Advertisement

ಕರಾವಳಿಯ ಜಾನಪದ ಕ್ರೀಡೆ ಕಂಬಳ ಈಗ ವಿವಾದ ಮುಕ್ತ

10:45 PM Jul 08, 2017 | |

ಕಂಬಳವನ್ನು ಸಂಪ್ರದಾಯ, ಆಚರಣೆ, ಕ್ರೀಡೆ, ಜಾನಪದ ಜೀವಧಾತು ಹೀಗೆ ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಯಾವ ನೆಲೆಗಟ್ಟಿನಲ್ಲಿ ಅವಲೋಕಿಸಿದರೂ ಅದಕ್ಕೆ ಅದರದ್ದೇ ಆದ ಐತಿಹಾಸಿಕ ನೆಲೆಯಿದೆ, ಸಂಪ್ರದಾಯಕ್ಕೂ ಅರ್ಥವಿದೆ, ಆಚರಣೆಗೂ ಉದ್ದೇಶವಿದೆ. ಇಷ್ಟೆಲ್ಲ ಭದ್ರ ಬುನಾದಿ ಹೊಂದಿದ, ಸಾಂಪ್ರದಾಯಿಕ ಆಶಯವನ್ನು, ಆಚರಣೆಗೆ ಅರ್ಥವನ್ನೂ ಹೊಂದಿರುವ ಕಂಬಳ ಮತ್ತೂಮ್ಮೆ ಚಿಗುರೊಡೆದಿದೆ.

Advertisement

ಕರಾವಳಿಯ ಜಾನಪದ ಕ್ರೀಡೆ ಈಗ ವಿವಾದದಿಂದ ಮುಕ್ತ. ಕೃಷಿ ಕೆಲಸಗಳಿಗೆ ಬಳಸುವ ಕೋಣಗಳು ಅನಾದಿ ಕಾಲದ ಕಂಬಳ ಕ್ರೀಡೆಯ ಕೇಂದ್ರ ಬಿಂದುಗಳೂ ಹೌದು. ಅರಸೊತ್ತಿಗೆ ಕಾಲದಿಂದಲೂ ಈ ಕ್ರೀಡೆಗೆ ರಾಜಮನ್ನಣೆಯಿತ್ತು. ಇದನ್ನು ವಿಜಯನಗರ ಕಾಲದ ಶಾಸನಗಳೂ ಸಮರ್ಥಿಸುತ್ತವೆ. ಅರಸೊತ್ತಿಗೆಯ ರಾಜಾಶ್ರಯದಲ್ಲಿ ನಡೆಯುತ್ತಿದ್ದ ಕಂಬಳಗಳು ಅರಸೊತ್ತಿಗೆ ಅಳಿದ ಮೇಲೆ ಜನಾಶ್ರಯದಲ್ಲಿ ನಡೆಯುತ್ತಾ ಬಂದವು. ಇದು ಕಾಲ ಕಾಲದ ಬದಲಾವಣೆಯೂ ನಿಜ.

ಕಂಬಳದಲ್ಲಿ ಕೋಣಗಳು ಓಡುವ ಓಟವೇ ಅಂತಿಮ ಮತ್ತು ಗೆಲುವು ಸೋಲು ನಿರ್ಧಾರವಾಗುವುದೂ ಕೂಡ ಅದೇ ಮಾನದಂಡದಿಂದ. ಈ ಕಾರಣಕ್ಕಾಗಿ ಕಂಬಳದ ಕರೆಯಲ್ಲಿ ಕೋಣಗಳು ತಮ್ಮೆಲ್ಲ ಸಾಮರ್ಥ್ಯವನ್ನು ಪ್ರದರ್ಶಿಸುವುದು ಅನಿವಾರ್ಯ. ಈ ಕೋಣಗಳನ್ನು ಓಡಿಸುವಾತನ ಕೌಶಲವೂ ಮುಖ್ಯ. ಅವನ ಕುಶಾಗ್ರತೆ, ದೈಹಿಕಸಾಮರ್ಥ್ಯ ಕೂಡ ಅತೀ ಮುಖ್ಯವಾಗುತ್ತದೆ. 

