Advertisement

ಅಂಗಳದಲ್ಲಿ ಹೂವು ಚೆಲ್ಲಿದೆ !

12:30 AM Feb 15, 2019 | |

ಒಂದು ಹಿಡಿ ಗಾತ್ರದ ಮನುಷ್ಯನ ಮಸ್ತಿಷ್ಕದಲ್ಲಿ ಬ್ರಹ್ಮಾಂಡದಷ್ಟು ಆಲೋಚನೆಗಳು. ಪ್ರತಿಯೊಬ್ಬರಿಗೂ ಅವರದ್ದೇ ಆದ ಆಲೋಚನೆಗಳು, ಚಿಂತೆಗಳು. ನನಗೋ ಹಬ್ಬಗಳು ಬಂತೆಂದರೆ ಮೊದಲು ಕಾಡುವುದೇ ರಂಗೋಲಿಯ ಚಿಂತೆ. ಹಬ್ಬಕ್ಕೆ ಎರಡು ದಿನವಿರುವಾಗಲೇ ನನ್ನ ತಯಾರಿ ಶುರುವಾಗುತ್ತದೆ. ಇಂಟರ್‌ನೆಟ್ಟಿನ ಹತ್ತು ಹಲವು ಸೈಟುಗಳ ಮೊಗಚಾಟ, ಮೊದಲು ಕಾಗದ, ಪೆನ್ಸಿಲಿನಿಂದ ಪ್ರಯತ್ನ, ನಂತರ ರಂಗೋಲಿ ಪುಡಿಯಿಂದ. ಕೆಲವು ಸುಲಭವೆನಿಸಿದರೂ ಬಿಡಿಸುತ್ತ ಹೋದಂತೆ ಬಿಡಿಸಲಾಗದೆ ತಪ್ಪು$ತಪ್ಪಾಗಿ ಬೇರೆ ರಂಗೋಲಿಯತ್ತ ಹೊರಳಬೇಕಾಗುತ್ತದೆ, ಇನ್ನು ಕೆಲವು ಕಷ್ಟವೆಂದು ತೋರಿ ನನ್ನನ್ನು ಹೆದರಿಸಿದರೂ ಬಿಡಿಸಲು ಕೂತಾಗ ಸುಲಭದಲ್ಲಿ ಬಿಡಿಸಿಕೊಳ್ಳುತ್ತದೆ. ಮನುಷ್ಯರೂ ಅಷ್ಟೇ ಅಲ್ಲವೆ? ಹತ್ತಿರ ಹೋದಂತೆ ದೂರದಲ್ಲಿದ್ದಂತೆ ಅಲ್ಲ ಅನ್ನಿಸುತ್ತದೆ, ಮುಗುಳ್ನಗೆಯ ಹಿಂದಿರುವ ಕಠೊರತೆ ಹತ್ತಿರ ಹೋದಾಗಲೇ ಅರಿಯುತ್ತದೆ. ಇನ್ನು ಸಿಡುಕು ಮುಖದ ಹಿಂದೆ ಸಿಹಿ ಭಾವನೆಗಳು ಅಡಗಿಕೊಂಡಿರುವುದೂ ಇದೆ.

Advertisement

ರಂಗೋಲಿ ಕೆಲವರಿಗೆ ಗೋಜಲು, ಬಿಡಿಸಲಾಗದ ಕಗ್ಗಂಟು, ಕೆಲವರಿಗೆ ನೀರು ಕುಡಿದಷ್ಟು ಸುಲಭ, ಗೆರೆಗಳು ಅವರು ಹೇಳಿದಂತೆಯೇ ಕೇಳಿ ಬಾಗಿ ಬಳುಕುತ್ತವೆ. ಚುಕ್ಕೆಗಳಿಗೆ ಗೆರೆಗಳಾಗುವ ಸಂಭ್ರಮ, ನೋಡು ನೋಡುತ್ತಿರುವಂತೆ ಗೆರೆಗಳು ಜೋಡಿಸಿ ನಿಂತು ಹೂವು, ಎಲೆ, ಹೂವಿನ ಬುಟ್ಟಿ , ದೀಪ, ಆನೆ, ಗಿಳಿ, ನವಿಲು ಎಲ್ಲವೂ, ಚುಕ್ಕೆಗಳ ಜೋಡಣೆಯಲ್ಲೇ ಇದೆ ರಂಗೋಲಿಯ ಜಗತ್ತು. 

