Advertisement

ಕೂಳೂರು-ಬೈಕಂಪಾಡಿ ಹೆದ್ದಾರಿಯಲ್ಲಿ ಫ್ಲೈಓವರ್‌ಗೆ ಒಲವು

08:49 PM Oct 05, 2021 | Team Udayavani |

ಮಹಾನಗರ: ಕೈಗಾರಿಕೆ ವ್ಯಾಪ್ತಿಯನ್ನೇ ಹೊಂದಿರುವ ಕೂಳೂರು ಸೇತುವೆ ಸಮೀಪದ ಕೆಐಒಸಿಎಲ್‌ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್‌ವರೆಗೆ ಸರಕು ವಾಹನಗಳ ಓಡಾಟಕ್ಕಾಗಿ ಪ್ರತ್ಯೇಕ ರಸ್ತೆ ಆವಶ್ಯಕವಿರುವ ಕಾರಣದಿಂದ ಪ್ರಯಾಣಿಕ ವಾಹನಗಳಿಗೆ ಅನುಕೂಲವಾಗುವಂತೆ ಫ್ಲೈಓವರ್‌ ನಿರ್ಮಾಣಕ್ಕೆ ಸ್ಥಳೀಯ ಕೈಗಾರಿಕೆ ಪ್ರಮುಖರು ಒಲವು ವ್ಯಕ್ತಪಡಿಸಿದ್ದಾರೆ.

Advertisement

ನವಮಂಗಳೂರು ಬಂದರು ಮಂಡಳಿಯು ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ತೋರಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಹಲವು ಕಂಪೆನಿಗಳ ನೆರವು ನೀಡುವ ನಿರೀಕ್ಷೆಯಿದೆ. ಈ ಸಂಬಂಧ ಮುಂದಿನ 3 ತಿಂಗಳೊಳಗೆ ಇಂಡಿಯನ್‌ ಪೋರ್ಟ್‌ ರೈಲ್‌ ಆ್ಯಂಡ್‌ ರೋಪ್‌ವೇ ಕಾರ್ಪೋರೆಷನ್‌ ಲಿ. (ಐಪಿಆರ್‌ಸಿಎಲ್‌) ವತಿಯಿಂದ ಡಿಪಿಆರ್‌ ಸಿದ್ಧಪಡಿಸಲು ಉದ್ದೇಶಿಸಲಾಗಿದೆ.

ಒಟ್ಟು 3.3 ಕಿ.ಮೀ. ಉದ್ದದ ಚತುಷ್ಪಥ ಫ್ಲೈಓವರ್‌ಗೆ ಚಿಂತನೆ ನಡೆಸಲಾಗಿದೆ. ಅಂದಾಜು 450 ಕೋ.ರೂ. ಅಂದಾಜು ವೆಚ್ಚದ ನಿರೀಕ್ಷೆಯಿದೆ. ಸದ್ಯದ ಪ್ರಕಾರ ಶೇ. 25ರಷ್ಟು ಮೊತ್ತ ಎನ್‌ಎಂಪಿಟಿ ನೀಡಿದರೆ, ಉಳಿದ ಮೊತ್ತವನ್ನು ವಿವಿಧ ಕೈಗಾರಿಕೆಗಳು, ಸಾಗರಮಾಲ ಯೋಜನೆಯಿಂದ ವಿನಿಯೋಗಿಸುವ ಬಗ್ಗೆ ಪ್ರಾರಂಭಿಕ ಮಾತುಕತೆ ನಡೆಯುತ್ತಿದೆ.

