Advertisement

ಕೃಷ್ಣಾತೀರದಲ್ಲಿ ಮತ್ತೆ ಪ್ರವಾಹ ಭೀತಿ

10:57 AM Sep 06, 2019 | Suhan S |

ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳ ಪ್ರವಾಹ ನಿಂತು ಇನ್ನೂ ತಿಂಗಳು ಗತಿಸಿಲ್ಲ. ಈಗ ಕೃಷ್ಣಾ ತೀರದಲ್ಲಿ ಮತ್ತೇ ಪ್ರವಾಹ ಭೀತಿ ಎದುರಾಗಿದೆ.

Advertisement

ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ಕಳೆದ ತಿಂಗಳು ರುದ್ರನರ್ತನ ಮಾಡಿದ್ದು, ಈ ರೌದ್ರಾವತಾರಕ್ಕೆ ಜಿಲ್ಲೆಯ ಬರೋಬ್ಬರಿ 195 ಹಳ್ಳಿಗಳು ಅಕ್ಷರಶಃ ನಲುಗಿವೆ. ಇದರಿಂದ 43,136 ಕುಟುಂಬಗಳ 1,49,408 ಜನರು ಬೀದಿಗೆ ಬಿದ್ದಿದ್ದವು. ಇದೀಗ ಅವರೆಲ್ಲ ನೀರು ಹೊಕ್ಕು ಹೋದ ಮನೆಗಳತ್ತ ನಿರಾಳವಾಗಿ ಹೆಜ್ಜೆ ಇಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಮತ್ತೆ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ.

2ಲಕ್ಷ ಕ್ಯೂಸೆಕ್‌ ದಾಟುವ ಆತಂಕ: ಕೃಷ್ಣಾ ನದಿ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರ ಸೇರಿದಂತೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಹೀಗಾಗಿ 519.60 ಮೀಟರ್‌ (123 ಟಿಎಂಸಿ ಅಡಿ) ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಈಗಾಗಲೇ 519.14 ಮೀಟರ್‌ (115.221 ಟಿಎಂಸಿ ಅಡಿ ನೀರು)ಸಂಗ್ರಹವಾಗಿದ್ದು, ಗುರುವಾರ ಸಂಜೆ ಆಲಮಟ್ಟಿ ಜಲಾಶಯಕ್ಕೆ 63,760 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ಹೆಚ್ಚಿನ ನೀರನ್ನು ಹೊರ ಬಿಡುವಂತೆ ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳು, ಕೆಬಿಜೆಎನ್‌ಎಲ್ಗೆ ಮನವಿ ಮಾಡಿದ್ದು, ಆ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದಿಂದ ಕಾಲುವೆ ಮತ್ತು ಗೇಟ್ ಮೂಲಕ ಒಟ್ಟು 1,85,095 ಕ್ಯೂಸೆಕ್‌ ನೀರು ಹೊಡ ಬಿಡಲಾಗುತ್ತಿದೆ. ಇನ್ನೂ 2ರಿಂದ 3 ದಿನಗಳಲ್ಲಿ ಕೃಷ್ಣಾ ನದಿಗೆ 2ಲಕ್ಷ ಕ್ಯೂಸೆಕ್‌ ವರೆಗೆ ನೀರು ಹರಿದು ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಜಮಖಂಡಿ ತಾಲೂಕಿನ 27 ಹಳ್ಳಿಗಳು, ಬಾಗಲಕೋಟೆ ತಾಲೂಕಿನ 12 ಹಳ್ಳಿಗಳು ಪುನಃ ಪ್ರವಾಹಕ್ಕೊಳಗಾಗುವ ಸಾಧ್ಯತೆ ಇದೆ.