ಚುಕ್ಕೆಗಳಿಂದ ಚುಕ್ಕೆಗಳಿಗೆ ಹಾರಿ ಗೆರೆಗಳಾಗುತ್ತ ಬಿಡಿಸಿಕೊಳ್ಳುವುದೇ ರಂಗೋಲಿ. ಬಿಡಿಸುವ ಕೈ ದಪ್ಪ, ಸಪೂರ, ಕಪ್ಪು, ಬಿಳಿ, ಶ್ರೀಮಂತ, ಬಡವ-ಬಲ್ಲಿದನೆಂಬ ಮುಲಾಜಿಲ್ಲ ರಂಗೋಲಿಗೆ, ಯಾವ ಕೈಯಲ್ಲಿ ಚಳಕವಿದೆಯೋ ಅಲ್ಲೇ ಅಂದವಾಗಿ ಅರಳುತ್ತದೆ. ರಂಗೋಲಿಯ ಆಯಸ್ಸು ಒಂದೋ, ಎರಡೋ ದಿನ ಆದರೂ ಜನ್ಮದಾತಳಿಗೆ ಆಕ್ಷೇಪವಿಲ್ಲ. ಬಿಡಿಸಿದಾತಳೇ ಹಿಂದಿನ ದಿನದ ರಂಗೋಲಿಗೆ ನೀರೆರೆಯಲು ಬೇಸರವಿಲ್ಲ, ಹೊಸ ರಂಗೋಲಿಗೆ ಜನ್ಮ ಕೊಡುವ ತವಕವಿರಬಹುದು, ಹೊಟ್ಟೆಪಾಡಿನ ಕಾಯಕವಿರಲೂಬಹುದು. 

ರಂಗೋಲಿಯ ಚುಕ್ಕೆ ಇಡುವುದು ಸುಲಭವಲ್ಲ, ಯಾವ ಅಳತೆಗೋಲು ಇಲ್ಲದೆ ಒಂದೇ ಅಂತರದಲ್ಲಿ ಇಡಬೇಕು, ಚುಕ್ಕೆಯಿಂದ ಚುಕ್ಕೆಗಳಿಗೆ ಇಡುವ ಗೆರೆಗಳೂ ಲೆಕ್ಕ ತಪ್ಪಬಾರದು. ಚುಕ್ಕೆಗಳ, ಗೆರೆಗಳ ಲೆಕ್ಕ ತಪ್ಪಾದರೆ ರಂಗೋಲಿ ಹಾಳಾದಂತೆ, ಇದೇ ಜೀವನದ ಸತ್ಯ, ಇಲ್ಲಿ ಕಂಪ್ಯೂಟರ್‌ನಲ್ಲಿ ಇದ್ದಂತೆ ವಾಪಸು ಗುಂಡಿಯಿಲ್ಲ.  ರಂಗೋಲಿ ಅಂಟುವುದು ಒದ್ದೆ ನೆಲಕ್ಕೆ, ನೆಲ ಒಣಗಿದ್ದರೆ ರಂಗೋಲಿ ಹುಡಿ ಹಾರಾಡುತ್ತದೆ, ಮನಸ್ಸೂ ಅಷ್ಟೇ ಸ್ವತ್ಛವಾಗಿ, ಒದ್ದೆಯಾಗಿದ್ದರೆ ಮಾತ್ರ ಭಗವಂತನ ಧ್ಯಾನ ಸಾಧ್ಯ. 