ಕೂಳೂರು ಸೇತುವೆಯ ಸನಿಹದ ಕೆಐಒಸಿಎಲ್‌ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್‌ವರೆಗೆ ಕೆಐಒಸಿಎಲ್‌, ಎನ್‌ಎಂಪಿಟಿ, ಎಂಸಿಎಫ್‌, ಟೋಟಲ್‌ ಗ್ಯಾಸ್‌, ಚೆಟ್ಟಿನಾಡ್‌ ಸಿಮೆಂಟ್‌, ಗೈಲ್‌ ಸಹಿತ ಹಲವು ಕೈಗಾರಿಕೆ ಸಂಬಂಧಿತ ಸಂಸ್ಥೆಗಳಿವೆ. ಬೈಕಂಪಾಡಿ ಕೈಗಾರಿಕೆ ಪ್ರದೇಶ, ಎಸ್‌ಇಝಡ್‌, ಎಂಆರ್‌ಪಿಎಲ್‌ ಸಹಿತ ವಿವಿಧ ಕೈಗಾರಿಕೆ ಪ್ರದೇಶಕ್ಕೆ ಸಂಪರ್ಕ ಕೂಡ ಇದೇ ರಸ್ತೆ ಆಗಿರುವುದರಿಂದ ಇಲ್ಲಿ ನಿತ್ಯ 10 ಸಾವಿರಕ್ಕೂ ಅಧಿಕ ಸರಕು ತುಂಬಿದ ವಾಹನಗಳೇ ಸಂಚರಿಸುತ್ತಿವೆ. ಜತೆಗೆ ಹಲವು ಘನವಾಹನಗಳು ಈ ವ್ಯಾಪ್ತಿಯ ರಸ್ತೆಯ ಬದಿಯಲ್ಲಿ ನಿಂತಿರುವುದರಿಂದ ಖಾಸಗಿ ವಾಹನಗಳ ಓಡಾಟಕ್ಕೂ ಸಮಸ್ಯೆ ಆಗುತ್ತಿದೆ. ಈ ಕಾರಣದಿಂದ ಇಲ್ಲಿ ಫ್ಲೈಓವರ್‌ ನಿರ್ಮಾಣ ಅಗತ್ಯ ಎಂದು ಮನಗಂಡು ಹೊಸ ಯೋಜನೆಗೆ ಚಿಂತನೆ ನಡೆಸಲಾಗಿದೆ.

ಭಾರತೀಯ ಕೈಗಾರಿಕೆ ಒಕ್ಕೂಟದ ದ.ಕ. ಉಪಾಧ್ಯಕ್ಷ ಗೌರವ್‌ ಹೆಗ್ಡೆ ಪ್ರಕಾರ, ಬೈಕಂಪಾಡಿ ಪ್ರದೇಶದಲ್ಲಿ ಇದೀಗ ಘನ ವಾಹನಗಳ ಓಡಾಟ ಅಧಿಕವಾಗಿವೆ. ಮುಂದಿನ 5 ವರ್ಷಗಳಲ್ಲಿ ಇದರ ಸಂಖ್ಯೆ ದುಪ್ಪಟ್ಟಾಗಲಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಇಲ್ಲಿ ಫ್ಲೈಓವರ್‌ ಪರಿಕಲ್ಪನೆ ಭವಿಷ್ಯದ ದೃಷ್ಟಿಯಿಂದ ಅಗತ್ಯವಿದೆ ಎನ್ನುತ್ತಾರೆ.

Advertisement

ಇದನ್ನೂ ಓದಿ:ಪಿಲಿಕುಳದ ಹನುಮಾನ್‌ ಲಂಗೂರ್‌ “ರಾಜು’ ಸಾವು

ಸರಕು ಸಾಗಾಟಕ್ಕೆ ಅನುಕೂಲ
“ಆರು ಪಥಗಳ ಕೂಳೂರು ಸೇತುವೆ ಕಾರ್ಯಗತವಾದರೆ ಈ ಭಾಗದಲ್ಲಿ ಸರಕು ಸಾಗಾಟದ ತೊಂದರೆ ನೀಗಲಿದೆ. ಜತೆಗೆ, ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆ ಕಾಮಗಾರಿಗಳೂ ಮುಂದಿನ ಹಂತದಲ್ಲಿ ಪೂರ್ಣಗೊಳ್ಳುವ ಕಾರಣದಿಂದ ಮಂಗಳೂರಿಗೆ ಸರಕು ಸಾಗಾಟ ವಾಹನಗಳ ಆಗಮನಕ್ಕೆ ಉಪಕಾರವಾಗಲಿದೆ. ಹೀಗಿರುವಾಗ ಮಂಗಳೂರಿನ ಕೈಗಾರಿಕೆ ಕೇಂದ್ರದ ಭಾಗದಲ್ಲಿ ವಾಹನ ದಟ್ಟಣೆಯನ್ನು ನಿಭಾಯಿಸಲು ಫ್ಲೈಓವರ್‌ ಸೂತ್ರ ಅಗತ್ಯವಾಗಿದೆ’ ಎಂಬುದು ಎನ್‌ಎಂಪಿಟಿ ಅಭಿಪ್ರಾಯ.

