Advertisement
ಹುಬ್ಬಳ್ಳಿ: ಕೋವಿಡ್ ಕರ್ಫ್ಯೂದಿಂದ ಆಹಾರ ಪದಾರ್ಥಗಳ ಕೊರತೆ ಉಂಟಾಗುತ್ತಿದೆ. ಜೂ.7ರ ನಂತರ ಕರ್ಫ್ಯೂ ಮುಂದುವರಿಸಿ ಆಹಾರ ಪದಾರ್ಥಗಳ ಉತ್ಪಾದನೆ-ಸಂಸ್ಕರಣೆಗೆ ಹೆಚ್ಚಿನ ಅವಕಾಶ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಕೊರತೆ ಉಂಟಾಗುವ ಆತಂಕ ಎದುರಾಗಿದೆ.
Related Articles
Advertisement
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಿರಾಣಿ ಪದಾರ್ಥಗಳನ್ನು ರವಾನಿಸಲು ಹುಬ್ಬಳ್ಳಿ ಪ್ರಮುಖ ಕೇಂದ್ರವಾಗಿದೆ. ಅನೇಕ ಜಿಲ್ಲೆಗಳಿಗೆ ಇಲ್ಲಿಂದಲೇ ಪದಾರ್ಥಗಳು ಹೋಗುತ್ತವೆ. ಕೆಲ ಮೂಲಗಳ ಪ್ರಕಾರ ಇಲ್ಲಿನ ಅನೇಕ ಹೋಲ್ಸೇಲ್ಗಳಲ್ಲಿ ಸಂಗ್ರಹ ಖಾಲಿಯಾಗತೊಡಗಿದೆ. ಜೂನ್ 7ರ ನಂತರ ಕರ್ಫ್ಯೂ ಮುಂದುವರಿಸಿ, ಇದೇ ಸ್ಥಿತಿ ಇದ್ದರೆ ಹೋಲ್ಸೇಲ್ಗಳಲ್ಲಿ ಸಂಗ್ರಹ ಸಂಪೂರ್ಣ ಖಾಲಿ ಆಗಲಿದೆ. ಕಿರಾಣಿ ಅಂಗಡಿಗಳಲ್ಲಿ ಆಹಾರ ಪದಾರ್ಥಗಳ ಕೊರತೆ ಉಂಟಾಗುವ ಸಾಧ್ಯತೆ ಇಲ್ಲದಿಲ್ಲ ಎಂಬುದು ಕೆಲ ಹೋಲ್ಸೇಲ್ ವರ್ತಕರ ಅನಿಸಿಕೆ. ಕೋವಿಡ್ ಮೊದಲ ಅಲೆಯಲ್ಲಿ ಆಹಾರಧಾನ್ಯ ಪದಾರ್ಥಗಳ ಉದ್ಯಮ ಸಿಬ್ಬಂದಿಗೆ ಕೆಐಎಡಿಬಿಯಿಂದ ಪಾಸ್ ನೀಡಲಾಗಿತ್ತು. ಈ ಬಾರಿ ಪಾಸ್ ವ್ಯವಸ್ಥೆ ಇಲ್ಲವಾಗಿದೆ. ಕಿರಾಣಿ ಅಂಗಡಿಗಳಿಗೆ ಸಂಕಷ್ಟ: ತೊಗರಿಬೇಳೆ ಉತ್ಪಾದನೆಗೆ ಹೆಸರಾದ ಕಲಬುರಗಿಯಲ್ಲಿ ಕಳೆದ 2-3 ವರ್ಷಗಳಿಂದ ದಾಲ್ ಮಿಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಕೋವಿಡ್ ಕರ್ಫ್ಯೂ ಇನ್ನಷ್ಟು ಸಂಕಷ್ಟ ಸೃಷ್ಟಿಸುವಂತೆ ಮಾಡಿದೆ. ಇನ್ನೊಂದು ಕಡೆ ಆಹಾರ ಉದ್ಯಮದ ಕಾರ್ಪೊರೇಟ್ ಕಂಪೆನಿಗಳು ಜಾಂಬಿಯಾದಿಂದ ತೊಗರಿ ಅಥವಾ ತೊಗರಿಬೇಳೆ ತರಿಸುತ್ತಿವೆ. ವಿವಿಧ ಬ್ರ್ಯಾಂಡ್ಗಳಲ್ಲಿ ಬಹುದೊಡ್ಡ ರಿಟೇಲ್ ಚೈನ್ ಹೊಂದಿರುವ ಸೂಪರ್ ಮಾರ್ಕೆಟ್ ಗಳಿಗೆ ನೀಡುತ್ತಿವೆ. ಕಲಬುರಗಿ ಇಲ್ಲವೆ ಸ್ಥಳೀಯವಾಗಿ ಉತ್ಪಾದನೆಯಾಗುವ ತೊಗರಿ ಬೇಳೆಯನ್ನು ನಂಬಿದ್ದ ರಾಜ್ಯದ ಅನೇಕ ಕಿರಾಣಿ ಅಂಗಡಿಗಳು ಸಮಸ್ಯೆ ಎದುರಿಸುವಂತಾಗಲಿದೆ. ಹೋಲ್ಸೇಲ್ಗಳನ್ನು ನಂಬಿರುವ ಕಿರಾಣಿ ಅಂಗಡಿಗಳಷ್ಟೇ ಅಲ್ಲ ಇದೀಗ ನೇರವಾಗಿ ಕಂಪೆನಿ ಇಲ್ಲವೆ ಕಾರ್ಪೊರೇಟ್ ವ್ಯವಸ್ಥೆಯಿಂದ ಆಹಾರ ಪದಾರ್ಥ ಖರೀದಿಸುವ ಸೂಪರ್ ಮಾರ್ಕೆಟ್ಗಳಲ್ಲೂ ಕೆಲವೊಂದು ಪದಾರ್ಥಗಳ ಕೊರತೆ ಉಂಟಾಗುತ್ತಿದೆ. ಆನ್ಲೈನ್ ಮೂಲಕ ವಹಿವಾಟು ನಡೆಸುವ ಕೆಲವೊಂದು ಕಂಪೆನಿಗಳು ಬುಕ್ ಮಾಡಿದ ಮರುದಿನವೇ ಮನೆ ಬಾಗಿಲಿಗೆ ವಸ್ತುಗಳನ್ನು ತರುತ್ತಿದ್ದವು. ಇದೀಗ ಬೇಡಿಕೆ ಸಲ್ಲಿಸಿ ಎರಡು-ಮೂರು ದಿನವಾದರೂ ಬರುತ್ತಿಲ್ಲ ಇದಕ್ಕೆ ಸಿಬ್ಬಂದಿ ಕೊರತೆಯೂ ಕಾರಣವಾಗಿದೆ. ಜತೆಗೆ ಸೂಪರ್ ಮಾರ್ಕೆಟ್ನಲ್ಲಿಯೇ ಅನೇಕ ಸಾಮಗ್ರಿ ಇಲ್ಲವೆಂಬ ಮಾಹಿತಿ ಲಭ್ಯವಾಗುತ್ತಿದೆ. ಆಹಾರ ಉದ್ಯಮ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಸಮಸ್ಯೆಗೆ ಆಹ್ವಾನ ನೀಡಿದಂತಾಗಲಿದೆ ಎಂಬುದು ಅನೇಕರ ಅನಿಸಿಕೆ.