ಕೋಣಗಳನ್ನು ಓಡಿಸುವುದರ ಜತೆಗೆ ಆತನೂ ಅಷ್ಟೆ ವೇಗವಾಗಿ ಓಡಬೇಕು. ಇದು ಅವನ ಅತೀವ ಶಕ್ತಿ ಸಾಮರ್ಥ್ಯವನ್ನು ಒರೆಗಚ್ಚುವ ಕ್ಷಣವೂ ಹೌದು. ಈ ಕಾರಣಕ್ಕಾಗಿ ಕಂಬಳ ಕರೆಯಲ್ಲಿ ಹಗ್ಗವನ್ನು ಹಿಡಿದು ಕಂಬಳದ ಕೋಣಗಳನ್ನು ವೇಗವಾಗಿ ಓಡಿಸಲು ಬಾರುಕೋಲು ಮೂಲಕ ಕೋಣಗಳ ಬೆನ್ನಿಗೆ ಬಾರಿಸುತ್ತಾನೆ. ಆ ಏಟು ನಿಜಕ್ಕೂ ಯಾರನ್ನೇ ಆದರೂ ಒಂದು ಕ್ಷಣಕ್ಕೆ ಬೆಚ್ಚಿಬೀಳಿಸುತ್ತದೆ. ಬಾರುಕೋಲಿನ ಏಟಿಗೆ ಕೋಣಗಳು ತಮ್ಮೆಲ್ಲ ಸಾಮರ್ಥ್ಯವನ್ನು ಓಟದ ಮೂಲಕ ಪ್ರದರ್ಶಿಸುತ್ತವೆ. ಕೋಣಗಳು ಆವಾಹಿಸಿಕೊಂಡಂತೆ ಓಡುವ ಓಟದಲ್ಲಿ ಕಂಬಳದ ಗೆಲುವು, ಕೋಣಗಳನ್ನು ಓಡಿಸುವವನ ಸಾಮರ್ಥ್ಯ, ಚಾಕಚಕ್ಯತೆ ಮತ್ತು ಕೋಣಗಳ ಯಜಮಾನನ ಪ್ರತಿಷ್ಠೆಯೂ ಅಡಗಿರುತ್ತದೆ.

ಕೋಣಗಳನ್ನು ಕಂಬಳದ ಕರೆಗೆ ತರುವುದರಿಂದ ಹಿಡಿದು ಮಂಜೊಟ್ಟಿಯಲ್ಲಿ ಓಟಕ್ಕೆ ಅಣಿಗೊಳಿಸುವ ತನಕ ಕೋಣಗಳಿಗೆ ಸಹಜವಾಗಿಯೇ ಬಾರುಕೋಲಿನ ಏಟುಗಳು ಸಂದರ್ಭಕ್ಕೆ ತಕ್ಕಂತೆ ಬೀಳುತ್ತವೆ. ಕೋಣಗಳಿಗೆ ಕಂಬಳ ಓಡಿಸುವವನು ತಹಬಂದಿಗೆ ತರಲು ಹೊಡೆಯುವ ಪ್ರಕ್ರಿಯೆ ಕಂಬಳದಲ್ಲಿ ಪ್ರಾಣಿ ಹಿಂಸೆಯಾಗುತ್ತಿದೆ ಎನ್ನುವುದು ವಿವಾದಕ್ಕೆ ಕಾರಣವಾಗಿತ್ತು. ಕೋಣಗಳು ಬಾರುಕೋಲಿಗೆ ಮಾತ್ರ ಸ್ಪಂದಿಸುತ್ತವೆ ಎನ್ನುವುದೂ ನಿರಾಕರಿಸಲಾಗದ ಸತ್ಯ. ಸರಿ ಸುಮಾರು ಎರಡು ದಶಕಗಳಿಂದಲೂ ಈ ಆರೋಪ ಕಂಬಳ ನಿಷೇಧವನ್ನು ಮಾಡಲಾಗುತ್ತದೆ, ಮಾಡಬೇಕು ಎನ್ನುವ ಗುಂಗಿನಲ್ಲಿತ್ತು.

Advertisement

ಕಂಬಳದ ಕರೆಯಲ್ಲಿ ಮಾತ್ರ ಕೋಣಗಳಿಗೆ ಚುರುಕು ಮುಟ್ಟಿಸಲು ಬಾರುಕೋಲು ಬಳಸುವಂತೆ ಕಂಬಳ ಓಡಿಸುವವರಿಗೂ ಸೂಚನೆ ಕೊಟ್ಟಿದ್ದರು. ಈ ಎಚ್ಚರಿಕೆ ಮಾತುಗಳನ್ನು ಕಂಬಳದ ಕೋಣ ಓಡಿಸುವವರೂ ಮನನ ಮಾಡಿಕೊಂಡೇ ತಮ್ಮ ಚಾಕಚಕ್ಯತೆ ತೋರಿಸುತ್ತಿದ್ದರು.

