Advertisement

2020ಕ್ಕೆ 2 ಮೆಟ್ರೋ ಮಾರ್ಗ ಸೇವೆಗೆ

12:49 AM Aug 31, 2019 | Lakshmi GovindaRaj |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ವಿಸ್ತರಿಸಿದ ಮಾರ್ಗಗಳ ಪೈಕಿ ಎರಡು ಮಾರ್ಗಗಳು 2020ರ ನವೆಂಬರ್‌ ಒಳಗೆ ಸೇವೆಗೆ ಮುಕ್ತಗೊಳ್ಳಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ತಿಳಿಸಿದರು.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ “ನಮ್ಮ ಮೆಟ್ರೋ’ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, “ಮೆಟ್ರೋ ಎರಡನೇ ಹಂತದ ಯೋಜನೆಯನ್ನು ತ್ವರಿತ ಗತಿಯಲ್ಲಿ ಮಾಡಲಾಗುತ್ತಿದೆ. 2020ರ ಸ್ವಾತಂತ್ರ್ಯ ದಿನಾಚರಣೆಯಂದು ಅಂದರೆ ಆಗಸ್ಟ್‌ 15ರಂದು ಕನಕಪುರ ರಸ್ತೆಯ ಯಲಚೇನಹಳ್ಳಿಯಿಂದ ಅಂಜನಾಪುರ ಮತ್ತು ನವೆಂಬರ್‌ 1ರ ಕನ್ನಡ ರಾಜ್ಯೋತ್ಸವಕ್ಕೆ ಮೈಸೂರು ರಸ್ತೆಯಿಂದ ಕೆಂಗೇರಿ ನಡುವಿನ ಮಾರ್ಗವನ್ನು ಲೋಕಾರ್ಪಣೆ ಮಾಡುವ ಗುರಿ ಇದೆ’ ಎಂದು ಹೇಳಿದರು.

ಅಲ್ಲದೆ, ಹೊರವರ್ತುಲ ರಸ್ತೆಯಲ್ಲಿ ಬರುವ ಸಿಲ್ಕ್ಬೋರ್ಡ್‌ ಜಂಕ್ಷನ್‌-ಕೆ.ಆರ್‌.ಪುರ ಹಾಗೂ ಕೆ.ಆರ್‌. ಪುರ-ಹೆಬ್ಬಾಳ-ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಮೆಟ್ರೋ ನಿರ್ಮಾಣ ಕಾಮಗಾರಿಗೆ ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಟೆಂಡರ್‌ ಕರೆಯಲು ಉದ್ದೇಶಿಸಲಾಗಿದೆ. ವಿಮಾನ ನಿಲ್ದಾಣ ಮಾರ್ಗದ ಜಿಯೊ ಟೆಕ್ನಿಕಲ್‌ ಸರ್ವೇಯನ್ನು ಸ್ವತಃ ಬಿಎಂಆರ್‌ಸಿಎಲ್ ನಡೆಸುತ್ತಿದೆ. ಗುತ್ತಿಗೆದಾರರಿಂದ ತಡವಾಗುತ್ತದೆ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಆಯ್ದ ತಲಾ 10 ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್‌ ಸೇವೆಗಳು ಹಾಗೂ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳ ಚಾರ್ಜಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ನಿಲ್ದಾಣಗಳಲ್ಲಿ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಗಾಗಿ ಸಾರ್ವಜನಿಕ ಬೈಸಿಕಲ್‌ ಸೇವೆ ಒಗದಿಸಬೇಕು. ಪ್ರಸ್ತುತ ಮೂರು ಬೋಗಿಗಳುಳ್ಳ ಎಲ್ಲ 50 ರೈಲುಗಳನ್ನು ಆರು ಬೋಗಿಗಳಾಗಿ ಮೇಲ್ದರ್ಜೆಗೇರಿಸಬೇಕು. ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ ರೈಲ್ವೆ ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸಲು ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಹೇಳಿದರು.

ಇದೇ ವೇಳೆ ಅಜಯ್‌ ಸೇಠ್, ನಿತ್ಯ ಮೆಟ್ರೋದಲ್ಲಿ ಸುಮಾರು 4.5 ಲಕ್ಷ ಜನ ಸಂಚರಿಸುತ್ತಾರೆ. ಈ ಪೈಕಿ “ಪೀಕ್‌ ಅವರ್‌’ನಲ್ಲಿ ಒಂದು ಮಾರ್ಗದಲ್ಲಿ 19,500 ಪ್ರಯಾಣಿಕರು ಸಂಚರಿಸುತ್ತಾರೆ. 72 ಕಿ.ಮೀ ಉದ್ದದ ಹಾಗೂ 61 ನಿಲ್ದಾಣಗಳನ್ನು ಹೊಂದಿರುವ ಮೆಟ್ರೋ 2ನೇ ಹಂತ ಅನುಷ್ಠಾನದ ವಿವಿಧ ಹಂತಗಳಲ್ಲಿದೆ. ಇದಲ್ಲದೆ, 2ನೇ ಹಂತ “ಎ’ ಅಡಿ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಜಂಕ್ಷನ್‌-ಕೆ.ಆರ್‌. ಪುರ ನಡುವಿನ 17 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು 5,995 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

Advertisement

ಅದೇ ರೀತಿ, 2ನೇ ಹಂತ ಬಿ’ ಅಡಿ ಕೆ.ಆರ್‌.ಪುರದಿಂದ ವಿಮಾನ ನಿಲ್ದಾಣದವರೆಗೆ 38 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು ರೂ. 10,584 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ. ವಿಜಯಭಾಸ್ಕರ್‌, ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌, ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ ಇತರರು ಉಪಸ್ಥಿತರಿದ್ದರು.

ಸುರಕ್ಷತೆಗೆ ಆದ್ಯತೆ ಕೊಡಿ – ಸಿಎಂ: “ಇತ್ತೀಚೆಗೆ ಮೆಟ್ರೋ ನಿಲ್ದಾಣದಲ್ಲಿ ಅವಘಡ ಉಂಟಾಗಿ ಪ್ರಾಣಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಿಯೂ ಅಪಘಾತ, ಅವಘಡವಾಗದಂತೆ ಎಚ್ಚರಿಕೆ ವಹಿಸಬೇಕು. ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸದೆ, ದುರಸ್ತಿ ಕೆಲಸಗಳನ್ನು ಸಾಧ್ಯವಾದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಎಂಜಿನಿಯರ್‌ಗಳ ತಂಡಗಳು ನಿಯಮಿತವಾಗಿ ಮೆಟ್ರೋ ಪಿಲ್ಲರ್‌ಗಳ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ನಿಭಾಯಿಸಲು ಮೆಟ್ರೋ ಸಮಯ ವಿಸ್ತರಣೆ ಮಾಡಬೇಕು,’ ಎಂದು ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next