ಈ ಬಾರಿ ದಾಖಲೆ ಪ್ರವಾಹ: ಕೃಷ್ಣಾ ನದಿಗೆ ಈ ಬಾರಿ 5.79 ಲಕ್ಷ ಕ್ಯೂಸೆಕ್‌ (4.13 ಲಕ್ಷ ಕ್ಯೂಸೆಕ್‌ ಹಳೆಯ ದಾಖಲೆ) ನೀರು ಹರಿದು ಬಂದರೆ, ಘಟಪ್ರಭಾ ನದಿಗೆ 2.29 ಲಕ್ಷ (65 ಸಾವಿರ ಹಳೆಯ ದಾಖಲೆ) ಕ್ಯೂಸೆಕ್‌, ಮಲಪ್ರಭಾ ನದಿಗೆ 93,920 ಕ್ಯೂಸೆಕ್‌ (22 ಸಾವಿರ ಹಳೆಯ ದಾಖಲೆ) ನೀರು ಹರಿದು ಬಂದಿದೆ. ಇದು ಮೂರು ನದಿಗಳ ಇತಿಹಾಸದಲ್ಲೇ ದಾಖಲೆ ನೀರಿನ ಹರಿವಾಗಿತ್ತು.

Advertisement

ಆಲಮಟ್ಟಿ, ನಾರಾಯಣಪುರ ಜಲಾಶಯಗಳ ಹಿನ್ನೀರು ಹಾಗೂ ಮೂರೂ ನದಿಗಳ ದಡದಲ್ಲಿ ಆಗಾಗ ಒತ್ತಿ ಬರುವ ನೀರಿನಿಂದ ಬಹುತೇಕ ಮುಳುಗಡೆ ಜಿಲ್ಲೆಯಾಗಿರುವ ಬಾಗಲಕೋಟೆಗೆ ಪ್ರವಾಹ ಹೊಸದೇನಲ್ಲ. 2007 ಮತ್ತು 2009ರಲ್ಲಿ ಬಂದ ಪ್ರವಾಹಗಳನ್ನೇ ಭೀಕರ ಜಲಪ್ರಳಯ ಎಂದು ಹೇಳಲಾಗಿತ್ತು. ಆದರೆ, ಅದೆಲ್ಲ ದಾಖಲೆಗಳನ್ನು ಮುರಿದು, 105 ವರ್ಷಗಳ ಹಿಂದೆ ಬಂದಿದ್ದ ಪ್ರವಾಹದ ದಾಖಲೆಯನ್ನೂ ಜಿಲ್ಲೆಯ ಮೂರೂ ನದಿಗಳು ಮುರಿದಿವೆ.

ಆಗಲೂ ಆಗಸ್ಟ್‌ ತಿಂಗಳಲ್ಲೇ ಬಂದಿತ್ತು: 1914ರ ಆಗಸ್ಟ್‌ 8ರಂದು ಕೃಷ್ಣಾ ನದಿಯಲ್ಲಿ ಭಾರೀ ಪ್ರವಾಹ ಬಂದಿತ್ತು. ಅಂದು ಬಂದಿದ್ದ ಪ್ರವಾಹ ಬಹುದೊಡ್ಡ ಹಾಗೂ ಭೀಕರವಾಗಿತ್ತು ಎಂದು ಆಗಿನ ಹಿರಿಯರಿಂದ ಕೇಳಿದ್ದ ಈಗಿನ ಹಿರಿಯರು ಹೇಳುತ್ತಾರೆ. ಆಗಲೂ ಆಗಸ್ಟ್‌ ತಿಂಗಳಲ್ಲೇ ಪ್ರವಾಹ ಬಂದಿತ್ತು. ಈ ಬಾರಿಯೂ ಆಗಸ್ಟ್‌ 1ರಿಂದ ಆರಂಭಗೊಂಡ ಕೃಷ್ಣೆಯ ವೇಗದ ಹರಿದು, ಆಗಸ್ಟ್‌ 8ರಂದು (105 ವರ್ಷಗಳ ಹಿಂದೆಯೂ ಆಗಸ್ಟ್‌ 8ರಂದು ಬಂದಿತ್ತು) 5.79 ಲಕ್ಷ ಕ್ಯೂಸೆಕ್‌ಗೆ ದಾಟಿತ್ತು. ಕೃಷ್ಣಾ ನದಿಯಲ್ಲಿ ಈ ನೀರು ಹರಿದು ನದಿಯ ಇತಿಹಾಸದಲ್ಲೇ ದೊಡ್ಡ ದಾಖಲೆಯಾಗಿತ್ತು.

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next