ರಂಗೋಲಿ ಇನ್ನೂ ಮಹಿಳೆಯರ ಸ್ವತ್ತಾಗಿದೆ, ಈಗ ಗಂಡು, ಹೆಣ್ಣು ಸರಿಸಮ, ಗಂಡು ಮಾಡುವ ಹೆಚ್ಚಿನ ಕೆಲಸವನ್ನು ಹೆಣ್ಣು ಬೇಸರವಿಲ್ಲದೆ ಮಾಡುವುದು ಹೊಸತಲ್ಲ. ಇತ್ತ ಅಡುಗೆ ಮನೆ ಕೇವಲ ಹೆಂಗಸರ ಸ್ವತ್ತಾಗಿ ಉಳಿದಿಲ್ಲ . “ಅಡುಗೆ ಮಾಡಲು ಬರುತ್ತಾ?’ ಎಂದು ಹೆಣ್ಣು ಗಂಡಿಗೆ ಕೇಳುವ ಸಂಸ್ಕೃತಿಯೂ ಬಂದಿದೆ. ಆದರೆ, ರಂಗೋಲಿ ಇಡುವ ಗಂಡಸನ್ನು ನೋಡಿಲ್ಲ, “ನಿನಗೆ ರಂಗೋಲಿ ಇಡಲು ಬರುತ್ತೇನೋ?’ ಎಂದು ಹೆಣ್ಣು ಗಂಡಿಗೆ ಕೇಳುವುದನ್ನು ಕೇಳಿಸಿಕೊಳ್ಳಲಿಲ್ಲ, ಏಕೆ ಆ ಕಾಲ ಬಂದಿಲ್ಲವೆಂದು ತಲೆ ಕೆರೆದುಕೊಳ್ಳುತ್ತಿದ್ದೇನೆ.  

Advertisement

ಈಗ ಸಮಯದ ಅಭಾವವಿರುವ ಗೃಹಿಣಿಯರು ಜಾಸ್ತಿಯಾಗುತ್ತಿ¨ªಾರೆ. ಮನೆಗೆಲಸ, ಮಕ್ಕಳ ಕೆಲಸದೊಂದಿಗೆ ಕಿಟ್ಟಿ ಪಾರ್ಟಿ, ವಾಟ್ಸಾಪ್‌, ಫೇಸ್‌ ಬುಕ್ಕುಗಳೂ ಸೇರಿಕೊಂಡು ಗೃಹಿಣಿಯರು ಸಮಯಕ್ಕಾಗಿ ತಡಕಾಡುವಾಗ ಬೆಳಿಗ್ಗೆ ರಂಗೋಲಿ ಇಡಲು ಸಮಯವೆಲ್ಲಿ? ಅವರ ನೆರವಿಗೆ ಬರುವ ಮನೆ ಕೆಲಸದವಳು ಎಂಬ ಸಹಾಯಕಿ ಮನೆ ಬಾಗಿಲು ಸಾರಿಸಿ ರಂಗೋಲಿ ಇಡುವುದು ಹೆಚ್ಚಾಗುತ್ತಿದೆ.  

