Advertisement

ನದಿ ತೀರದ ಮನೆಗಳು ಜಲಾವೃತ; 50ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

12:30 AM Aug 11, 2019 | Team Udayavani |

ಮಂಗಳೂರು : ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿಯು ಅಪಾಯದ ಮಟ್ಟ ಮೀರಿ ಉಕ್ಕಿ ಹರಿದಿದ್ದು, ಇದರ ಪರಿಣಾಮವಾಗಿ ಶನಿವಾರ ಮಂಗಳೂರಿನ ನದಿ ತೀರದ ಜೆಪ್ಪು, ಜಪ್ಪಿನಮೊಗರು, ಕಡೆಕಾರು, ಕುಡಾ³ಡಿ, ಕಣ್ಣೂರು ಸಹಿತ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದ್ದು, 50ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

Advertisement

ಇನ್ನೊಂದೆಡೆ, ಫ‌ಲ್ಗುಣಿ (ಗುರುಪುರ) ನದಿಯೂ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ನದಿ ಪಾತ್ರದ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಅಲ್ಲಿಯೂ ಜಿಲ್ಲಾಡಳಿತದಿಂದ ರಕ್ಷಣಾ ಕಾರ್ಯಾಚರಣೆ, ಕುಟುಂಬಗಳ ಸ್ಥಳಾಂತರ ಕಾರ್ಯ ನಡೆಸಲಾಗಿದೆ.

ನಗರದಲ್ಲಿ ಶನಿವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು, ಅತ್ತ ನೇತ್ರಾವತಿ ನದಿಯಿಂದಲೂ ಅಪಾರ ಪ್ರಮಾಣದ ನೀರು ಅಳಿವೆ ಬಾಗಿಲಿಗೆ ಹರಿದು ಬಂದ ಕಾರಣಕ್ಕೆ ನಗರದ ಕೆಲವು ಭಾಗದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಜೆಪ್ಪು, ಜಪ್ಪಿನಮೊಗರು, ಕಡೆಕಾರು, ಕುಡಾ³ಡಿ ಪ್ರದೇಶದಲ್ಲಿ ಅಪಾರ ನಾಶ, ನಷ್ಟ ಉಂಟಾಗಿದೆ.

ಕೆಲವು ಜನವಾಸ ಪ್ರದೇಶಗಳು ಶನಿವಾರ ಬೆಳಗ್ಗೆ ಅಕ್ಷರಶಃ
ದ್ವೀಪದಂತಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆ ಕಡಿಮೆಯಾಗಿದ್ದ ನೆರೆಯು ರಾತ್ರಿ ವೇಳೆಗೆ ಏಕಾಏಕಿ ಹೆಚ್ಚಾಗಿತ್ತು. ಸುತ್ತಮುತ್ತಲಿನ ಮನೆ ಮಂದಿ ರಾತ್ರಿಯಿಡೀ ನಿದ್ದೆಯಿಲ್ಲದೆ ಪ್ರವಾಹ ಭೀತಿಯಲ್ಲೇ ಕಾಲ ಕಳೆದಿದ್ದರು.

20ಕ್ಕೂ ಹೆಚ್ಚಿನ ಮನೆಗಳಿಗೆ ನೀರು
ಕುಡಾ³ಡಿ ಸುತ್ತ-ಮುತ್ತಲು ಸುಮಾರು 20ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿತ್ತು. ಶನಿವಾರ ಬೆಳಗ್ಗಿನ ವೇಳೆಗೆ ನೆರೆ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ಮನೆ ಮಂದಿ ಬೇರೆಡೆಗೆ ತೆರಳ್ಳೋಣ ಅಂದರೆ ಮೊಣಕಾಲಿನಷ್ಟು ನೀರಿತ್ತು. ಕುಡಾ³ಡಿ ಪ್ರದೇಶದ ಸುಮಾರು ಆರು ಕುಟುಂಬಗಳನ್ನು ಶನಿವಾರ ಬೆಳಗ್ಗೆ 12.30ರ ವೇಳೆಗೆ ಅಗ್ನಿಶಾಮಖ ದಳದ ಸಿಬಂದಿ ಬೋಟ್‌ ಮುಖೇನ ರಕ್ಷಿಸಿದ್ದಾರೆ. ಹೆಚ್ಚಿನ ಮಂದಿ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