ಹಾಗೆ ನೋಡಿದರೆ ಕಂಬಳದಲ್ಲಿ ಓಡುವ ಕೋಣಗಳನ್ನು ಸಾಕುವ ಬಗೆಯನ್ನು ಗಮನಿಸಿದರೆ ಕೋಣಗಳ ಯಜಮಾನನಿಗೆ ಇರುವ ಪ್ರಾಣಿ ದಯೆ ಮತ್ತು ಅವುಗಳಿಗೆ ಕೊಡುವ ಆದರ ಆತಿಥ್ಯ ಕೂಡ ಬೆಚ್ಚಿ ಬೀಳಿಸುವಂಥದ್ದು.

ಕಂಬಳದಲ್ಲಿ ಓಡುವ ಕೋಣಗಳಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಅವುಗಳನ್ನು ಸಾಕಲು ಆಳುಗಳನ್ನು ನಿಯೋಜಿಸಿರುತ್ತಾರೆ. ನಿತ್ಯವೂ ಮನುಷ್ಯರು ಸ್ನಾನ ಮಾಡುವುದಕ್ಕಿಂತಲೂ ಹೆಚ್ಚು ಆತ್ಮೀಯವಾಗಿ ಮೈತೊಳೆದು ಎಣ್ಣೆ ಉಜ್ಜಿ ಸ್ನಾನ ಮಾಡಿಸುತ್ತಾರೆ. ಆ ಕೋಣಗಳಿಗೆ ದುಬಾರಿ ಆಹಾರ ಪದಾರ್ಥಗಳನ್ನು ತಿನ್ನಿಸುತ್ತಾರೆ. ಬಹುಶಃ ಒಂದು ಕುಟುಂಬ ನಿರ್ವಹಣೆ ಮಾಡಬಹುದಾದಷ್ಟು ವೆಚ್ಚವನ್ನು ಒಂದು ಜತೆ ಕೋಣಗಳನ್ನು ಸಾಕಲು ವ್ಯಯ ಮಾಡುತ್ತಾರೆ. ಮಕ್ಕಳಿಗಿಂತಲೂ ಹೆಚ್ಚು ಆಪ್ತತೆಯಿಂದ ಮತ್ತು ಕಣ್ಣಲಿ Éಕಣ್ಣಿಟ್ಟು ಸಾಕುತ್ತಾರೆ. ಕಂಬಳ ಓಡಿಸುವವನಿಗೆ ವರ್ಷಪೂರ್ತಿ ವೇತನ ಕೊಟ್ಟು ಕೋಣಗಳ ಯಜಮಾನ ಒಬ್ಬ ಕ್ರೀಡಾಳುವನ್ನು  ಪೋಷಣೆ ಮಾಡುವುದಕ್ಕಿಂತಲೂ ಹೆಚ್ಚು ಮುತುವರ್ಜಿಯಿಂದ ಅಕ್ಷರಶಃ ಸಾಕುತ್ತಾನೆ.

ಯಜಮಾನ ಕೋಣ ಮತ್ತು ಕೋಣಗಳನ್ನು ಓಡಿಸುವವನ ಮೇಲೆ ಮಾಡಿದ ಲಕ್ಷಾಂತರ ರೂಪಾಯಿ ಹೂಡಿಕೆ ಕಂಬಳ ಸ್ಪರ್ಧೆಯಲ್ಲಿ ಕೋಣ ಮತ್ತು ಕೋಣ ಓಡಿಸುವವನು ತಂದು ಕೊಡುವ ಒಂದು ಪವನ್‌ ಚಿನ್ನದ ಪದಕ. ಸರಿಸುಮಾರು ಇಪ್ಪತ್ತೆçದು ಸಾವಿರ ರೂಪಾಯಿ ಬಹುಮಾನಕ್ಕಾಗಿ ಯಜಮಾನ ಹೂಡಿಕೆ ಮಾಡುವ ಮೊತ್ತ ಹತ್ತು ಲಕ್ಷಕ್ಕೂ ಹೆಚ್ಚು ಮತ್ತು ಕೋಣದ ಓಟದ ದಿನ ಆತ ಮಾಡುವ ವೆಚ್ಚ ಒಂದು ಲಕ್ಷಕ್ಕೂ ಹೆಚ್ಚು ಅಥವಾ ಅದರ ದುಪ್ಪಟ್ಟು. 

