Advertisement

ಉತ್ತರಕ್ಕೆ ಈ ವರ್ಷವೂ ನೆರೆ ಹೊರೆ ಭೀತಿ

11:03 AM Jun 19, 2021 | Team Udayavani |

ಹುಬ್ಬಳ್ಳಿ: ಮುಂಗಾರು ಆರ್ಭಟಿಸುತ್ತಿದೆ. ಮತ್ತೂಮ್ಮೆ ಪ್ರವಾಹ ಸ್ಥಿತಿ ಎದುರಿಸಲು ಉತ್ತರ ಕರ್ನಾಟಕ ಸಜ್ಜಾಗಬೇಕಾಗಿದೆ. ಪೂರ್ವ ಮುಂಗಾರು ಮಳೆಯಿಂದಲೇ ಬಹುತೇಕ ಹಳ್ಳ-ನದಿಗಳಲ್ಲಿ ನೀರು ಬಂದು, ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಿತ್ತು. ಕಳೆದ 17 ದಿನಗಳಲ್ಲಿ ಉತ್ತರ ಕರ್ನಾಟಕದ ಯಾದಗಿರಿ, ಗದಗ ಹೊರತು ಪಡಿಸಿ ಉಳಿದ 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಉತ್ತರದ ಕೆಲವೊಂದು ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಹ ಸ್ಥಿತಿ ಗೋಚರಿಸತೊಡಗಿದೆ.

Advertisement

ಹವಾಮಾನ ತಜ್ಞರ ಪ್ರಕಾರ ಒಂದೆರಡು ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಗಲಿದೆ. ಒಂದು ವೇಳೆ ರಾಜ್ಯದಲ್ಲಿ ಮಳೆ ಮುಂದುವರಿದರೆ ಇಲ್ಲವೇ ಮಹಾರಾಷ್ಟ್ರದಲ್ಲಿ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಿದರೂ ಪ್ರವಾಹ ಸ್ಥಿತಿ ಎದುರಿಸಲು ಸಜ್ಜಾಗಬೇಕಾಗುತ್ತದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಆಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಇನ್ನಷ್ಟು ಮುಂದುವರಿದರೆ ಅಲ್ಲಿನ ಜಲಾಶಯಗಳಿಂದ ಹೊರಬೀಳುವ ನೀರು ಉತ್ತರ ಕರ್ನಾಟಕದಲ್ಲಿ ಪ್ರವಾಹ ಸೃಷ್ಟಿಸಲಿದೆ. ಕಳೆದೊಂದು ದಶಕದಿಂದ ಪ್ರವಾಹ ಸ್ಥಿತಿ ಗಮನಿಸಿದರೆ, ಸಾಮಾನ್ಯವಾಗಿ ಸೆಪ್ಟೆಂಬರ್‌ -ಅಕ್ಟೋಬರ್‌ ವೇಳೆಗೆ ಕಂಡು ಬರುತ್ತಿದ್ದ ಪ್ರವಾಹ ಈ ಬಾರಿ ಜೂನ್‌ನಲ್ಲಿಯೇ ಗೋಚರಿಸ ತೊಡಗಿದೆ.

