Advertisement

ಅಪಾಯಮಟ್ಟ ಮೀರುತ್ತಿದೆ ಕೃಷ್ಣೆಯ ಹರಿವು: ಬರದ ಜಿಲ್ಲೆಗೆ ನುಗ್ಗಿದ ನೀರು

05:32 PM Aug 05, 2019 | keerthan |

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಬಾಗಲಕೋಟೆ ಜಿಲ್ಲೆಯ ಮೂರು ನದಿಗಳು ತುಂಬಿ ಹರಿಯುತ್ತಿದೆ. ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.

Advertisement

ಕೃಷ್ಣಾ ನದಿಯ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರ ಸುತ್ತ ಭಾರಿ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿಗೆ 2,28,121 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆಲಮಟ್ಟಿ ಜಲಾಶಯಕ್ಕೆ 2.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರವಾಹ ಉಂಟಾಗದಂತೆ ಮುಂಜಾಗ್ರತೆಯ ಕ್ರಮವಾಗಿ ಆಲಮಟ್ಟಿ ಜಲಾಶಯದಿಂದ 2,58,710 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.

8 ಸೇತುವೆ ಜಲಾವೃತ
ಕಳೆದ ಐದು ವರ್ಷಗಳಿಂದ ಬರ ಎದುರಿಸಿದ್ದ ಜಿಲ್ಲೆಯ ಜನರು, ಈ ಭಾರಿ ನದಿ ಪಾತ್ರದಲ್ಲಿ ಭರ್ತಿ ನೀರು ಕಾಣುತ್ತಿದ್ದಾರೆ. ಘಟಪ್ರಭಾ ನದಿಯ 5 ಸೇತುವೆ ಸಹಿತ ಬ್ಯಾರೇಜ್ ಹಾಗೂ ಕೃಷ್ಣಾ ನದಿಯ ಜಮಖಂಡಿ ತಾಲೂಕು ವ್ಯಾಪ್ತಿಯ ಮೂರು ಸೇತುವೆಗಳು ಜಲಾವೃತಗೊಂಡಿವೆ. ಹೀಗಾಗಿ ಜನರು ಸುಮಾರು 25ರಿಂದ 40 ಕಿ.ಮೀ ವರೆಗೆ ಸುತ್ತಿ- ತಮ್ಮೂರು ಸೇರುತ್ತಿದ್ದಾರೆ.

Advertisement

 

10 ಕುಟುಂಬ ಸುರಕ್ಷಿತ ಸ್ಥಳಕ್ಕೆ
ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮ, ಕೃಷ್ಣಾ ನದಿಗೆ ಹೊಂದಿಕೊಂಡಿದ್ದು, ನದಿ ಪಕ್ಕದಲ್ಲಿದ್ದ 10 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ ಗ್ರಾಮದಲ್ಲಿ (ಭಾಗಶಃ ಮುಳುಗಡೆ ಗ್ರಾಮ) 38 ಕುಟುಂಬಗಳು ನದಿ ಪಕ್ಕದಲ್ಲಿದ್ದು, ಅವರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಎಸಿ ಅಕ್ರಮ್ ಷರಿಫ್, ತಹಶೀಲ್ದಾರರು ಪ್ರವಾಹ ಭೀತಿ ಎದುರಿಸುತ್ತಿರುವ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ಇತ್ತ ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಸಂಜೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಸಿದ್ಧತೆಯಲ್ಲಿರುವ ಅಧಿಕಾರಿಗಳಿಗೆ ಸೂಚಿಸಿದರು.

 

 

ಇಂತಹ ಪರಿಸ್ಥಿತಿ 2007 ಮತ್ತು 2009ರಲ್ಲಿ ಉಂಟಾಗಿತ್ತು. ನಂತರದ ಹಲವು ವರ್ಷಗಳಲ್ಲಿ ಬರಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next