‌ ನೋಂದಣಿ ಕೇಂದ್ರ ತೆರೆಯುವಂತೆ ಕೇಂದ್ರ ಸರ್ಕಾರ ಸೂಚಿಸಿದ್ದರೂ ನೆಮ್ಮದಿ ಕೇಂದ್ರ, ಅಂಚೆ ಕಚೇರಿಯಲ್ಲಿ ಈ ಹಿಂದೆ ತೆರೆಯಲಾಗಿದ್ದು ಆಧಾರ್‌ ಕೇಂದ್ರಗಳನ್ನು ಏಕಾಏಕಿ ಮುಚ್ಚಿರುವುದು ಸಾರ್ವಜನಿಕರ ಅನಾನುಕೂಲಕ್ಕೆ ಕಾರಣವಾಗಿದೆ.

ಹಣ ವಸೂಲಿ: ಆಧಾರ್‌ ಕೇಂದ್ರವನ್ನು ನಿರ್ವಹಿಸುತ್ತಿರುವವರು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಕುರಿತು ಬ್ಯಾಂಕ್‌ ವ್ಯವಸ್ಥಾಪಕರಿಗೆ ದೂರು ನೀಡಲಾಗಿತ್ತು. ಈ ಕುರಿತು ವ್ಯವಸ್ಥಾಪಕರು ಎಚ್ಚರಿಕೆ ನೀಡಿದ್ದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ ಎಂದು ಮಂಜುನಾಯಕ ದೂರಿದ್ದಾರೆ. ಆಧಾರ್‌ ತಿದ್ದುಪಡಿಯಾದ ನಂತರ ಮುದ್ರಿತ ಪ್ರತಿಯನ್ನು ತೆಗೆಯಲು ಆಧಾರ್‌ ನಿರ್ವಹಣೆ ಕೇಂದ್ರ ನಿರ್ವಹಣೆ ಮಾಡುತ್ತಿರುವವರಿಗೆ 100 ರೂ. ನೀಡಬೇಕಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಗಾಗಿ ಇನ್ನಿಲ್ಲದಂತೆ ಪರದಾಡುವಂತಾಗಿದೆ. ಬೆಳ್ಳಂ ಬೆಳಗ್ಗೆಯೇ ಕೆಲಸ ಕಾರ್ಯಗಳನ್ನು ಬಿಟ್ಟು ಆಧಾರ್‌ ಕೇಂದ್ರಕ್ಕೆ ಬಂದು ದಿನಪೂರ್ತಿ ಕಾಯುವಂತಾಗಿದೆ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೆಚ್ಚು ಆಧಾರ್‌ ನೋಂದಣಿ ಕೇಂದ್ರಗಳನ್ನು ತೆರೆದು ಸಕಾಲದಲ್ಲಿ ಸೌಲಭ್ಯ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

 

● ದೇವೇಗೌಡ ಪಿ.ಎನ್‌.

Advertisement

Udayavani is now on Telegram. Click here to join our channel and stay updated with the latest news.

Next