ಆಗಸ್ಟ್‌ -ಸೆಪ್ಟೆಂಬರ್‌ ವೇಳೆಗೆ ಮೈದುಂಬುತ್ತಿದ್ದ ಉತ್ತರದ ಪ್ರಮುಖ ಜಲಾಶಯಗಳ ಪೈಕಿ ಈ ಬಾರಿ ಜೂನ್‌ ಮಧ್ಯದಲ್ಲಿಯೇ ಒಂದೆರಡು ಜಲಾಶಯಗಳು ನೀರು ಹೊರ ಹಾಕತೊಡಗಿವೆ. 2009-2019ರ ಕಹಿ ನೆನಪು: ಸಾಮಾನ್ಯವಾಗಿ ಉತ್ತರ ಕರ್ನಾಟಕವೆಂದರೆ ಬರಪೀಡಿತ ಪ್ರದೇಶವೆಂದೇ ಪರಿಗಣಿಸಲಾಗುತ್ತದೆ. ಇಂದಿಗೂ ಇಲ್ಲಿ ನೀರಾವರಿ ಪ್ರದೇಶ ಶೇ.22-25ರೊಳಗೆ ಇದೆ. ಮಳೆ ಬಿದ್ದರೂ ಪ್ರವಾಹ ಉಂಟಾಗಿದ್ದು ಕಡಿಮೆ. ಆದರೆ, 2009 ಹಾಗೂ 2019ರಲ್ಲಿ ಕಂಡುಬಂದ ಪ್ರವಾಹ ನೆನಪಿಸಿಕೊಂಡರೆ ಕೆಲವರು ಈಗಲೂ ಮೈ ನಡುಗಿಸುತ್ತಾರೆ. 2009ರಲ್ಲಿ ಜುಲೈ ಕೊನೆ, ಸೆಪ್ಟೆಂಬರ್‌ ಎರಡನೇ ವಾರದವರೆಗೂ ಉತ್ತರದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಬಿದ್ದರೂ ಸಾಮಾನ್ಯ ಸ್ಥಿತಿಯಲ್ಲಿತ್ತು. ಸೆಪ್ಟೆಂಬರ್‌ 28ರಿಂದ ಕೇವಲ 6 ದಿನಗಳಲ್ಲಿ ಬಿದ್ದ ಮಳೆ ಇಡೀ ಉತ್ತರ ಕರ್ನಾಟಕದ ಚಿತ್ರಣವನ್ನೇ ಬದಲಿಸಿ ಬಿಟ್ಟಿತು. ಸುಮಾರು 60 ವರ್ಷಗಳಲ್ಲಿಯೇ ಕಂಡರಿಯದ ಪ್ರವಾಹ ಸೃಷ್ಟಿಯಾಗಿತ್ತು.

ಉತ್ತರದ 13 ಜಿಲ್ಲೆಗಳಲ್ಲಿ ಸುಮಾರು 11 ಜಿಲ್ಲೆಗಳು ಪ್ರವಾಹದಿಂದ ನಲುಗಿದ್ದವು. ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ನಷ್ಟವಾಗಿತ್ತು. ಲಕ್ಷಾಂತರ ಎಕರೆ ಬೆಳೆ ನಷ್ಟವಾಗಿತ್ತು. 1.80 ಲಕ್ಷಕ್ಕೂ ಅಧಿಕ ಮನೆಗಳು ಪೂರ್ಣ ಇಲ್ಲವೇ ಭಾಗಶಃ ನೆಲಕ್ಕುರುಳಿದ್ದವು. 10-15 ಸಾವಿರ ಕೋಟಿಗೂ ಹೆಚ್ಚು ಹಾನಿ ಉಂಟಾಗಿತ್ತು. ಇದಾದ ಒಂದು ದಶಕದ ನಂತರ 2019ರಲ್ಲಿ ಉತ್ತರ ಕರ್ನಾಟಕ ಮತ್ತೂಮ್ಮೆ ಪ್ರವಾಹಕ್ಕೆ ನಲುಗಿತ್ತು. 100 ವರ್ಷಗಳಲ್ಲಿ ಕಂಡರಿಯದ ಪ್ರವಾಹ ಅದಾಗಿತ್ತು. ಆಗಲೂ ಜೂನ್‌, ಜುಲೈ ಕೊನೆವರೆಗೆ ಮಳೆ ಅಭಾವ ಕಂಡಿದ್ದ ಉತ್ತರದ ಹಲವು ಜಿಲ್ಲೆಗಳು, ಮಹಾರಾಷ್ಟ್ರದಲ್ಲಿನ ಮಳೆಯಿಂದಾಗಿ ಕೃಷ್ಣಾ, ಭೀಮಾ ನದಿ ತಟದ ಪ್ರದೇಶ ಪ್ರವಾಹಕ್ಕೆ ಸಿಲುಕಿತ್ತು. ಸೆಪ್ಟೆಂಬರ್‌-ಅಕ್ಟೋಬರ್‌ ವೇಳೆಗೆ ಕಂಡರಿಯದ ಪ್ರವಾಹ ಸೃಷ್ಟಿಯಾಗಿ ಸುಮಾರು 6.3 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ನಷ್ಟವಾಗಿತ್ತು. ಅಂದಾಜು 35 ಸಾವಿರ ಕೋಟಿ ರೂ. ನಷ್ಟವೆಂದು ಅಂದಾಜಿಸಲಾಗಿತ್ತು.

