Advertisement

ಚಿಣ್ಣರ ಕೈಯಲ್ಲರಳಿದ ಜಾನಪದ ಮೃಣ್ಕಲೆ

12:08 AM Jun 14, 2019 | mahesh |

ಚಿಣ್ಣರ ಪ್ರತಿಭೆಗಳನ್ನು ಒರೆಗೆ ಹಚ್ಚಿ ಮಾರ್ಗದರ್ಶನ ನೀಡುವ ಕೆಲಸ ಅನೇಕ ಕಲಾಶಿಬಿರಗಳಲ್ಲಿ ನಡೆಯುತ್ತದೆ. ಅನುಕರಣೆ ಕಡಿಮೆಯಾಗಿ ಸೃಜನಶೀಲತೆಯ ಅನಾವರಣವೇ ಶಿಬಿರಗಳ ಉದ್ದೇಶವಾಗಬೇಕು. ಆಗ ಮಕ್ಕಳು ಬಹುಮುಖವಾಗಿ ಬೆಳೆಯುತ್ತಾರೆ. ಇಲ್ಲದಿದ್ದಲ್ಲಿ ಮಕ್ಕಳ ಪ್ರತಿಭೆ ದುವ್ಯìಸನದ ಕಡೆಗೆ ತಿರುಗಿ ಭವಿಷ್ಯ ಮಸುಕಾಗಬಹುದು. ಆದರೆ ಇಂದಿನ ಕಂಪ್ಯೂಟರ್‌ ಯುಗದಲ್ಲಿ ಮೊಬೈಲ್‌, ಇಂಟರ್‌ನೆಟ್‌ನ ಆಕರ್ಷಣೆಯಿಂದ ಮಕ್ಕಳ ಮನಸ್ಸನ್ನು ವಿಕರ್ಷಿಸಿ ಅವರ ಸೃಜನಶೀಲತೆ ಬೆಳೆಸಲು ಸೂಕ್ತ ತರಬೇತಿಯನ್ನು ನೀಡುವುದೆಂದರೆ ಸುಲಭದ ಕೆಲಸವಲ್ಲ. ಉತ್ಸಾಹಿ ಸಂಪನ್ಮೂಲ ವ್ಯಕ್ತಿಗಳು, ಪ್ರೋತ್ಸಾಹಿಕ ಸಂಘ ಸಂಸ್ಥೆಗಳು, ಆಕರ್ಷಕ ಶಿಬಿರಗಳು ನಡೆದಾಗ ಮಾತ್ರ ಅದು ಸಾಧ್ಯ. ಅಂತಹ ವಿಶಿಷ್ಟ ಕಾರ್ಯಕ್ರಮವೊಂದು ಇತ್ತೀಚೆಗೆ ಉಡುಪಿ ತೆಂಕಪೇಟೆಯಲ್ಲಿನ ಸಂಸ್ಕೃತ ಭಾರತಿ ಕಾರ್ಯಾಲಯದ ಸಭಾಂಗಣದಲ್ಲಿ ಸದ್ಭಾವನಾ ಸೇವಾ ಟ್ರಸ್ಟ್‌(ರಿ.) ಶೃಂಗೇರಿ ಇದರ ಉಡುಪಿ ವಲಯದ ಆಶ್ರಯದಲ್ಲಿ ನಡೆಯಿತು. ಖ್ಯಾತ ಮೃಣ್ಕಲೆ ಕಲಾವಿದ ವೆಂಕಿ ಪಲಿಮಾರ್‌ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳೊಂದಿಗೆ ಮಣ್ಣಿನಲ್ಲಿ ಆಡುತ್ತಾ ಅವರಿಂದ ಸೃಜನಾತ್ಮಕ ಮೃಣ್ಕಲೆ ಕಲಾಕೃತಿಗಳನ್ನು ಹೊರತಂದರು.

Advertisement

ಸುಮಾರು ನಲ್ವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದ ಈ ಶಿಬಿರದಲ್ಲಿ ಕೆಲ ಹಿರಿಯರೂ ಭಾಗವಹಿಸಿ ತಮ್ಮ ಕೈಚಳಕವನ್ನು ಪ್ರದರ್ಶಿಸಿ ಪುಳಕಿತಗೊಂಡರು. ವೆಂಕಿ ಪಲಿಮಾರ್‌ ಅವರವರ ವಯಸ್ಸಿಗೆ ಅನುಗುಣವಾಗಿ ಮಾರ್ಗದರ್ಶನ ನೀಡಿ ಕಲಾಕೃತಿಗಳನ್ನು ರಚಿಸಿಕೊಂಡರು. ಭಾರತೀಯ ಸಂಸ್ಕೃತಿ ಮತ್ತು ಜಾನಪದ ಲೋಕಕ್ಕೆ ಸಂಬಂಧಿಸಿದ ವಿಷಯಗಳನ್ನು ಆಯ್ದುಕೊಂಡು ಆವೆಮಣ್ಣಿನ ಕಲಾಕೃತಿಗಳನ್ನು ರೂಪಿಸಲಾಯಿತು. ಯಕ್ಷಗಾನ ಮತ್ತು ಭೂತದ ಮುಖವಾಡಗಳು ಹೆಚ್ಚು ರಚನೆಯಾದವು. ಭಯಾನಕ, ಭೀಭತ್ಸ, ರೌದ್ರರಸಗಳು ಕಲಾಕೃತಿಗಳಲ್ಲಿ ಮೂಡಿಬಂದವು. ಶಿಬಿರದ ಕೊನೆಯಲ್ಲಿ ರಚನೆಗೊಂಡ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ವೀಕ್ಷಕರು ಇದನ್ನು ಕಂಡು ವಿದ್ಯಾರ್ಥಿ ಪ್ರತಿಭೆಗೆ ಮನದೂಗಿದರು.

– ಉಪಾಧ್ಯಾಯ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next