Advertisement

ವಿವಿಧಡೆ ಭಾರೀ ನೆರೆ
ಭಾರೀ ಮಳೆಯಿಂದಾಗಿ ಶನಿವಾರದಂದು ಜಪ್ಪಿನಮೊಗರು ಬಳಿಯ ಕಡೆಕಾರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಒಳಗಡೆ ಮತ್ತು ನಾಗದೇವರ ಗುಡಿಗೆ ನೀರು ನುಗ್ಗಿತ್ತು. ಅರ್ಚಕರು ಹೇಳುವ ಪ್ರಕಾರ ಕೆಲವು ವರ್ಷಗಳ ಹಿಂದೆ ಇದೇ ರೀತಿ ಭಾರೀ ಮಳೆಯಾಗಿ ದೇವಸ್ಥಾನದ ಒಳಗಡೆ ನೀರು ನುಗ್ಗಿತ್ತು. ಆ ಬಳಿಕ ಈ ರೀತಿ ಕೃತಕ ನೆರೆ ಉಂಟಾಗಲಿಲ್ಲ.ನಗರದ ಬಂದರಿನಲ್ಲಿರುವ ಮೀನುಗಾರಿಕಾ ದಕ್ಕೆಯಲ್ಲಿಯೂ ಕೃತಕ ನೆರೆ ಸೃಷ್ಟಿಯಾಗಿತ್ತು.

ಕಡಲಿನಲ್ಲಿ ಪ್ರಕ್ಷುಬ್ಧ ವಾತಾವರಣ ಇರುವ ಕಾರಣ ಯಾವುದೇ ಬೋಟ್‌ಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಇದೇ ಕಾರಣಕ್ಕೆ ದಕ್ಕೆಯಲ್ಲಿ ಅನೇಕ ಬೋಟ್‌ಗಳು ಇದ್ದವು. ಅದೃಷ್ಟವಶಾತ್‌ ಯಾವುದೇ ಹಾನಿ ಸಂಭವಿಸಿಲ್ಲ. ಶನಿವಾರ ಬೆಳಗ್ಗೆ ದಕ್ಕೆಯಿಂದ ರಸ್ತೆಯವರೆಗೆ ನೀರು ಬಂದಿತ್ತು. ಸಮಯ ಕಳೆದಂತೆ ನೆರೆ ಪ್ರಮಾಣ ತುಸು ತಗ್ಗಿತ್ತು.

ಬೋಟ್‌ ಮುಳುಗಡೆ
ತೋಟಬೆಂಗ್ರೆ ಬಳಿ ಪ್ಯಾಸೆಂಜರ್‌ ಬೋಟ್‌ ಡಾಕ್‌ ಮುಳುಗಡೆಯಾಗಿತ್ತು. ಸುಲ್ತಾನ್‌ ಬತ್ತೇರಿಯ ಬೋಟ್‌ ಕ್ಲಬ್‌ ತುಂಬಾ ನೀರು ತುಂಬಿಕೊಂಡಿತ್ತು. ಬೋಳಾರ ಫೆರಿ ರಸ್ತೆಯ ಉರ್ದು ಹೌಸ್‌ ನದಿ ಬದಿಯಲ್ಲಿ ನಾಲ್ಕು ಮನೆಯೊಳಗೆ ನೀರು ನುಗ್ಗಿತ್ತು, ಮನೆಯ ಒಳಗಡೆ ಇದ್ದಂತಹಾ ಸಾಮಗ್ರಿಗಳನ್ನು ಕೂಡಲೇ ತೆರವು ಮಾಡಲಾಯಿತು. ಕುಟುಂಬದ ಸದಸ್ಯರು ಪಕ್ಕದ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಫೆರಿ ರಸ್ತೆ ಬಳಿ ವಾಸ ಮಾಡುವ 20 ಮಂದಿ ಮೀನುಗಾರರ ಗುಡಿಸಲಿಗೆ ನೆರೆ ನೀರು ಬಂದಿದ್ದು, ಕುಟುಂಬದ ಮಂದಿಯನ್ನು ಬೋಳಾರ ಶಾಲೆಗೆ ಸ್ಥಳಾಂತರಿಸಲಾಗಿದೆ.

ಕುಡಿಯುವ ನೀರು ಪೂರೈಕೆ
ಶುಕ್ರವಾರ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ತುಂಬೆ ಡ್ಯಾಂನಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ಎಚ್‌ಟಿ ಲೈನ್‌ಗೆ ಸಮಸ್ಯೆ ಉಂಟಾದ ಕಾರಣ ಶುಕ್ರವಾರ ಸಂಜೆಯಿಂದ ಶನಿವಾರ ಮಧ್ಯಾಹ್ನವರೆಗೆ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಂಡಿತ್ತು. ಶನಿವಾರ ಬೆಳಗ್ಗೆಯಿಂದ ಕಾಮಗಾರಿ ಆರಂಭಿಸಿ ಮಧ್ಯಾಹ್ನ ಬಳಿಕ ನಗರಕ್ಕೆ ನೀರು ಸರಬರಾಜು ಮಾಡಲಾಗಿದೆ.