ಮನೆಗೆೆಲಸದವಳು, ರಂಗೋಲಿ ಎನ್ನುವಾಗ 4 ಅಡಿ ಉದ್ದದ ಆ ಕುಬೆjಯ ನೆನಪಾಗುತ್ತದೆ. ಗಿಡ್ಡ ಕಾಲುಗಳೂ ಸೊಟ್ಟ, ಕಣ್ಣೂ ಎತ್ತಲೆತ್ತಲೋ ನೋಡುತ್ತಿರುತ್ತದೆ, ಆದರೂ ಬರೆಯುವ ರಂಗೋಲಿ ಮಾತ್ರ ಅಂಗಳದ ತುಂಬಾ ಹೂ ಅರಳಿದಂತೆ, ಹಬ್ಬಗಳಿಗೆ ತಕ್ಕಂತೆ ರಂಗೋಲಿ ನಾಟ್ಯವಾಡುತ್ತದೆ. ಅವಳ ಕೈಯಲ್ಲಿರುವ ಮ್ಯಾಜಿಕ್‌ ಆದರೂ ಏನು? ಕುಬೆj ಎಲ್ಲರಿಗಿರುವ ಎತ್ತರ, ಚೆಂದ, ಅಂದ ತನಗಿಲ್ಲವೆಂದು ಎಲ್ಲರಿಗಿಂತ ದೊಡ್ಡ, ಕ್ಲಿಷ್ಟ ರಂಗೋಲಿ ಬರೆದು ತಾನು ಯಾರಿಗೇನು ಕಡೆಮೆಯಿಲ್ಲವೆಂದು ತೋರಿಸುತ್ತಿರಬಹುದೇ? ಇಲ್ಲವೇ ಅವಳಿಗಿದು ಉದರ ನಿಮಿತ್ತಂ ಮಾತ್ರ ಎಂದು ಸುಮ್ಮನಾಗುವುದೊಳ್ಳೆಯದೇ? ಆದರೆ ಎಷ್ಟು ಜನರಿಗೆ ಅಂದದ ರಂಗೋಲಿಯನ್ನು ನೋಡುವಾಗ ಬಿಡಿಸಿದಾತಳ ನೆನಪಾಗುತ್ತದೆ?

ನಾನು ಅಮ್ಮನ ಮಗಳಲ್ಲ, ಅಮ್ಮನ ಹಾಡು, ಕಸೂತಿ, ರಂಗೋಲಿಯಂತಹ ಯಾವ ಸೂಕ್ಷ್ಮಕೆಲಸಗಳೂ ನನಗೆ ಒಲಿದಿಲ್ಲ. ಅಮ್ಮ ನಿನ್ನ ಯಾವ ಗುಣಗಳೂ ನಂಗ್ಯಾಕ ಬಂದಿಲ್ಲ ? ಎಂದರೆ ಹಾಡಿ ಹಾಡಿ ರಾಗ, ಉಗುಳಿ ಉಗೂಳಿ ರೋಗ ಅಂತೆ, ಅಭ್ಯಾಸ ಮಾಡುತ್ತಿರು ಬರತ್ತ ಕಾಣ ಎನ್ನುವಳು, ನನಗೆ ಗೊತ್ತು ಇಂತಹ ಮಾತುಗಳು ಬರೀ ನನ್ನ ಸಮಾಧಾನಕ್ಕೆ, ಹುಟ್ಟಿ ನಾಲ್ಕೈದು ದಶಕಗಳು ಕಳೆದವು ಇನ್ನೂ ರಂಗೋಲಿಯ ಗೆರೆಗಳು ನಾನು ಹೇಳಿದಂತೆ ಕೇಳುತ್ತಿಲ್ಲ, ನನ್ನ ಗೊಣಗಾಟ ಜಾಸ್ತಿಯಾದಾಗ ಗಂಡ ಮತ್ತು ಮಗ “ಬಿಡು ಅದೆಲ್ಲಾ, ಮಂಡೆ ಯಾಕೆ ಬಿಸಿ ಮಾಡಿಕೊಳ್ತಿ, ಒಂದು ಕಥೆ ಬರಿ’ ಎಂದು ಕಾಟಚಾರಕ್ಕೆಂಬಂತೆ ಸಮಾಧಾನ ಮಾಡುತ್ತಾರೆ. 