ಇದೀಗ ಏಪ್ರಿಲ್‌, ಮೇನಲ್ಲಿಯೇ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಉತ್ತಮ ರೀತಿಯಲ್ಲಿ ಬಿದ್ದಿತ್ತು. ಮೇ ಎರಡನೇ ವಾರದ ನಂತರವೂ ಮಳೆ ಬಿದ್ದರೆ ಮುಂಗಾರು ವಿಳಂಬ ಇಲ್ಲವೆ ಮಳೆ ಕೊರತೆ ಎದುರಾಗಬಹುದೆಂಬ ಹವಾಮಾನ ತಜ್ಞರ ಅನಿಸಿಕೆಗಳನ್ನು ಸುಳ್ಳಾಗಿಸಿದ ಮುಂಗಾರು ಮೂರು ದಿನ ತಡವಾಗಿ ಪ್ರವೇಶಿಸಿದರೂ ನಿರೀಕ್ಷೆಗೆ ಮೀರಿದ ಪ್ರಮಾಣದಲ್ಲಿ ಬೀಳತೊಡಗಿದೆ.

Advertisement

15 ದಿನದ ಮಳೆ ಮೂರೇ ದಿನದಲ್ಲಿ: ಬೆಳಗಾವಿಯ ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ಬೆಳಗಾವಿ, ಖಾನಾಪುರ ತಾಲೂಕು, ಧಾರವಾಡ ಜಿಲ್ಲೆಯ ಆಳ್ನಾವರ, ಕಲಘಟಗಿ ತಾಲೂಕು, ಹಾವೇರಿ ಜಿಲ್ಲೆ ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕುಗಳಲ್ಲಿ, ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅತಿಯಾದ ಮಳೆಯಾಗಿದೆ. ಕೆಲವೊಂದು ಕಡೆ 15 ದಿನಗಳಲ್ಲಿ ಬೀಳಬೇಕಾದ ಮಳೆ ಕೇವಲ ಮೂರೇ ದಿನದಲ್ಲಿ ಬಿದ್ದಿದೆ. ಕಲ್ಯಾಣ ಕರ್ನಾಟಕದ ವಿವಿದ ಜಿಲ್ಲೆ, ಮುಂಬೈ ಕರ್ನಾಟಕದ ವಿಜಯಪುರ, ಬಾಗಲಕೋಟೆಗಳಲ್ಲಿ ಮುಂಗಾರು ಬಿತ್ತನೆಗೆ ಪೂರಕವೆನ್ನುವ ರೀತಿಯಲ್ಲಿ ಮಳೆಯಾಗಿದೆ.