ಭಾಗೀದಾರರ ಸಭೆ
ಕೆಐಒಸಿಎಲ್‌ ಜಂಕ್ಷನ್‌ನಿಂದ ಬೈಕಂಪಾಡಿವರೆಗೆ ಫ್ಲೈಓವರ್‌ ನಿರ್ಮಾಣ ಸಂಬಂಧ ಎನ್‌ಎಂಪಿಟಿ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದಿದೆ. ಸ್ಥಳೀಯ ಭಾಗೀದಾರರಾದ ಮಂಗಳೂರು ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ, ಎಂಆರ್‌ಪಿಎಲ್‌, ರಾ.ಹೆದ್ದಾರಿ ಪ್ರಾಧಿಕಾರ, ಕೆಐಓಸಿಎಲ್‌, ಎಂಸಿಎಫ್‌, ಕೆಸಿಸಿಐ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.

ಫ್ಲೈಓವರ್‌ ಜಾರಿಗೆ ಮಾತುಕತೆ
ಕೆಐಒಸಿಎಲ್‌ ಜಂಕ್ಷನ್‌ನಿಂದ ಬೈಕಂಪಾಡಿವರೆಗೆ ಫ್ಲೈಓವರ್‌ ನಿರ್ಮಾಣದ ಅಗತ್ಯದ ಬಗ್ಗೆ ಎನ್‌ಎಂಪಿಟಿ ವತಿಯಿಂದ ಸಭೆ ನಡೆದಿದೆ. ಯೋಜನೆಯ ಸಾಧ್ಯಸಾಧ್ಯತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಸ್ಥಳೀಯ ಭಾಗೀದಾರರನ್ನು ಸೇರಿಸಿಕೊಂಡು ಯೋಜನೆ ಜಾರಿಗೆ ಅಲ್ಲಿ ಮಾತುಕತೆ ನಡೆದಿದ್ದು, ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂಬ ಬಗ್ಗೆ ಅಭಿಪ್ರಾಯವಿದೆ.
-ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮಂಗಳೂರು ಪಾಲಿಕೆ

ಘನ ವಾಹನಗಳಿಗೆ ಅನುಕೂಲ
ಕೈಗಾರಿಕೆಗಳಿಗೆ ಸಂಬಂಧಿಸಿದ ಘನ ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ನೆಲೆಯಲ್ಲಿ ಕೂಳೂರು-ಬೈಕಂಪಾಡಿ ಮಧ್ಯೆ 3.3 ಕಿ.ಮೀ. ಉದ್ದ ಫ್ಲೈಓವರ್‌ ನಿರ್ಮಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. 8.35 ಮೀ. ಎತ್ತರದಲ್ಲಿ ಫ್ಲೆ$çಓವರ್‌ ಬಗ್ಗೆ ಚರ್ಚೆ ನಡೆಸಲಾಗಿದೆ. ಐಪಿಆರ್‌ಸಿಎಲ್‌ ವತಿಯಿಂದ ಡಿಪಿಆರ್‌ ಆಗಲಿದೆ. ಇದು ಸಾಧ್ಯವಾದರೆ ಘನ ವಾಹನಗಳು ಈಗಿನ ರಸ್ತೆಯಲ್ಲಿ ಹಾಗೂ ಸಾರ್ವಜನಿಕರ ವಾಹನಗಳು ಫ್ಲೈಓವರ್‌ನಲ್ಲಿ ಸಂಚರಿಸಬಹುದಾಗಿದೆ.
-ಜೀವನ್‌ ಸಲ್ಡಾನ್ಹಾ, ಅಧ್ಯಕ್ಷರು, ಭಾರತೀಯ ಕೈಗಾರಿಕೆ ಒಕ್ಕೂಟ, ದ.ಕ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next