ಒಂದು ಕಾಲದಲ್ಲಿ ರಂಗೋಲಿಯೆಂದರೆ ಚುಕ್ಕೆಗಳ ಜೋಡಣೆ ಎಂಬಂತಿತ್ತು, ಅದೂ ಜೇಡಿ ಪುಡಿಯ ರಂಗೋಲಿಗಳು, ಈಗ ಬಣ್ಣದ ಬಣ್ಣದ ರಂಗೋಲಿಗಳು ಗರಿ ಕೆದರುತ್ತಿವೆ, ರಂಗೋಲಿಗಳಿಗೆ ಚುಕ್ಕೆಗಳ ಹಂಗಿಲ್ಲ.  ಈಗಿನ ರಂಗೋಲಿಗಳಲ್ಲಿ ಬಣ್ಣಗಳ ಮೆರೆದಾಟವೇ ಜಾಸ್ತಿ ಎನ್ನಬಹುದು, ಹಣ್ಣು, ಹೂವು, ಪ್ರಾಣಿ, ಪಕ್ಷಿಗಳು ಸುಲಭದಲ್ಲಿ ರಂಗೋಲಿಯಾಗಿ ನಿಂತು ಬಿಡುತ್ತದೆ, ಬಣ್ಣ ತುಂಬಿದಾಗಲಂತೂ ಜೀವಂತವಾಗಿ ಎದ್ದು ಬಂದಂತೆ ತೋರುತ್ತದೆ. ಕೇರಳೀಯರು ಹೂವಿನ ರಂಗೋಲಿ ಬರೆದು ಗಮನ ಸೆಳೆಯುತ್ತಾರೆ.  ರಂಗೋಲಿ ಬಿಡಿಸಲು ಐಡಿಯಾ ಬರುತ್ತಿಲ್ಲವೇ… ತಾಳಿ ಅದಕ್ಕಾಗಿ ಹತ್ತಾರು ವೆಬ್‌ಸೈಟುಗಳು ಇವೆ, ಹುಡುಕಾಟ ನಡೆಸಿದರಾಯಿತು. ವೆಬ್‌ಸೈಟುಗಳಿಂದ ಸಿಗುವುದು ಐಡಿಯಾಗಳು ಮಾತ್ರ, ಬಿಡಿಸುವ ಜಾಣ್ಮೆ, ಕುಶಲತೆ ನಿಮ್ಮ ಕೈಯಲ್ಲೇ ಇದೆ. 

ಆಲಸಿಗರಿಗಾಗಿ ಅಥವ ನನ್ನಂತಹ ರಂಗೋಲಿಯಲ್ಲಿ ಜಾಣ್ಮೆ ಇಲ್ಲದವರಿಗಾಗಿ, ತೂತು ಇರುವ ಕೊಳವೆಗಳು, ಜರಡಿಗಳು ಬಂದಿವೆ, ರಂಗೋಲಿ ಪುಡಿ ಹಾಕಿ ಎಳೆದರಾಯಿತು, ಕಣ್ಮನ ಸೆಳೆಯುವ ಚಿತ್ತಾರದ ರಂಗೋಲಿ ಕ್ಷಣ ಮಾತ್ರದಲ್ಲಿ.  ಇಲ್ಲಿ ಕೈ ಚಳಕವಿಲ್ಲ, ಕೊಳವೆ/ಜರಡಿಗಳ ಚಳಕ ಮಾತ್ರ. ಎಲ್ಲವೂ ಈಗಿನ ಕಾಲದ ಜನರಿಗಾಗಿ, ಪುರಸೊತ್ತು ಇಲ್ಲದವರಿಗಾಗಿ, ಕ್ಷಣ ಮಾತ್ರದಲ್ಲಿ ರೆಡಿ. 