ಕಂಬಳ ಸ್ಪರ್ಧೆಯಲ್ಲಿ ತನ್ನ ಕೋಣಗಳು ಗೆಲ್ಲಬೇಕು ಎನ್ನುವುದನ್ನು ಬಿಟ್ಟರೆ ಕೋಣಗಳ ಯಜಮಾನರು ತಾವು ಮಾಡುವ ಖರ್ಚು ನಗಣ್ಯವೆನ್ನುತ್ತಾರೆ. ಕಂಬಳದಲ್ಲಿ ಗೆದ್ದ ಕೋಣಗಳ ಮೆರವಣಿಗೆ, ಅದರ ಮೈಮೇಲೆ ಹೊದಿಸುವ ಬಟ್ಟೆ, ಕಂಬಳ ಓಡಿಸಿದವನಿಗೆ ಮಾಡುವ ಸನ್ಮಾನ, ಕೊಡುವ ಮನ್ನಣೆಗೆ ಲೆಕ್ಕದ ಮಿತಿಯಿಲ್ಲ, ಅದರ ಚಿಂತೆಯೂ ಯಜಮಾನನಿಗಿರುವುದಿಲ್ಲ. 

ಕಂಬಳದಲ್ಲಿ ಗೆಲ್ಲುವುದು ಎಂದರೆ ಅದು ಕೋಣಗಳ ಯಜಮಾನನಿಗೆ ಪ್ರತಿಷ್ಠೆ, ಮನೆತನದ ಗೌರವದ ಪ್ರಶ್ನೆ. ಕೋಣಗಳ ಯಜಮಾನರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೆ ಅದನ್ನು ಲಕ್ಷಾಂತರ ಜನರು ಹಗಲೂ ರಾತ್ರಿ ನೂರಾರು ಕೋಣಗಳು ಓಡುವುದನ್ನು ಅವು ಗೆಲ್ಲುವುದು, ಸೋಲುವುದನ್ನು ಕಣ್ತುಂಬಿಕೊಳ್ಳುತ್ತಾರೆ.

ಕರಾವಳಿಯಲ್ಲಿ ದೇವರುಗಳಿಗೆ ಹರಕೆ ರೂಪದಲ್ಲಿ ಕಂಬಳ ಸೇವೆ ಮಾಡುವುದೂ ಕೂಡ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ದೇವರು, ದೈವಗಳಿಗೆ ಕಂಬಳದ ಹರಕೆ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ ಎನ್ನುವುದನ್ನೂ ಇಲ್ಲಿ ಗಮನಿಸಬೇಕು.

ಕಲ್ಲುನಾಗರನಿಗೆ ಭಕ್ತಿಯಿಂದ ಕೈಮುಗಿಯುತ್ತೇವೆ, ಪೂಜಿಸುತ್ತೇವೆ, ಹಾಲು, ಎಳನೀರು ಅಭಿಷೇಕ ಮಾಡುತ್ತೇವೆ, ಹೂಮುಡಿಸಿ ಸಿಂಗರಿಸಿ ಮುದಗೊಳ್ಳುತ್ತೇವೆ, ಧನ್ಯತೆಯಿಂದ ಮೈಮರೆಯುತ್ತೇವೆ. ಇದು ಭಕ್ತಿಯ ಪರಾಕಾಷ್ಠೆ, ನಂಬಿಕೆಯ ಗಟ್ಟಿಯಾದ ನೆಲೆ, ಸಾಂಸ್ಕೃತಿಕವಾಗಿ ಶತಮಾನಗಳಿಂದ ನಮ್ಮ ಹಿರೀಕರು ಹಾಕಿಕೊಟ್ಟ ಸಂಪ್ರದಾಯವೆಂದು ಚಾಚೂ ತಪ್ಪದೆ ಪಾಲಿಸುತ್ತೇವೆ.