ಬಿದ್ದ ಮಳೆ ಮುಂಗಾರು ಬಿತ್ತನೆಗೆ ಅನುಕೂಲವಾಗಿದೆ. ಒಂದೆರಡು ದಿನಗಳಲ್ಲಿ ಮಳೆ ಕಡಿಮೆಯಾದರೆ ಬೆಳೆಗಳಿಗೆ ತೊಂದರೆ ಇಲ್ಲ. ಇಲ್ಲವಾದರೆ ಈಗಾಗಲೇ ಬಿತ್ತನೆಯಾಗಿ ಮೊಳಕೆ ಬಂದಿರುವ, ಒಂದಿಷ್ಟು ಚಿಗುರು ಬಿಟ್ಟಿರುವ ಹೆಸರು, ಸೋಯಾಬೀನ್‌, ಮೆಕ್ಕೆಜೋಳ ಇನ್ನಿತರ ಬೆಳೆಗಳಿಗೆ ಹಾನಿಯುಂಟಾಗಿ ಮತ್ತೂಮ್ಮೆ ಬಿತ್ತನೆ ಮಾಡಬೇಕಾದ ಸ್ಥಿತಿ ಬಂದೀತು ಎಂಬುದು ರೈತರ ಆತಂಕವಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆ? : ಉತ್ತರ ಕರ್ನಾಟಕದ 13 ಜಿಲ್ಲೆಗಳ ಪೈಕಿ ಜೂ. 1ರಿಂದ 17ರವರೆಗೆ 9 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಬಿದ್ದಿದ್ದರೆ, ಮೂರು ಜಿಲ್ಲೆಗಳಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚಿನದಾಗಿದೆ. ಒಂದು ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಅಲ್ಪ ಪ್ರಮಾಣದ ಕೊರತೆ ಉಂಟಾಗಿದೆ. ಬೀದರ -159 ಮಿಮೀ (ವಾಡಿಕೆ 69 ಮಿಮೀ), ಕಲಬುರಗಿ-108 ಮಿಮೀ(63 ಮಿಮೀ), ವಿಜಯಪುರ-142 ಮಿಮೀ(79 ಮಿಮೀ), ರಾಯಚೂರು-78 ಮಿಮೀ(48 ಮಿಮೀ), ಬಾಗಲಕೋಟೆ-97 ಮಿಮೀ(57 ಮಿಮೀ), ಕೊಪ್ಪಳ-103 ಮಿಮೀ(50 ಮಿಮೀ), ಬೆಳಗಾವಿ-165 ಮಿಮೀ(74 ಮಿಮೀ), ಧಾರವಾಡ-157 ಮಿಮೀ(74 ಮಿಮೀ), ಬಳ್ಳಾರಿ-84 ಮಿಮೀ(48 ಮಿಮೀ) ವಾಡಿಕೆಗಿಂತ ಅತಿಹೆಚ್ಚಿನ ಮಳೆಯಾಗಿದೆ. ಈ ಜಿಲ್ಲೆಯಲ್ಲಿ ಶೇ.60ರಿಂದ ಶೇ.132 ಅಧಿಕ ಮಳೆಯಾಗಿದೆ. ಹಾವೇರಿ-84ಮಿಮೀ(68 ಮಿಮೀ), ಉತ್ತರ ಕನ್ನಡ -497 ಮಿಮೀ(348 ಮಿಮೀ)ಸಾಮಾನ್ಯಕ್ಕಿಂತ ತುಸು ಹೆಚ್ಚಿನ ಮಳೆಯಾಗಿದೆ. ಗದಗ-57 ಮಿಮೀ(59 ಮಿಮೀ), ಯಾದಗಿರಿ-52 ಮಿಮೀ(58 ಮಿಮೀ)ಈ ಎರಡು ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ. 4 ಹಾಗೂ ಶೇ.11 ಮಳೆ ಕಡಿಮೆಯಾಗಿದೆ ಉತ್ತರ ಕರ್ನಾಟಕದಲ್ಲಿ ಜೂ. 20ರ ನಂತರದಲ್ಲಿ ಮಳೆ ಕುಗ್ಗಲಿದ್ದು, ಮೋಡ ಕವಿದ ವಾತಾವರಣ, ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆ ಆಗಬಹುದು.

ಮಹಾರಾಷ್ಟ್ರದ ಮಳೆ ಸ್ಥಿತಿ ಗಮನಿಸುತ್ತಿದ್ದೇವೆ. ಅಲ್ಲಿನ ಪ್ರಮುಖ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಿಲ್ಲ. ನಮ್ಮಲ್ಲಿ ಮಳೆ ನಿಂತ ನಾಲ್ಕೈದು ದಿನಗಳ ನಂತರ ಅಲ್ಲಿ ಹೆಚ್ಚಿನ ಮಳೆಯಾದರೂ ಪ್ರವಾಹ ಸ್ಥಿತಿ ಹೆಚ್ಚಿನದಾಗದು. ಆದರೆ, ನಮ್ಮಲ್ಲೂ ಮಳೆ ಮುಂದುವರಿದು ಅಲ್ಲಿಯೂ ಹೆಚ್ಚಿನ ಮಳೆಯಾದರೆ ಪ್ರವಾಹ ಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.- ಆರ್‌.ಎಚ್‌. ಪಾಟೀಲ, ಮುಖ್ಯಸ್ಥರು, ಉಕ ಕೃಷಿ ಹವಾಮಾನ ಮನ್ಸೂಚನೆ, ಸಂಶೋಧನಾ ಕೇಂದ್ರ

 

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next