ಸಿಮೆಂಟಿನ ನೆಲದ ಮೇಲೆ ರಂಗೋಲಿ ಬಿಡಿಸುವುದೂ ಸುಲಭ, ಅಳಿಸುವುದೂ ಸುಲಭ, ಬಿಡಿಸಲು ಕೆಲವೇ ನಿಮಿಷ ಸಾಕು, ಅಳಿಸಲು ಕೆಲವೇ ಸೆಕೆಂಡುಗಳು ಸಾಕು. ಅದೇ ಬಾಲ್ಯದ ಕಾಲಕ್ಕೆ ಹೋದರೆ… ಮೊದಲು ಹುಲ್ಲು, ಕಸ, ಕಡ್ಡಿ ತೆಗೆದು ಅಂಗಳವನ್ನು ಸಮತಟ್ಟು ಮಾಡಬೇಕು, ನಂತರ ಸೆಗಣಿಯೊಂದಿಗೆ ಹಳೆಯ ಬ್ಯಾಟರಿ ಸೆಲ… ಸೇರಿಸಿ ಅಂಗಳದ ತುಂಬಾ ಪರಕೆಯಿಂದ ಹರಡಬೇಕು, ಸೆಗಣೆ ಅರ್ಧಂಬರ್ಧ ಒಣಗುತ್ತಿದ್ದಂತೆ ರಂಗೋಲಿಯ ಕಾಯಕ ಶುರುವಾಗುತ್ತದೆ. ಕಪ್ಪು$ಹಸಿರಿನ ಹಿನ್ನೆಲೆಯಲ್ಲಿ ಬರೆದ ರಂಗೋಲಿಯ ಅಂದ ಸಿಮೆಂಟ್‌ ನೆಲದ ರಂಗೋಲಿಯ ಹತ್ತಿರವೂ ಬಾರದು, ಆದರೂ ಬಿಡಿಸಲು ಸ್ವಲ್ಪ ಕಷ್ಟ ಪಡಬೇಕು ಎನ್ನಿ. 

ರಂಗೋಲಿ ಹುಟ್ಟು ಯಾವಾಗ, ಎಲ್ಲಿ? ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ, ಅನಾದಿ ಕಾಲದಿಂದಲೂ ಎಲ್ಲಾ ಕಡೆ ಮಾನವ ಗೋಡೆಗಳ ಮೇಲೆ, ಕಲ್ಲಿನ ಮೇಲೆ, ಗುಹೆಗಳಲ್ಲಿ ಚಿತ್ರ ಬರೆದು ತನ್ನ ಮತ್ತು ತನ್ನ ಸುತ್ತಮುತ್ತ ಇರುವ ವಸ್ತುಗಳ, ಪ್ರಾಣಿಗಳ ಇರುವಿಕೆಯನ್ನು ಸಾರಿದ, ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ ಆದರೆ ಭಾರತದಲ್ಲಿ ಮಾತ್ರ ಕಂಡು ಬರುವ ನೆಲದ ಮೇಲೆ ಬರೆಯುವ ಚೆಲುವಿನ ಚಿತ್ತಾರದ ಹುಟ್ಟು ಮಾತ್ರ ನಿಗೂಢ. ನನಗನ್ನಿಸುತ್ತದೆ ದ್ವಾಪರ ಯುಗದಲ್ಲಿ ಗೋಪಿಕೆಯರು ಕೃಷ್ಣನನ್ನು ಒಬ್ಬರು ಮತ್ತೂಬ್ಬರಿಗಿಂತ ಚೆಂದದ ರಂಗೋಲಿ ಬರೆದು ಸ್ವಾಗತಿಸುತ್ತಿದ್ದರು, ಆಕರ್ಷಿಸುತ್ತಿದ್ದರು ಅನ್ನಿಸುತ್ತದೆ. 

ಏನೇ ಇರಲಿ ರಂಗೋಲಿ ಮನೆಗೆ ಬರುವ ಅತಿಥಿಗಳನ್ನು ತಣ್ಣಗೆ ಸ್ವಾಗತಿಸುವುದು ಮಾತ್ರ ಅಲ್ಲ ಮನೆಯೊಡತಿಯ ಕೈಚಳಕವನ್ನೂ ಸಾರುತ್ತದೆ. ದಾರಿಹೋಕರನ್ನೂ ಅಂದದ ರಂಗೋಲಿ ಕ್ಷಣ ಕಾಲ ಹಿಡಿದು ನಿಲ್ಲಿಸುತ್ತದೆ. ನೆನಪಿಡಿ ರಂಗೋಲಿ ಮನೆಯ ಶ್ರೀಮಂತಿಕೆಯನ್ನು ಸಾರುವುದಿಲ್ಲ, ಮನೆಯೊಡತಿಯ ಹೃದಯವಂತಿಕೆಯನ್ನು ಸಾರುತ್ತದೆ !

ಗೀತಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next