ಮಡೆಸ್ನಾನವೆಂದು ಎಂಜಲು ಎಲೆಯಮೇಲೆ ಹೊರಳಾಡಿಯೇ ಇನ್ನಿಲ್ಲವಾದ ಹಿರಿಯರು ಹಾಕಿಕೊಟ್ಟ ಸಂಪ್ರದಾಯ, ಆಚರಣೆಯೆಂದು ಆಧುನಿಕತೆಯನ್ನು ಆವಾಹಿಸಿಕೊಂಡಿರುವ ನಮ್ಮವರೇ ಮತ್ತೆ ಮತ್ತೆ ಅದನ್ನೇ ನೆನಪು ಮಾಡಿಕೊಂಡು ಇವು ಅಳಿಯಬಾರದೆಂದು ಜೀವಂತವಾಗಿಡಲು ಹಂಬಲಿಸುತ್ತೇವೆ. ಇದನ್ನು ಪರಿಷ್ಕರಣೆಗೆ ಒಳಪಡಲು ಬಯಸುವುದಿಲ್ಲ, ಹಾಗೇನಾದರೂ ಆದರೆ ಅದನ್ನು ಅಪಚಾರವೆಂದು ಕರೆದು ಭಯ ಹುಟ್ಟಿಸುತ್ತೇವೆ.

ಈ ಮೇಲಿನ ಎರಡು ವಿಚಾರಗಳನ್ನು ನಿರ್ಮಲ ಮನಸ್ಸಿನಿಂದ ಅವಲೋಕಿಸಿದರೆ ಒಂದು ಹಂತದಲ್ಲಿ ಸಂಪ್ರದಾಯ ಆಚರಣೆಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳುತ್ತಿರುವುದನ್ನು ಕಾಣುತ್ತೇವೆ. ನಾಗನಿಗೆ ಮಾಡುವ ಆಚರಣೆಗಳು ಆಧುನಿಕತೆಯ ಹೆಸರಲ್ಲಿ ಸಾಕಷ್ಟು ಪರಿಷ್ಕರಣೆಗೆ ಒಳಗಾಗಿವೆ. ಹುತ್ತವನ್ನು ಪೂಜಿಸುತ್ತಿದ್ದವರು ಕಲ್ಲಿನಲ್ಲಿ ನಾಗನ ಪ್ರತಿರೂಪ ಕೊರೆದು ಆರಾಧಿಸುತ್ತಿದ್ದವರು, ಸಿಮೆಂಟ್‌ ಹಲಗೆಯ ಮೇಲೆ ನಾಗನ ಚಿತ್ರ ಬರೆದು ಬಣ್ಣ ಬಳಿದು ಅಲ್ಲಿ ನಾಗನ ಸಾನಿಧ್ಯವಿದೆ ಎಂದು ನಂಬುತ್ತೇವೆ. ನಾವು ನಮ್ಮ ಶ್ರೀಮಂತಿಕೆಗನುಗುಣವಾಗಿ ಮಾಡಿಕೊಂಡಿರುವ ಪರಿಷ್ಕರಣೆಯನ್ನು ಗೌರವಿಸುತ್ತೇವೆ, ಇದನ್ನು ಯಾರೂ ಪ್ರಶ್ನಿಸಬಾರದೆಂದು ನಿರೀಕ್ಷೆ ಮಾಡುತ್ತೇವೆ.

ಒಂದು ಹಂತದಲ್ಲಿ ನಾವು ಮಾಡಿಕೊಳ್ಳುವ ಅನುಕೂಲಶಾಸ್ತ್ರ ಪರಿಷ್ಕರಣೆಗಳು ನ್ಯಾಯಸಮ್ಮತವೆಂದು ಪ್ರತಿಪಾದಿಸುತ್ತಾ ಮತ್ತೂಂದು ಸಂದರ್ಭದಲ್ಲಿ ಆಚರಣೆ, ಸಂಪ್ರದಾಯದಲ್ಲಿ ಪರಿಷ್ಕರಣೆ ಸಲ್ಲದೆಂದು ವಾದಿಸುತ್ತೇವೆ. ಇಂಥ ವೈರುಧ್ಯಗಳು ನಮ್ಮ ನಡುವೆಯೇ ಇವೆ, ನಾವೇ ಅವುಗಳ ಜನ್ಮದಾತರು ಕೂಡ.

ಕಟ್ಟುವುದು ಮತ್ತು ಮುರಿಯುವುದು ಎರಡು ಕ್ರಿಯೆಗಳು. ಹಳತನ್ನು ಮುರಿದು ಹೊಸತನ್ನು ಕಟ್ಟುವುದು ನಿಯಮ. ಆಚರಣೆ, ಸಂಪ್ರದಾಯಗಳು ಕೂಡಾ ಕಾಲ ಕಾಲಕ್ಕೆ ಮುರಿಯುವ ಮತ್ತು ಕಟ್ಟುವ ಕ್ರಿಯೆಗೆ ಒಳಗಾಗಲೇಬೇಕು.