45 ವರ್ಷಗಳ ಬಳಿಕ ದಕ್ಕೆಯಲ್ಲಿ ಪ್ರವಾಹ
ಮೀನುಗಾರರ ಮುಖಂಡ ಮೋಹನ್‌ ಬೇಂಗ್ರೆ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರೀಯಿಸಿ ಭಾರೀ ಮಳೆಗೆ 1947ರಲ್ಲಿ ನೆರೆ ಸೃಷ್ಟಿಯಾಗಿ ದಕ್ಕೆಯಲ್ಲಿ ಪ್ರವಾಹ ಬಂದಿತ್ತು. ಆ ವೇಳೆ ಅಳಿವೆಬಾಗಿಲು ಕಿರದಾಗಿತ್ತು. ಇದೀಗ ಅಳಿವೆ ಬಾಗಿಲು ಅಗಲ ಮಾಡಲಾಗಿದ್ದು, ಸರಾಗವಾಗಿ ಕಡಲು ಸೇರುತ್ತಿದೆ. ಆದರೆ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ನೆರೆ ಹೆಚ್ಚಾಗಿ ಶನಿವಾರ ಬೆಳಗ್ಗೆ ಮತ್ತೂಮ್ಮೆ ದಕ್ಕೆಯಲ್ಲಿ ನೆರೆ ಸೃಷ್ಟಿಯಾಗಿದೆ ಎನ್ನುತ್ತಾರೆ.

ಸುರಕ್ಷಿತ ಸ್ಥಳಗಳಿಗೆ ತೆರಳಲು ಡಿಸಿ ಸೂಚನೆ
ಗುರುಪುರ-ಫಲ್ಗುಣಿ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ನದಿ ನೀರು ಅಪಾಯಮಟ್ಟದಲ್ಲಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ವಾಸಿಸುವ ಎಲ್ಲ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಡಿಸಿ ಶಶಿಕಾಂತ್‌ ಸೆಂಥಿಲ್‌ ಸೂಚಿಸಿದ್ದಾರೆ.

ಈಗಾಗಲೇ ನದಿ ತೀರದ ಸಂಭಾವ್ಯ ಅಪಾಯ ಸ್ಥಳಗಳಲ್ಲಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.

61 ಮಂದಿ ರಕ್ಷಣೆ
“ನಗರದಲ್ಲಿ ತೀವ್ರ ನೆರೆಗೆ ತುತ್ತಾದ ಜಪ್ಪು, ಜಪ್ಪಿನಮೊಗರು ಪ್ರದೇಶದ 61 ಮಂದಿ, 3 ಆಕಳು ಮತ್ತು 2 ನಾಯಿಯನ್ನು ಯನ್ನು ಪಾಂಡೇಶ್ವರದ ಅಗ್ನಿಶಾಮಖ ದಳ ಮತ್ತು ತುರ್ತು ಸೇವಾದಳದ ಸಿಬಂದಿಗಳು ರಕ್ಷಿಸಿದ್ದಾರೆ. ತುರ್ತು ಸೇವೆಗೆ ದಿನ 24 ಗಂಟೆಯೂ ಸಿದ್ಧರಿದ್ದೇವೆ’ ಎಂದು “ಉದಯವಾಣಿ ಸುದಿನ’ಕ್ಕೆ ಪಾಂಡೇಶ್ವರದ ಅಗ್ನಿಶಾಮಖ ಠಾಣಾಧಿಕಾರಿ ಸಂಗಮೇಶ್‌ ತಿಳಿಸಿದ್ದಾರೆ.

 ನೆರೆ ಪೀಡಿತರಿಗೆ ಪುರ್ವಸತಿ
ಭಾರೀ ಮಳೆಯಿಂದ ನಗರದಲ್ಲಿ ಕೃತಕ ನೆರೆ ಸೃಷ್ಟಿಯಾದ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ನೆರೆ, ಪ್ರವಾಹದಿಂದಾಗಿ ಅತಂತ್ರ ಸ್ಥಿತಿಯಲ್ಲಿರುವ ಮಂದಿಯನ್ನು ನಗರದ ನಾನಾ ಪ್ರದೇಶಗಳಲ್ಲಿ ಪುನರ್ವಸತಿ ನೀಡಲಾಗಿದೆ. ಇವರಿಗೆ ಸ್ಥಳೀಯರು ಮತ್ತು ಜಿಲ್ಲಾಡಳಿತ ವತಿಯಿಂದ ಊಟ, ತಿಂಡು, ಬೆಡ್‌ಶೀಟ್‌ ವ್ಯವಸ್ಥೆ ನೀಡಲಾಗುತ್ತಿದೆ.
– ಡಿ. ವೇದವ್ಯಾಸ ಕಾಮತ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next