ಆದರೆ ಯಾವುದನ್ನು ಮುರಿಯ ಬೇಕು ಮತ್ತು ಮುರಿದ ಮೇಲೆ ಯಾವುದನ್ನು ಹೊಸದಾಗಿ ಕಟ್ಟಬೇಕು ಎನ್ನುವ ಒಳ ಅರಿವು ಇರಬೇಕಾಗುತ್ತದೆ. ಇಂಥ ಒಳ ಅರಿವು ಇಲ್ಲದಿದ್ದಾಗ ಏನಾಗಬಹುದು ಎನ್ನುವುದಕ್ಕೆ ಕರಾವಳಿಯ ಜನರ ಬದುಕಿನೊಂದಿಗೆ ಮಿಳಿತವಾಗಿರುವ, ಧಾರ್ಮಿಕ ನಂಬಿಕೆಯನ್ನು ಜೀವಂತವಾಗಿಟ್ಟುಕೊಂಡೇ ಹನ್ನೆರಡನೇ ಶತಮಾನಗಳಿಂದ ಪಾಲಿಸಿಕೊಂಡು ಬಂದ ಕಂಬಳ ಎನ್ನುವ ಆಚರಣೆ, ಜಾನಪದ ಕ್ರೀಡೆ, ಮನೆತನದ ಪ್ರತಿಷ್ಠೆಯ ಪ್ರತೀಕ ಎಂದುಕೊಂಡಿದ್ದ ಕಂಬಳಕ್ಕೆ ಕುತ್ತು ಬಂದಿತ್ತು, ಈಗ ನಿವಾರಣೆಯಾಗಿದೆ.

ಇತಿಹಾಸವನ್ನು ಕಣ್ಣಮುಂದಿಟ್ಟುಕೊಂಡಾಗ ಕಾಸರಗೋಡಿನ ಚಂದ್ರಗಿರಿಯಿಂದ ಉಡುಪಿಯ ಬಾರಕೂರು ತುಳುನಾಡಿನ ಗಡಿ, ಇದು ವಿಶಾಲ ತುಳುನಾಡು, ಬಾರಕೂರು ರಾಜಧಾನಿ 365 ದೇವಸ್ಥಾನಗಳನ್ನು ಹೊಂದಿದ್ದ ಜಗತ್ತಿನ ಏಕೈಕ ನಗರ ಅಂದು ಎನ್ನುವುದೇ ರೋಚಕ, ಕಲ್ಪನೆಗೂ ನಿಲುಕದು. ಆದರೆ ವಾಸ್ತವ ಸತ್ಯ. ಈ ತುಳುನಾಡಿನಲ್ಲಿ ಕಂಬಳ ಜನರ ಕೃಷಿ ಬದುಕಿನೊಂದಿಗೆ ಹಾಸುಹೊಕ್ಕಾಗಿದ್ದ ಆಚರಣೆ. ಇದನ್ನು ಸಂಪ್ರದಾಯ, ಆಚರಣೆ, ಕ್ರೀಡೆ, ಜಾನಪದ ಜೀವಧಾತು ಹೀಗೆ ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಯಾವ ನೆಲೆಗಟ್ಟಿನಲ್ಲಿ ಅವಲೋಕಿಸಿದರೂ ಅದಕ್ಕೆ ಅದರದ್ದೇ ಆದ ಐತಿಹಾಸಿಕ ನೆಲೆಯಿದೆ, ಸಂಪ್ರದಾಯಕ್ಕೂ ಅರ್ಥವಿದೆ, ಆಚರಣೆಗೂ ಉದ್ದೇಶವಿದೆ. ಇಷ್ಟೆಲ್ಲ ಭದ್ರ ಬುನಾದಿ ಹೊಂದಿದ, ಧಾರ್ಮಿಕ ಹಿನ್ನೆಲೆಯಿರುವ, ಸಾಂಪ್ರದಾಯಿಕ ಆಶಯವನ್ನು, ಆಚರಣೆಗೆ ಅರ್ಥವನ್ನೂ ಹೊಂದಿರುವ ಕಂಬಳ ಮತ್ತೂಮ್ಮೆ ಚಿಗುರೊಡೆದಿದೆ. ಇದು ನಿಜಕ್ಕೂ ಹರ್ಷ ತರುವ ಸಂಗತಿಯಲ್ಲವೇ?

– ಚಿದಂಬರ ಬೈಕಂಪಾಡಿ

Advertisement

Udayavani is now on Telegram. Click here to join our channel and stay updated with the latest news.

Next